ಶುಕ್ರವಾರ, ಡಿಸೆಂಬರ್ 3, 2010

ನಂಬಿ ಕೆಟ್ಟವರು ನಿಮಗ್ಯಾರಾದರೂ ಗೊತ್ತೇ?

ನಂಬಿ ಕೆಟ್ಟವರು ನಿಮಗ್ಯಾರಾದರೂ ಗೊತ್ತೇ?
ಕೆ. ಆರ್. ಎಸ್. ಮೂರ್ತಿ

ನಂಬಿ, ನಂಬಿಸಿ, ನಂಬಿಕೆಯನು ಅವಲಂಬಿಸಿ, "ಅವಲಂಬಿಸಿ" ಎಂದೆಲ್ಲರನೂ ನಂಬಿಸಿ,
ಆವುದನು ಅವಲಂಬಿಸೆ ಸರಿಯೆಂದು ತುಸು ಕೂಡ ಎಣಿಸದೆಯೇ, ಗುಣಿಸದೆಯೇ ತ್ಯಜಿಸಿ

ಕುರುಡು ಮನಸಿಂದ, ಅವಲಂಬನೆಯ ಹಸಿವಿಂದ ನಂಬಿ, ದಿಟವ ಬಿಟ್ಟವರಾರೆಂದು ಗೊತ್ತೇ?
ಉಂಬುವುದು ನಂಜು ಎಂಬ ಅಂಜಿಕೆಯಿಲ್ಲದೆಯೇ, ಉಂಡು ತೇಗಿದ ಲಂಬೋದರರು ಗೊತ್ತೇ?

ಮಾಟಾಚಾರಕ್ಕೆ ಮನವ ಕೊಟ್ಟವರು, ಕೆಟ್ಟ ಗುಟ್ಟನ್ನು ಗಂಟಲಲಿ ಗಟ್ಟಿ ಪಟ್ಟು ಪಿಡಿದವರ ಪತ್ತೆ
ಮತಾಚಾರಕ್ಕೆ ನಾಟಕದಿ ನೆಂಟರಿಷ್ಟರ ಬಿಟ್ಟು ಓಟ ಕಿತ್ತವರು, ಎಲ್ಲಿ ಬಚ್ಚಿ ಪೋದರೆನ್ನುವ ಪತ್ತೆ

ಎದೆಯಲ್ಲಿ ತೊಟ್ಟಿಯ ಹೊತ್ತವರು ಗೊತ್ತೇ? ಚಟ್ಟವ ಹತ್ತುವ ಮುನ್ನ ಸುಟ್ಟಿ ಹೋದವರು ಗೊತ್ತೇ?
ಅವರೇ? ಇವರೇ? ಮತ್ತವರೆ? ಅತ್ತಿತ್ತದವರೇ? ಅಂಥವರು ನೀವೆಯೇ ಇರಬಹುದೆಂದು ಗೊತ್ತೇ?

ಸೋಮವಾರ, ನವೆಂಬರ್ 29, 2010

ಅಚ್ಚರಿ

ಅಚ್ಚರಿ
ಕೆ. ಆರ್. ಎಸ್. ಮೂರ್ತಿ

ಹುಲಿಗಿಂತ ಹುಲಿಯ ಬಾಲ, ಬಾಲಕ್ಕಿಂತ ಬಾಲದ ಕೂದಲು;
ಕೂದಲಿಗಿಂತ ಅದರ ಮೇಲೆ ಜಿಗಿದಾಡುವ ನೊಣದ ಕಾಲು

ಸಿಂಹಾಸನವನ್ನು ಏರಿ ಮೀಸೆ ತಿರುಗುವ ಭೂಪನ ಅಣುಕಿಸಿತ್ತು
ಮೂಗಿನ ಹೊಳ್ಳೆಯೊಳಗೆ ಫಕ್ಕನೆ ತೂರಿದ ಸೊಳ್ಳೆಯ ಕಸರತ್ತು

ಡೊಳ್ಳು ಹೊಟ್ಟೆಯ ಆನೆಯ ಹೊತ್ತು ತಿರುಗುವ ಪುಟ್ಟಿಲಿಯ ಗಮ್ಮತ್ತು
ಜಗಕೇ ಜೀವವ ಕೊಟ್ಟ ಬೆಂಕಿಯ ಉಂಡೆಯ ಕಬಳಿಸುವ ರಾಹು ಕೇತು

ನೂರು ಸೂರ್ಯರ ನುಂಗಿತ್ತು ದಿಟ್ಟ ಪುಟ್ಟ ಕಪ್ಪು ಬಕಾಸುರನ ಬಾಯಿ
ಎಲ್ಲ ಅಚ್ಚರಿಯನೂ ಮೀರಿಸಿದೆ ಆದಿ ಬಿಂದು ಉಗಿದಂಥ ಭವದ ಮಾಯೆ

ಶನಿವಾರ, ನವೆಂಬರ್ 27, 2010

ಆಸೆ; ಅಪೇಕ್ಷೆ; ಆಗಮನ, ಭೂತ ಗಮನ

ಆಸೆ; ಅಪೇಕ್ಷೆ; ಆಗಮನ, ಭೂತ ಗಮನ
ಕೆ. ಆರ್.ಎಸ್. ಮೂರ್ತಿ

ಬಂದರೆ ಚೆನ್ನ; ಬರಬಹುದು; ಬರುವುದು;
ಇನ್ನೇನು ಬರಲಿದೆ; ಬಂದೇ ಬಿಡುವುದು;
ಇನ್ನೇನು ಬಂತು; ಬಂದೇ ಬಿಟ್ಟಿತು;
ಇಂದೇ; ಇನ್ನೇನು ಆಗಿ ಹೋಯಿತು;

ನಿನ್ನೆಯೇ ಆಯಿತು; ಮೊನ್ನೆಯೇ ಆಯಿತು;
ಕೆಲವು ದಿನಗಳಾಯಿತು; ವಾರವಾಯಿತು;
ಹಲವು ದಿನಗಳಾಯಿತು; ವಾರಗಳಾಯಿತು;
ತಿಂಗಳಾಯಿತು; ಕೆಲವು ತಿಂಗಳಾಯಿತು;
ಹಲವು ತಿಂಗಳಾಯಿತು; ವರುಶವಾಯಿತು;

ಕೆಲವು ವರುಶಗಳಾಯಿತು;
ಹಲವು ವರುಶಗಳೇ ಆಯಿತು;

ದಶಕಗಳಾಯಿತಂತೆ;
ಶತಮಾನಗಳಾಗಿ ಹೋಯಿತಂತೆ;

ಯಾವಾಗಲೋ ಆಯಿತಂತೆ;
ಯಾವಾಗಲೋ ಆಗಿರಬಹುದು;

ಯಾರಿಗೂ ಗೊತ್ತಿಲ್ಲ

ಬರಲಿದೆ; ಬಂತು; ಹೋಯಿತು; ಮಾಯ

ಬುಧವಾರ, ನವೆಂಬರ್ 24, 2010

ನೀವೊಂದು ಹೇಳಿದರೆ....

ನೀವೊಂದು ಹೇಳಿದರೆ....
ಕೆ. ಆರ್. ಎಸ್. ಮೂರ್ತಿ

ನೀವು ಹೇಳಿದ್ದೆ ಒಂದು; ಅವರ ಕಿವಿಗೆ ಬಿದ್ದಿದ್ದೇ ಇನ್ನೊಂದು;
ಅವರ ಮನಸ್ಸಿಗೆ ತಾಟಿದ್ದೇ ಮತ್ತೊಂದು; ಹೃದಯಕ್ಕೆ ಇನ್ನೇನೋ ಒಂದು

ಸ್ನೇಹಿತರೊಬ್ಬರು ನಿನ್ನೆ ನನ್ನ ಮುಂದೆ ಬಂದ ತಕ್ಷಣ
ನಾನಂದೆ "ಏನ್ರೀ ಹೊಸಬಟ್ಟೆ ಕೊಂಡು ಕೊಂಡ್ರ?"
ಅವರ ಮುಖದಲ್ಲಿ ಹೆಮ್ಮೆಯ ನಗೆ.
"ಬಹಳ ಚೆನ್ನಾಗಿದೆ ರೀ. ಒಳ್ಳೆ ಕಲರ್ರು; ಒಳ್ಳೆ ದಿಸೈನೂ...."

ನಾನಂದದ್ದು ಅಷ್ಟೇ; ಅವರ ಕಿವಿಗೆ ಬಿದ್ದಿದ್ದೇ ಬೇರೆ.
ಅವರ ಮುಖ ಹಿಗ್ಗಿ, ಅವರ ಹೃದಯ ಬಲೂನಿನ ತರಹ ಊದಿ ಬಿಟ್ಟಿತು.
ಅವರ ಕಿವಿಗೆ ಕೇಳಿದ್ದು: "ನೀವು ಆ ಹೊಸ ಬಟ್ಟೆಯಲ್ಲಿ ಬಹಳಾ ಸುಂದರವಾಗಿ ಕಾಣ್ತೀರ"
ಅವರ ಹೃದಯ ಬಡಿದು ಕೊಂಡಿದ್ದು: "ನಾನು ಈ ಭೂಲೋಕದಲ್ಲೇ ಬಹಳ ಸುಂದರ"

ಹೊಸ ಬಟ್ಟೆ ಒಂದೇ ಅಲ್ಲ; ಅವರ ಮೈಮೇಲೆ, ಅವರ ಮನೆಯಲ್ಲಿ ಇರುವುದೆಲ್ಲ,
ಅವರಿಗೆ ಸೇರಿದ್ದೆಲ್ಲಾದ್ದಕ್ಕೂ ಅದೇ ರೀತಿ ಹೆಮ್ಮೆ, ಭಾವನೆ, ಹೆಚ್ಚುಗಾರಿಕೆ....

ಬಟ್ಟೆ, ಬರೆ, ಮನೆ, ಮನೆಯಲ್ಲಿರುವ ಸುಂದರ ವಸ್ತುಗಳನ್ನೆಲ್ಲಾ
ತಾವೇ ಅಂದು ಕೊಂಡಿರುತ್ತಾರೆ; ಮೆಚ್ಚುಗೆಯೆಲ್ಲಾ ಅವರಿಗೆ ಸೇರತಕ್ಕದ್ದು.

ಬಟ್ಟೆ ಹೊಲಿದವರು ಯಾರೋ; ಮಗ್ಗ ನೇಯ್ದವರು ಯಾರೋ,
ಬಟ್ಟೆಯ ವಿನ್ಯಾಸ ಯಾರ ತಲೆಯಿಂದ ಹೊರ ಬಿತ್ತೋ,
ಯಾರೂ ಯೋಚಿಸುವುದಿಲ್ಲ; ಯಾರೇಕೆ ಮಾತ್ರವಲ್ಲ,
ಯಾವ ಯಂತ್ರ, ಯಾವ ಕಂಪ್ಯೂಟರ್.........
ಎಂದೆಲ್ಲಾ ಯೋಚಿಸ ಬೇಕು ಈಗಿನ, ಹಿಂದಿನ, ಮುಂದಿನ ಶತಮಾನದಲ್ಲಿ.

ನಿಮ್ಮ ಬಟ್ಟೆಯನ್ನು, ನಿಮ್ಮದನ್ನು ನೋಡಿ, ನಿಮ್ಮ ಮನೆಯನ್ನು ನೋಡಿ,
ಯಾರಾದರೂ ಸ್ವಲ್ಪವೋ, ಬಹಳವೋ ಒಳ್ಳೆಯ ಮಾತನಾಡಿದರೆ,
ಏನು ಹೇಳಿ ನೋಡೋಣ? ನಿಜವಾಗಿ ಯಾರಿಗೆ ಸೇರಬೇಕು ಆ ಸಕ್ಕರೆ ಮಾತು?
ಯಾವ ಯಂತ್ರಕ್ಕೆ ಸೇರಬೇಕು? ಅದು ಇನ್ಯಾವ ದೇಶದಲ್ಲಿ ಇರಬಹುದು?
ಆತುರದಲ್ಲಿ ಹಿಗ್ಗುವ ಮುಂಚೆ, ಯೋಚಿಸುವ ತಂತ್ರ ಅಂತರ್ಗತ ಆಯಿತು ತಾನೇ?

ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?
ಕೆ. ಆರ್. ಎಸ್. ಮೂರ್ತಿ

ಗೊತ್ತು. ಗೊತ್ತಿಲ್ಲ
ಗೊತ್ತೆಂದು ಗೊತ್ತಿಲ್ಲ
ಗೊತ್ತಿರಬಹುದೆಂದೂ ಗೊತ್ತಿಲ್ಲ
ಗೊತ್ತಿಲ್ಲವೆಂದು ಗೊತ್ತಿಲ್ಲ
ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ
ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ
ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು
ಬಹಳ ಬಹಳ ಬಹಳ ಗೊತ್ತಿಲ್ಲ
ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ
ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!
"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;
ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;
ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;
ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸಕನಾದ ಹಾಗೆ.

ಏನಂತೀರಿ ನೀವು?
ನಿಮ್ಮಗೆ ಏನೆಲ್ಲಾ ಗೊತ್ತು?
ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ನೇಹಿತರನ್ನೆಲ್ಲಾ,
ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,
ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,
ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,
ಯಾರಾದರೂ ಏನೂ ಹೇಳದೆ ಹೋದರೆ,
ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ
ಬಿಟ್ಟುಬಿಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?
ಕೆ. ಆರ್. ಎಸ್. ಮೂರ್ತಿ


ಗೊತ್ತು. ಗೊತ್ತಿಲ್ಲ
ಗೊತ್ತೆಂದು ಗೊತ್ತಿಲ್ಲ
ಗೊತ್ತಿರಬಹುದೆಂದೂ ಗೊತ್ತಿಲ್ಲ
ಗೊತ್ತಿಲ್ಲವೆಂದು ಗೊತ್ತಿಲ್ಲ
ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ
ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ
ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು
ಬಹಳ ಬಹಳ ಬಹಳ ಗೊತ್ತಿಲ್ಲ
ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ
ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!
"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;
ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;
ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;
ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸ್ಕನಾದ ಹಾಗೆ.

ಏನಂತೀರಿ ನೀವು?
ನಿಮ್ಮಗೆ ಏನೆಲ್ಲಾ ಗೊತ್ತು?
ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ಣೇಹಿತರನ್ನೇಲ್ಲಾ,
ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,
ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,
ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,
ಯಾರಾದರೂ ಏನೂ ಹೇಳದೆ ಹೋದರೆ,
ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ
ಬಿಟ್ಟುಬೆಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?

ಶುಕ್ರವಾರ, ನವೆಂಬರ್ 12, 2010

ಕಿವಿ ಕೊಟ್ಟು ಕೇಳಿ

ಕಿವಿ ಕೊಟ್ಟು ಕೇಳಿ
ಕೆ. ಆರ್. ಎಸ್. ಮೂರ್ತಿ

ಡಂಗುರ ಢಂ, ಡಂಗುರ ಢಂ, ಕೇಳಿರೀ! ಕೇಳಿರೀi! ಕಿವಿ ಕೊಟ್ಟು ಕೇಳಿರೀ!
ಬಿಸಿ, ಬಿಸಿ, ಸುದ್ದಿ. ಗಾಳಿಯಲಿ ತೇಲಿ ಬಂದಿರುವ ನಂಬಲಾಗದ ಆಲಿಸಿರಿ

ನಾಗ ಮುಂಗಸಿಯರ ಸುಮಹೂರ್ತ ಲಗ್ನ; ರಾಮ ರಾವಣರ ಮಿತ್ರೋತ್ಸವ
ಹಿರಣ್ಯ ಕಷ್ಯಪು ನಡೆಸುವನು ಇಡೀ ರಾತ್ರಿ ಹರಿ ಭಜನೆಯ ಜಾಗರಣೆ ಸೇವೆ

ಬೀಮ ಧುರ್ಯೋಧನರ ಸಂಧಾನ, ಬೀಷ್ಮ ಶಿಖಂಡಿಯರ ಯುಗಳಗಾನ
ಹನುಮಂತ ಚೆಂದೊಳ್ಳಿ ಹಿಡಂಬಿಯರ ಪ್ರೇಮಾಲಾಪ, ನಾಟ್ಯ ಪ್ರದರ್ಶನ

ಕಾಗೆ ಕೋಗಿಲೆಗೆ ಕಲಿಸಿದ ಸುಮಧುರ ರಾಗಗಳ ಸಂಗೀತ ಕಲೆಯ ಮೇಳ
ಉಪ್ಪಿನ ಬಿಸಿ, ಬಿಸಿ, ಪಾಯಸ, ಕಬ್ಬಿಣದ ಕಾಳುಗಳ ಹೂರಣದ ಹೋಳಿಗೆ

ಕಳ್ಳನ ಭುಜದ ಮೇಲೆ ಪೊಲೀಸನ ಕೈ, ಕಳ್ಳನ ಕೈ ಪೊಲೀಸನ ಜೇಬೊಳಗೆ
ಅರ್ಧ-ಅರ್ಧ ಮಸಾಲೆ ದೋಸೆ, ಜಾಮೂನು, ಬೈಟೂ ಕಾಫಿ, ಬಿಲ್ಲು ಯಾರಿಗೆ?

ಏನ್ರೀ? ನಂಬುವುದಿಲ್ಲವೋ ನೀವು? ಅಸಂಬಧ್ಧ ಪ್ರಲಾಪ ಅಂತೀರಾ ನೀವೆಲ್ಲಾ?
ಯಾರಿಗೆ ಗೊತ್ತು? ಅಂತಹ ಕಾಲಾನೂ ಬರಬಹುದು! ಸಾಧ್ಯ ಸ್ವಾಮಿ ಎಲ್ಲ.

ತೆರಿಗೆ, ಕಂದಾಯ ಅಧಿಕಾರಿ ತನ್ನ ಮಗಳನ್ನು ಮೋಸಗಾರ ವ್ಯಾಪಾರಿಗೆ ಕೊಟ್ಟ
ಪೊಲೀಸನ ಮಗನಿಗೆ ಕಳ್ಳನಾಗುವ ಅತಿ ಅಸ್ಸೆ ಅಂತ ಅವನ ತಾಯಿಗೆ ಹೇಳಿ ಬಿಟ್ಟ

ಅಪ್ಪ ವೆಂಕಟರಮಣನ ಗುಡಿಯಲ್ಲಿ ಪೂಜಾರಿ, ಮಗ ಕುಡಿಯೋದು ವೈನು, ಬೀರು
ಅವನಿಗೆ ಬೇಕು ಚಿಕ್ಕನ್ನು, ಮಟನ್ನು, ದಿನ್ನಕ್ಕೆ ಎರಡು ಸಲ; ಅವನದು ಕದ್ದ ಕಾರು

ಬೇಜಾರು ಮಾತ್ರ ಮಾಡಿಕೋ ಬೇಡಿ; ನನಗೆ ಗೊತ್ತಿರಲಿಲ್ಲ ನೀವು ಸತ್ಯಾನೆ ಹೇಳೋದು
ಇದ್ದದ್ದು ಹೇಳಿದೆ ಅಷ್ಟೇ; ನನ್ನ ಖಯಾಲಿ ಡಂಗುರ ಹೊಡೆಯೋದು, ಕವನ ಬರೆಯೋದು

ಸುಮ್ಮನೆ ತಲೆ ಆಡಿಸಿ ಸಾಕು

ಸುಮ್ಮನೆ ತಲೆ ಆಡಿಸಿ ಸಾಕು
ಕೆ. ಆರ್. ಎಸ್. ಮೂರ್ತಿ

ಹೂಂ? ಉಹೂಂ?
ಹೌದು, ಅದೂ ಹೌದು, ಇನ್ನೊಂದೂ ಹೌದು. ಆಹಾಂ!

ಹುಟ್ಟು, ಹುಟ್ಟಿದ್ದು, ಹುಟ್ಟುವುದು, ಹುಟ್ಟಿಸುವುದು ಒಂದೇ:
ಹೂಂ? ಉಹೂಂ?

ತಿಂಡಿ, ತಿಂದಿದ್ದು, ತಿನ್ನುವುದು, ತಿನ್ನಿಸುವುದು ಒಂದೇ:
ಹೂಂ? ಉಹೂಂ?

ನಾಗ, ಮುಂಗುಸಿ; ಹುಲಿ, ಹುಲ್ಲೆ; ಹುಲ್ಲು, ಹಸು ಒಂದೇ:
ಹೂಂ? ಉಹೂಂ?

ಕಣ್ಣು ಮುಚ್ಚುವುದು, ಬಿಚ್ಚುವುದು, ಮಿಟುಕಿಸುವುದು ಒಂದೇ:
ಹೂಂ? ಉಹೂಂ?

ಶಂಕರ, ಚಾಂಡಾಲ, ಪುರಂದರ, ವಿಠಲ; ಆಕ್ಕಮ, ಮಹಾದೇವ ಒಂದೇ:
ಹೂಂ? ಉಹೂಂ?

ನಿನ್ನೆ, ಇಂದು, ನಾಳೆ; ನೀರು, ಮಂಜು, ಆವಿ; ಹುಲ್ಲು, ಹಾಲು, ಮೊಸರು ಒಂದೇ:
ಹೂಂ? ಉಹೂಂ?

ಹೇಳಿ! ಹೌದೋ? ಅಲ್ಲವೋ? ಸುಮ್ಮನೆ ತಲೆ ಆಡಿಸಿ ಸಾಕು: ಹೂಂ? ಉಹೂಂ?

ಸೋಮವಾರ, ನವೆಂಬರ್ 8, 2010

ಆಲದ, ಆಳದ ಬೇರು ಹಾರಿ ಹೋದಂತೆ

ಆಲದ, ಆಳದ ಬೇರು ಹಾರಿ ಹೋದಂತೆ
ಕೆ. ಆರ್. ಎಸ್. ಮೂರ್ತಿ

ಎಲ್ಲಿಂದಲೋ ಬಂದವರು
ಇವರೆಲ್ಲಾ ಎಲ್ಲಿದ್ದಂದಲೋ ಬಂದರಂತೆ
ಇಲ್ಲಿದ್ದವರು ಎಲ್ಲೋ ಹೋದರಂತೆ

ಅಲ್ಲಿಂದ ಇಲ್ಲಿಗೆ ಬಂದವರು; ಬಂದು ಇಲ್ಲಿಯೇ ಇದ್ದು ಬಿಟ್ಟವರು
ಇಲ್ಲಿಯೇ, ಹತ್ತಿರದಲ್ಲಿಯೇ ಇದ್ದವರು ಅದೆಲ್ಲಿಗೋ ಹೋಗಿಬಿಟ್ಟವರು
ಮತ್ತೆ ಇಲ್ಲಿಗೆ ಬರದೇ ಇದ್ದವರು; ಯಾರು ಯಾವಾಗ ಎಲ್ಲಿರಬೇಕು?
ಎಂಬುದೆಲ್ಲಾ ಅವರವ ಹಣೆಯ ಬರಹವೇನೋ!

ಊರು ಬಿಟ್ಟು, ಕೇರಿ ಬಿಟ್ಟು, ಪ್ರಾಂತ್ಯ, ಪ್ರದೇಶ ಬಿಟ್ಟು,
ದೇಶವನ್ನೇ ಬಿಟ್ಟು ಹೊರಟು ಹೋದವರು; ಹೊರತು ಆದವರು.
ಹೊಸಬರು ಹಳಬರಾದವರು, ಬಳಗವಾದವರು

ಸುಡುವ ಬಿಸಿಲಿನಲ್ಲಿ ನಡೆದು, ತಲೆಯ ಮೇಲೆ,
ಹೊಟ್ಟೆಯ ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಂಡು ಹೋದವರು;
ರಾತ್ರೋ, ರಾತ್ರಿ ಯಾರಿಗೋ ಹೆದರಿ ಓಡಿ ಹೋದವರು,
ತುರುಕರುಗಳಿಗೆ ಹೆದರಿ, ತುರುಕರುಗಳನ್ನು ನಡೆಸಿಕೊಂಡು,
ಕುದುರೆಯನು ಏರಿ ಸವಾರಿ ಹೋದವರು,
ಗಾಡಿಯಲ್ಲಿ ಹೆಂಡಿರು, ಹುಡುಗರ ಜೊತೆ ಕೂತು ಹೋದವರು.

ಹುಲ್ಲಿನ ಮೈದಾನವನ್ನು ಬಿಟ್ಟು, ಬೆಟ್ಟದ ಮೇಲೆ ಅಡಗಿದವರು
ನದಿಯಲ್ಲಿ, ಸಾಗರದಲ್ಲಿ, ಸಮುದ್ರದಲ್ಲಿ ದೋಣಿಯಲ್ಲಿ ತೇಲಿ ಹೋದವರು
ಹಕ್ಕಿಗಳಂತೆ ಹಾರಿ ವಲಸೆ ಹೋದವರು, ಮತ್ತೆ ಬರದೆಯೇ ಇರುವವರು

ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಪೂರ್ವಜರ ಹಣೆಬರಹ, ನೆಲದ ಋಣ,
ಆನು, ನೀನು, ತಾನು, ಅವನು, ಅವಳು, ಅವರುಗಲಿಗೆಲ್ಲಾ
ಅವರದೇ ಋಣ; ಬೇರೆ, ಬೇರೆ ಬರಹ;
ನೆಲಸುವಿಕೆ; ಹೊಸ, ಹೊಸ ಕನಸಿನಲಿ ಕನವರಿಸುವಿಕೆ.
ಪೂರ್ವಜರ ಕನಸೇ ಬೇರೆ, ಇವರ ಅಪೂರ್ವ ಭೂತ ನನಸೆ ಬೇರೆ.

ಮೊಗ್ಗುಗಳು, ಅರಳುವ ಕುಸುಮಗಳು, ಭಾರದಿಂದ ತೂಗುವ ಹಣ್ಣುಗಳು.
ಒಳಗಿನ ಬೀಜಗಳು, ಜೀನುಗಳು ಬೇರೆ, ಬೇರೆ, ಕೊಂಬೆಗಳು ಬೇರೆ;
ಕಾಂಡ ಮಾತ್ರ ಅದೇ, ತಾಯಿ, ತಂದೆ, ಮಿಕ್ಕ ಮಂದಿ ಬೇರು ಮಾತ್ರ ಒಂದೇ;
ಬೇರನ್ನೇ ಕಿತ್ತು ಒಗೆದು ಹೋಗಿ ಬಿಟ್ಟು, ಇನ್ನೆಲ್ಲೋ ಬೇರು ಬಿಟ್ಟಂತೆ
ಆಲದ ಮರವನ್ನು ಬುಡದಿಂದ ಕಿತ್ತು ನೆಡವೋರು ಉಂಟೆ? ಇರಬೇಕು, ಹೀಗಿರಬೇಕು

ಭಾನುವಾರ, ನವೆಂಬರ್ 7, 2010

ಅಂಟಿದ ನೆಂಟು

ಅಂಟಿದ ನೆಂಟು
ಕೆ. ಆರ್. ಎಸ್. ಮೂರ್ತಿ

ಹುಟ್ಟಿನಿಂದಲೇ ಅಂಟಿಕೊಳ್ಳುವುದಯ್ಯಾ ನೆಂಟರಿಷ್ಟರ ಅಂಟು
ಹುಟ್ಟಿಗೆ ಮುಂಚೆಯೇ ಜೀವ ಕೊಟ್ಟವಳ ಹೊಟ್ಟೆಯಲಿ ಗಂಟು

ಅವಳ ಧಮನಿಯ ಧರ, ಧರ ರಕ್ತದ ಧಾರೆ ರಾಗದ ಸೆರೆ ಹಾಕಿ
ಹೊಕ್ಕಳ ಬಳ್ಳಿಯ ಜೊತೆಯೇ ಹೊರಬಿದ್ದು, ಅತ್ತು ಬಿಕ್ಕಿ, ಬಿಕ್ಕಿ

ತುಂಬು ನಿತಂಬದ ಅಂಬನು ಹೀರಿ, ಉಂಡಿದ್ದು ರುಚಿಯಲ್ಲವೇ?
ಪ್ರತಿ ಗುಟುಕನ್ನೂ, ಗಟ, ಗಟ ಕುಡಿದು, ತೇಗಿದ್ದು ನೆನಪಿದೆಯೇ?

ಅವಳ ಅಪ್ಪುಗೆ, ಬೆಪ್ಪು ನಿನಗೆ ತಿಳಿಯದಿರದು ಅಬಲೆಯ ದೊಡ್ಡ ಬಲೆ
ಒಂದೊಂದರಂತೆ ಇಹದ ಪ್ರತಿ ಸೆಳೆತವೂ ಹಿಡಿದು ಹಾಕಿತ್ತು ಜಾಲೇ

ಅನುಜ, ಅನುಯಾಯಿ, ಒಡನಾಟಿ, ಮನವ ಅಪಹರಿಸಿದ ಕೊಮಲೆಯರೆಲ್ಲ
ಹೊಸ, ಹೊಸ, ಬಂಧನಗಳ ಹೊಸೆದಾಯ್ತು, ಕಳಚಿ ಹೊರ ಬರುವ ಬಗೆಯಿಲ್ಲ

ಉಸಿರು, ಉಸಿರಿಗೂ, ಬಸಿರಿನಿಂದಲೇ ನಿನ್ನ ಹಿಂಬಾಲಿಸಿತು ಭವದ ಬೇತಾಳ
ವಾಸನೆಯು ಬಿಗಿಯಾಗಿ ನೀ ಸಿಕ್ಕಿಯಾಯ್ತು ತೀರಿಸು ಜೀವ ಸವೆಸುತಾ ಸಾಲ

ಆನೇ

ಆನೇ
ಕೆ. ಆರ್. ಎಸ್. ಮೂರ್ತಿ

ಆನೇ ಕಿವಿ, ಆನೇ ಕಣ್ಣು, ಆನೇ ತಲೆ, ಆನೇ ಚರಣ, ಆನೇ ಕರಣ.
ಆನೇ ಹಲ್ಲು, ಆನೇ ಜೊಲ್ಲು, ಆನೇ ಲಂಬೋದರ, ಲಂಬ ನಾಸಿಕ

ಆನೇ ತದೇಕ ಚಿತ್ತವು, ಅತ್ತಿತ್ತ ಸುತ್ತಾಡುವ ಕೋತಿ ಮನವೂ ಆನೇ
ಆನೇ ಅತಿ ಉದಾರ ದಾನಿಯು, ಕೈ ಪಿಡಿದು ಬೇಡುವವನೂ ಆನೇ

ಆನೇ ಕತ್ತಲು, ಬೆಳಕೂ ಆನೇ; ಆನೇ ಮಳೆಯೂ, ಬೆಳೆಯೂ ಆನೇ
ಆನೇ ನದಿ, ಸಾಗರಗಳು; ಬೀಸುವ ಗಾಳಿ, ಮಾರುತಗಳೂ ಆನೇ

ಆನೇ ಭವನ, ಭುವನವೂ ಆನೇ; ಆನೇ ಬಾನು, ಭಾನುವೂ ಆನೇ
ಸಕಲ ಗ್ರಹಗಳೂ ಆನೇ; ಅನೇಕಾನೇಕ ನೋವ, ತಾರೆಗಳೂ ಆನೇ

ಆನೇ ಸರಸ, ವಿರಸವೂ ಆನೇ; ಸಕಲ ರಸ, ಭಾವ, ಅನುಭವವೂ ಆನೇ
ಆನೇ ನೀರಸ ವಿರಕ್ತಿಯೂ; ರಾಗ ರಹಿತ, ಸುಖ, ದುಖ ನಿರ್ವಿಭಾವ ಆನೇ

ಹುಟ್ಟಿಸುವನು ಆನೇ, ಸುಡುವವನೂ ಆನೇ; ಪೊರೆಯುವವನು ಆನೇ
ಬೆಳೆಸುವವನೂ ಆನೇ, ಉಳಿಸುವವನೂ ಆನೇ, ಅಳಿಸುವನೂ ಆನೇ

ಆನೇ ಸತ್ಯ, ಅಸತ್ಯವೂ ಆನೇ; ಆನೇ ಮಿಥ್ಯ, ನಿತ್ಯ ಸತ್ಯವೂ ಆನೇ
ಆನೇ ಭಯ, ಭಕ್ತಿಯಲಿ ಭಜಿಪನೂ, ಪೂಜಿಸಿಕೊಳ್ಳುವವನೂ ಆನೇ

ಆನೇ ಹೊರಗೂ, ಆನೇ ಒಳಗೂ; ಇಳೆಯಲೆಲ್ಲ, ಇಹದಲ್ಲೆಲ್ಲೆಲ್ಲಾ ಆನೇ
ಆನೇ ಅಣು; ಎಲಕ್ಟ್ರಾಣುವೂ, ಪ್ರೋಟಾನೂ, ನ್ಯೂಟ್ರಾನುಗಳೂ ಆನೇ

ಆನಿಲ್ಲದಿಲ್ಲ, ಆನೇ ಎಲ್ಲ, ಹಿಂದು, ಮುಂದು, ಎಂದೂ ಇರುವುದೂ ಆನೇ
ಆನೆಲ್ಲೂ ಇಲ್ಲ, ಆನೆಲ್ಲೂ ಇರಬಲ್ಲ, ಅನೇಕಾನೇಕ ಅನುಮಾನವೂ ಆನೇ

ಶನಿವಾರ, ನವೆಂಬರ್ 6, 2010

ಕೇಳಿ: ನನ್ನ ಅದೃಷ್ಟ

ಕೇಳಿ: ನನ್ನ ಅದೃಷ್ಟ
ಕೆ. ಆರ್. ಎಸ್. ಮೂರ್ತಿ

ನನ್ನ ಅದೃಷ್ಟಕ್ಕೆ ನನಗೆ ಒಬ್ಬಳು ಸುಂದರ ಮಡದಿ
ನಡೆಸಿದಾಗಲೆಲ್ಲ ಕೆಡವಿದಳು ಹೆಣ್ಣು ಮಕ್ಕಳ ಆತರದಿ

ನನ್ನ ನೂರಾರು ಕಂದಗಳಿಗೆ ಹೆಸರಿಟ್ಟೆ ಹಲವಾರು
ಹೆಸರಿನಂತೆಯೇ ಇರಲೆಂದು ಅವರ ಪ್ರತಿ ಉಸಿರಿರು

ಆಶಾ, ಉಷಾ, ನಿಶಾ, ಯಶ, ಭಾಷಾ, ಅನೇಕ ಷ ಶ
ನೀತ, ಗೀತ, ಕಥಾ, ಕವಿತಾ, ಮಾತಾ, ಎಲ್ಲಥರದ ಹೃತಿ, ತ

ಪದ್ಮ, ಮಲ್ಲಿಕಾ, ಸುಗಂಧ, ಎಲ್ಲ ಬಣ್ಣದ, ಅಂದದ ಕುಸುಮ
ಅರ್ಚನ, ಪೂಜಾ, ಶ್ರುತಿ, ವ್ರತ, ಯಾವಾಗಲೂ ದೇವರ ನಾಮ

ಪ್ರೇಮ, ಪ್ರೀತಿ, ರತಿ, ಮಿಲನ ಅವರಿಗೆ ಬೇಕಾದ ಒಲವಿರಲಿ ಅಂದೇ
ಸರಸ್ವತಿ, ಲಕ್ಷ್ಮಿ, ಪಾರ್ವತಿ, ಸೀತಾ, ಗಾಯತ್ರಿ ದೇವತೆಯರೆಂದೇ

ಬೆಳೆಯುತ್ತಾ ಅವರೆಲ್ಲ ಏನಾದರು ಎಂದು ಮಾತ್ರ ನನ್ನನ್ನು ಕೇಳಬೇಡಿ
ಉಳಿದದ್ದು ನೀವೇ ಬೇಕಾದ ಹಾಗೆ ಊಹಿಸಿ ಕೊಳ್ಳಿ, ಆದರೆ ಅಳಬೇಡಿ

ನಿಷೆಯಲ್ಲಿಯೂ ಒಂದು ಕಿರಣ

ನಿಷೆಯಲ್ಲಿಯೂ ಒಂದು ಕಿರಣ
ಕೆ. ಆರ್. ಎಸ್. ಮೂರ್ತಿ


ಅತ್ತ, ಇತ್ತ, ಸುತ್ತ ಮುತ್ತ, ಎತ್ತೆತ್ತಲೂ ಸುತ್ತಿಕೊಂಡಿದೆ ಕತ್ತಲೆಯ ಕಾಟ
ಬಟ್ಟ ಬಯಲಲ್ಲಿ, ಬಿಟ್ಟ ಕಣ್ಣಲ್ಲಿ, ಅಟ್ಟೂ, ಇಟ್ಟೂ, ತಡಕಾಡುವ ಹುಚ್ಚಾಟ

ಕಿಡಿಯೊಂದ ಕಂಡರೆ ಸಾಕು, ಎಲ್ಲೆಲ್ಲೂ ಬೆಳಕ ಚೆಲಾಡುವ ತವಕದಲಿ
ಅಡಿಯಿಂದ ಅಡಿಗೆ ಸಾಗಿ, ಇಡೀ ಬಯಲ ಹುಡುಕಿ, ಕೊನೆಗೆ ಬರಿಗೈಲಿ

ಹಿಡಿಯಷ್ಟು ಇಂಧನ ಸಾಕು, ಹುಲ್ಲಿನ ಮೈದಾನದಲಿ ಮತ್ತೆ, ಮತ್ತೆ ಕೈಹಾಕಿ
ಬರಿ ಖಾಲಿ ಮನದಲ್ಲಿ, ಬಡ ಬಡ ಬಡಿಯುವ ಎದೆಯಲ್ಲಿ ಕುಸಿದು ಸುಸ್ತಾಗಿ

ಹತಾಶೆ; ಮುಂದಿನ ಗತಿಯೇನು, ಇಂದಿನ ವತಿಯೇನು, ಹಿಂದನು ಮರೆವೆನೇನು?
ಕಿರು ಆಶೆ, ಕಿರಣವೊಂದಾದರೂ ಉಳಿದಿದೆಯೋ, ಅದಾದರೂ ಬೆಳಗುವುದೇನು?

ಕತ್ತಲೆಯಲಿ ಅಡಗಿದೆ ಬೆಳಕು

ಕತ್ತಲೆಯಲಿ ಅಡಗಿದೆ ಬೆಳಕು
ಕೆ. ಆರ್. ಎಸ್. ಮೂರ್ತಿ

ಕತ್ತಲೆಯಿಂದ ಬೆಳಕಿಗೆ ಸಾಗಲು ಕಾತರ; ಮಬ್ಬಿನಿಂದ ಎದ್ದೇಳುವ ಥರ
ಅರಿ: ಇರುವುದು ಕತ್ತಲೆಯ ಒಳಗೆ, ಎಂದೂ ಉರಿಯುತಿಹ ಬೆಳಕಿನ ದೀವಿಗೆ
ರಾಗ ವಿರಕ್ತಿಯೂ ಸಾಕು ಮುಕ್ತಿ ಸಾಧಿಸಲು; ಯುಕ್ತಿ ಬೇಕು ಶಕ್ತಿಯ ಎದ್ದೆಬ್ಬಿಸಲು
ಕೆಂಡದ ಅಂದ ಕಾದ ಇದ್ದಿಲಿಗೆ ಗೊತ್ತು; ಕಪ್ಪು ಕೆಂಪಾದಾಗ ಸುಪ್ತವು ಚೇತನ ಆಯ್ತು
ಕತ್ತಲೆಯಲಿ ಅಡಗಿದೆ ಬೆಳಕಿನ ಚೇತನ; ಮತ್ತೇಕೆ ಹುಡುಕುವೆ ಎತ್ತೆತ್ತಲಿನ ತಾಣ

ಶನಿವಾರ, ಅಕ್ಟೋಬರ್ 30, 2010

ಕನ್ನಡ ಬರತ್ತಾ ನಿಂಗೆ?

ಕನ್ನಡ ಬರತ್ತಾ ನಿಂಗೆ?
ಕೆ. ಆರ್. ಎಸ್. ಮೂರ್ತಿ


ದ್ಯಾವ್ರಪ್ಪ! ನಾನ್ಯಾವತ್ತೂ ನಿಂಗೆ ಒಂದೂ ಕೂಡ ಪ್ರಸ್ನೇನೇ ಕೇಳಿಲ್ಲಾ
ಅದ್ಯಾಕೋ, ನನ್ ಪೆದ್ದು ತಲೆ ಒಳ್ಗೆ ಒಂದು ದೊಡ್ಡ ಅನುಮಾನ ಇದ್ಯಲ್ಲಾ

ನಿನಗೆ ಗೊತ್ತಲ್ವಾ, ನಾನ್ಯಾವತ್ತೂ ನಿನ್ನತ್ರ ಕನ್ನಡ್ ದಲ್ಲೇ ಮಾತಾಡ್ತೀನಲ್ವಾ?
ನನೀಗ್ ಬರೋದು ಒಂದೇ ಬಾಸೆ ಕಣಪ್ಪ, ಮುತ್ತಿನಂಥ ಭಾಸೆ ಅಲ್ವಾ?

ನಾನೊಬ್ನೇ ಅಲ್ಲ, ನಮ್ ಕನ್ನಡ್ ಜನಗೋಳ್ ಎಲ್ಲಾರೂ ನಿನ್ನ ಬೇಡಿ ಕೊಳ್ಳೋದು
ತಮಗೆ ಕೆಟ್ಟ ಸಮ್ಯ ಬನ್ದಾಗೆಲ್ಲಾ, ತಮ್ಮ ತಾಪತ್ರಯನೆಲ್ಲಾ ತೋಡಿಕೊಳ್ಳೋದು

ತಮ್ಗೆ ಸಾನೆ ಕುಸೀ ಅದಾಗೆಲ್ಲಾ ನಿನ್ಗೆ ಇಡೀ ತೆಂಗಿನ ಕಾಯಿ ಅಲ್ವಾ ಒಡೆಯೋದು
ತಮ್ಮ ಎಂಡಿರ್ಗೆ ಕೂಸು ಅದಾಗ ನಿನ್ನ ಎಸ್ರಲ್ಲೇ ಅಲ್ವಾ ಸಂತರ್ಪಣೆ ಮಾಡೊದು?

ನೋಡು ನಾನಾಗ್ಲೇ ವಟ ವಟಾಂತ ನಿನ್ನತ್ರ ಏನೇನೋ ಮಾತಾಡ್ತಾ ಇದ್ದೀನಿ ಆಗ್ಲೇ
ಆದ್ರೆ ನನ್ನ ಅನುಮಾನ ಮಾತ್ರ ಇನ್ನೂ ಐತೆ: ನಿನಗೆ ಕನ್ನಡ ಅರ್ತ ಆಗ್ತದಲ್ವೇ?

ಪುರಂದರ ದಾಸ್ರು, ಕನಕ ದಾಸ್ರೂ, ಆ ದಾಸ್ರೂ, ಈ ದಾಸ್ರೂ, ಆಡು ಬರದು ಆಡದ್ರಲ್ಲ
ನಮ್ಮ ಬಸವಣ್ಣ, ನಮ್ಮ ಅಕ್ಕ ಮಹಾದೇವಿ, ಸರಣರೂ, ಸಂತರೂ, ಸ್ವಾಮಿಗೋಳೆಲ್ಲ

ದಿನಾನೂ, ಮೂರೊತ್ತೂ, ನಿನ್ನ ಬಜನೆ ಮಾಡದ್ರಲ್ಲಾ! ನಿನಗೆ ಕನ್ನಡ ಬರತ್ತೋ?
ಕೋಟಿ, ಕೋಟಿ ಕನ್ನಡ್ ದೋರು ಬೆಳಿಗ್ಗೆ-ರಾತ್ರಿ ನಿನ್ನ ಕೂಗಿದ್ದು, ಕರೆದಿದ್ದೂ ಕೇಳಿಸ್ತೋ?

ಯಾವಗ್ಲೂ ನಾನೇ ಕಣಯ್ಯಾ ಮಾತಾಡೊದು, ನೀನು ಮಾತ್ರ ಮಾತೇ ಬರಲ್ವೋ ಅನ್ನೋ ಆಗೆ
ಸುಮ್ಕೇನೇ ಕೂತಿರ್ತಿಯಲ್ಲಾ, ನನ್ಗೆ ಅನುಮಾನಾ ಜಾಸ್ತಿ ಆಗೈತೇ, ನೀನು ಇಲ್ದೇನೇ ಇರೋ ಆಗೆ

ನಟಿಸ್ತಾ ಇದೆಯೋ? ನೀನಿರೋದೆಲ್ಲ ಸುಳ್ಳು ಆದ್ರೆ, ನಾನೊಬ್ನೆ ಅಲ್ಲಾ ಬೆಪ್ಪು ತಕ್ಕಡಿ ಕಣೊ
ಇದೆಲ್ಲಾ ನಮ್ಮ ಕಕಲಾತಿ, ಇಲ್ಲದೇ ಇರೋ ದ್ಯಾವ್ರನ್ನ ನಾವೇ ಉಟ್ಟಿಸಿ ಕೈತಟ್ಟಿತೀವಿ ಕಣೊ

ಶನಿವಾರ, ಅಕ್ಟೋಬರ್ 23, 2010

ನಿನ್ನದೇ ನೆನಪು

ನಿನ್ನದೇ ನೆನಪು
ಕೆ. ಆರ್. ಎಸ್. ಮೂರ್ತಿ

ತುಂಬು ಬೆಳದಿಂಗಳು ಅಂಗಳದ ಮೇಲೆಲ್ಲಾ ಹದನಾಗಿ ಹಾಸಿತ್ತು
ಹಿತ್ತಲ ತೋಟದಲ್ಲಿಯೇ ಚಿಗುರು ಬಳ್ಳಿಯಾಗಿ ಬೆಳೆದು ದೊಡ್ಡದಾಗಿತ್ತು

ಕಂಪು ಹರಡಿತ್ತು ಬೆಳೆದು ಅರಳಿ ನಿಂತಿದ್ದ ಗೊಂಚು ಕೆಂಪು ಗುಲಾಬಿ
ಎತ್ತಿಂದಲೋ ಬಂದು, ಅತ್ತಿತ್ತಲೂ ತಿರುಗದೆ ಮೇಲೆ ಕುಳಿತಾಗ ದುಂಬಿ

ನಿನ್ನ ಮೊಗದ ಬಣ್ಣದ ಬೊಂಬೆಯು ಮನದ ಪರದೆಯ ಮೇಲೆ ಕುಣಿದು
ಅರಳಿತು ಹೃದಯದ ಹೂವು; ಗುಲಾಬಿಗೆರಗಿದೆ ಆ ಬೆರಗಿಗೆ ಮಣಿದು

ಕಾಮಣ್ಣನ ಹೂರಣದ ಔತಣ

ಕಾಮಣ್ಣನ ಹೂರಣದ ಔತಣ
ಕೆ. ಆರ್. ಎಸ್. ಮೂರ್ತಿ

ಕಾಮನ ಪೂರ್ಣಿಮೆಯ ಬೆಳದಿಂಗಳಲ್ಲಿ ಹೂರಣದ ಔತಣವನಿಕ್ಕುವೆ
ಕಣ್ಣ ರೆಪ್ಪೆಯ ತುಸು ಮಿಟುಕಿಸುವುದರೊಳಗೆಯೇ ಬಾರೆ ಎನ್ನೋಲವೇ

ಜೇನಿನಂತಹ ಜೋನಿ ಬೆಲ್ಲ, ಬಂಗಾರದ ಬಣ್ಣದ ಹದನಾದ ಬೇಳೆ
ಘಮವ ಉಲ್ಬಣಿಸಿದೆ ಬೆರೆತ ಏಲಕ್ಕಿ, ಹೊಸೆದ ನುಣ್ಣ ಕಣಕದ ಮೇಲೆ

ಬಿಸಿಯಾದ ಕಾವಲಿ, ಚುಂಯ್ ಎನುತಿರುವ ನಯವಾದ ತುಪ್ಪವ ಸುರಿದು
ಹೋಳಿಗೆಯ ಲಟ್ಟಿಸಿ, ಒಂದಾದ ಮೇಲೊಂದು ಮೊಗಚಿಕಾಯಿ ಹಾಕಿ ಎರೆದು

ಬಿಸಿ, ಬಿಸಿ ನಿನ್ನ ನಾಲಗೆಯ ಮೇಲಿಡುವೆ, ಹಾಯಿ, ಹಾಯಿ ಎಂದೆನಿಸುವುದು
ಇಹದಿಂದ ಪಯಣ ನಿನಗೆ ಇಂದ್ರನರಮನೆಗೆ ಇರುಳೆಲ್ಲ ನಡೆಯುತಿರುವುದು

ಶುಕ್ರವಾರ, ಅಕ್ಟೋಬರ್ 22, 2010

ನಾನು ಸದಾ ಸಿಧ್ಧ

ನಾನು ಸದಾ ಸಿಧ್ಧ
ಕೆ. ಆರ್. ಎಸ್. ಮೂರ್ತಿ

ವೈಕುಂಠದಲ್ಲಿ ಸತಿ ಪತಿಯರ ಸದಾ ನಲಿವ ನವ ರಸ ಸರಸ
ಹಿಗ್ಗಿದ ಹೆಡೆ ತೆಗೆದ ನಾಲಿಗೆ ಹೆಬ್ಬಾವಿನ ಹಾಸಿಗೆಯಲ್ಲಿ ಶಯನ

ಸಮುದ್ರ ಮಥನದ ಸಡಗರ ಸಕಲ ದೇವ ಕುಲ ಸಹಿತ ಗೋಷ್ಟಿಗೆ
ರಕ್ಕಸ, ರಕ್ಕಸಿಯರಿಗೂ ಬಂತು ಕರೆಯೋಲೆ ಕೈಹಾಕಲು ಹಾವಿಗೆ

ಬಾಗಿಲ ಕಾಯುವರಾರು? ಅದಕ್ಕೆಂದೂ ಬೇಕೆ ಬೇಕಲ್ಲವೇ ನಾನು
ಗೊತ್ತವರಿಗೆ ಧೈರ್ಯ, ವೀರ್ಯದ ಹೊರೆ ಹೊತ್ತು ಸದಾ ಸಿಧ್ಧನು

ಗುರುವಾರ, ಅಕ್ಟೋಬರ್ 21, 2010

ಮಧುರ ಚಂದಿರಕೆ ಬಾರಾ

ಮಧುರ ಚಂದಿರಕೆ ಬಾರಾ
ಕೆ. ಆರ್. ಎಸ್. ಮೂರ್ತಿ

ಆಸೆ; ಇತಿ, ಮಿತಿ ಇಲ್ಲದ ಆಸೆ; ಎಂದೆಂದಿಗೂ ಮುಗಿಯದ ಆಸೆ.
ನಾಕವನು ಇಳೆಗಿಳಿಸಿ ಮಧುಚಂದ್ರದ ಪಾಕವನು ಕುಡಿಸುವ ಆಸೆ

ತುಟಿಗೆ ತುಟಿಯ ಹಚ್ಚಿಸಿ,
ಕೆನ್ನೆಗೆ ಕೆನ್ನೆಯ ಒತ್ತಿ,
ಒಬ್ಬರನೊಬ್ಬರು ಏರಿ,
ತೊಳಬಂಧನ ಬೆಸೆದು,
ಕಂಗಳಲಿ ಕಂಗಳನಿಕ್ಕಿ,
ಕೇಳಿಯಾಡುವ ಬಾರಾ, ಮಧುರಸ ಕೇಳಿಯಾಡುವ ಬಾರಾ

ನಡುವಿನಾ ಕಡೆಗೋಲ
ಶಿವಲಿಂಗ ಶಕ್ತಿಯಲಿ
ಇಡುವಾಗ ರಭಸದಲಿ
ಉಕ್ಕೀತು ಸುರಿದೀತು
ದರಭರಾ ದರಭರಾ
ಕುಣಿಯೋಣು ಬಾರಾ ಮಧುರ ರಸ ಕುಡಿಯೋಣು ಬಾರಾ

ನಿತಂಬವು ತುಂಬಿ ತುಳುಕುತ್ತ
ಕಂಬವು ಅಂಬರವ ಅರಸುತ್ತ
ಮಂದ್ರದ ದನಿಯು ಎದುಸರೆತ್ತಿ
ನಾನು ನಿನ್ನೊಳು ಬೆರೆಯುತ್ತಾ
ಇಬ್ಬರೂ ಒಂದಾಗಿ ಮೆರೆಯುತ್ತಾ
ತಣಿಯೋಣು ಬಾರಾ ಸವಿ ಚಂದಿರನ ತಣಿಯೋಣು ಬಾರಾ

ಬೇಡ ನಮಗೆ ಆಯುಧ ಪೂಜೆ

ಬೇಡ ನಮಗೆ ಆಯುಧ ಪೂಜೆ
ಕೆ. ಆರ್. ಎಸ್. ಮೂರ್ತಿ

ವರುಷಕ್ಕೊಂದು ಸರಿ ಮಾತ್ರ ಬರಲಿ ಸಾಕು ಆಯುಧ ಪೂಜೆ
ಕೈಮುಗಿದು ಬೇಡಿಕೋ, ಮತ್ತೆ ಬರದೇ ಇರಲಿ ನಮಗೀ ಪೂಜೆ

ಬನ್ನೀ ಮರದಲ್ಲೂ ಬೇಡ ಬಚ್ಚಿಡುವುದು, ನಮಗೆ ಪೂಜೆಯೂ ಬೇಡ
ಯುಧ್ಧವಂತೂ ಇನ್ನು ಸಾವಿರ ವರುಷಕೂ ಬರದಿರಲಿ ಎಂದು ಬೇಡು

ತುರುಕರಿಗೆ ಬರುತ್ತದಂತೆ ದಿನ್ನಕ್ಕೆ ಐದು ಸಲ ಅವರ ನಮಾಜಿನ ಕರೆ
ಜೋರಾಗಿ ಊರಿಗೆಲ್ಲ ಕಿರಿಚುವ ಮುಲ್ಲಾನಿಗೆ ಮೆಲ್ಲಗೆ ಹೇಳಿ ಬಿಡು ಖರೆ

ಚೆನ್ನಾಗಿ ಮುಳುಗಿಸಿ ಹೂತುಬಿಡಲಿ ಆಯುಧ ಎಲ್ಲವನೂ ಅವನ ಭಕ್ತರೆಲ್ಲ
ಅವರ ಮಕ್ಕಳ ಕೈಗೂ ಸಿಗದಿರಲಿ ಬತ್ತಳಿಕೆ ಬಂದೂಕು ಭಜಿಸಲಿ, ಅಲ್ಲ, ಅಲ್ಲ

ಸೋಮವಾರ, ಅಕ್ಟೋಬರ್ 18, 2010

ಮಂತ್ರಾಲಯ ಎಲ್ಲಿದೆಯೋ?

ಮಂತ್ರಾಲಯ ಎಲ್ಲಿದೆಯೋ?
ಕೆ. ಆರ್. ಎಸ್. ಮೂರ್ತಿ

ಇತ್ತ, ಅತ್ತ, ಎತ್ತೆತ್ತಲೋ ಕತ್ತಲೆಯಲಿ ತದಕುವುದೇಕೆ?
ಮನದ ಮೈಲಿಗೆ ಕಳೆಯಲು ನೂರಾರು ಮೈಲು ಬೇಕೇ?

ಗುರುವನರಸಿ ಹೊರೆ ಹೊತ್ತು, ಹರಿವ ನದಿಯಲಿ ಮುಳುಗಿದೆ
ಪರಿಪರಿ ಸೂರೆಯ ಆಸೆಯಲಿ ಬೇಡುವ ಭಿಕ್ಕುವು ನೀನಾಗಿದೆ

ಮಂತ್ರಾಲಯವನು ಅರಸುವ ತಂತ್ರವೇ ಬಲು ಬೇರೆ ಮರುಳೆ
ಅಂತರಂಗದಲಿ ನೆರೆ ಅರಸಿ ಸೂಕ್ಷ್ಮದಲಿ ಕಾಣುವುದನು ತಿಳಿ

ಒಳಗೇ ಧ್ವನಿಸುತಲೇ ಇರುವ ಮಂತ್ರದ ಲಯ ಆಲಿಸಿ ಹೇಳು
ಮಂತ್ರವ ಬೊಗಳುವ ಕುತಂತ್ರವ ಬಿಟ್ಟು ಅಂತರಂಗವನೆ ಕೇಳು

ವಾಚಾಳಿ ವಾಕ್ಪಟು ನಾನಲ್ಲ

ವಾಚಾಳಿ ವಾಕ್ಪಟು ನಾನಲ್ಲ
ಕೆ. ಆರ್.ಎಸ್. ಮೂರ್ತಿ

ವಾಕ್ಪಟುವು ನಾನಲ್ಲ
ಪಟ-ಪಟ, ಪಟಾಕಿ ಹಾರಿಸುವ,
ವಟ-ವಟ ವಟ ಗುಟ್ಟುವ ವಾಕ್ ಪಟು
ವಾಕಿಂಗ್, ರನ್ನಿಂಗ್, ವಾಕ್ ಪಟುವೂ ಅಲ್ಲ

ನಾನೊಬ್ಬ ವಾಕ್ ವಟು,
ಜುಟ್ಟು, ಜನಿವಾರವಿಲ್ಲದ ವಾಕ್ ವಟು
ಮಡಿಯಿಂದ ಮಂಡೆಗೆ, ಮಿದುಳಿಗೆ ಪೇಟ ಜಗಿದಿಲ್ಲ
ಕಾಲದ ಮಿತಿ, ತಂತ್ರದ ಮಿತಿ, ಖಾಯದೆಗಳಿಲ್ಲ
ರಂಗದ ಮೇಲೆ, ಮಂಗಗಳ ಮುಂದೆ ಒದರುವ ಹೆದರಿಕೆಯಿಲ್ಲ

ಕಾಲಡಿಯಿಂದ ಕಾಲುನಡಿಗೆಯಲೇ
ಇನ್ನೂ ಬಾಲಕ, ಎಂದೂ ಬಳಲದೆ
ತರ್ಕದ ಟಾಕ್ ಮಾಡಿಯೇ ಮಂಡನನ ಖಂಡಿಸಿ
ಅವನ ಹೆಂಡತಿಯ ಬಾಯನೂ ಮುಚ್ಚಿಸಿದ
ಮುಂಡು ಮಂಡೆಯ ಪುಟ್ಟ ವಟು
ಮೊಂಡು ಆಯಸ್ಸಿನ ದಿಟ್ಟ ವಟು ನೆನಪಿದೆಯೇ?

ಭಾವಿ ಕವಿ ಮಾತ್ರ ನಾನು

ಭಾವಿ ಕವಿ ಮಾತ್ರ ನಾನು
ಕೆ. ಆರ್. ಎಸ್. ಮೂರ್ತಿ

ಮಹಾನ್ ಕವಿಗಳೆಲ್ಲರು ನೀವು
ಬಿರುದು, ಬಾವುಲಿ,
ಹಾರ, ತುರಾಯಿ,
ಪದಕ, ಫಲಕ,
ಇತ್ಯಾದಿ, ಇತ್ಯಾದಿ.

ನಾನಂತಹ ಕವಿಯಲ್ಲ.
ನಾನೆಂತಹ ಕವಿ ನಿಮ್ಮ ಮುಂದೆ!

ನಾನೆಂತಹ ಕವಿ ಕೇಳಿ:
ಕೇಳಿಯಾಡುವ, ಗೇಲಿ ಮಾಡುವ,
ಖಾಲಿ ಮಾತಿನ, ಗಾಳಿ ಮಾತಿನ,
ಪೋರನಂತೂ ನಾನಲ್ಲವೇ ಅಲ್ಲ.

ಆನೆ ಕಿವಿ ಮಾಡೀಗ ಕೇಳಿರಿ:
ನಾನೊಬ್ಬ ಭಾವಿ ಕವಿ
ಸ್ವಾಭಾವಿ ಕವಿ, ಸಂಭಾವಿ
ಅನುಭಾವಿ ಕವಿ, ಸಹಾನುಭಾವಿ ಕವಿ

ಮನಸು ಕೆರಳಿಸುವ ಕವಿ
ಕಣ್ಣು ಅರಳಿಸುವ ಕವಿ
ತನುವ ಹೊರಳಿಸುವ ಕವಿ
ಕರುಳ ಕರೆಯುವ ಕವಿ
ದುರುಳರ ದೂರುವ ಕವಿ
ಮರುಳರ ಹೀಯಾಳಿಸುವ ಕವಿ

ಗುಂಡಿಗೆಯ ಕುಣಿಸುವ ಕವಿ
ಕುಣಿಯುವ ಕುಂಡಿಯ ವರ್ಣಿಸುವ ಕವಿ
ಗುಂಡಿಗೆಯ ಬಡಿತಕ್ಕೆ ಅಲ್ಲಾಡುವ
ಗುಂಡು ಚೆಂಡುಗಳ ಚೆಂದಾಗಿ ಚಿತ್ರಿಸುವ
ನಿಮ್ಮ ಧಮನಿಯಲಿ ಜೇನು ಹರಿಸುವ
ಸುಖಾನುಭಾವಿ ಕವಿ ಮಾತ್ರ ನಾನು.

ಸೋಮವಾರ, ಅಕ್ಟೋಬರ್ 4, 2010

ಸಾಸಿರ ಸಾಸಿರ ಸಂಸಾರಿ

ಸಾಸಿರ ಸಾಸಿರ ಸಂಸಾರಿ
ಕೆ. ಆರ್. ಎಸ್. ಮೂರ್ತಿ

ಉಸಿರು ನಿನ್ನದು ತಾಯೆ, ನೂರಾರು ಕೋಟಿಯ ಬಸಿರು ನಿನ್ನದೇ ಮಹಾ ಮಾಯಿ
ಹಸಿರು ಸೀರೆಯ ಮೈಗೆ ದಿನ, ವಾರ, ವರುಷ ಸೀಮಂತದ ಧಾರೆ ಸ್ನಾನವು ಸುರಿಯೆ

ಉಣಿಸುವಳೂ ನೀನೆ, ಸಾಸಿರ ಸಾಸಿರ ಮೊಲೆಯಿಂದ ಹಸಿದ ಸಂಸಾರವನು ಸರಿಯಾಗಿ
ತಣಿಸುವಳು ನೀನೆ, ದಣಿವಾದ ಪ್ರಾಣಿ, ಕೀಟ, ಹಕ್ಕಿ ಕುಲಕೆ ನೀನಾಗುವೆ ಹಾಸಿಗೆಯಾಗಿ

ಅಳಿದ ಜೀವವ ಉಂಡು, ಹೊಸದೊಂದು ಜೀವದ ಮೊಳಕೆಯನೇ ಚಿಗುರಿಸುವೆ ಮತ್ತೆ, ಮತ್ತೆ
ನಮಗೇಕೆ ಬೇಕು ನಾಳೆಗೇನು, ಬರುವ ತಿಂಗಳಿಗೆ ಮತ್ತೆ ಏನು, ಎಂತೆಂಬ ಪರಿಪರಿಯ ಚಿಂತೆ

ಮುಂದಾಳು ಕನ್ನಡಿಗ

ಮುಂದಾಳು ಕನ್ನಡಿಗ
ಕೆ. ಆರ್. ಎಸ್. ಮೂರ್ತಿ


ನಾಡು ನಮ್ಮದು ಹೆಮ್ಮೆಯದು, ಆಡುವೆವು ಅಮೃತವನೆ ಸುರಿಸಿ, ಹರಿಸಿ
ಹಾಡು ನಮ್ಮದು ಹೆಮ್ಮೆಯದು, ನುಡಿದಾಗಲೆಲ್ಲಾ ಹಾಡುವೆವು ಗುನುಗಿಸಿ (ಪಲ್ಲವಿ)

ನಮ್ಮ ಊರಿನಲೂ, ಪರರ ನಾಡಿನಲೂ, ವಿದೇಶ ಭಾಷಿಗಳ ಒಡನೆಯೂ
ಜೊತೆಯಾಗಿ, ಜೋರಾಗಿ, ಧ್ವನಿಸುವೆವು ಝೇಂಕರಿಸಿ ಕನ್ನಡದ ಡಿಂಡಿಮವನು

ಬೇರೆಯಾದರೇನಂತೆ ಬೇರೆ, ಬೇರೆ ಬೇರುಗಳೂ ನೆರೆ ಊರಿದ್ದರೇನಂತೆ
ಬೇರೆ, ಬೇರೆ ತರು, ಲತೆ, ಸಕಲ ಸುವಾಸನೆಯ ಹೂವುಗಳು ಮಿಳಿದಂತೆ

ಲತೆ ಹತ್ತಾರು ತಬ್ಬಲಿ ನಮ್ಮ ಎತ್ತರದ ವಿಶಾಲ ಮರದ ಕಾಂಡ ಕೊಂಬೆಗಳಲಿ
ಕನ್ನಡಿಗನು ನಡೆಯುವನು ಮುಂದಾಳು ಆಗಿ ಧೀಮಂತ ಶ್ರೀಮಂತ ತನದಲ್ಲಿ

ಶುಕ್ರವಾರ, ಸೆಪ್ಟೆಂಬರ್ 3, 2010

ಸೂತ್ರಧಾರನ ಕಿರು ಘೋಷಣೆ:

ಸೂತ್ರಧಾರನ ಕಿರು ಘೋಷಣೆ:

(ಈ ಕೆಳಗಿನ ಸೂತ್ರಧಾರನ ಮಾತುಗಳು ಘೋಷಣೆಯ ಪರಿಯಲ್ಲಿ, ಜೋರು ಕಂಠದಲ್ಲಿ ಇರಬೇಕು. ಎಲ್ಲ ದಿಕ್ಕಿಗೂ ತಿರುಗುತ್ತಾ ಎಲ್ಲರನ್ನೂ ದೃಷ್ಟಿಸಿ ನೋಡುವಂತೆ, ನೇರವಾಗಿ ನೆರೆದವರಿಗೆ ಹೇಳುವಂತೆ, ಸ್ವಲ್ಪ ಅತ್ತಿತ್ತ ನಡೆದು, ಸುತ್ತಿ ಘೋಷಿಸ ಬೇಕು)
(ಈ ಘೋಷಣೆ ಮಾಡುತ್ತಿರುವಾಗ, ಮಧ್ಯೆ, ಮಧ್ಯೆ ಒಬ್ಬರು ವಿಧವಿಧವಾಗಿ ತಮಟೆಯೊಂದನ್ನು ಹೊಡೆಯಬೇಕು, ಜೊತೆಗೆ ಹಾಂ, ಹೂಂ. ಇತ್ಯಾದಿ ಹೂಂ ಗೊಡುತ್ತಿದ್ದರೆ ಬಹಳ ಚೆನ್ನ)

ಕೇಳ್ರಪ್ಪಾ ಕೇಳಿ (ತಮಟೆ), ಕಿವಿ ನೆಟ್ಟಗೆ ಮಾಡಿಕೊಂಡು, ಸರಿಯಾಗಿ ಕೇಳಿ. (ತಮಟೆ), ನಿಮಗೋಸ್ಕರಾನೆ ನಾವೆಲ್ಲಾ ಒಂದು ನಾಟಕ ಮಾಡ್ತಿದೀವಿ. (ತಮಟೆ) ನಮ್ಮ ನಾಟಕ, ಬರೀ ನಾಟಕವಲ್ಲ. (ತಮಟೆ), ನಿಮ್ಮ ಹಳಿಯ ಕಥೆಯೇ ಇದು; (ತಮಟೆ), ನಮ್ಮ ಊರಿನ ಕಥೆಯೂ ಹೌದು; ನಮ್ಮ ರಾಜ್ಯದ ಕಥೆ, ನಮ್ಮ ದೇಶದ ಕಥೆಯೂ ಕೂಡ ಇದೇ!(ತಮಟೆ),

ಎಲ್ಲಿ ನೋಡೋಣ! ಒಂದು ಸಾರಿ ಜೋರಾಗಿ ಕೂಗಿ, ಬಹಳ ಜೋರಾಗಿ ಕೈ ತಟ್ಟಿ ಚಪ್ಪಾಳೆ ತಟ್ಟಿ.(ಈಗ ಕೊನೆಯದಾಗಿ ತಮಟೆ),

(ಇದರ ನಂತರ, ಸೂತ್ರಧಾರನು ಹಿಂದೆ, ಹೆಂದೆ ಹೆಜ್ಜೆ ಇಟ್ಟು ಕೊಂಡು ಅಥವಾ ಒಂದು ಸಾರಿ ಬೇಗ ಸುತ್ತಿ ನೆರೆದವರೊಡನೆ ಬೆರೆತು ಬಿಡಬೇಕು)

(ನಂತರ, ಸ್ವಲ್ಪವೂ ತಡವಿಲ್ಲದೆ ನಾಟಕ ಪ್ರಾರಂಭ.)

ಬರುತಿದೆ ನೋಡಿ ನಮ್ಮ ಬೀದಿ ನಾಟಕದ ದಂಡು

ಬರುತಿದೆ ನೋಡಿ ನಮ್ಮ ಬೀದಿ ನಾಟಕದ ದಂಡು
ಕೆ. ಆರ್. ಎಸ್. ಮೂರ್ತಿ

ನೀವು ನಿಂತಲ್ಲೇ ನಿಲ್ಲಿ, ಕುಂತಲ್ಲೇ ಕೂರಿ, ನಾವು ಈಗಲೇ ಆಡುವೆವು ನಿಮ್ಮ ಮುಂದೆ ನಾಟಕ
ನೀವು ಇದ್ದಲ್ಲೇ ನಮಗದು ರಾಜ ಬೀದಿ, ಬೇಗಲೇ ಹೂಡುವೆವು ಹಾಡಿ ಕುಣಿದು ಬೀದಿ ನಾಟಕ

ನಮ್ಮ ಊರಿನ, ನಿಮ್ಮ ಹಳ್ಳಿಯ, ಅವರ, ಇವರ ಮನೆಯ ಕಥೆಯೆಲ್ಲಾ ಸಾಕು ನಮ್ಮ ಕುಣಿತಕ್ಕೆ
ಬಿಡಿಗಾಸಿದ್ದಾರೆ ಸಾಕು ನಾವಿರುವುದೇ ಆಗಾಗ ನಿಮ್ಮ ಮನವನೆಲ್ಲಾ ಥೈ ತಕ ಥೈ ಕುಣಿಸೋದಕ್ಕೆ

ಹಾದಿ ಬಿಡಿ, ಹಾದಿ ಬಿಡಿ ನಿಮ್ಮ ವಠಾರದ ಹಾದಿ ಬಿಡಿ, ನಮ್ಮ ಬೀದಿ ಹೈಕಳೆಲ್ಲಾ ಬಂದರು ನೋಡಿ
ನಿಮಗೆಲ್ಲಾ ನಗು ಬಂದರೆ ಚೆನ್ನಾಗಿ ನಕ್ಕು ಬಿಡಿ, ತಟ್ಟಿ ಚಪ್ಪಾಳೆ ಕೈಸೇರಿಸಿ ಗಟ್ಟಿಯಾಗಿ ತಟ್ಟಿ ಬಿಡಿ

ಕೆಂಚಣ್ಣ, ಲಿಂಗಣ್ಣ, ಮುನಿಯಪ್ಪ, ಮಾದಪ್ಪ, ನೀವೆಲ್ಲಾ ಸೇರಿ ಹೊಡೀರೋ ಜೋರು ಜೋರಾಗಿ ಶೀಟಿ
ಗುಂಡಮ್ಮ, ನಾಗಮ್ಮ, ಸೀತಮ್ಮ, ನಂಜಮ್ಮ, ನಿಮ್ಮ ಕಿಲ, ಕಿಲ ನಗುವಿಂದಲೇ ನಮ್ಮೆಲ್ಲರ ಬೆನ್ನು ತಟ್ಟಿ

ಸೋಮವಾರ, ಆಗಸ್ಟ್ 30, 2010

ಹೇ ದೇವರೇ! ನಿನ್ನ ಗುಟ್ಟೇನು?

ಹೇ ದೇವರೇ! ನಿನ್ನ ಗುಟ್ಟೇನು?
ಕೆ. ಆರ್. ಎಸ್. ಮೂರ್ತಿ

ಮನುಷ್ಯನಿಗೆ ನಿನ್ನ ಹುಚ್ಚು ಹೇಗೆ ಹಿಡಿಯಿತು? ಏಕೆ ಹಿಡಿಯಿತು? ಯಾವಾಗ ಹಿಡಿಯಿತು?

ಇದು ಸಾಮಾನ್ಯ ಹುಚ್ಚಲ್ಲ. ವಿಪರೀತ ಹುಚ್ಚು. ಔಷಧಿಯೇ ಇಲ್ಲದ ಹುಚ್ಚು.

ಅವತಾರ ಎತ್ತುವನು ನೀನಲ್ಲ, ದೇವರೇ! ಆಚಾರದ ಅವತಾರಗಳು ಅನೇಕ. ಕೆಲವು ದೇಶಗಳು ದೇವರನ್ನು ಹುಟ್ಟಿಸಿದರೆ, ಇನ್ನು ಕೆಲವು ದೇಶದವರು ತಮ್ಮ ದೇಶದ ಮೇಲೆ ಇನ್ನೊಂದು ದೇಶದಲ್ಲಿ ಅವತಾರ ಮಾಡಿ ತಮ್ಮ ಮೇಲೆ ದಾಳಿ ಮಾಡುವವರೆಗೂ, ಸುಮ್ಮನಿರುತ್ತಾರೆ. ನಮ್ಮ ದೇಶದಲ್ಲಿ ಮಾತ್ರ ದೇವರುಗಳನ್ನು ಅವತರಿಸಲು ಅನೇಕ ದೊಡ್ಡ ಕಾರ್ಖಾನೆಗಳನ್ನೇ ನಿರ್ಮಿಸಿಬಿಟ್ಟರು. ಮೊದಲಿಗರು ಋಷಿಗಳಾದರೆ ಅವರು ಮೂವತ್ತು ಮೂರು ಕೋಟಿ ದೇವರುಗಳನ್ನು ಹುಟ್ಟಿಸಿಬಿಟ್ಟರು. ಜೊತೆಗೆ ಕೋಟಿ, ಕೋಟಿ ಗುರುಗಳೂ, ಸಾಧುಗಳೂ, ಸ್ವಾಮಿಗಳೂ, ಕಳ್ಳ ಸನ್ಯಾಸಿಗಳೂ, ಜಗದ್ಗುರುಗಳೂ ಹುಟ್ಟಿಬಿಟ್ಟರು, ಇನ್ನೂ ಹುಟ್ಟುತ್ತಲೇ ಇದ್ದಾರೆ. ಜಗಕ್ಕೆ ಒಬ್ಬರು ಸಾಲದಂತೆ ಅನೇಕ ಜಗದ್ಗುರುಗಳು ಸಿಂಹಾಸನವನ್ನು ಏರಿದರು.
,
ಭೂಮಿಯಮೇಲೆ ಮಾತ್ರ ದೇವರುಗಳು ಯಾಕೆ? ಕೋಟಿ, ಕೋಟಿ ಸೂರ್ಯನ ತರಹದ ತಾರೆಗಳು, ಗ್ರಹ, ಉಪಗ್ರಹಗಳು, ತಾರಾಮಂಡಲಗಳು, ಗ್ಯಾಲಾಕ್ಸಿಗಳೂ ಇರುವಾಗ, ನೀನು, ಅಥವಾ ನಿನ್ನಂತೆ ಕೋಟಿ, ಕೋಟಿ ದೇವರುಗಳು ಬ್ರಹ್ಮಾಂಡದಲ್ಲೆಲ್ಲಾ ಇದ್ದಾರೆಯೇ?

ಭೂಮಿಯ ಮೇಲೆ, ಇತರ ಪ್ರಾಣಿಗಳೂ, ಹಕ್ಕಿ, ಪಕ್ಷಿಗಳೂ, ಕ್ರಿಮಿ, ಕೀಟಗಳೂ, ಜಲಚರಗಳೂ, ಗಿಡ ಮರಗಳೂ ಸುಮ್ಮನೆ ತಮ್ಮ ಪಾಡಿಗೆ ತಾವು ಇರಬೇಕಾದರೆ, ಮನುಷ್ಯನೇಕೆ ನಿನಗೆ ಪೂಜೆ ಮಾಡುತ್ತಾನೆ? ಜಪ ಮಾಡುತ್ತಾನೆ? ವ್ರತ ಮಾಡುತ್ತಾನೆ, ಭಜನೆಗಳನ್ನು ಮಾಡುತ್ತಾನೆ?

ಓಹೋ! ಇದಕ್ಕೆಲ್ಲಾ ಒಂದೇ ಪದದ ಉತ್ತರವಿದೆಯೋ? ಕಕಲಾತಿ, ಪೆದ್ದುತನ, ಮೂರ್ಖತನ. ಇದೆಲ್ಲಾ ಹುಚ್ಚಿನ ಬೇರೆ, ಬೇರೆ ಪರಿಣಾಮಗಳೋ? ನಮ್ಮ ಭೂಮಿಯು ಒಂದು ದೊಡ್ಡ ಹುಚ್ಚಾಸ್ಪತ್ರೆಯೋ? ಡಾಕ್ಟರು ಮಾತ್ರ ಇಲ್ಲವೋ?

ಹಾಗಾದರೆ, ನೀನೇಕೆ ಇವರಿಗೆಲ್ಲಾ ಈ ರೀತಿ ಹುಚ್ಚು ಹಿಡಿಸಿ, ಸುಮ್ಮನೆ ಯಾಕೆ ಮೂಕನಾಗಿದ್ದೀಯೇ?

ಈ ತಮಾಷೆಯನ್ನೆಲ್ಲಾ ನೋಡಿಕೊಂಡು ನೀವೆಲ್ಲಾ ನಗುತ್ತೀರೆ? ನಿನಗೆ ಮತ್ತು ನಿನ್ನ ಮೂವತ್ತು ಮೂರು ಕೋಟಿ ಸಂಸಾರಕ್ಕೆ ಇದು ಮನೋರಂಜನೆಯೇ?

ಸರಿ ದೇವರೇ! ಈ ಗುಟ್ಟು ನಮ್ಮಲ್ಲೇ ಇರಲಿ. ಬಿಟ್ಟಿ ಮನೋರಂಜನೆಗಳು ನಡೆದು ಕೊಂಡು ಹೋಗುತ್ತಿರಲಿ.

ಬೈ, ಬೈ - ಅಥವಾ ಜೈ, ಜೈ!

ಅನ್ವರ್ಥ ನಾಮ

ಅನ್ವರ್ಥ ನಾಮ
ಕೆ. ಆರ್. ಎಸ್. ಮೂರ್ತಿ

ರಾಮನಿಗೆ ಹೆಸರಿತ್ತವರು ಯಾರಿರಬೇಕು?
ತಂದೆ ದಶರಥನೇ? ತಾಯಿ ಕೌಸಲ್ಯೆಯೇ?
ರಾಜ ಪುರೋಹಿತನೆ? ಇನ್ಯಾರಾದರೂ ಋಷಿಯೇ?

ಉತ್ತರ ಅತಿ ಸುಲಭ: ಒಬ್ಬ ಋಷಿ, ಮಹಾ ಋಷಿ
ಆ ಋಷಿಯ ಹೆಸರೂ ಅನ್ವರ್ಥ ನಾಮವೇ?
ಅವನು ದಶರಥನ ಕುಮಾರನಿಗಿಟ್ಟ ಹೆಸರೂ ಅಷ್ಟೇ!

ವಲ್ಮಿಕದಿಂದ ಪುನರ್ಜನ್ಮ ಪಡೆದವನು ವಾಲ್ಮೀಕಿ
ರಾಮನಿಗೆ ಜನ್ಮ ಕೊಟ್ಟವನೂ ಕೂಡ ವಾಲ್ಮೀಕಿಯೇ!
ರಾಮನ ಕಥೆಗೆ ತನ್ನ ಹೃದಯದಲ್ಲಿ ಜನ್ಮ ಕೊಟ್ಟ ಮಹಾಕವಿ;
ನಾವು, ನೀವೆಲ್ಲಾ ಇವನ ಕಥೆಯನ್ನು ಸಂಪೂರ್ಣ ನಂಬಿ,
ದೇಗುಲಗಳಲ್ಲಿ ಕಥೆಯ ನಾಯಕನನ್ನು ಕಲ್ಲಿನಲ್ಲಿ ಕೆತ್ತಿ,
ಮನೆಯಲ್ಲಿ ಪುಟ್ಟ ವಿಗ್ರಹಗಳನ್ನು ಇಟ್ಟು ಪೂಜಿಸುವಂತೆ
ಮಾಡಿದ ಮಾಂತ್ರಿಕ ಮಹಾ ಕವಿಯಲ್ಲದೆ ಇನ್ನೇನು?

'ರಾಮ' ನಮ್ಮೆಲ್ಲರನ್ನೂ ರಂಜಿಸುವ ಅನ್ವರ್ಥ ನಾಮ
ಮಹಾ ಕವಿಗಳೆಲ್ಲ ಅನ್ವರ್ಥ ನಾಮಗಳಿಗೆ ಅನುರೂಪವಾಗಿ
ತಮ್ಮ ನಾಯಕರನ್ನೂ, ಎಲ್ಲಾ ಪಾತ್ರಗಳನ್ನೂ ತಮ್ಮ ಕಥೆಯನ್ನು ಹೆಣೆದರು
ರಾಮನಿಗೆ "ದಾಶರಥಿ", ಆದಿಯಾಗಿ ಅನೇಕ ಅನ್ವರ್ಥ ನಾಮಗಳನ್ನು
ತಮ್ಮ ಕಥೆಯಲ್ಲಿ ಸಂದರ್ಭಕ್ಕೆ ಸೂಕ್ತವಾಗಿ ಅನೇಕ ಕಡೆ ಉಪಯೋಗಿಸಿದ್ದಾರೆ.

ನಮಗೆ ನಾವೇ ಅನ್ವರ್ಥ ನಾಮಗಳನ್ನು ಕೊಟ್ಟು ಕೊಳ್ಳಬಹುದೇ?
ನಿಮಗೆ ನೀವೇ ಕೆಲವು ನಾಮಗಳನ್ನು ಹಾಕಿಕೊಳ್ಳಿ. ಇತರರಿಗೆ ಪಂಗನಾಮಗಳನ್ನು ಹಾಕಿದ್ದೀರೋ?
ಹಾಗಾದರೆ, ನಿಮ್ಮ ಹೆಸರು "ಪಂಗನಾಮ ಕುಶಲ" ಅಥವಾ ಪಂಗನಾಮ ಕಲಾಕಾರ".

ನೀವೇ ಯೋಚಿಸಿ ನೋಡಿ: ನಿಮಗೆ ಅಷ್ಟೋತ್ತರ (ಅಂದರೆ ನೂರೆಂಟು) ಬೇಕೋ? ಸಹಸ್ರ ನಾಮಗಳು ಬೇಕೋ?

ದಾನಿ ದೀನರ ಋಣಾನುಬಂಧ

ದಾನಿ ದೀನರ ಋಣಾನುಬಂಧ
ಕೆ. ಆರ್. ಎಸ್. ಮೂರ್ತಿ

ಸಾಲ ಸೋಲ ಕೊಟ್ಟೊಡನೆ ಅಂಟುವುದು ತಲೆ ಶೂಲೆ;
ಕೊಟ್ಟದ್ದು ಕೈ ಬಿಟ್ಟು ಹೋಯಿತಲ್ಲಾ ಎಂದು ವ್ಯಥೆ;
ಬಡ್ಡಿಯ ಆಸೆ ಒಂದು ಕಡೆ, ಬಡ್ಡಿಯು ದೊಡ್ಡ ಗುಡ್ದೆಯಾದೀತೆಂದು;
ಅಸಲೇ ಪಲಾಯನವಾದೀತೆಂದು ಭಯದ ಚಳಿಯ ನಡುಕ.

ಸಾಲಕ್ಕೆ ನೀಡಿದ ಕೈಗೆ ತಗುಲುವುದು ಋಣ ಭಾರದ ಕಬ್ಬಿಣದ ಬೇಡಿ;
ಬಡ್ಡಿಗೆ ಬಡ್ಡಿಗಳ ಸಂತಾನ ಬೆಳೆದು ನೊಗವು ಬಿಗಿಯಾಗುತ್ತಾ,
ನೇಣಾಗಿ ಹೋಗಿ ಗಂಟಲಿನಲ್ಲಿ ಉಸಿರೇ ಕಟ್ಟಿ ಹೋಗುವ ಹೆದರಿಕೆ.

ಕೊಟ್ಟರೆ ಮನಸಾರೆ ಕೊಟ್ಟುಬಿಡು ಕೈ ನೀಡಿ ದಾನವನು;
ನಿನ್ನ ಬೆನ್ನು ಹತ್ತುವಳು ಪುಣ್ಯದ ಲಾವಣ್ಯ ಸುಂದರಿ!

ದೀನನಾಗಿ ಬಳಲುತಿರುವಾಗ, ಪಡೆ ದಾನದ ಪುಣ್ಯವನು;
ಈ ತರಹದ ಪುಣ್ಯದ ಋಣವನ್ನು ಅತಿ ಬೇಗ ತೀರಿಸಿಕೊ;
ನಿಜ ಪುಣ್ಯದ ಕಾಲ ಬಂದೊಡನೆ ಕಾತರದಿ ಕೈ ಬಿಚ್ಚಿ ಕೊಟ್ಟುಬಿಡು,
ಬಡ್ಡಿಗೆ ಬಡ್ಡಿ ಕೂಡಿಸಿ ದೀನನೋರ್ವನ ಕಂಡೊಡನೆ.

ದಾನಿ ದೀನನ ಹುಡುಕಿ ಮಾಡುವುದೇ ತೀರ್ಥಯಾತ್ರೆ;
ಕೊಡುವುದೂ, ಬೇಡುವುದೂ ಒಂದು ರೀತಿಯ ಹಸ್ತ ಲಾಘವೇ!
ಬೇಡುವ ಕೈ ಕೊಡುವ ಕೈಯಾಗುವ ಕಂಕಣ ಧಾರಣ;
ಋಣವು ಪುಣ್ಯವಾಗುವ, ಕಬ್ಬಿಣವು ಸುವರ್ಣವಾಗುವ ರಸಾನುವರ್ತನೆ;
ದಾನಿ, ದೀನರದು ವಿಭಿನ್ನ ತರಹದ ಪೂರ್ವ ಜನ್ಮದ ಸಂಬಧ!

ಬದಲೇ ಚೆನ್ನ

ಬದಲೇ ಚೆನ್ನ
ಕೆ. ಆರ್. ಎಸ್. ಮೂರ್ತಿ

ಇದ್ದುದನು ಹಿಂದೆ, ಇರುವುದನು ಇಂದು, ಉಳಿಯದನು ಮುಂದೆ ಕಂಡುಕೊ
ಬದಲದನು ಎಂದೆಂದೂ ಕಣ್ಣಲ್ಲಿ, ಕಣ್ಣಿಕಿ, ಕಾಣುವುದನು ಚೆನ್ನಾಗಿ ನೆನೆದುಕೊ

ಇದ್ದುದನು, ಇರುವುದನು, ಉಳಿಯದನು ಒಂದೂ ಬಿಡದಂತೆ ತಿಳಿಯಬಹುದೇ?
ಆಗುವುದೇ ಇಲ್ಲ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಅಲೆದು ಸರಿಯಾಗಿ ಅರಿಯಬಲ್ಲುದೇ?

ಬದಲಿದನು, ಬದಲಿಪುದೆಲ್ಲನು ತಿಳಿಯುವುದು ಬದಲಿಪ ನಿನಗಂತೂ ಆಗಬಲ್ಲುದೇ?
ಬದಲದು ಆವುದೋ ಅದಕೂ ಬದಲಿಪುದನು ಕಂಡುಕೊಳ್ಳುವ ಪರಿಯಾಗುವುದೇ?

ಬದಲದು ಎಲ್ಲಕೂ ಅಂಟದೇ ಇರುವುದಲ್ಲವೇ? ಅಂಟದೆಯೇ ಕಾಣುವುದೆಂತು!
ಬದಲದು ಬದಲಿಪದಾದರೆ ಕಂಡೀತೋ ಮಾಡಿಕೊಂಡು ಬದಲಿಪದೆಲ್ಲದರ ನಂಟು!

ಎಲ್ಲೆಲ್ಲೂ ಬದಲೇ ಹಿಂದೆ, ಇಂದು, ಮುಂದೂ; ಎಲ್ಲೆಲ್ಲೂ ಬದಲದು ಎಂದಾದರಿತ್ತೇ?
ಬದಲದು ಬದಲೇ ಇಲ್ಲದೆ ಬಲು ಬರಡಾಗಿದ್ದು ಬೇಸತ್ತು, ಬದಲಿಪ ಪರಿಗೆ ತಿರುಗಿತೇ?

ಬದಲಿಪುದಾಟ; ಬದಲಿ, ಬದಲಿ ಹೊಸತಾಗುವುದು ಚೆಲ್ಲಾಟ; ಚೆಂದದ ಮುಗಿಯದಾಟ
ಅಂತಿದ್ದು, ಇಂತಾಗಿ, ಎಂತೆಂತೋ ಆಟಗಳನಾಡುವ ಚಟದ ಅನಂತ ಪರಿಪರಿಯಾಟ

ಗುರುವಾರ, ಆಗಸ್ಟ್ 26, 2010

ಪಾಪದ ಜನ ನೀವು; ಪಾಪಕರ್ಮದ ಫಲ

ಪಾಪದ ಜನ ನೀವು; ಪಾಪಕರ್ಮದ ಫಲ
ಕೆ. ಆರ್. ಎಸ್. ಮೂರ್ತಿ

ಸುಳ್ಳರೋ? ಕಳ್ಳರೋ? ಮಳ್ಳರೋ? ಜೊಳ್ಳರೋ; ಗೆದ್ದವರೋ? ಪೆದ್ದರೋ? ಕದ್ದವರೋ? ಮಂದ ಬುದ್ದಿಯವರೋ?
ಮೊಸಗಾರರೋ? ಹೇಸಿಗೆಯ ಮನದವರೋ? ಹಾಸಿಗೆಯ ವೀರರೋ? ಇತರರ ಕಾಸಿಗೆ ಕೈ ಚಾಚುವರೋ?

ಲಿಂಗ ವಿಕಲರೋ? ಮಂಗನ ಮನದವರೋ? ಅಂಗನೆಯರ ಆಸೆ ಬುರುಕರೋ? ಮೋಸದ ಬಲೆ ಎಸೆಯುವರೋ?
ಸಾಸಿವೆಯ ಕಾಳಿನ ಮೆದುಳಿನವರೋ? ಎಲ್ಲರ ತಲೆಗಳನು ಬೋಳಿಸುವರೋ? ಟೋಪಿಯ ಮಾರಾಟಗಾರರೋ?

ನೀವಲ್ಲತಾನೆ? ನಾನಂತೂ ಅಲ್ಲ, ನಿಮಗೆ ಗೊತ್ತೇ ಯಾರಾದರೂ? ಹಾಗೋ? ನನಗೂ ಗೊತ್ತಪ್ಪ ನೂರಾರು ಜನ.
ನೂರು ಜನರಲಿ ಅವರೇ ಹೆಚ್ಚು; ನರಿ, ಕುನ್ನಿ, ಹುಚ್ಚು ನಾಯಿಯ ಗೋತ್ರದವರು; ಅವರದಂತೂ ಬಲು ಗಿಲೀಟು ತನ

ನಿಮಗೆ ಗೊತ್ತಿಲ್ಲವೇನೋ, ನಿಮ್ಮ ಮುಖದ ಮೇಲೆ, ನೀವು ಪಾಪದ ಜನರೆಂದು ಬರೆದು ಕೊಂಡಿರಬಹುದು ಅಲ್ಲವೇ?
ಅವರಿಗೆ ಕಾಣಿಸಿಬಿಡುವುದು, ನೀವು ಆರು ಮೈಲು ದೂರದಲ್ಲಿ ಬರುವಾಗಲೇ; ಅವರೆಲ್ಲ ದೂರ ದೃಷ್ಟಿಯ ಓದುಗರಲ್ಲವೇ!

ಹಾವಿನ ನಾಲಿಗೆಯಲ್ಲಿ ಹೊರಡುವುದು ದೊಡ್ಡತನದ ಅಡ್ಡ ಹೆಸರುಗಳೇ, ಮೈ ಮೇಲೆಲ್ಲಾ ಬಿರುದು ಬಾವಲಿಗಳುಗಳ ಆಭರಣ
ನಿಮಗೆ ಮಾತ್ರ ಹುಟ್ಟು ಕುರುಡು; ಪರಮ ಸಾಧುಗಳಾರು, ಕೊರಮ ಖೈದಿಗಳಾರು ಒಬ್ಬರಿಂದೊಬ್ಬರನು ಹೇಳಿ ನೋಡೋಣ

ನೋಡಿದರೆ ಮಾತ್ರ ನಮ್ಮ, ನಿಮ್ಮ ಹಾಗೆಯೇ ಕಾಣುವರು; ಬಾಯಿ ಬಿಟ್ಟು ಹಾಡಿದರೆ ಆಗ ಚೆನ್ನಾಗಿ ಕೇಳುವುದು ಕರ್ಕಶ ನಾದ
ಬಲೆಗೆ ಬಿದ್ದವರ ಮುಖಕ್ಕೆ ಮಂಕು ವಿಭೂತಿ ಲೇಪನ; ಜೊತೆಗೆ ಏಳೆಯುವರು ದೊಡ್ಡ ಪಂಗನಾಮ; ನಿಮಗೆ ಆಗ ಅದೇ ಆನಂದ

ಕೈ ಬಿಚ್ಚಿ ಸ್ವಲ್ಪ; ನಿಮ್ಮ ಅಂಗೈ ಬರಹವನು ಬಿಡಿಸಿ ನೋಡುವೆನು. ನಿಮಗೆ ಈ ಜನ್ಮದಲ್ಲೇ ಸ್ವಲ್ಪವಾದರೂ ಬರಬಹುದೇ ಬುಧ್ಧಿ?
ಶನಿ, ರಾಹು, ಕೇತುಗಳು ಹಾಕಿರುವರು ಠಿಕಾಣಿ, ಟೆಂಟು, ಇನ್ನೂ ಎಂಟು ಜನಮಕೂ. ಬೇಗ ಗಂಗೆಯಲಿ ನಿಮ್ಮ ಮೈಯನ್ನು ಅದ್ದಿ!

ಆಗ

ಆಗ
ಕೆ, ಆರ್. ಎಸ್. ಮೂರ್ತಿ

ನಾನಿರಲಿಲ್ಲ, ನೀವೂ ಇರಲಿಲ್ಲ, ಅವರಿವರಲ್ಲದೆ, ಯಾರೂ ಇರಲೇ ಇಲ್ಲ;
ಅದಿರಲಿಲ್ಲ, ಇದಿರಲಿಲ್ಲ, ಈಗಿರುವುದಾವುದೂ, ಮತ್ಯಾವುದೂ ಇರಲಿಲ್ಲ;
'ಆಗ', 'ಈಗ', 'ಬೇಗ', 'ಯಾವಾಗ', 'ಗಳಿಗೆ' ಗಳಿಗೆ ಏನೂ ಅರ್ಥವೇ ಇರಲಿಲ್ಲ;

ಚುಕ್ಕೆ ಮಾತ್ರ, ಚಿಕ್ಕದಕ್ಕಿಂತ ಚಿಕ್ಕದು; ಅಕ್ಕ, ಪಕ್ಕ; ಎತ್ತರ, ವಿಸ್ತಾರ: ಆವುದಿರಲಿಲ್ಲ
ಉದ್ದ, ಅಗಲ, ಆಚೆ, ಈಚೆ, ಅಲ್ಲಿ, ಇಲ್ಲಿ, ಕಡೆಗಳೂ, ಖ, ಮೃ, ಭ ಗಳೂ ಇರಲೇ ಇಲ್ಲ.
ಬಿಂದುವೊಳಡಗಿತ್ತು ಅಜ ಬ್ರಹ್ಮ; ಆದರೂ, ಚಿಕ್ಕ ಚುಕ್ಕೆಯಾದರೂ ಇರಬೇಕಲ್ಲ!

ಕಾಲದ ಹಕ್ಕಿಗೆ ರೆಕ್ಕೆ, ಪುಕ್ಕ ಗಳು ಬೆಳೆದಿರಲಿಲ್ಲ; ಕಾಲವೆಂಬುದೇ ಇರಲಿಲ್ಲವಲ್ಲ!
ದಿಕ್ಕೇ ಇಲ್ಲದ ಹಕ್ಕಿಯಲ್ಲವೇ! ಕಾಲವು ಬಂಧನದಲ್ಲಿ ಚುಕ್ಕೆಗೆ ಅಧೀನವಾಗಿತ್ತಲ್ಲ!
ಹಾರಾಟವೆಂಬುದೇ ಗೊತ್ತಿಲ್ಲದಿದ್ದರೆ, ಚುಕ್ಕೆಯೊಳಗಿನದು ಎಂತಹ ಹಕ್ಕಿಯೂ ಅಲ್ಲವಲ್ಲ!

ಸೊನ್ನೆಯಿಂದ ಏನೂ ಬರುವ ಸಾಧ್ಯತೆ ಇಲ್ಲವಲ್ಲ! ಒಳಗೆ ಅನಂತ ಅಡಗುವುದು ಹೇಗೆ?
ಸೊನ್ನೆಯೊಳಗಿಂದ ಪೂರ್ಣತೆಯು ಹುಟ್ಟಿ, ಆಗಲೇ ಪೂರ್ಣವಾದುದು ಹಿಗ್ಗುವುದು ಹೇಗೆ?
ಏನಂತೀರಿ ನೀವೆಲ್ಲ? ಇಲ್ಲದ್ದರಿಂದ ಇರುವುದೆಲ್ಲ, ಬರುವುದೆಲ್ಲವೂ ಆಗುವುದು ಹೇಗೆ?

ಮಂಗಳವಾರ, ಆಗಸ್ಟ್ 24, 2010

ತುಂಟ ತುಟಿಯೇ ಅಟ್ಟಕ್ಕೆ ಬಾಗಿಲು

ತುಂಟ ತುಟಿಯೇ ಅಟ್ಟಕ್ಕೆ ಬಾಗಿಲು
ಕೆ. ಆರ್. ಎಸ್. ಮೂರ್ತಿ

ನಿನ್ನ ಅಂದದ ಕಣ್ಣುಗಳು ಬಲು ಚೊಕ್ಕವಿಹುದು; ಅದರ ಚೆನ್ನ ನನಗೊಬ್ಬನಿಗೇ ಗೊತ್ತು ಚೆನ್ನಿ
ಮುದ್ದು ತುಟಿ ನಿನ್ನದು ಚಿಕ್ಕದಿರಬಹುದು; ಅದನ್ನು ಬಿರಿಸುವುದು, ಬಿಡಿಸುವುದೇ ಬಲು ಚೆನ್ನ

ಮುದ್ದು ತುಟಿಗೆ ಬೇಕು ಮುತ್ತು ಕೋಟಿ; ಬಿಡ ಬಿಡದೆ ಬಿಡಿಸಬೇಕು, ತಡ ಮಾಡ ಬೇಡ ಚಿನ್ನ
ನಾಲಗೆಯೇ ಸಕಲ ಕುಸುಮಾಸ್ತ್ರ, ಮೂಳೆಯಿಲ್ಲದ ಬಾಣ, ಹೂಡುವೆನು ನಿನ್ನ ತುಟಿಗೆ ಅದನ್ನ

ತುಟಿಯು ಎಲ್ಲೇ ಇರಲಿ, ಗುರಿಯ ತಾಣವನು ತಬ್ಬದ ಬಾಣ; ಬಗ್ಗಿ, ಹಿಗ್ಗಿ ನುಸುಳುವ ಪರಿಯನ್ನ
ನಿನ್ನ ಬಾಗಿಲನು ತೆರೆದು ಕರೆದುಕೊಂಡರೆ ಮಾತ್ರವೇ ಸಗ್ಗದ ಬಾಗಿಲೂ ತೆರೆದೀತು ಕರೆದೆಮ್ಮನ್ನ

ನಿನ್ನ ಧಮನಿಗಳು ಬಿರಿದು, ಹರಿದೀತು ಜೊನ್ನ ಪ್ರವಾಹ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಎಲ್ಲೇ ಮೀರೀತು
ಆಣೆಕಟ್ಟುಗಳೆಲ್ಲಾ ಒಡೆದು ನುಗ್ಗೀತು ಅಮೃತದ ಧಾರೆ; ಇದಕೆ ಬೇಕೆ ಆಣೆ, ಪ್ರಮಾಣಗಳ ಮಾತು

ಕಳಕಳಿಯ ಮಾತಿದು: ಕಳೆಯ ಬೇಡ, ಗಳಿಗೆಗಳ ಉರುಳಿಸಬೇಡ; ಸಲಿಗೆ ಇರಲಿ, ಬಲು ಹತ್ತಿರಕೆ
ಕಳೆಯೋಣ, ನಲಿಯೋಣ, ಕುಣಿಯೋಣ, ತಣಿಯೋಣ; ತನುವೇ ಏಣಿಯು ಜೇನಿನ ತಾಣದ ಸಗ್ಗಕೆ

ಮಧು ಮಂಥನ

ಮಧು ಮಂಥನ
ಕೆ. ಆರ್. ಎಸ್. ಮೂರ್ತಿ

ನನ್ನ ತುಟಿಯು ನಿನ್ನ ತುಟಿಯನು ಬೆರೆತು ಮಧುವನು ಹೀರುತಿರುವುದನು ಕಂಡು
ತನ್ನ ತುಟಿಯನೇ ಬಿಲ್ಲಾಗಿಸಿದನಲ್ಲೇ ನಲ್ಲೆ ನಗುಮೊಗದ ಚಂದಿರನು ಬಲು ತುಂಟು

ಚಕೋರ ಹಕ್ಕಿಯು ಚಂದ್ರಿಕೆಯ ಅಮೃತವನು ಉಣ್ಣುವುದನೇ ಮರೆತು ಹೋದಂತೆ
ನೋಡುತಿದೆ ಅಚ್ಚರಿಯ ಆನಂದ ರಾಗದಾಲಾಪನೆಯಲ್ಲಿ ಬಾಯಿ ಬಿಟ್ಟು ಕೊಂಡಂತೆ

ದುಂಬಿಯ ದೊಡ್ಡ ಹಿಂಡೇ ಸುತ್ತಾಡುತಿದೆ ಝುಂಯ್, ಝುಂಯ್ ಝಾಂಕಾರದಲಿ
ಜೇನು ತುಪ್ಪವು ತೊಟ್ಟಿಕ್ಕುತಿರಲು ನಾಲ್ಕು ತುಟಿಗಳೂ ಮಗ್ನ ಮಂಥನದಾಟದಲಿ

ಕಾಮದೇವ ಮದನರಾಯನಿಗೆ ಚುಚ್ಚಿ ಚುಚ್ಚಿ ತೋರಿಸುತಿಹಳು ರತಿಯು ಅತಿ ಬೆರಗಿನಲಿ
ಮದನ ರತಿಯರು ರತಿಯಾಟದ ದಿಟ ಪಾಠವನು ಕಲಿಯುವ ಅತೀವ ಆಸೆಯಿಂದದಲಿ

ಜಾಣನಾರೇ?

ಜಾಣನಾರೇ?
ಕೆ. ಆರ್. ಎಸ್. ಮೂರ್ತಿ

ಆಗಸದ ಕಾಗಜದಲ್ಲೆಲ್ಲಾ ಅಂದದ ಚಿತ್ತಿರವ ಬಿಡಿಸಿಹ ಜಾಣನಾರೆ?
ಕೋಟಿ ಕೋಟಿ ಮಿನುಗುವ ಚುಕ್ಕೆಗಳನು ನಾನಂತೂ ಎಣಿಸಾಲಾರೆ

ದೂರ ದೃಷ್ಟಿಯಲಿ ವೀಕ್ಷಿಸಿದ ವಿಜ್ಞಾನಿ ವಿವರಿಸಿಹ ಚೆಂದವನು ನಮಗೆಲ್ಲಾ
ಸೂಕ್ಶ್ಮದಲಿ ಕಾಣಲು ಬಲ್ಲವರಿಗೆ ಗೊತ್ತೀ ಗುಟ್ಟು ಚುಕ್ಕೆ ಬರೀ ಚುಕ್ಕೆಯಲ್ಲ

ಹಲವು ತಾರಾ ಸಂಸಾರ, ಗ್ರಹ ಕೂಟದ ಆ ಸಂಸಾರದಲಿ ಯಾರಾರಿಹರೋ?
ಸಂಸಾರಿಗರು ನಮ್ಮ ಸೂರ್ಯನ ಕಂಡು ಅವನೊಂದು ತಾರೆಯೇ ಎನಿಪರೋ!

ನಮ್ಮ ಸೂರ್ಯನೂ ತಾರಾ ಗುಛ್ಛದಲಿ ಒಂದಾಗಿ ಓಟದ ಪಂದ್ಯದ ಪಟುವಂತೆ
ಸುತ್ತ, ಸುತ್ತ ಸುತ್ತಿ ಬೇಸತ್ತವರಲ್ಲ; ಯಾರ ಸುತ್ತು ಸುತ್ತುವರೋ ಗೊತ್ತಿಲ್ಲವಂತೆ

ತಾರಾ ಗುಛ್ಛಗಳ ವ್ಯೂಹ ರಚನೆಯ ವೈಖರಿ ಕೋಟಿ ಕೋಟಿ ಎಣಿಸಲಾಗದಂತೆ
ಅದೆಷ್ಟೋ ವ್ಯೂಹಗಳು ಬ್ರಹ್ಮನ ಮೊಟ್ಟೆಯಲಿ ಅಡಗಿಹವೋ ತಿಳಿಯಲಾಗದಂತೆ!

ವಸುಧೆಯೂ ಬೆಂಕಿಯ ಉಂಡೆಯಾಗಿ ಸಿಡಿದು ಸೂರ್ಯನ ಮೈಯಿಂದ ಬಂದಳಂತೆ
ಶಾಂತಳಾದವಳು ಕೊನೆಗೆ ನಮೆಲ್ಲರನೂ ಹಡೆದು ತನ್ನ ಕುಟುಂಬವನು ಪಡೆದಳಂತೆ

ಒಬ್ಬರನೊಬ್ಬರು ಸೊತ್ತಿಗೆ ಕಿತ್ತಾಡಿ, ನಾವೀಗ ಮತ್ತೆ, ಮತ್ತೆ, ಬದುಕಿ ಸತ್ತು ಸೋತವರಲ್ಲ
ವಿಷದ ಬೀಜಗಳ ಬಿತ್ತುವುದರ ವ್ಯರ್ಥದ ವ್ಯವಸಾಯದಲಿ ನಮಗಿಂತಲೂ ಪರಿಣಿತರಿಲ್ಲ

ವಿಷ ಅಮೃತಗಳು ಅವಳಿ ಜವಳಿಯಂತೆ; ಮಧುವ ಕರೆದರೆ ವಧು ವಿಷವೂ ಬರಬಹುದೇ!
ಅಮೃತವನ್ನು ನಮಗುಳಿಸಿ, ವಿಷವನು ಮಾತ್ರ ಹೀರಬಲ್ಲ ವೀರ ವಿಷಕಂಠನೆಲ್ಲಿ ಹೋದ?

ಸೋಮವಾರ, ಆಗಸ್ಟ್ 23, 2010

ಬೇಕೋ? ಬೇಡವೋ?

ಬೇಕೋ? ಬೇಡವೋ?
ಕೆ. ಆರ್. ಎಸ್. ಮೂರ್ತಿ

ಬೇಕೋ? ಬೇಡವೋ? ಏನು? ಯಾವುದು? ಏಕೆ? ಹೇಗೆ? ಎಂದು? ಎಷ್ಟು? ಎಲ್ಲಿ?
ಪಟ್ಟಿ ಮಾಡು ಮೊದಲು ಎಲ್ಲ; ಗಟ್ಟಿ ಮಾಡಿಕೊ; ಬಿಟ್ಟಿಯೋ? ಬರೆದುಕೋ ಚೀಟಿಯಲ್ಲಿ

ಎಲ್ಲವೂ ಸಿಗದು: ಇದು ಮಾತ್ರ ಗಟ್ಟಿ. ಎಲ್ಲವೂ ಬೇಕಿಲ್ಲ ನಿನಗೆ: ಇದು ನಿನಗೆ ಗೊತ್ತೇ
ಆಸೆಯಿದ್ದಾಗ ಕಿಸೆಯೆಲ್ಲಾ ಖಾಲಿ; ಕಿಸೆಯು ತುಂಬಿ ತುಳುಕುವಾಗ ಹಸಿವೆಯೇ ನಾಪತ್ತೆ

ಆಸೆಯಿದ್ದಾಗ ತುಸುವಾದರೂ ಹಸಿವೆ ನೀಗಿಸು; ಕಿಸೆ ಝಾಣ ಝಾಣಿಸುವಾಗ ಬಿಚ್ಚು ಕೈ
ಹೆಚ್ಚಿದ್ದಾಗ ನಾಚದೆ ಬಿಚ್ಚಿದ ಕೈ ಅಚ್ಯುತನನ್ನೂ ಮೆಚ್ಚಿಸುವುದು. ಬಿಡಿಸಿಕೊ ಎರಡೂ ಕೈ

ಏನು? ಯಾವುದು? ಏಕೆ? ಹೇಗೆ? ಎಂದು? ಎಷ್ಟು? ಎಲ್ಲಿ? ಸಿಕ್ಕಿದರೂ ಪ್ರಸಾದವೇ ಅದು
ಏನೂ, ಯಾವುದೂ, ಏಕೋ, ಹೇಗೋ, ಎಂದೂ, ಇಷ್ಟೂ ಸಿಗದಿದ್ದರೆ ತಿಳಿ ನಿನ್ನದಲ್ಲವದು

ಭಾನುವಾರ, ಆಗಸ್ಟ್ 22, 2010

ನೆವ ನಿಮ್ಮ ಗುಟ್ಟು

ನೆವ ನಿಮ್ಮ ಗುಟ್ಟು
ಕೆ. ಆರ್. ಎಸ್. ಮೂರ್ತಿ

ನೆವ, ನೆವ, ನೆವ; ನನ್ನ, ನಿಮ್ಮ, ಎಮ್ಮ, ಅವರವರ ನೆವಗಳೇ ಬೇರೆ
ನಾವು, ನೀವು ಮಾಡಿದ ಯೋಚನೆ, ಹಾಕಿದ ಯೋಜನೆ ಮಾತ್ರ ಬೇರೆ

ನಾವು ಹೇಳಿದ ಭಾವ, ಅದಕ್ಕಂತೆಯೇ ಹೆಣೆದ ನೆವದ ಕಾವ್ಯವೇ ಒಂದು
ನೀವು ಹಾಡುವ ರಾಗ ಸರಾಗ, ತಟ್ಟಿದ ತಾಳಗಳೇ ಬೇರೆ ಇರಬಹುದು

ನಮ್ಮ ನಮ್ಮ ಗುಟ್ಟುಗಳು ನಮ್ಮೊಳಗೇ ಮಾಳಿಗೆಯಲಿ ಹೇಗೇ ಬಚ್ಚಿಟ್ಟಿರಲಿ
ತಂತಮ್ಮ ಗುಟ್ಟು ತಮ್ಮ ಅಟ್ಟದ ಮ್ಯಾಲೆ ಅಡಗಿದಲ್ಲೇ ಬೆಚ್ಚಗೆ ಮಲಗಿರಲಿ

ಅಲ್ಪ ಸ್ವಲ್ಪ ಮಾಡಿದರೆ ನೆವದ ಸಾಲ, ಅಂದಾನು ಜವ ಹೋಗಲಿ ಪರವಾಗಿಲ್ಲ
ಕಲ್ಪನೆಯನ್ನೇ ಮೀರಿ ನಮ್ಮ ನೆವದ ಹವ್ಯಾಸವು, ಅಭ್ಯಾಸವೇ ಆಗಿ ಹೋದಾಗೆಲ್ಲ

ನೆವದ ಗುಟ್ಟು ಮಾತ್ರ, ನಿಮಗೇ ಗೊತ್ತಿಲ್ಲದೆ, ಹಾರಿ ಬೆನ್ನು ಏರಿ ಕುಣಿವ ಬೇತಾಳ
ನಿಮ್ಮ ಬಾಗಿಲು ತಟ್ಟಿ, ಕುಟ್ಟಿ, ಜವರಾಯ ಒಂದಲ್ಲ, ಒಂದು ದಿನ ಹಾಕತಾನ ತಾಳ

ನೆವ ಆಗೊಂದು; ಈಗೊಂದು, ನೆವ ಬೇಕಾದಾಗ ಬೇಕೇ ಬೇಕೆಂದು ಮಾಡಿದ ಸಾಲ
ನೆವಕ್ಕೊಂದು ಕಾಲ; ಕಾಲರಾಯನಿಗೆ ಗೊತ್ತು ಬಂದೇ ಬರುವುದು ತನ್ನದೇ ಆದ ಕಾಲ

ನಿಮ್ಮ ಮನಸ್ಸಿನಲ್ಲಿ ಖರೆ, ಅವನು ನಿಮ್ಮನ್ನು ಮಾತ್ರವೇ ಎಳೆದು ಕೊಂಡು ಹೋಗ್ತಾನ
ಗೊತ್ತಿಲ್ಲ ಮಂಕು ನಿಮಗ ಅದಾವ ಮಾಯದಲ್ಲೋ ಬೇತಾಳ ಹಿಂದೆಯೇ ಸರಿದು ಬರ್ತಾನ

ನಿಮಗೆ ಗೊತ್ತಿರಲಿ, ನರಕದಾಗ ಇದೆ ಒಂದು ದೊಡ್ಡ ಕೋರ್ಟು; ಕೂತಿರ್ತಾರೆ ಮಂದಿ ಎಲ್ಲ
ಇದೂ ಗೊತ್ತಿರಲಿ, ನಿಮ್ಮ ಬೆನ್ನು ಹಿಡಿದ ಬೇತಾಳ ನೆಗೆದು ಕುಣಿದು ಹೇಳತಾನ ಗುಟ್ಟು ರಟ್ಟೆಲ್ಲ

ನಿಮ್ಮ ಮೈಮ್ಯಾಗಿಲ್ಲ, ಅಟ್ಟದಲ್ಲಿ ಬಚ್ಚಿಟ್ಟಿದ್ದ ಗುಟ್ಟಿನ ಕೋಟು; ಬ್ಯಾರೆ ಯಾವ ಹೊದುಕೆಯೂ ಇಲ್ಲ
ಬಾಯಿ ಬಡುಕನವ ಬೇತಾಳ, ಕಿಂಚಿತ್ತೂ ನಾಚಿಕೆಯೇ ಇಲ್ಲದವ, ಬಯಲು ಮಾಡ್ತಾನ ಬದುಕೆಲ್ಲ

ಕಟಕಟಿಯಲ್ಲಿ ನೀವು, ಬಡಿದಿದ್ದಾರೆ ಬಾಯಿಗೆ ಬೀಗ ದೊಡ್ಡದು, ಎಷ್ಟು ಕೂಗಿದರೂ ಉಸಿರೇ ಇಲ್ಲ
ನೀವು ಮಾತ್ರ ಬರೀ ಬೆತ್ತಲೆ; ನಿಮ್ಮದೆಲ್ಲಾ ಚೆನ್ನಾಗಿ ಕಾಣ್ತದ; ನೋಡಿ, ನೋಡಿ ನಗತದ ನರಕವೆಲ್ಲ

ಏನಂತೀರಿ? ನಿಮ್ಮ ಗುಟ್ಟಿನ ವಿಷಯ, ನಿಮ್ಮ ಅಟ್ಟದ ಗಂಟು ನಿಮ್ಮದೇ! ಅದೆಲ್ಲ ನಿಮಗೆ ಬಿಟ್ಟಿದ್ದು.
ಎಲ್ಲರ ಕಿಟಿಕಿ ಒಳಗೆ ಇಣುಕಿ, ಇಣುಕಿ ನೋಡಿ, ಅವರು ಮಾಡುವುದೆಲ್ಲಾ ಹಾಡುವ ಚಟ ನನಗೆ ಇಷ್ಟದ್ದು

ನಿಮ್ಮ ಮಾನದ ಚೆಂದವೆಲ್ಲಾ ನಾನು ದುರ್ಬೀನು ಹಾಕಿ ನೋಡಾಯಿತು, ನೋಡಿ, ನಕ್ಕು ಕುಣಿದಾಯಿತು
ಮತ್ತೆ, ಮತ್ತೆ, ನಾನು ಇಣುಕಿ ನೋಡಿದಾಗ, ಕತ್ತಲೆಯಲ್ಲೂ ನೀವು ಬೆತ್ತಲೆಯಲ್ಲೂ ಬೆಳಗುತ್ತಿದ್ದರೆ ಆಯಿತು!

ಶುಕ್ರವಾರ, ಆಗಸ್ಟ್ 20, 2010

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?
ಕೆ. ಆರ್. ಎಸ್. ಮೂರ್ತಿ

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ? ಇದರ ಬಗ್ಗೆ ಬರೆಯುವಂತಹ ಉಧ್ಧಟತನ ನನ್ನಲ್ಲಿ ಏಕೆ ಈಗ ಬಂದಿದೆ? ಬಹಳ ದಶಕಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿರುವ ದೊಡ್ಡ ಹುಳು ನನ್ನ ತಲೆಗೆ ದಿನ ರಾತ್ರಿ ಕಿರುಕುಳ ಕೊಡುತ್ತಿದೆ. ಈಗ ಧೈರ್ಯ ಮಾಡಿ ಬರೆದು ನನ್ನ ಹೃದಯದ ಆತಂಕವನ್ನು ನಿಮ್ಮೆಲ್ಲರ ಎದುರು ತೋಡಿಕೊಳ್ಳದಿದ್ದರೆ ನನ್ನ ಕನ್ನಡ ಆತ್ಮಕ್ಕೆ ಪಾಪದ ಹೊರೆ ಹೊರಲಾರದಷ್ಟು ಆಗಿಬಿಟ್ಟೀತು!

ನಾವೆಲ್ಲಾ ಕನ್ನಡ ಅಕ್ಷರ ಮಾಲೆಯನ್ನು ಬಾಲ್ಯದಿಂದಲೇ ಕಲಿತವರಲ್ಲವೇ? ಆದರೆ, ಯಾರು, ಯಾರು, ಯಾವ, ಯಾವ ಕಾಲದಲ್ಲಿ ಕನ್ನಡ ಅಕ್ಷರಗಳ ರೂಪ, ಅಕ್ಷರಗಳನ್ನು ಬರೆಯುವ ವಿಧಾನವನ್ನು ರೂಪಿಸಿ, ಈಗ ಸರಿಯಾಗಿದೆ ಎಂದು ನಿರ್ಧರಿಸಿದರೋ ನನಗೆ ಗೊತ್ತಿಲ್ಲ. ಅದೆಲ್ಲ ತಿಳಿದರೂ ಸುಮ್ಮನೆ ಚಾರಿತ್ರಿಕ ಸಂಶೋಧನೆ ಅಷ್ಟೇ ಅಲ್ಲವೇ? ಆದ್ದರಿಂದ, ನನ್ನ ಈ ಲೇಖನದಲ್ಲಿ ಈಗಿರುವ ಕನ್ನಡ ಅಕ್ಷರಗಳ ಬರಹ ರೂಪದ ಕೊರತೆಗಳನ್ನು ಗುರುತಿಸುತ್ತೇನೆ. ಇನ್ನೊಂದು ಬರಹದಲ್ಲಿ ಹಸ್ತ ಪ್ರತಿಯನ್ನು ತಯಾರಿಸಿ ನನ್ನ ಸಲಹೆಗಳನ್ನು ಬರೆಯುತ್ತೇನೆ.


ಕನ್ನಡದ ಅಕ್ಷರ ಮಾಲೆಯ ಕೊರತೆಗಳು:
ಸ್ವರ ವಿಭಾಗ

೧ ಸ್ವರ ವಿಭಾಗದಲ್ಲಿ ಹ್ರಸ್ವಾಕ್ಷರ ಮತ್ತು ದೀರ್ಘಾಕ್ಷರಗಳು ಕೆಲವು ಮಾತ್ರ ಬರಹ ರೂಪದಲ್ಲಿ ಒಂದನ್ನೊಂದು ಅನುಸರಿಸುತ್ತವೆ.
ಅನುಸರಣಿಕೆಯ ಉದಾಹರಣೆಗಳು: ಅ ಮತ್ತು ಆ; ಉ ಮತ್ತು ಊ; ಋ ಮತ್ತು ಇದರ ದೀರ್ಘ ರೂಪ (ಬಳಕೆಯಲ್ಲಿ ಇಲ್ಲವೇ ಇಲ್ಲ!), ಎ ಮತ್ತು ಎ; ಒ ಮತ್ತು ಓ

೨. ಅನುಸರಣಿಕೆ ಇಲ್ಲದ ಉದಾಹರಣೆ: ಇ ಮತ್ತು ಈ
ಮೂರ್ತಿಯ ಸಲಹೆ: ದೀರ್ಘವಾದ ಈ ಹ್ರಸ್ವವಾದ ಇ ಅನ್ನು ಅನುಸರಿಸುವ ಹಾಗೆ ರೂಪಿಸ ಬೇಕು. ಇ ರೂಪಕ್ಕೆ ದೀರ್ಘವನ್ನು ಸೊನ್ನೆಯ ರೂಪಕ್ಕೆ ಅದರ ಹೊಟ್ಟೆಯಲ್ಲಿ ಅಡ್ಡ ಗೆರೆ ಹಾಕುವುದರ ಬದಲು ಇ ಬರಹ ರೂಪಕ್ಕೇ, ಅದರ ಹೊಟ್ಟೆಯನ್ನು ಸೀಳೋ, ತಲೆಯ ಮೇಲೋ ದೀರ್ಘ ರೂಪವನ್ನು ರೂಪಿಸಬಹುದು. ಹೊಟ್ಟೆಯಲ್ಲಿ ಅಡ್ಡ ಗೆರೆ ಬರೆದಾಗ ಆ ರೂಪಕ್ಕೆ ಜಠರ ಗೆರೆ ಅನ್ನೋಣ

ಅನುಸ್ವರ ಮತ್ತು ವಿಸರ್ಗಗಳು ಅ ಕಾರದ ರೂಪವನ್ನು ಅನುಸರಿಸಿವೆ. ಇದಕ್ಕೆ ನನ್ನ ಸಲಹೆಯೇನೂ ಇಲ್ಲ.

ವ್ಯಂಜನಗಳು

ಡ ಮತ್ತು ಢ; ದ ಮತ್ತು ಧ; ಪ ಮತ್ತು ಫ; ಬ ಮತ್ತು ಭ ವ್ಯಂಜನಾಕ್ಷರಗಳು ಒಂದನ್ನೊಂದನ್ನು ಅನುಸರಿಸುತ್ತವೆ. ಡ ಗೆ ಅದರ ಪೃಷ್ಠದ ಮಧ್ಯೆ ಒಂದು ಗೆರೆಯನ್ನು ಎಳೆದಾಗ ಢ ಆಗುತ್ತದೆ. ಇದನ್ನು ನಾವು ಪೃಷ್ಠ ಗೆರೆ ಅನ್ನೋಣ. ಇದೇ ರೀತಿಯಲ್ಲಿ ಇತರ ವ್ಯಂಜನಾಕ್ಷರಗಳು ಅನುಸರಿಸುವುದಿಲ್ಲ


೧. ಕ ಮತ್ತು ಅದರ ಮಹಾ ಪ್ರಾಣವಾದ ಖ ಒಂದನ್ನೊಂದು ಅನುಸರಿಸುವುದಿಲ್ಲ.
ಮೂರ್ತಿಯ ಸಲಹೆ: ಕ ಅಕ್ಷರ ರೂಪಕ್ಕೆ ಕೆಳಗಿನ ದೊಡ್ಡ ಸೊನ್ನೆಗೆ ಮೇಲಿಂದ ಕೆಳಗೆ ಒಂದು ಪೃಷ್ಠ ಗೆರೆಯನ್ನು ಹಾಕಬಹುದು. ಇನ್ನೊಂದು ಸಲಹೆ: ಖ ವ್ಯಂಜನಾಕ್ಷರವನ್ನೇ ಅಲ್ಪ ಪ್ರಾಣವಾಗಿ ಮಾಡಿ, ಅದ್ಕಕ್ಕೆ ಒಂದು ಪೃಷ್ಠ ಗೆರೆಯನ್ನು ಎಳೆದು ಮಹಾ ಪ್ರಾಣ ರೂಪವನ್ನು ಮಾಡಬಹುದು.

೨. ಗ ಮತ್ತು ಘ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಗ ವ್ಯಂಜನಕ್ಕೆ ಪೃಷ್ಠ ಇಲ್ಲದಿರುವುದರಿಂದ, ಮಧ್ಯೆ ಮೇಲಿಂದ ಕೆಳಗೆ ಗೆರೆಯನ್ನು ಎಳೆದು ಮಹಾ ಪ್ರಾಣವನ್ನು ರೂಪಿಸಬಹುದು.
ಇನ್ನೊಂದು ಸಲಹೆ: ಮಹಾ ಪ್ರಾಣವಾದ ಘ ವ್ಯಂಜನವನ್ನೇ ಅಲ್ಪ ಪ್ರಾಣವಾಗಿ ಉಪಯೋಗಿಸಿ, ಅದಕ್ಕೆ ಪೃಷ್ಠ ಗೆರೆಯನ್ನು ಎಳೆದು ಅದರ ಮಹಾ ಪ್ರಾಣವನ್ನು ರೂಪಿಸಬಹುದು.

೩. ಚ ಮತ್ತು ಛ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಚ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೪. ಜ ಮತ್ತು ಝಾ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಜ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೫. ಟ ಮತ್ತು ಠ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಟ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೬. ತ ಮತ್ತು ಥ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ತ ವ್ಯಂಜನಕ್ಕೆ ಪೃಷ್ಠ ಗೆರೆ (ಅಥವಾ ಹೊಟ್ಟೆಗೆ ಮೇಲಿಂದ ಕೆಳಗೊಂದು ಗೆರೆ) ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೭. ಕ, ಚ, ಟ, ತ, ಪ ಸರಣಿಯಲ್ಲಿನ ಐದನೇ ಅಕ್ಷರಗಳಲ್ಲಿ ಣ, ನ, ಮ ಗಳನ್ನು ಮಾತ್ರ ಈಗ ಕನ್ನಡದಲ್ಲಿ ಬಳಕೆಯಲ್ಲಿದೆ. ಚ ಸರಣಿಯ ಐದನೇ ಅಕ್ಷರವನ್ನು ಜ್ಞ ರೂಪದಲ್ಲಿ ಮಾತ್ರ ಬಳೆಸುತ್ತೇವೆ.
ಆದರೆ, ಕ ಸರಣಿಯ ಐದನೇ ಅಕ್ಷರವನ್ನು ನಾವು ಈಗ ಬಳಸುವುದೇ ಇಲ್ಲ. ಹಿಂದಿನ ಕಾಲದಲ್ಲಿ, ಮಂಗಳ ಎಂದು ಬರೆಯುವಾಗ ಸೊನ್ನೆಯ ಬದಲು ಉಪಯೋಗಿಸುತ್ತಿದ್ದರು.

ಇದಕ್ಕೆ, ನಿಮ್ಮ ಸಲಹೆ ಏನು?

೮. ಈಗ, ಅವರ್ಗೀಯ ವ್ಯಂಜನಗಳಿಗೆ ನನ್ನ ಸಲಹೆಗಳೇನೂ ಇಲ್ಲ. ಆದರೆ, ಹ ಅಕ್ಷರದ ಒಂದು ಕಿರು ರೂಪ ಅಥವಾ ವಿಶೇಷ ರೂಪವನ್ನು ನನ್ನ ಮುಂದಿನ ಲೇಖನದಲ್ಲಿ ಬರೆದು ವಿವರಿಸುತ್ತೇನೆ. ಸಲಹೆಯ ಸೂಕ್ಷ್ಮ ಗುಟ್ಟು ಹೀಗಿದೆ:

ಇಂಗ್ಲೀಷಿನಲ್ಲಿ h ಆಕ್ಷರವನ್ನು k, g, j, t, d, c, p, b ಅಕ್ಷರಗಳನ್ನು h ಬೆರೆಸಿ ಮಹಾಪ್ರಾಣದ ಧ್ವನಿ ಬರುವ ಹಾಗೆ, ಕನ್ನಡದಲ್ಲೂ, ಹ ಅಕ್ಷರದ ಇನ್ನೊಂದು ಕಿರು ರೂಪವನ್ನು ಉಪಯೋಗಿಸಿ, ಅಲ್ಪದಿಂದ ಮಹಾ ಪ್ರಾಣಗಳನ್ನು ಮಾಡಿ ಬಿಡಬಹುದು. ಈ ರೀತಿಯಲ್ಲಿ ಮಾಡಿದಾಗ, ಕನ್ನಡದಲ್ಲಿ ಹತ್ತು ಮಹಾ ಪ್ರಾಣ ವ್ಯಂಜನಗಳನ್ನು ಕಡಿಮೆ ಮಾಡಬಹುದು.


ನನ್ನ ಕೋರಿಕೆ: ನಾವೆಲ್ಲರೂ ನಮ್ಮ ಮಡಿವಂತಿಕೆಯನ್ನು ಸ್ವಲ್ಪ ಹದದಲ್ಲಿ ಇಟ್ಟುಕೊಂಡರೆ, ಕನ್ನಡ ಅಕ್ಷರ ಮಾಲೆಯು ನಮ್ಮ ಮುಂದಿನ ಪೀಳಿಗೆಗಳಿಗೆ ಬಹಳ ಸುಲಭವಾಗುತ್ತದೆ. ಕನ್ನಡ ಅಕ್ಷರ ಮಾಲೆಯು ಹಿಂದೆಯೂ ಬದಲಾವಣೆಯಾಗಿದೆ. ಈಗ ಸ್ವಲ್ಪ ಪರಿವರ್ತನೆ ಮಾಡುವುದರಲ್ಲಿ ತಪ್ಪಿಲ್ಲ.

ಗುರುವಾರ, ಆಗಸ್ಟ್ 19, 2010

ಯಾವುದು ಸರಿ?

ಯಾವುದು ಸರಿ?
ಕೆ. ಆರ್. ಎಸ್. ಮೂರ್ತಿ

ಅದಕ್ಕೆ ಇದರ ಕೀರ್ತಿ; ಇದಕ್ಕೆ ಬರೀ ಮಂಗಳಾರಾತಿ
ಅದಕ್ಕೆ ಅಲಂಕಾರದ ನಾಮ; ಇದಕ್ಕೆ ದೊಡ್ಡ ಪಂಗನಾಮ

ಅದೂ, ಇದೂ ಅದಲು ಬದಲು; ಅದಲ ಲಾಭ ಬದಲಿನ ಪಾಲು
ನಿಮಗ್ಯಾಕರೀ ಇಲ್ಲದ ವ್ಯಥೆ? ಯಾರಿಗೆ ಏನು ಕೊಟ್ಟರೆ ಏನಾತು?

ಕತ್ತೆಗಳು ಕುದುರೆಗಳಾದುವು, ಕುದುರೆಗಳಿಗೆ ಕತ್ತೆಯ ನಾಮಧ್ಯೇಯ ದೊರಕಿತು
ಇರೋದೇ ಹಾಗರೀ ಪ್ರಪಂಚದ ಪರಿ; ಅದಕ್ಕೆ, ನಿಮ್ಮ ತಲೆಯೊಳಗ್ಯಾಕರೀ ಕಿರಿ ಕಿರಿ?

ಇದ್ಯಾವ ನ್ಯಾಯ ನೀವು ಹೇಳೋದು? ಬೀದಿ ನಾಯೀನೂ ಒಂದೆ; ಅಂಬಾರಿ ಆನೆನೂ ಒಂದೆ!
ಬೊಗಳೋರು ಯಾರು? ಗಂಭೀರ ಯಾರದು? ಬೊಗಳೀ, ಬೊಗಳೀ ಸುಸ್ತು ಯಾರಿಗೆ?

ನೋಡೀ, ನೋಡೀ ಸುಮ್ಮನೆ ಕೂತಿರೋಕ್ಕೆ ಸರಿಯಾ? ಇದು ಸರಿಯಲ್ಲ, ಅದೂ ಅಲ್ಲಾಂತ ಹೇಳಲೇ ಬೇಕು
ನೋಡೊದಲ್ಲದೆ ಕೋತೀ ತರಹ ಎಗರೋದೆ! ಅದೂ ಸರಿಯಿಲ್ಲ, ಇದಂತೂ ಇಲ್ಲಾಂತ ನಿಮಗ್ಯಾಕೆ ಬೇಕು?

ಇಂತದೆಲ್ಲ ನೋಡಿ ಕೊಂಡು ಕಣ್ಣು ಬಿಚ್ಚಿ ಸುಮ್ಮನಿರೋದು ಯಾತರ ನಾಯ? ಇದೊಂದೂ ಅರ್ಥ ಆಗ್ತಾ ಇಲ್ಲ
ಇದೆಲ್ಲಾ ಒಂದು ತರಹ ಕಾಡು; ಯಾರನ್ನು ಯಾರು ತಿಂತಾರೆ, ಯಾರಿಗೆ ಯಾರು ಆಗ್ತಾರೆ ಅನ್ನೋದೇ ಇಲ್ಲ.

ಸೋಮವಾರ, ಆಗಸ್ಟ್ 16, 2010

ಇದೆಂತಹ ಆಟ!

ಇದೆಂತಹ ಆಟ!
ಕೆ. ಆರ್. ಎಸ್. ಮೂರ್ತಿ

ಕಣ್ಣು ಮುಚ್ಚಾಲೆಯ ಗುಟ್ಟಿನ ಆಟವಿದ್ಯಾಕೋ
ಬಚ್ಚಿ ಕೊಂಡವನ ಹುಡುಕುವುದಿನ್ನು ಸಾಕೋ

ಆಡುವ ಮಕ್ಕಳು ನಮಗಂತೂ ಗೊತ್ತೇ ಇಲ್ಲ
ಅಜ್ಜಿಗಂತೂ ಕಿಂಚಿತ್ತೂ ಕಣ್ಣು ಕಾಣುವುದಿಲ್ಲ

ಬಚ್ಚಿ ಕಗ್ಗತ್ತಲೆಯಲ್ಲಿ ಎಲ್ಲೆಲ್ಲಿ ಅಡಗುವೆಯೋ
ಹೆಜ್ಜೆ ಗುರುತನ್ನೂ ಅಳಿಸಿ ಹೇಗೆ ಓಡಿದೆಯೋ

ಅತ್ತಿತ್ತ, ಮತ್ತೆ ಮತ್ತೆ ತಡಕಿ ಸಾಕಾಗಿದೆಯೋ
ಅತ್ತು, ಅತ್ತು, ಬಿಕ್ಕರಿಸಿ ಕೂಗಿಯಾಗಿದೆಯೋ

ನಾನೊಬ್ಬನೇನಲ್ಲ, ಎಲ್ಲರೂ ಹುಡುಕಿಯಾಯಿತು
ಕೋಟಿ ಕೋಟಿ ಜನ ಕಾಣದೇ ತೆರಳಿದುದಾಯಿತು

ಎಂತು ಹುಡುಕಿದರೂ ಸಿಗದೇ ಇದ್ದರೆಂತಹ ಆಟ
ನ್ಯಾಯವೆಲ್ಲವೂ ಮರೆತಿರುವ ಅಜ್ಜಿಗೆಂತಹ ಕಾಟ

ಬಾಬೇಗಲೇ! ಕಣ್ಣಲ್ಲಿ ಕಣ್ಣಿಟ್ಟು ಬಿಡುವ ಒಮ್ಮೆಯಾದರೂ
ನೀನು ನಿಜವೋ ನಿನ್ನಾಟ ಸರಿಯೋ ಕಡೆಗೆ ಇಂದಾದರೂ

ನಿನಗೇ ಬೇಕಿದ್ದರೆ ಬಾ; ನೀನೇ ಹುಡುಕಿ ಬಾ ಆತಂಕದಲಿ
ಮರೆಸಿ ಮಾಚಿ ಓಡಿ ಅಡಗುವೆ ಈಗಲೇ ಗುಟ್ಟಿನ ತಾಣದಲಿ

ಶುಕ್ರವಾರ, ಆಗಸ್ಟ್ 13, 2010

ಅದಲು ಬದಲು ಆಗೊಣವೇ?

ಅದಲು ಬದಲು ಆಗೊಣವೇ?
ಕೆ. ಆರ್. ಎಸ್. ಮೂರ್ತಿ

ನಾನು ನೀನಾಗಿ, ನೀನು ನಾನಾಗಿ ಬಾಳಬಹುದೇ?
ನನ್ನ ದೇಹದೊಳು ನೀನು, ನಿನ್ನಲ್ಲಿ ನಾನು ಇರಬಹುದೇ?

ನನ್ನ ಹಣೆಯ ಬರಹವನು ನೀನು ಸಹಿಸಲು ಬಹುದೇ?
ನಿನ್ನ ಪಾಪಕರ್ಮದ ಫಲವಗಳನು ನಾನೀಗ ಬಹುದೇ?

ನಿನ್ನ ಕುಗ್ರಾಮವು ನನಗಿರಲಿ ಸಾಕು, ನಾನಾಳಬಹುದು
ನನ್ನ ರಾಜ್ಯದ ಚಕ್ರವರ್ತಿಯಾಗಿ ನೀನಾಗಿ ಮೆರೆಯಬಹುದು

ನನ್ನ ರಾಣಿಯರೆಲ್ಲ ನಿನ್ನದಾಗುವರು, ಪ್ರೇಮದಿ ನಿನ್ನ ಸೇವಿಪರು
ನನ್ನ ಸಿಂಹಾಸನದಲಿ ನೀನಿರುವಾಗ ರಾಜ ಗಣವೆಲ್ಲ ನಮಿಪರು

ನನಗೆ ಸೈರಂಧ್ರಿಯ ಒಲವು ಒಂದಿದದ್ದರೆ ದಿನ ರಾತ್ರಿ ಮೆರೆವನು
ಅವಳಿಗೆ ನನ್ನ ತೊಡೆಯನೇ ಸಿಂಹಾಸನವಾಗಿ ಮಾಡಿ ಮೆರೆವೆನು

ಜಗದೇಕ ಸುಂದರಿಯು ನನ್ನವಳಾಗಿರುವಾಗ ಇನ್ನೇನು ಬೇಕು?
ನಾವಿಬ್ಬರೂ ಹಗಲಿರುಳು ಒಂದಾಗುತ ಸ್ವರ್ಗದಲೇ ಇರಬೇಕು

ಅತಿಯೂ, ಅತ್ತತ್ತವೂ ನಮದಲ್ಲ

ಅತಿಯೂ, ಅತ್ತತ್ತವೂ ನಮದಲ್ಲ
ಕೆ. ಆರ್. ಎಸ್. ಮೂರ್ತಿ

ಕಲ್ಲಿಲ್ಲ, ಮುಳ್ಳಿಲ್ಲ, ಹೂವಿನಾ ಹಾಸಿಗೆಯು ಹಾಸಿಲ್ಲವೇ ಇಲ್ಲ
ಬರಡಲ್ಲ, ಕೊರಡಲ್ಲ, ಹಾಲಿನಾ ಸಾಗರವಂತೂ ಇಲ್ಲಿ ಹರಿದಿಲ್ಲ

ಗುಡಿಸಲಿದಲ್ಲ, ಕೊಂಪೆಯಿದಲ್ಲ, ಮೆರೆವ ಅರಮನೆಯೂ ಇದಲ್ಲ
ಗಬ್ಬು ಮಲದ ನಾಥವಿಲ್ಲಿಲ್ಲ, ಮರಿಮಳದ ಕಾರಂಜಿಯೂ ಚಿಮ್ಮಿಲ್ಲ

ಖಾಲಿ ಮಡಕೆಯೂ ಇಲ್ಲಿಲ್ಲ, ಭಾರಿ ಭೋಜನವೂ ಇಲ್ಲಿ ಸಿಗುವುದಿಲ್ಲ
ಕುನ್ನಿಗಳ ಕರ್ಕಶವಿಲ್ಲ, ಗಾನ ಗಂಧರ್ವರ ಸಕಲ ವಾದ್ಯಗಳ ಹಾಡಿಲ್ಲ

ಕಡು ಬಡತನದ ಪಾಡಲ್ಲ ನಮ್ಮದು, ಸಿರಿತನದ ಸಂತಸವೂ ಇಲ್ಲ
ಅದಃ ಪಾತಾಳವಿದಲ್ಲ, ಸೂರೆ ಸುರ ಸ್ವರ್ಗವಂತೂ ನಮ್ಮ ಪಾಲಲ್ಲ

ಅತಿ, ಅತಿ, ಯಾವುದೂ ನಮಗೆ ದೊರಕಿಲ್ಲ, ಅದರ ಹಂಬಲ ಬೇಕಿಲ್ಲ
ಸಮತೋಲನ, ಸಮಭಾವನ, ಸಮಜೀವನದ ತಿಳಿಗುಟ್ಟು ನಮದೆಲ್ಲ

ಮೊದಲ ದೇವರು

ಮೊದಲ ದೇವರು
ಕೆ. ಆರ್. ಎಸ್. ಮೂರ್ತಿ

ಎಮ್ಮೆಲ್ಲರ ಕನಸಿನಲಿ ಕಂಡೆ, ಗುಂಡಿಗೆಯಲಿ ಹೊಕ್ಕಿಸಿಕೊಂಡೆ

ಒಂದಲ್ಲ, ಎರಡಲ್ಲ ಒಂಬತ್ತು ತಿಂಗಳು ನಡೆದೆ ಹೊತ್ತುಕೊಂಡೇ


ಹಾಲು, ಪರಮಾನ್ನದ ಅಮೃತದ ಸಮಾರಾಧನೆ ಹೊತ್ತು, ಹೊತ್ತಿಗೆ

ತುಸು ನಿದ್ದೆ ಬಂದೊಡನೆಯೇ ಮಲಗಲು ಸದಾ ಸಿಧ್ಧ ಹಾಯಿ ಹಾಸಿಗೆ


ನಾವು ತುಸು ನಕ್ಕಾಗ ನಿನಗಾದ ಆನಂದಕ್ಕೆ ಕಿಂಚಿತ್ತೂ ಮಿತಿಯಿರಲಿಲ್ಲ

ಕನಿಕರದಿ ಕರಗುತಿತ್ತು ನಿನ್ನ ಗುಂಡಿಗೆ ನಾವು ಸ್ವಲ್ಪವೇ ಅತ್ತಾಗಲೆಲ್ಲ


ದೂರ ದೇಶಕ್ಕೆ ನಾನಂದು ಹೊರಟು ನಿಂತಾಗ ಬಹಳ ಸಂಭ್ರಮದಲ್ಲಿ

ನಿನಗೂ ಆನಂದವಾದರೂ, ಕಂಡೆ ಒಂದೆರಡು ಹನಿ ನಿನ್ನ ಕಣ್ಣಂಚಿನಲ್ಲಿ


ನೀನೀಗ ಹೊರಟು ಬಿಟ್ಟೆ ನಮ್ಮೆಲ್ಲರ ಹಿಂದೆಯೇ ಬಿಟ್ಟು, ಬಹು ದೂರ ದೂರ

ನೀನಿಲ್ಲದೀ ಊರೀಗ ಬಹಳ ಬೇರೆ, ಬೇರೆ; ದುಡುಕು ಮನ ನೊಂದಿದೆ ಅಪಾರ


ಎಮ್ಮ ಹೆತ್ತು, ಹೊತ್ತೆ, ಪೊತ್ತೆ; ನಿನ್ನ ನೆನಪಿನ ಹರಕೆ ಇರಲಿ ನಮಗೆಲ್ಲಾ

ನಿನ್ನ ಬಿಂಬವ ಕಾಣುವೆವು ತಾಯೇ ನಮ್ಮ ಮಕ್ಕಳ, ಮೊಮ್ಮಕ್ಕಳ ಕಣ್ಗಳಲೆಲ್ಲಾ


ನಾವೂ, ನಿನ್ನ ಮೊಮ್ಮಕ್ಕಳೂ ದಿನ ದಿನವೂ ನಡೆದಾ ಹಾದಿಯಲೆಲ್ಲ ಇರಲಿ ಸದಾ

ನಿನ್ನ ನಗೆಯೇ ನಮಗೆ ದಾರಿ ದೀಪ; ಕಾಯುವುದು ಅಭಯ ಹಸ್ತದ ಆಶೀರ್ವಾದ

ಗುರುವಾರ, ಆಗಸ್ಟ್ 12, 2010

ಏನೆಲ್ಲಾ ಬೇಕು?

ಏನೆಲ್ಲಾ ಬೇಕು?
ಕೆ. ಆರ್. ಎಸ್. ಮೂರ್ತಿ

ಪೇಳು ತನುವೇ ನಿನಗೇನೆಲ್ಲ ಬೇಕು,
ನಾಚುವುದೇತಕೆ ಚಾಚು ನಾಲಗೆಯ,
ಅದಗಿಸಿಹ ನಿನ್ನ ಹಂಬಲಗಳನು.
ಹಸಿದ ಹೊಟ್ಟೆಯೋ?
ತುಪ್ಪದಲಿ ಅದ್ದಿದ ರೊಟ್ಟಿಯೋ?
ಹೊಟ್ಟೆಗೆ ಭಾರ ತರಿಸುವ ಭಾರಿ ಔತಣವೋ?

ಕೇಳು ಮನವೇ ಬೇಕಾದುದನೆ, ಸಾಕಷ್ಟು.
ಬಿಚ್ಚಿ ಪೊಗಳು, ಮುಚ್ಚಿಟ್ಟ ಇಷ್ಟಗಳೆಲ್ಲವನು.
ಚಿಂತನೆಯ ಮನೋಭಾವವೋ?
ಕಾಡುವ ಕಾರ್ಪಣ್ಯಗಳ ಹೊಣೆ ಭಾರವೋ?
ಸದಾ ಶಾಂತತೆಯ ವರವನ್ನೋ?
ಇತರರ ಬೈಯುವ ದೆವ್ವವಾಗುವುದೋ?

ಇದ ಕೊಡಿಸಬಲ್ಲೆ ನಿನಗೆ, ಒಮ್ಮೊಮ್ಮೆ ಮಾತ್ರ:
ಗೆಲುವಿನ ಬೆಲ್ಲದುಂಡೆ, ಜಯದ ಕಜ್ಜಾಯ, ಸಾಹಸದ ಪಾಯಸ
ವೀರ್ಯದ ಖೀರು, ಒಗ್ಗಟ್ಟಿನ ಒಬ್ಬಟ್ಟು, ಕಳಕಳಿಯ ಕಡಲೆ ಕಾಯಿ,
ದಾನವನು ಕೊಟ್ಟಾಗ ಹೃದಯಕ್ಕಾಗುವ ಪರಮಾನ್ನ,
ದಯವಿಟ್ಟಾಗ ದೊರೆಯುವ ಧಮ್ರೋಟು, ಚಿರೋಟಿ
ಕೈ ಕೆಸರಾದರೆ ಸಿಗುವ ಗಟ್ಟಿ ಕೆನೆ ಮೊಸರನ್ನ

ಬಲು ಜಾಣ! ಈಗ ನೀನೇ ಹೇಳು:
ಏನು ಮಾಡಿದರೆ, ಯಾವಾಗ ಇವೆಲ್ಲ ದೊರೆಯುತ್ತದೆ?
ಮೈಸೂರು ಪಾಕು, ಬಾದಾಮಿ ಹಲ್ವ, ಸಿಹಿ ಫೇಡ, ಲಾಡು ಉಂಡೆ?
ನಿನಗೆ ಖಾರದ ರುಚಿ ಹೆಚ್ಚಿದ್ದರೆ:
ಬಿಸಿ ಬೇಳೆ ಹುಳಿಯನ್ನ, ಎಳ್ಳು ಪುಡಿ ಚಿತ್ರಾನ್ನ,
ಚಟ್ನಿ ಪುಡಿ, ಉಪ್ಪಿನ ಕಾಯಿ, ಬಾಳಕದ ಮೆಣಸಿನ ಕಾಯಿ,
ವಡೆ, ಅಂಬೋಡೆ, ಬೋಂಡ, ಜೊತೆಗೆ ಬಹು ವಿಧದ ಚಟ್ನಿ
ಇದನರಿತವ ನಿನಗೆ ತನು ಕೇಳಿದ್ದು, ಮನ ಬೇಡಿದ್ದು ಖಂಡಿತ

ಬುಧವಾರ, ಆಗಸ್ಟ್ 11, 2010

ಡಾಕ್ಟರ್ ಮೂರ್ತಿ ನುಡಿದಂತೆ:

ಡಾಕ್ಟರ್ ಮೂರ್ತಿ ನುಡಿದಂತೆ:

ಕನ್ನಡ ನುಡಿಯಾಡಿದೊಡನೆ ಹಾಡಿದಂತೆಯಲ್ಲವೇ

ಕನ್ನಡಿಯಲ್ಲಿ ಕಾಣುವವರು ಬೇರೆ ಬೇರೆ: ಗಾಜಿನ ಹಿಂದೆ ಇರುವ ಬಿಂಬ ಅತಿ ಸುಂದರ ಬೊಂಬೆ; ಮನದೊಳಗಿನ ಬೊಂಬೆಗೆ ಹತ್ತಾರು ಅವತಾರ; ಇತರರಿಗೆ ಇರಬಹುದೇನೋ ಅತ್ತತ್ತ!

ಎದೆಯೊಳಗಿನ ಕೋಗಿಲೆ ಒಡನೆ ಹಾಡಿತು ಗುಪ್ತ ಗಾನ: ನೀನು ನೀನಲ್ಲ; ಆನೇ ಎಲ್ಲ.

ಅವರ ಕಂಡು ಉರಿದು, ಇವರ ಕಂಡು ತುರಿಸಿ, ಅವರಿವರ ಕಂಡು ನಕ್ಕುತ ಇರುವುದ ಬಿಡು; ಸರಿ ಇರುವ ಪರಿ ಕಂಡುಕೊ.

ಅಸಮಾನ ಮಾನಸಿ

ಅಸಮಾನ ಮಾನಸಿ
ಕೆ. ಆರ್. ಎಸ್. ಮೂರ್ತಿ

ನೀನಡೆವಾ ಅಡಿಯಲೆಲ್ಲ ರಂಗೋಲೆ ಪುಡಿ ಹಾಸುವುದು
ನಿನ್ನ ತುಟಿ ಬಿರಿದಾಗ ಕೋಗಿಲೆ ಕುಲವೆಲ್ಲ ಅನಿಕರಿಸಿತು

ನಿನ್ನ ಕೆನ್ನೆ ಕೆಂಪಾದಾಗ ತಾವರೆಯು ಅಂತೆಯೇ ಅರಳಲು
ನಿನ್ನ ಕಣ್ಣು ಹಾಯಿಸಿದೆಡೆಯಲೆಲ್ಲಾ ಕೆಂಗುಲಾಬಿ ಚಿಗುರಲು

ನಿನ್ನ ರೂಪವ ನೋಡಿದೊಡನೆಯೇ ಊರ್ವಶಿಯೂ ದಂಗಾಗಿ
ಮೇನಕೆ, ರಂಭೆಯರು ಮರುಗಿದರು ಬ್ರಹ್ಮನನು ಮೊರೆಹೋಗಿ

ನಿನ್ನ ಹೆಸರೇನು? ನಿನ್ನ ಮೇಲೆನ್ನ ಮನಸಾಗಿದೆ ಸರಸಾಂಗಿ
ಮನಸಿಜಳೆನ್ನಲೇ? ಕನಸಿನಲಿ ಬಂದವಳು ಇರು ನನಸಾಗಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ
ಕೆ. ಆರ್. ಎಸ್. ಮೂರ್ತಿ

ಟಿಪ್ಪಿಲ್ಲಿ, ಟಿಪ್ಪಲ್ಲಿ, ಟಿಪ್ಪು, ಟಿಪ್ಪು, ಟಿಪ್ಪು
ಅಲ್ಪ ಸ್ವಲ್ಪ ನಕ್ಕರೆ, ಸ್ವಲ್ಪ ಹೆಚ್ಚು ಟಿಪ್ಪು

ನಕ್ಕವಳು ಸಕ್ಕರೆಯ ನಗೆ ಬೆರೆಸಿ ಉಪ್ಪು
ತಂದು ಕೊಟ್ಟರೆ ಸಕ್ಕರೆಗಿಂತ ಇನ್ನೂ ಟಿಪ್ಪು

ನಿಮ್ಮ ಕಡೆ ಬಗ್ಗಿ, ಸ್ವರ್ಗ ತೋರಿಸಿದರೆ ಸಾಕು
ಕಣ್ಣಿಗಾನಂದ; ಕನ್ಯೆಗೆ ಇನ್ನಷ್ಟು ಟಿಪ್ಪು ಹಾಕು

ಅತ್ತ ಕಡೆ ಬಗ್ಗಿದರೂ ಅದೇ ಬೇರೆಯ ಆನಂದ
ಸುಂದರ ಕನ್ಯೆಯು ಏನು ಮಾಡಿದರೂ ಅಂದ

ನೋಡಿ, ನೋಡಿ ಬಾಯಾರಿದರೆ ಕೇಳಿ ವೈನು
ವೈಟೋ, ಪಿಂಕೋ, ಅವಳಿಗೆ ಹೊಡೆಯಿರಿ ಲೈನು

ಅವಳ ಉತ್ತರ ಏನೇ ಇರಲಿ ನಿಮ್ಮ ಕೆನ್ನೆ ಕೆಂಪು
ಗೊತ್ತವಳಿಗೆ ನೀವೆಲ್ಲದಿಕ್ಕೂ ಒಡನೆ ಆಗುವಿರಿ ಬೆಪ್ಪು

ಮೈಕಾವೂ, ಟಿಪ್ಪೂ ಏರಿ, ಏರಿ ನಿಮ್ಮ ಜೇಬು ಖಾಲಿ
ಮನೆಗೆ ಕಾಲಿಟ್ಟರೆ ಹೆಂಡತಿ ಕಿವಿ ಹಿಂಡುವಳು ವಾಚಾಳಿ

ಶನಿವಾರ, ಆಗಸ್ಟ್ 7, 2010

ಕಲ್ಪನೆಯೇ ಕಲ್ಪತರು, ಕಾಮಧೇನು

ಕಲ್ಪನೆಯೇ ಕಲ್ಪತರು, ಕಾಮಧೇನು
ಕೆ. ಆರ್. ಎಸ್. ಮೂರ್ತಿ

ಮೇಲಿಂದ ಮೇಲೆ, ಅಲೆಯ ಹಿಂದೊಂದು ಅಲೆ, ಉಬ್ಬಿ, ಹಿಗ್ಗಿ, ಬರುತಲಿದೆ ಸಲಿಲ
ಕಲ್ಪನೆಯ ಮೇಲೆ ಮತ್ತೊಂದು ಮರುಕಲ್ಪನೆ; ಒಂದಕ್ಕಿಂತ ಹಿರಿದು ಲೀಲಾಜಾಲ

ಬಲೆಯಲಿ ಹಿಡಿವುದುಂಟೇ? ಇರುವ ಐವತ್ತೆರಡು ಅಕ್ಷರದ ಬಲೆಯಲ್ಲಿ ಬರೀ ತೂತು
ಕವಿಯ ಕಲೆಯು ಸಾಲದು, ಭುವಿಯ ಕವಿ ಕುಲವೇ ಸಾಲು, ಸಾಲು ಬಂದು ನಿಂತು

ಕುಂಚದ ಕಲೆಗೂ ಕಿಂಚಿತ್ತೂ ಎಟುಕದು; ಕಲ್ಲಿನಲ್ಲಿ ಅಲೆಯಲೆಯ ಸಾಲುಗಳ ಕೆತ್ತಲಾಗದು
ನಾರದ, ಕಿನ್ನರ, ತುಂಬುರ, ಗಾನ ಗಂಧರ್ವರ ಕೊರಳು ಭೋರ್ಗರೆಯ ಪಾಡಲಾಗದು

ಕಲ್ಪನಾ ವಿಲಾಸವು ಒಲಿದು ಇತ್ತ ಹಾಯಿ, ದೇವ ಲೋಕದ ಅನುಭವವನೇ ನಾಚಿಸಿದೆ
ಅಲ್ಪವಾದರೂ ಸಾಕಿದೇ ವರ, ಕಲ್ಪತರು, ಕಾಮಧೇನುಗಳು ಇನ್ನೇಕೆ ಬೇಕು ಎನ್ನಿಸುತಿದೆ

ನಿನ್ನೆಯ ಸೆರೆಮನೆ

ನಿನ್ನೆಯ ಸೆರೆಮನೆ
ಕೆ. ಆರ್. ಎಸ್. ಮೂರ್ತಿ

ನಿನ್ನೆಗೆ ಹೊಗಾಯಿತು; ಮೊನ್ನೆಯ ಹಂಬಲು ಹಂಪಲು ಹಣ್ಣೆಲ್ಲ ತಿಂದಾಯಿತು.
ಹಿಂದಿನ ಹಳಸಿದ ಹುಳಿಯನ್ನವನ್ನು ಕಬಳಿಸುತಲಿ ತಿಂದು ವಾಕರಿಸಿಯಾಯಿತು.

ಭೂತದ ಕನ್ನಡಿಯಲ್ಲಿ ಹುದುಗಿ ಹೋದ ಕಾಂಚನಕ್ಕೆಲ್ಲ ತೀರದಷ್ಟು ಆಶಿಸಿ
ಮೊನ್ನೆಯ ಸೊನ್ನೆಗೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು, ಕೈಗೆಟುಕದ ಕನ್ನೆಯನ್ನು ಮುದ್ದಿಸಿ

ಕನಸಿನಲಿ ಕಲ್ಪನೆಯ ಅರಮನೆ ಕಟ್ಟಿ, ದಟ್ಟ ಮೀಸೆಯನೇ ಹೊಸೆದು ಜರೆದಾಯ್ತು
ಮೈಮೇಲೆ ನೂರಾರು ನೀರೆಯರ ಕೂರಿಸಿ, ಸಾವಿರ ವೀರ್ಯ ಪಾತದಲಿ ಮೆರೆದಾಯ್ತು

ರಾವಣನ ಸಿಂಹಾಸನದಲಿ ಕೆಲ ವರುಷ, ದುಶ್ಯಾಸನನ ಆಸೆಯಲಿ ಮೆರೆಯುತ ಮಿಕ್ಕೆಲ್ಲ
ನಿಯೋಗಿ ಭೋಗದಲಿ ಭೂಮಿಯನು ಸುತ್ತಲೆದು, ಅಂದಾಯ್ತು "ಆ ಕಂದನು ನನ್ನದಲ್ಲ"

ಕಾವಿಯೊಳಗೆ ಕಳ್ಳ ಸ್ವಾಮಿಯಾಗಿ ನೀನ್ನೆಲ್ಲರ ಹೊನ್ನನು ಹೊತ್ತು, ಹಳ್ಳದಲಿ ಹೂತು
ದೂರಿನ ಬಿರುಗಾಳಿಗೆ ಸಿಕ್ಕಿ, ಕಾವಿಯ ಗುಟ್ಟೆಲ್ಲವೂ ತೂರಿ ಆಗಸಕೆ ಹಾರಿಹೋಗಾಯ್ತು

ಕತ್ತಲೆಯಲಿ ಅತ್ತಾಯ್ತು, ಮತ್ತದಕೆ ಮೊಸಳೆಯ ಕಣ್ಣೀರನು ಧರಧರನೆ ಸುರಿಸಾಯ್ತು
ಜಗವೆಲ್ಲ ನಗುತಿರಲು, ಬೆತ್ತಲೆಯ ವ್ರತವನ್ನೇ ತೊಟ್ಟಿಹೆನೆನ್ನುತ್ತ ಎಲ್ಲೆಲ್ಲೂ ಅಲೆದಾಯ್ತು

ಸಾಲದೇ ಇನ್ನೂ ಕಳೆದ ದಿನಗಳ ಸೆರೆಮನೆಯ ವಾಸ? ಬಾರೆಲೇ ಮನವೆ ಇಂದಿಗೆ ಇದೀಗಲೇ
ಅತ್ತಿತ್ತ ನೋಡದಿರು, ಮತ್ತೆ ಹೊರಳಾಡದಿರು, ಹೊಸ ಉಸಿರಿನಲಿ ಸೊಗಸು ಕಾಣುವುದು ಭಲೆ!

ಶುಕ್ರವಾರ, ಆಗಸ್ಟ್ 6, 2010

ಹೇಡಿಗಳಿಗೊಂದು ಚಾಟಿ

ಹೇಡಿಗಳಿಗೊಂದು ಚಾಟಿ
ಕೆ. ಆರ್. ಎಸ್. ಮೂರ್ತಿ

ಕಣ್ಣು ಬಂದಾಯ್ತೋ ಕುರುಡರಿಗೆಲ್ಲ; ಕಿವುಡರು ಕಿಂಜರಿಯ ಕೇಳುವಂತಾಯ್ತು
ಮೂಕರೆಲ್ಲ ವಾಚಾಳಿಗಳಾದರೋ; ಕುಂಟರೆಲ್ಲಾ ವಾಯುವೇಗದಿ ಓಡಿಯಾಯ್ತು

ನಿಮ್ಮ ಮನಕ್ಕೆ ಮಡಿ ಪೇಟವು ಬಲು ಬಿಗಿಯಾಯ್ತು; ಕಿವಿಗೆ ಹತ್ತಿ ತುಂಬಾಯ್ತು
ಪಿಳಿಪಿಳಿ ಕಣ್ಣಿಗೆ ಕಪ್ಪು ಕನ್ನಡಕದ ಆಭರಣ ನಿಮ್ಮನು ಕುರುಡ ಮಾಡಿಸಿಯಾಯ್ತು

ಎರಡೂ ಕಾಲಿಗೆ ಕಟ್ಟಿದ ದೆಬ್ಬೆ, ಕೈಹಿಂದೆಯಾಗಿ ಕಬ್ಬಿಣದ ಬೇಡಿಯ ಬಳೆ ತೊಟ್ತಾಯ್ತು
ಬಾಯಿಗೆ ಬೀಗವನು ಚಿನ್ನದಲೇ ಮಾಡಿಸಿಕೊಂಡು, ಬೀಗದ ಕೈಯನು ಒಗೆದಾಯ್ತು

ಯಾವ ಜನ್ಮದ ಪಾಪ ಕರ್ಮವೋ! ಈ ಜನ್ಮದ ಸ್ವಕೃತ ಕರ್ಮದ ಫಲವೋ ಗೊತ್ತಿಲ್ಲ
ಅದು ಆಗದು, ಇದಂತೂ ಸಾಗದು, ಆಗದು, ಆಗದು ಎಂದು ಜಪವದೆಕೋ ದಿನವೆಲ್ಲ!

ಇದ್ದಲ್ಲೇ ನರಕವನ್ನು ಭವ್ಯವಾಗಿಯೇ ಕಟ್ಟಿ, ಹೊರಗೆ ಎತ್ತರದ ಕೊಟೆಯೊಂದನು ಕಟ್ಟಿ,
ಆಶೆ, ಆಕಾಂಕ್ಷೆಗಳಿಗೆ ತರ್ಪಣವ ಕೊಟ್ಟು, ಗುರಿ, ಧ್ಯೇಯಗಳನು ಬಲು ದೂರ ಹೊಡೆದಟ್ಟಿ

ನಿಮ್ಮ ಜೈಲಿನಲ್ಲಿ ನೀವೇ ಬಂಧಿಗಳಾಗಿ, ಕಣ್ಣೀರ ಕಾಲುವೆ ಹರಿಸಿ, ಅದರಲ್ಲೇ ಮುಳುಗಿ
ನಿಮ್ಮ ಹಣೆಯ ಬರಹದ ಶಾಸನವ ನೀವೇ ಕಲ್ಲಿನಲ್ಲಿ ಕೆತ್ತಿಸಿ, ದಿನ, ರಾತ್ರಿಎಲ್ಲ ಕೊರಗಿ

ಪರರ ನೋಡಿ, ಹೊಟ್ಟೆಯಲ್ಲಿ ಕಿಚ್ಚನು ಹತ್ತಿಸಿಕೊಂಡು ಸಜೀವ ಚಿತೆಯಲಿ ಬೇಯುವಿರೋ?
ನಿಮ್ಮನ್ನು ನೋಡಿ ಅಳುವವರಾರೂ ಇಲ್ಲವೆಂದು ಅರಿತು ಕೆಟ್ಟ ಕನಸಿನಿಂದ ಏಳುವಿರೋ?

ಅದು ಬೇಕೇ? ಇದು ಬೇಕೇ?

ಅದು ಬೇಕೇ? ಇದು ಬೇಕೇ?
ಕೆ. ಆರ್. ಎಸ್. ಮೂರ್ತಿ

ಮೇಲಿಲ್ಲ, ಕೆಳಗಿಲ್ಲ, ಇತ್ತಕಡೆ, ಅತ್ತಕಡೆಯೂ ಇಲ್ಲವಲ್ಲ
ಒಳಗಿಲ್ಲ , ಹೊರಗಿಲ್ಲ, ಎಲ್ಲೂ ಅಡಗಿ ಕೂಡಂತೂ ಇಲ್ಲ

ಎಲ್ಲಿಯೂ ಇಲ್ಲದನು ಅದು ಹೇಗೆ, ಓರ್ವ ಅದೇನು ಕಂಡೆ
ಬಾಲಕನೇ! ವ್ಯರ್ಥದಲಿ, ನಿನ್ನ ಅಪ್ಪನನು ಕೈಯಾರ ಕೊಂದೆ

ನಿನ್ನ ಹೆತ್ತವರೂ ರಕ್ಕಸರು ಎಂದೆಲ್ಲ ಕಿರಿಚಿ ಕೂಗಿ ನೀನಂದೆ
ನೀ ಹೆತ್ತವರೂ ರಕ್ಕಸರಾದರೇಕೆ? ಅದಕೆ ಕಾರಣ ಏನೆಂಬೆ?

ಅಸುರನ ಗರ್ಭದಲಿ ಸುರ, ಸುರನೊಳಗೆ ಅಸುರ ಅಡಗಿ
ಕಹಿಯೊಳಗೆ ಸಿಹಿ, ಸವಿಯೊಳಗೆ ಬೇವು ಅಡಗಿದಂತಾಗಿ

ಒಂದುಕಡೆ ನೋಡಿದರೆ ಆಹ್ಲಾದ, ಇನ್ನೊಂದು ಕಡೆಯಲ್ಲಿ ವಿಶ್ಲಾದ
ಗಮನವಿರಲಿ ಸಮ ಇದಕ್ಕೂ, ಅದಕ್ಕೂ; ಕ್ಲೇದ ಹಾಗೂ ಆನಂದ

ಕಂಡದ್ದು ಬೇಡವೇ? ಕಣ್ಣು ಮಿಟುಕಿಸಿ ಮತ್ತೆ ಕಾಣು ಬೇಕಾದ್ದು
ಎರಡೂ ಬೇಕೋ? ಒಂದೇ ಸಾಕೋ? ತೆಗೆದುಕೋ ಇಷ್ಟವಾದ್ದು

ಬರೀ ಒರಟು ಹರಟೆಯ ಗುಟ್ಟು

ಬರೀ ಒರಟು ಹರಟೆಯ ಗುಟ್ಟು
ಕೆ. ಆರ್. ಎಸ್. ಮೂರ್ತಿ

ತಲೆ ಹರಟೆ ಕವಿ, ತರಹ, ತರಹ ವಿಕಟ ಹರಟೆ, ಒಗಟು ನನ್ನ ಭಾಷೆ
ತರಾಟೆಯೇ ನನ್ನ ಹಠ; ಕೆಲವು ಮುಖಗಳು, ಹಲವು ಭಂಗಿಯ ಆಶೆ

ಕೇಳಿದರೆ ಅತೀ ಅಸಂಭದ್ದ, ಮತ್ತೆ ಮತ್ತೆ ಕೇಳಿದರೆ ಕುತೂಹಲದ ಬೀಜ
"ಏನೋ ಇರಬೇಕು ಇದರಲ್ಲಿ", ಎಂದವರಿಗೆ ಹೊಳೆದೀತು ಮಿಂಚು ನಿಜ

ಮೊಳಕೆ ಚಿಮ್ಮಿ, ಬೇರು ಬಿಟ್ಟೀತು ಕಲ್ಪನೆಯ ತುಂತುರು ಹನಿ ಅಲ್ಪವಾದರೂ
ಮಿದುಳಿನಾಳದಲಿ ಪಾತಾಳ ಗರಡಿಯಾಟ; ಸುಪ್ತ ಅನುಭಾವ ಎಂದಾದರೂ

ಹರಟೆ ಮಾತು ಒರಟಲ್ಲ ಮಾತ್ರ, ಗಟ್ಟಿಯಾಗಿ ನೆತ್ತಿಯಲಿ ನೆಟ್ಟು ಬಿಟ್ಟೀತು
ದಿಟದ ಪ್ರಕಟಣೆ ಆದಾಗ ಒಂದು ದಿನ ನೀವೂ ಅವಧೂತರೆಂದು ತಿಳಿದೀತು

ಗುರುವಾರ, ಆಗಸ್ಟ್ 5, 2010

ಯಾರು ಸರಿ?

ಯಾರು ಸರಿ?
ಕೆ. ಆರ್. ಎಸ್. ಮೂರ್ತಿ

ಅದು ಸರಿ, ಇದೂ ಸರಿ, ಸಾಗದ ಅಸಾಧ್ಯವನ್ನು ಕೇಳಿದರೂ ಉತ್ತರ ಸರಿಯೇ?
ಸರಿ ಸಾರ್, ಸರಿ ಸಾರ್; ಎಲ್ಲರನ್ನೂ ಸರಿಯೇ ಅಂದು ಬಿಡುವವರು ಸರಿಯೇ?

ಇವರೊಂದು ತರಹ "ವಿಶ್ವಾಮಿತ್ರರು" ಎನ್ನಿ; ಚಂಡಾಳನನ್ನೂ ಮೆಚ್ಚಿಸುವಂಥವರು
ಕೇಳಿದವರಿಗೆಲ್ಲ ಸ್ವರ್ಗದ ಕಡೆಗೆ ದಾರಿಯನ್ನು ತೋರಿಸುವವರು, ತಯಾರಿಸುವವರು

ಕಡ್ಡಿಯನ್ನು ತುಂಡು ಮಾಡಿದ ಹಾಗೆ ಮಾತಾಡಲು ತಾಕತ್ತೇ ಇಲ್ಲದಂತಹ ಶಂಡರು
ಹೆಂಡತಿಯು ರಂಗದ ಮೇಲೆ ಸೀರೆ ಬಿಚ್ಚಿ ಕುಣಿಯುತ್ತಿದ್ದರೂ ಸುಮ್ಮನಿರುವ ಪಾಂಡವರು

ಹೆಂಡತಿಯನ್ನೂ, ತಮ್ಮನನ್ನೂ ಕಾಡಿಗೆ ಕರೆದುಕೊಂಡು ಹೋಗಿ ಅಲೆಸಿದವರು
ಕೇಡಿ ಚಿಕ್ಕಮ್ಮನ ಮಾತು ಕೇಳಿ, ಹೇಡಿತನದಿಂದ ಓಡಿ, ಅಪ್ಪನನು ಕೊಂದವರು

ರಥವನ್ನು ನಡೆಸುವ ಆಳು ಹೇಳಿದ ಹಾಗೆ ಅಣ್ಣ ಕರ್ಣನ ಮೇಲೆ ಬಾಣ ಬಿಟ್ಟವರು
ನ್ಯಾಯವನ್ನೇ ಮರೆತು ವೀರನ ಸೊಂಟದ ಕೆಳಗೆ ಗಧೆಯನ್ನು ಹೊಡೆದು ಮೆರೆದವರು

ಯಾರನ್ನು ನಂಬುವುದೋ, ಮತ್ಯಾರನ್ನು ಮೆಚ್ಚುವುದೋ, ಯಾರು ಸರಿಯೋ ನೋಡಿ
ತೆಗೆದುಕೊಳ್ಳಿ ಈಗ ಈ ಕಡ್ಡಿಯನ್ನು; ಒಂದೇ ಮನಸ್ಸಿನಿಂದ ಎರಡು ತುಂಡು ಮಾಡಿ

ಮಂಗಳವಾರ, ಆಗಸ್ಟ್ 3, 2010

ಕರಿಯೋ, ಬಿಳಿಯೋ?

ಕರಿಯೋ, ಬಿಳಿಯೋ?
ಕೆ. ಆರ್. ಎಸ್. ಮೂರ್ತಿ

ನರೆತ ಕೂದಲು ಒಂದು ಕರಿಯ ಕೂದಲುಗಳ ನಡುವೆ ಎದ್ದು ಕಾಣುತ್ತಿತ್ತು
ಕೀಟಲೆಯ ಕೇಕೆ, ಅಣಗಿಸುವ ಕೊಂಕು ನುಡಿ, ಕೆಣಕಿಸುವ ಖಾರ ಏರುತ್ತಿತ್ತು

ಒಬ್ಬ ಕರಿಯ ಕೂಗಿದ: "ಯಾರೋ ಇದು ಹೊಸಬ; ಇಲ್ಲಿಗೆ ಬಂದನಿವ ಹೇಗೆ?"
"ಬುಡದಿಂದ ಅಗೆದು, ಕಿತ್ತು ಒಗೆಯಿರೋ ಇವನ ಮತ್ತೆ ಬಾರದಂತೆ ಹೊರಗೆ"

ವಾರಗಳೇ ಕಳೆದು, ಕರಿಯರೆಲ್ಲ ಮರೆತು ಬಿಟ್ಟರು, ಇದ್ದರು ತಮ್ಮ, ತಮ್ಮ ಪಾಡಿಗೆ
ಮತ್ತೆ ಕೂಗಿದ ಇನ್ನೊಬ್ಬ ಕರಿಯ: "ಇದೇನಿದು! ಮತ್ತೆ ಬಂದನಲ್ಲ ಬಿಳಿಯ ಹೇಗೆ?"

ಇನ್ನೊಬ್ಬ ಕರಿಯ ಮತ್ತೆತ್ತಲೋ ಎಂಬಂತೆ, "ಇನ್ನೊಬ್ಬ ಬಿಳಿಯ ಇಲ್ಲಿ ನೋಡಿರೋ!"
ಒಬ್ಬನನು ಹೊಡೆದೋಡಿಸಿಯಾಯ್ತು, ಮತ್ತೊಬ್ಬ ಕೂಡ ಬಂದು ಸೇರಿದ ನೋಡಿರೋ"

ತಿಂಗಳು ಉರುಳಿತು, ಒಬ್ಬನಲ್ಲ, ಇಬ್ಬರಲ್ಲ ಎಲ್ಲೆಲ್ಲಿ ನೋಡಿದರೂ ಕಾಣುವರು ಬಿಳಿಯರೇ
ಕರಿಯರನ್ನು ಒಂದೋ, ಎರಡೋ ಕೈ ಬೆರೆಳಲ್ಲಿ ಎಣಿಸಿಬಿಡಬಹುದು, ಗೆದ್ದವರು ಬಿಳಿಯರೇ!

ವರುಷಗಳು ಸವೆದವು, ಅಲ್ಲೊಬ್ಬ, ಇಲ್ಲೊಬ್ಬ ಕಂಡರೆ ಹೆಚ್ಚು, ಕರಿ ಬಿಳಿಯೆಲ್ಲ ಖಾಲಿ, ಖಾಲಿ
ತಲೆಯ ಮೇಲೆ ಎಂದೂ ಬಣ್ಣ ಬದಲಾಗದ ಕರೀ ಕಾರ್ಪೆಟ್ಟು, ಹಜಾಮನ ಜೇಬು ಮಾತ್ರ ಖಾಲಿ

ಸೋಮವಾರ, ಆಗಸ್ಟ್ 2, 2010

ಕಲ್ಲೊಂದು ಕಲ್ಲಿಗೆ ಕೇಳಿತು:

ಕಲ್ಲೊಂದು ಕಲ್ಲಿಗೆ ಕೇಳಿತು:
ಕೆ. ಆರ್. ಎಸ್. ಮೂರ್ತಿ

ಇದೇಕೆ ಮಾನವರು ನಮಗೆಲ್ಲ ಮುಗಿಯುವುದು ಕೈ ಜೋಡಿ?
ತಾಳವನು ತಟ್ಟುವುದು, ಎಲ್ಲರೂ ಜೊತೆಗೆ ಧ್ವನಿಗಳನು ಕೂಡಿ

ಹೋಗಲಿ ಎಂದರೆ, ದಿನವೂ ಹೊಗಳುವುದೇತಕೆ ಹಾಡಿ, ಹಾಡಿ?
ಬಾಗಿದ ತಲೆ, ದೈನ್ಯತೆಯಲಿ ಒಟ್ಟಿಗೆ ಕೈ ಚಾಚುವುದು ಬೇಡಿ

ನೆಲದ ಮೇಲೆ ಮಲಗಿ, ಎದ್ದು ಮತ್ತೆ ಮಲಗಿ ಏಳುವುದು ನೋಡಿ
ಧನ, ಕನಕ, ಬಣ್ಣ, ಬಣ್ಣದ ಹತ್ತಿಯ ವಸ್ತ್ರಗಳೆಲ್ಲವನು ನೀಡಿ, ಹರಡಿ

ಮೂಗಿಲ್ಲದ ನಮಗೆ ಗಂಧ, ಧೂಪ, ಘಮ, ಘಮ ಹೂ ಪೂಜೆ ಮಾಡಿ
ಹಣ್ಣು, ಹಂಪಲು, ಹಾಲು, ಆನ್ನ, ಮೆಲೋಗರಗಳ ಇಟ್ಟ ಹಾಗೆ ಮಾಡಿ

ತಾವೇ ಗಬ, ಗಬ ತಿಂದು ತೇಗಿ, ತೂಕಡಿಸಿ ಕಲ್ಲನೇ ಸುಪ್ಪತಿಗೆ ಮಾಡಿ
ನಗುವುದೋ, ಅಳುವುದೋ ಈ ಮೂಢತನಕೆ ನೀವೇ ಯೋಚನೆ ಮಾಡಿ

ವಿಚಿತ್ರಾಕರ್ಷಣೆ

ವಿಚಿತ್ರಾಕರ್ಷಣೆ
ಕೆ. ಆರ್. ಎಸ್. ಮೂರ್ತಿ

ಎಲೆ ಹೆಣ್ಣೇ! ಪೆದ್ದು ಕನ್ಯೆ! ಅದೆಷ್ಟೋ ಯುಗ ಕಳೆದರೂ ಮತ್ತೆ, ಮತ್ತೆ ನ್ಯೂಕ್ಲಿಯಸ್ಸಿನು ಸುತ್ತಿ, ಸುತ್ತಿ ಸುಸ್ತಾಗಲಿಲ್ಲವೇ?
ಪ್ರೋಟಾನೇನೋ ಪುರುಷ ದಿಟ, ನ್ಯೂಟ್ರಾನಿಗೆ ಅಷ್ಟು ಹತ್ತಿರವಿದ್ದು ನಪುಂಸಕನಾಟ ಆಡುತ್ತಿದ್ದಾನೆಯೇ ನಿನಗೆ ಗೊತ್ತೇ

ಎಲ್ಲಿಂದಲೋ ಬಂದು ಫೋಟಾನು ರಭಸದಿ ನಿನಗೆ ಢಿಕ್ಕಿ ಹೊಡೆದಾಗಲೆಲ್ಲಾ, ಪುಳಕಿತಳಾಗಿ ನೀ ನಿಗರಿ ಎಗರುವೆಯಲ್ಲೇ!
ಒಡನೆಯೇ ಎಗರಿ ಬಿದ್ದು ಮತ್ತೆ ಫೋಟಾನಿನ ಶಕ್ತಿಪಾತವು ಮಾತ್ರ ಖಂಡಿತ; ನನ್ನ ತುಂಟು ಕಲ್ಪನೆಯ ನೀನೇನು ಬಲ್ಲೆ?

ಕಾಲಾತೀತ ಪತಿವ್ರತೆಯೇ ನೀನು? ಮಧ್ಯೆ, ಮಧ್ಯೆ ಇದೇನು ಫೋಟಾನಿನ ಸಂಗ ಅನಂಗ ರತಿ ರಂಗ? ವ್ರತದ ಭಂಗ!
ಶಿಖಂಡಿ - ಗಂಡುಗಳ ಭಂಡ ಒಡನಾಟ ನ್ಯೂಕ್ಲಿಯಸ್ಸಿನ ಬೆಸುಗೆಯ ಅಪ್ಪುಗೆಯಲ್ಲಿ ನಡೆಯುವುದು ಬಲು ಗುಟ್ಟಿನ ಪ್ರಸಂಗ!

ಶುಕ್ರವಾರ, ಜುಲೈ 30, 2010

ಜೀನು ಪುರಾಣ

ಜೀನು ಪುರಾಣ
ಕೆ. ಆರ್. ಎಸ್. ಮೂರ್ತಿ

ಜೀನು ಜೀನಿನ ಜಂಟಿಯಾಟ; ಜನಕ ಜನನಿ ಜೊನ್ನ ಜೇನು ಉಂಬುವ ಮಿಲನ
ಜಂಟಿ ಸಂಕೇತದ ನವ ಜೀನಿನ ಜನನ; ಜನ್ಯ ಜೀನಿನ ಪುನರಪಿ ಗುಣೀಕರಣ

ಸರಪಣಿಯ ಸಂಕೇತ ಒಂದು ಎರಡಾಗಿ, ಅವು ನಾಲ್ಕಾಗಿ, ಹಾಗೇ ಕೋಟಿ, ಕೋಟಿ
ಆಗುವ ಅಂಗ ಅಂಗಗಳು ಮಾತ್ರ ಬೇರೆ, ಬೇರೆ; ಜೀವ ವೈಚಿತ್ರ ಒಂದಕ್ಕೊಂದು ಸಾಟಿ

ಸಾವಿರಾರು ವರುಷಗಳಲಿ ಜೀನು ಫಕ್ಕನೆ ವಿಭಿನ್ನ: ವಿಚಿತ್ರವಿನ್ನೊಂದರ ಜನ್ಮವೀ ಜಂತು
ಈ ಜೀನು ಪರಿ ಪರಿ ಜೀವ ಜಂತುಗಳ ಕೂಟಕ್ಕೆ ಹೊಸದೊಂದು ಕೊಡುಗೆಯಾಗಿ ಬಂತು

ನೀರಿಂದ ನೆಲಕ್ಕೆ, ನೆಲದಿಂದ ನಭಕ್ಕೆ, ಮರದಿಂದ ಮರಕ್ಕೆ, ನೆಲೆಯಿಂದ ನೆಲೆಗೆ ವಲಸೆ
ವಸುಧೆ ಅಮ್ಮನ ಸಂಸಾರದ ಜಾತ್ರೆ ದಿಕ್ಕು ದಿಕ್ಕಿಗೆ, ತೆವಳಿ, ನಡೆದು, ಈಜಿ, ಹಾರುವ ಆಸೆ

ತೀರದ ಆಸೆ; ತೀರದಿಂದ ತೀರಕ್ಕೆ ಈಜಿ, ನೆಗೆದು, ತೇಲಿ, ಸಂಸಾರವೆಲ್ಲ ಮಹಾ ಯಾತ್ರೆ
ವೃಕ್ಷ, ಸಸ್ಯ, ಗಿಡ, ತೃಣ, ಪೊದೆಗಳದಂತೂ ಹಸಿರಿನ ದೀಕ್ಷೆ; ಇವಕೆ ಬೇಡವಿಂತಹಾ ಯಾತ್ರೆ

ಹುಟ್ಟಿದಲ್ಲೇ ನೆಲೆಸಿ, ವರುಣ ಸ್ನಾನವ ಮಾಡುತ, ವಸುಧೆಯ ಮೊಲೆಯ ಹೀರುತ ಬೆಳೆವುದು
ಸೂರ್ಯನ ಆವಾಹನೆ, ಗಾಳಿಯ ಉಸಿರಾಟ, ಬೀಸುವ ಮರುತನಿಗೆ ತಲೆ, ಮೈ ಓಲಾಡಿಸುವುದು

ಬೆಳೆಯ ಜೊತೆ, ಹೂವು, ಹಣ್ಣು, ಬೀಜ; ಪುಟ್ಟ ರೆಕ್ಕೆಯ ರಂಗು ರಂಗಿನ ಚಿಟ್ಟೆ, ಚೆಂದದ ದುಂಬಿ,
ಹಕ್ಕಿ ವೃಂದಕೆ ನಿತ್ಯ ಮಧು ಸಂತರ್ಪಣೆ: ಹೂವು, ಹಣ್ಣು, ಬೀಜ ಹಲವು ಹಲವು ಧರೆ ತುಂಬಿ

ಉಂಡ ಅತಿಥಿಗಳ ಮೈಮೇಲೆ ಗುಟ್ಟಾಗಿ ಗಂಟೊಂದು ಸಿಕ್ಕಿಸಿ ಬೀಜ ಪ್ರಸಾರ ಸಂಸಾರವನು ಬೆಳೆಸುವ ಪರಿ
ಮೈಗೆ ಅಂಟಿದ ಜೀನನು ಮತ್ತೆಲ್ಲಿಗೋ ಹಾರಿ, ಕೊಡವಿ ಮತ್ತೆ ನೆಲ ಊರಿ ಮೊಳಕೆ ಮಾಡಲು ಸಹಕಾರಿ


ಜೀನು ನನ್ನದು ಜಾಣತನದಲಿ ಎಲ್ಲಾದರಲ್ಲಿ, ಯಾರ ಜೀನಿನ ಜೊತೆ ಜಂಟಿ ಮಾಡಿಸಲಿ ಎನ್ನುವುದು ಪ್ರತಿ ಜೀನು
ತನ್ನ ಜೀನಿನ ಪ್ರವರ ಅಮರವಾಗಲಿ, ಎನ್ನುವುದೇ ಪ್ರತಿ ಜೀನಿನ ಎಡೆಬಿಡದ ಹಟ ಯೋಗ ಇದು ಸರಿಯಲ್ಲವೇನು?

ಮೈ ಅಂಟಿದ ಜೀನೇ ಜೇನು

ಮೈ ಅಂಟಿದ ಜೀನೇ ಜೇನು
ಕೆ. ಆರ್. ಎಸ್. ಮೂರ್ತಿ

ಜೀನು ನಿಮ್ಮದು ಜಾಣ ಜೀನೆಂದು ನಿಮ್ಮ ಜೀನಿನ ಪ್ರವರ ಒದರಿ ಒದರಿ ಹಿಗ್ಗಿ
ಏನು ಪಾಪ ಕರ್ಮದ ಫಲವೋ ಕೆಟ್ಟ, ಸೊಟ್ಟ ಜೀನನ್ನು ಪಡೆದಿರೆಂದು ಕೊರಗಿ

ಹುಟ್ಟಿದಾಗ ಸರಿಯಾದ ಜೀನು ಹಣೆಯ ಮೇಲೆ ವಿಧಿರಾಯ ಬರೆಯಲಿಲ್ಲವಲ್ಲ
ಸಾಯುವ ತನಕ ಬಿಡದೆ ಮೈ ಅಂಟಿ ಕೊಂಡು ಕೊಳಪೆ ಜೀನು ಕಾಡುವುದಲ್ಲ

ಎಂದೆಲ್ಲಾ ಜೀನನ್ನು ಕೊಂಡಾಡುವುದೂ ಬೇಡ, ಮಂಡೆ ಬಿಸಿಮಾಡುವುದೂ ಬೇಡಲೋ
ದಕ್ಕಿದ ಜೀನನ್ನೇ ಉಧ್ಧರಿಸಿಕೋ, ಸಿಕ್ಕ ಜೀನಿನಲ್ಲೇ ಜೇನುತುಪ್ಪದ ಸವಿ ಕಾಣೆಲೋ

ನಿನ್ನ ಜೀನಿನ ಅಭಿಮಾನ ನಿನಗಿಲ್ಲದೆ ಹೋದರೆ, ಇತರರು ಯಾತರ ಸಮಾಧಾನ
ಒದಗಿಸುವರೋ? ನಿನ್ನ ಜೀನನು ನೀನೇ ಮಾಡಿಕೊ ಸಕಲಕ್ಕೂ ಅಸಮಾನ ಸಾಧನ

ಸೋಮವಾರ, ಜುಲೈ 26, 2010

ಯಾರಿಗೆ ಜೀವಿಸುವೆ?

ಯಾರಿಗೆ ಜೀವಿಸುವೆ?
ಕೆ. ಆರ್. ಎಸ್. ಮೂರ್ತಿ

ಇರಬೇಕು, ಇಲ್ಲದಿರಬೇಕು; ಎಲ್ಲದನು ಸಲ್ಲಿಸುತಲೇ ಇರಬೇಕು
ತಿನ್ನ ಬೇಕು, ತನುವ ತಣಿಸಲೂ ಬೇಕು; ಆತನಿಗಿದೆಲ್ಲ ಎನ್ನಬೇಕು

ಹೊಟ್ಟೆ ಹೊರೆಯಲು ರಟ್ಟೆಯಲಿ ಬಟ್ಟಲುಗಟ್ಟಲೆ ಬೆವರು ಸುರಿಸಿ
ರೊಟ್ಟಿ ಚಟ್ನಿ, ಲೋಟದಲಿ ಮೊಸರು, ತಟ್ಟೆಯಲಿ ಉಣಲು ಬಡಿಸಿ

ಆತನಿಗೆ ಮೊದಲು, ಮಿಕ್ಕದ್ದು ಪ್ರಸಾದ ನಿಮ್ಮೆಲ್ಲರಿಗೆ ಇದ್ದಷ್ಟೇ ಸಾಕು
ಕಾಣದ ಆತನಿಗೆ, ಎಲ್ಲವನೂ ಕೊಟ್ಟವನೆಂದು ಮಣಿಯುತಿರಬೇಕು

ಕೊಡಬೇಡ ಕೊಟ್ಟ ಕೊನೆಯ ಉಸಿರನೂ ಹುಟ್ಟು ಋಣ ಪುಟ್ಟಿಸಿದವಗೆ
ನಿನಗಾಗಿಯೇ ನಿನ್ನದೇ ಜೀವಿತವ ಅನುಭವಿಸುವ ಪರಿಯಿರಲಿ ನಿನಗೆ

ಶನಿವಾರ, ಜುಲೈ 24, 2010

ಅಕ್ಷರದ ಹರಳೆಣ್ಣೆ

ಅಕ್ಷರದ ಹರಳೆಣ್ಣೆ
ಕೆ. ಆರ್. ಎಸ್. ಮೂರ್ತಿ

ಹರಳೆಣ್ಣೆ ಬೇಕೇ ಹರಳೆಣ್ಣೆ? ಕೆಲವೇ ಸೆಕೆಂಡು ಹರಳೆಣ್ಣೆ
ಉಣ್ಣ ಬೇಕಿಲ್ಲ, ಕುಡಿಯ ಬೇಕಿಲ್ಲ, ನುಂಗಲಾರದ ಎಣ್ಣೆ

ಕಣ್ಣಿನಲಿ ನೋಡಿದರೆ ಸಾಕು, ಕಿವಿಯಲ್ಲಿ ಕೇಳಿದರೆ ಸಾಕು
ಕನ್ನಡಿಗರಿಗೆ ವಾಕರಿಕೆ ಗ್ಯಾರಂಟಿ ತರಿಸುವ ನನ್ನ ಹರಳೆಣ್ಣೆ

ಹೊಟ್ಟೆಯಲಿ ಸೊಟ್ಟ ಗಂಟಾಗಿ ನೋವು ನುಲಿಯುವುದು
ಅಟ್ಟಿಸಿ ಓಡಿಸುವುದು ಒಡನೆ ಸಂಡಾಸಿನ ಸಿಂಹಾಸನಕೆ

ನಿಮ್ಮ ಮುಖವೆಲ್ಲ ನನ್ನಂತೆ ಹರಳೆಣ್ಣೆ ಕಳೆ ತುಂಬುವುದು ನಿಜ
ತಲೆಗೆ ಹಚ್ಚಿದರೆ ನುಣ್ಣಗಾಗುವುದು, ಬೋಳಾಗುವುದು ಖಚಿತ

ಯಾರಿಗೆ ಬೇಕು?

ಯಾರಿಗೆ ಬೇಕು?
ಕೆ. ಆರ್. ಎಸ್. ಮೂರ್ತಿ

ಗುಟ್ಟಾದ ರಟ್ಟು, ಕೆಟ್ಟ ರೊಟ್ಟಿ
ಕೆಟ್ಟಗೆ ಕಿಟಾರೆನ್ನುವ ಪುಟ್ಟ
ಕುಂಟು ಕಾಲಿನ ನಟರಾಜ
ಗಂಟು ಮೊಗದ ಬಂಟ
ಮುಟ್ಟಿದರೆ ಮುನಿ ನಾರಿ

ಇಲ್ಲದನು, ಸಲ್ಲದುದನು ಒಲ್ಲೆ

ಇಲ್ಲದನು, ಸಲ್ಲದುದನು ಒಲ್ಲೆ
ಕೆ. ಆರ್. ಎಸ್. ಮೂರ್ತಿ

ಹೌದಂದರೆ ಅಲ್ಲ, ಅಲ್ಲವೆಂದರೆ ಅಲ್ಲ, ಅನುಮಾನಿಯಾದರೆ ಅಲ್ಲ.
ಇಹುದಂದರೆ ಇಲ್ಲ, ಇಲ್ಲವೆಂದರೆ ಇಲ್ಲ, ಇರಬಹುದೆಂದರೆ ಇಲ್ಲ

ಬೇಕೆಂದರೆ ಇಲ್ಲ, ಬೇಡವೆಂದರೂ ಇಲ್ಲ, ಬಿಗುಮಾನಿಯಾದರೂ ಇಲ್ಲ
ಬೈದರೆ ಇಲ್ಲ, ಬೇಡಿದರೂ ಇಲ್ಲವಲ್ಲ, ಕೈನೀಡಿ ಕಣ್ಣೀರಿಟ್ಟರೂ ಇಲ್ಲ, ಇಲ್ಲ

ಇಲ್ಲದ, ಎಲ್ಲೂ ಇಲ್ಲದ, ಇರುವೆ ಇಲ್ಲದ, ಗೊಡವೆ ಇಲ್ಲದನು ಯಾರು ಬಲ್ಲ?
ಯಾರೂ ಬಲ್ಲದದನು ಎಲ್ಲಾ ಬಲಿದರೆನ್ನುವುದೇಕೆ? ಇಲ್ಲದನು ನಾನೊಲ್ಲೆ

ಶುಕ್ರವಾರ, ಜುಲೈ 23, 2010

ಕವಿ ಕುಂಚದ ಕಿವಿ ಗುಟ್ಟು

ಕವಿ ಕುಂಚದ ಕಿವಿ ಗುಟ್ಟು
ಕೆ. ಆರ್. ಎಸ್. ಮೂರ್ತಿ

ಗುಟ್ಟು ಗಂಟು ಕಟ್ಟಿ, ಒಗಟಿನ ವಟವಟವನೆಲ್ಲ ನಾನಿಂದು ಬಿಟ್ಟೆ ನಿಮಗೆಂದೇ
ಕೊರಳಿನಿಂದ ತಿಳಿಯಾಗಿ ಹರಿಯುತಿದೆ ಸರಳ ಸಾಲುಗಳಿವು ನನದೊಂದೇ

ಅತ್ತ ಇತ್ತ ಕಂಡಿದೆಲ್ಲಕೂ ತಡಬಿಡದೆ ತವಕದಿ ಮಿಡಿಯುವುದು ನಿಜ ತಾನೇ?
ಮಿಡಿತವ ಹಿಡಿದಿಡುವ ಗೊಡವೆ ಕೊಡವಿ ಬಿಡಿ, ಮಿಡಿವಾಗ ಮಿಡಿಯಲಿ ತಂತಾನೆ

ತಡೆಯ ಬೇಡಿ ತಂತಾನೇ ಮಿಡಿಯುವ ಗುಂಡಿಗೆಯು ಡವ್ ಡವ್ ಕುಣಿಯುತಲಿರಲಿ
ಕುಣಿಯುವುದು ತಣ್ಣಗಾಗಲಿ ತಂತಾನೆ, ತನನ ತಾನದ ತಾಣವೂ ಪೂರ ಆರಲಿ

ಮಿಡಿದ ಹಾಡನು, ಒರಲಿದ ರಾಗವನೂ, ತಟ್ಟಿದ ತಾಳವೆಲ್ಲವನೂ ಕನವರಿಸಿ ನೆನೆಸಿ
ಮೆಲುಕು ಹಾಕಿ, ಮತ್ತೊಮ್ಮೆ, ಮಗುದೊಮ್ಮೆ ಕೇಳುತ ತಣಿಯುತ ಮನವಿರಿಸಿ ಆಲಿಸಿ

ತಣಿತವೆಲ್ಲವೂ ತಣ್ಣಗಾಗಿ ಮಂದ ನಿದ್ದೆಯೂ ಬಂದರೆ, ಅಂಗನೆಯ ಅಪ್ಪಿ ಆಲಂಗಿಸಿ
ಕಾವ್ಯ ಸ್ವರೂಪಿ, ಕವಿ ಕೋಮಲೆ ಏಳುವಳು ಒಡನೆ ಆಗ ಅಂತರಾಳದಿಂದ ಗಮನಿಸಿ

ಅವಳ ಗಾನವನು ಬರೆದಿಟ್ಟುಕೊಳ್ಳಿ ಒಲವಿಂದ, ಸಪ್ತ ಸ್ವರಗಳು ತಂತಾನೆ ಹರಿದಂತೆ
ಅವಳ ನೀಳ ಜಡೆಯೇ ಆಗಲಿ ನಿಮ್ಮ ಕುಂಚ, ನಿಮ್ಮ ಎದೆಯೇ ತಾಳೆಯ ಗರಿಯ ಕಂತೆ

ಪ್ರಾಸದ ತ್ರಾಸವೇಕೆ? ಪದಗಳ ಹುಡುಕಿ, ತಡಕುವುದೇಕೆ? ಮಾತ್ರೆಯನು ಎಣಿಸದಿರಿ
ಅವಳ ನಾಲಿಗೆಯು ಉಲಿಯುವುದು ಸರಳ ಧಾರೆಯಲಿ, ನೀವಾಗ ಕವಿಯು ಆಗುವಿರಿ

ಹರಿ ಹಾರಿ ಹೋದರು

ಹರಿ ಹಾರಿ ಹೋದರು
ಕೆ. ಆರ್ ಎಸ್. ಮೂರ್ತಿ

ಹರಿ ಹರಿಯಲ್ಲಿ ಹಾರಿಹೋದರು ಹರಿ
ಹರಿಹರರಿಗೆ ಹರನ ಹರಣ - "ಹರಿ"

ಹರಿಯಾದರೇನು ಹರಿಹರನಾದರೇನು
ಹರಿಯ ಪರಾರಿಗೆ ಕಾರಣವೇ ಆ ಹರನು

ಊರು ಬಿಟ್ಟು ಪರದೇಶ ಅಲೆದ ಕನ್ನಡಿಗ
ಹೊಂಟ ಕನ್ನಡದ ಬಂಟ ಹೊತ್ತು ಸಂದೇಶ

ಅಮೇರಿಕಾದ ಕನ್ನಡದ ತುತ್ತೂರಿ ಜೋಗಿಯೂ
ಹಿಂದೆಯೂ, ಮುಂದೆಯೂ ನಾಗಮಣಿ ಪುಂಗಿಯು

ನೀ ಹೋದೆ, ನಿನ್ನ ಮಾತುಗಳಿನ್ನೂ ಜೀವಂತವಿದೆ
ತುತ್ತೂರಿ ನಾದವದು ಎಲ್ಲರ ಕಿವಿಯಲ್ಲಿ ಗುನುಗುತಿದೆ

ಶನಿವಾರ, ಜುಲೈ 10, 2010

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ
ಕೆ. ಆರ್. ಎಸ್. ಮೂರ್ತಿ

ನನ್ನ ಮೇಲೇಕೆ ಕೋಪ? ಬಯ್ಯುವಿರಿ ನನ್ನನ್ನು? ಕೆಟ್ಟವನು ನಾನಲ್ಲ.
ನಿಮ್ಮನು ಎಲ್ಲರೆದುರಿಗೆ ವಿಕಟ ಅಟ್ಟಹಾಸದಲಿ ಅಣುಕಿಸಲೇ ಇಲ್ಲ.

ವಿಕೃತ ರೂಪದ ನಿಮ್ಮ ದೆವ್ವದ ಮುಖವನು ಕಂಡು ನಕ್ಕವನೂ ಅಲ್ಲ
ಮೂಗು ಉದ್ದವಾದಾಗ ನಿಮ್ಮೆಡೆಗೆ ಬೆರಳು ತೋರಿಸಿದವ ಅಲ್ಲವೇ ಅಲ್ಲ

ನೂರು ಮುಖದ ಕವಿಯಂತೆ ಯಾರೋ ಮೈಮೇಲೆ ಒಮ್ಮೊಮ್ಮೆ ಬರುತ್ತಾನೆ
ಕೊರಮನವನು ವಿಚಿತ್ರ ಮುಖವಾಡಗಳ ದೊಡ್ಡ ಗಂಟೇ ಹೊತ್ತು ತರುತ್ತಾನೆ

ನನ್ನ ಮೈಮನವ ಸೂತ್ರ ದಾರದಿ ಕಟ್ಟಿ, ಬಣ್ಣ ಬಣ್ಣದ ಕೀಲುಗೊಂಬೆಯ ಆಟ
ಕವಿ ಭಾಷೆಯಾ ಮಂತ್ರ ಬೊಗಳಿ ಊರ ಮಂದಿಯ ಕೆಣಕಿ ಕುಣಿಸುವ ಚೆಲ್ಲಾಟ

ಮನಸಿಗೆ ಬಂದದ್ದೇ ರಾಗ, ಕಾಡು ನಾಯಿಗೂ ಅತಿ ದೊಡ್ಡ ಬಾಯಿಯವನಿಗೆ
ಎಲುಬು ಬುರುಡೆಗಳ ತಟ್ಟಿ ಹಾಕುವನು ರಣ ಮದ್ದಳೆಗಿಂತ ಕರ್ಕಶವು ಕಿವಿಗೆ

ಸಾಕಪ್ಪಾ ಸಾಕು ಮಹರಾಯ ಈ ಶೂರ್ಪನಖನ ತಮ್ಮ, ಹಿಡಂಬಿಯ ಅಣ್ಣ
ಕತ್ತಲೆಗೂ ಕಪ್ಪು ಮುಖದ, ಹುಳುಕು ಕೆನ್ನೆಯ, ಕ್ರೂರ ಕಣ್ಣಿನ ಗುಮ್ಮನಿವನಣ್ಣ

ಬೇವು ಮರದ ಕೊಂಬೆಯ ಚಾಟಿಯಲ್ಲಿ ಬಡಿದು ನನಗೆ ದೆವ್ವಗಳ ಬಿಡಿಸಿರಣ್ಣ
ಕಪ್ಪು ಹೊಗೆ ಬೀರುತ, ಭೂತ ಬಿಡಿಸುವ, ಮಾಂತ್ರಿಕನ ಶೀಘ್ರದಲಿ ಕರೆಯಿರಣ್ಣ

ಕಟ್ಟು ಕಹಿ ಸರ್ಪ ವಿಷದ ಬಟ್ಟಲು ಇವನ ಬಾಯಿ, ಗಂಟಲಿಗೆ ತುರುಕಿ, ತಳ್ಳಿ
ಈ ಭಯಾನಕ ಹುಚ್ಚು ಕವಿಯ ತಕ ತಕ ಕುದಿಯುವ ಎಣ್ಣೆಯ ಕೊಳದಲ್ಲಿ ತಳ್ಳಿ

ತೊಲಗಿದರೆ ಸಾಕು ಸಾಕಪ್ಪ ನಿಮ್ಮೆಲ್ಲರನು ಸುಮ್ಮನೆ ಕಾಡುವನು ಆ ಕಾಡು ಕುನ್ನಿ
ನನಗೂ, ನಿಮಗೆಲ್ಲರಿಗೂ, ನಮ್ಮ ನಿಮ್ಮಂತಹ ಸಜ್ಜನರಿಗೆಲ್ಲ ಆಗಲೇ ಹಾಯಿ ಎನ್ನಿ

ಶುಕ್ರವಾರ, ಜುಲೈ 9, 2010

ಕಟ್ಟು ಕತೆಗಳ ನಂಬುವರು ನೀವಲ್ಲವೇ?

ಕಟ್ಟು ಕತೆಗಳ ನಂಬುವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಕಟ್ಟು ಕಥೆಗಳ ಕೇಳಿ, ಅವನೆಲ್ಲ ನಂಬಿ ಮತಿಗೆಟ್ಟು, ಕಟ್ಟು ನಿಟ್ಟಾಗಿ ಗಟ್ಟಿ ಭಜಿಸಿದವರು ನೀವಲ್ಲವೇ?
ಬೆಟ್ಟಗಳ ಒಡೆದು, ಕಡೆದು, ಮಂದಿರಗಳ ಕಟ್ಟಿ, ಒಳಗೊಂದು ಪುಟ್ಟ ಗುಡಿ ಮಾಡಿದವರೂ ನೀವಲ್ಲವೇ

ಮಂಟಪಗಳ ಕಟ್ಟಿ, ಪುಟ್ಟ, ಪುಟ್ಟ ಗೊಂಬೆಗಳ ಇಟ್ಟು, ಅದನೆ ನಿಜವೆಂದು ನಟಿಸಿದವರು ನೀವಲ್ಲವೇ?
ಗಟ್ಟಿ ತೆಂಗಿನ ಕಾಯಿಯ ಒಡೆದು, ತಟ್ಟೆಯಲಿ ಗಟ್ಟಿ ತುಪ್ಪದ ದೀಪವ ಹಚ್ಚಿ ಆರತಿಯ ಗೈದವರಲ್ಲವೇ?

ಎಂಟು ಬಗೆ ಮೃಷ್ಟಾನ್ನ, ಗಟ್ಟಿ ಹಾಲಿನ ಪಾಯಸ, ಮುಂದೆ ಇಟ್ಟು, ಕೊನೆಗೆ ಭುಜಿಸಿದವರೂ ನೀವೇ ಅಲ್ಲವೇ?
ತೊಟ್ಟಿಲೊಳು ಪುಟ್ಟ ಕಿಟ್ಟನ ಇಟ್ಟು, ಈಟು, ಆಟು ತೂಗುತ, ಗಟ್ಟಿ ಗೊರಕೆಯ ಹೊಡೆದು ಮಲಗಿದರಲ್ಲವೇ?

ಸೊಟ್ಟ ಮೂತಿಯವನನೂ, ಬಂಟ ಕೋತಿಯನ್ನೂ, ಕೆಟ್ಟ ದಶಶಿರನ ಲಿಂಗವನು ಧರೆಗಿಟ್ಟ ದಿಟ್ಟ ಗಿಡ್ಡಪ್ಪನನೂ,
ಸುಟ್ಟ ಸುಡುಗಾಡಿನ ಬೆಟ್ಟದರಸಿಯ ಪತಿಯನೂ, ತುಂಟ ಕಿಟ್ಟಯ್ಯನನೂ, ಬಲಿಯ ಪುಟ್ಟಗಾಲಲಿ ಮೆಟ್ಟಿದವನನೂ,

ದಿಟವೆಂದು ಗಟ್ಟಿ ಮನಸಿನಲಿ ಅಷ್ಟೂ ಲೊಳಲೊಟ್ಟೆ, ಕಸಕಟ್ಟೆ ಕಾಯಿಯೆಂದು ಇಷ್ಟೂ ತಿಳಿಯದೆ ನಂಬುವುದೇತಕೆ?
ಬಿಟ್ಟು ಬಿಡಿ, ಮುಟ್ಟಿ, ತಟ್ಟಿ ನೋಡಿ ಒಮ್ಮೆ ಗಟ್ಟಿ ಕಲ್ಲನು, ಜೀವವಿಲ್ಲದ ಕಲ್ಲಿಗೆ ಸಿಟ್ಟುಬಾರದು, ಎಂದು ತಿಳಿದರೆ ಸಾಕೆ?

ನಾನಲ್ಲ, ನಾನಲ್ಲ

ನಾನಲ್ಲ, ನಾನಲ್ಲ
ಕೆ. ಆರ್. ಎಸ್. ಮೂರ್ತಿ

ನಾನಲ್ಲ, ನಾನಲ್ಲ, ನಾನಲ್ಲ, ನಾನಲ್ಲ, ಯಾವುದೂ ನಾನಲ್ಲವೇ ಅಲ್ಲ.
ಅದೂ ಅಲ್ಲ, ಮತ್ತದಂತೂ ಅಲ್ಲವೇ ಅಲ್ಲ, ಯಾರದೋ ಸುಳ್ಳು ಎಲ್ಲ.

ಎಷ್ಟು ಹೇಳಿದರೂ ತಲೆಗೆ ಹೋಗದೆ ನಿಮಗೆ? ನನಗಿಲ್ಲ ಏನೂ ಸಂಭಂಧ
ನನಗೆ ಗೊತ್ತಿರಲಿಲ್ಲ ನೀವಿಷ್ಟು ಪೆದ್ದರೆಂದು! ಅಂಧರನು ನಂಬುವನೂ ಅಂಧ

ನಿಮ್ಮ ಮನಕೆ ಬಂದೊಡನೆ ಆಗಿಹೊಗುವುದು ಎಲ್ಲವೂ ಅತಿ ದೊಡ್ಡ ಸುಳ್ಳು
ಭ್ರಮೆಯಾವುದು, ಬ್ರಹ್ಮಯಾವುದು ಎಂಬ ವ್ಯತ್ಯಾಸ ತಿಳಿಯುವುದೆಲ್ಲ ಪೊಳ್ಳು

ಸಕ್ಕರೆಯ ಅರಿವಿರುವ ಇರುವೆಗೆ ಸೌರವ್ಯೂಹದ ಪರಿವೆ ಬರುವುದಾದರೂ ಹೇಗೆ!
ಕೈಹಿಡಿಯ ನಿನ್ನ ಮಿದುಳಿಗೆ ಬ್ರಹ್ಮಾಂಡವೇ ಎಟುಕುವುದೇ? ಅದು ಸಾಧ್ಯ ಹೇಗೆ!

ಹಲವು ಸಾವಿರ ಎಂದು ಕೊಂಡರೂ, ಕೆಲವೇ ಸಾವಿರ ಕಳೆದಿದೆಯೋ ನೀ ಹುಟ್ಟಿ ಬಂದು
ಹುಟ್ಟಿ, ಹುಟ್ಟಿ, ನಾಪತ್ತೆಯಾದವು ಬೆಟ್ಟದಂತಹ ಎಷ್ಟೋ ಪಶು ರಾಶಿಗಳು ಬಲು ಹಿಂದೂ

ನಿನ್ನ ಪುಟ್ಟಿಸಿದ ಭೂಮಿ ತಾಯಿ ಹುಟ್ಟಿ ಬಂದಳು ಮಗಳ ಬೆಳಗುವ ತಂದೆಯ ಹೊಟ್ಟೆಯಿಂದ
ಉರಿಯುವ ಸೂರ್ಯನಂತೆಯೇ ಇರುವರಯ್ಯ ಸಾವಿರ ಸಾವಿರ ಸಾವಿರ ಸಾವಿರ ತಾರ ವೃಂದ

ಮನಕೆ ಎಟುಕದಷ್ಟು ಇವೆಯೋ ಇಂತಹ ತಾರಾವೃಂದಗಳು, ವೃಂದ ಗುಚ್ಛಗಳು ಅನೇಕಾನೇಕ
ಇದನೆಲ್ಲ ಪುಟ್ಟಿಸಿದ ತಂದೆಯೋ, ತಾಯಿಯೋ, ಅದೋ, ಇದೋ, ಅದೆಂತಹದು ತಿಳಿಯ ಬೇಕಾ?

ಯಾವಾಗ, ಎಲ್ಲಿ, ಎಂತು, ಎಷ್ಟು ದೊಡ್ಡ ಬುರುಡೆಯ, ನಿನಗಿಂತ ಕೋಟಿ ಕೋಟಿಯಷ್ಟು ಮಹಾ ಜ್ಞಾನದಷ್ಟು
ಯಾವ ತಾರಾ ಗುಚ್ಛದಲಿ ಅವತರಿಸಿ ಬರುವುದೋ, ಆಗ ಆದೀತೋ ಇಲ್ಲವೇ ಇಲ್ಲವೋ ಹೇಳುವುದು ಕಷ್ಟ

ಒಂದಂತೂ ಖರೆ: ನೀನಲ್ಲ ಎಲ್ಲ ತಿಳಿವವನು, ಇಂದಲ್ಲಾ, ಎಂದೂ ತಿಳಿವವನು ನೀನಂತೂ ಅಲ್ಲವೇ ಅಲ್ಲವೋ
ಯೋಗ ಮುದ್ರೆಯ ಹಾಕು, ಭೋಗದಲಿ ತನ್ಮಯನಾಗು, ಪೊಗಳಿ, ಪೊಗಳಿ, ಪರಿ, ಪರಿಯಲಿ ತಾಳ ಹಾಕೋ

ಕೊನೆಗೆ, ಕೊನೆಯ ಕಾಲವು ಬರುವ ಕಾಲದಲಿ ಎಂತು, ಹೇಗೆ, ಬೇಡಿಕೊಂಡರೂ ನೀನಾಗುವೆಯೋ ಮತ್ತೆ ಮಣ್ಣು
ನೀನಂದು ಕೊಂಡಿರುವ ದೇವರೆಲ್ಲ ಭ್ರಮೆ, ನೀನಂಬಿರುವುದೆಲ್ಲ ಬರೀ ಸುಮ್ಮನೆ, ನಿನ್ನ ತಲೆಯೆಲ್ಲ ಜೇಡಿ ಮಣ್ಣು

ತುಂಟು ಮನ ನನ್ನದು

ತುಂಟು ಮನ ನನ್ನದು
ಕೆ. ಆರ್. ಎಸ್. ಮೂರ್ತಿ

ಕಾಣುವ ಕಲೆಯಲ್ಲಿ ಗೆಲಿಲಿಯೋನ ತಲೆಮಾರಿನವ ನಾನು;
ಜಾಣನವ ತಲೆಯಲ್ಲಿ ಮನೆ ಮಾಡಿ ಅಲೆಗಳ ಎಬ್ಬಿಸುವನು.

ದೂರ ದರ್ಶನವು ನಮ್ಮದೆಂದು ಮರೆಯದಿರಿ, ಅನ್ಯಥಾ ದೂರದಿರಿ,
ನಿಮಗೆ ಕಾಣದ್ದು ನಾವು ಮುಂಚೆಯೇ ಕಂಡರೆ ಸುಮ್ಮನೆ ಬೈಯ್ಯದಿರಿ.

ಚರ್ಚೆಗೆ ಬಾಹಿರ ಚರ್ಚು, ನಿಮ್ಮ ನಂಬದಿರೆ ಏಟು ಬೈಗುಳದ ಚಾಟಿ
ದೇಗುಲದ ಮೂರ್ತಿಯನು ಕಲ್ಲೆಂದುದಕೆನಗೆ ಹೇಳ ಬೇಡಪ್ಪ ಚಾಡಿ

ಹೊಲೆಯ ಸುಂದರ ಅಬಲೆಯ ಹೆಗಲ ಮೇಲೆ ಒಲವಿನ ತೋಳು ನನ್ನದು
ಕೊಪವೇತಕೆ ಅವಳೂ ನಾನೂ ಜಂಟಿಯಲಿ ಎಂಟೇ ಗೇಣು ಸ್ವರ್ಗವಾಗುವುದು

ಸೋಕ್ರಟೀಸನ ಕಟು ಒರಟು ಬಾಯಿ ನನ್ನದಾಗಿರುವಾಗಂತೆಯೇ ಹೇಳುವೆನು
ವಕ್ರವಾದರೂ ದಿಟವು ದಿಟವೇ, ಕಣ್ಣಿಗೆ ಕಂಡಂತೆಯೇ ಚಿತ್ರವನ್ನು ಬಿಡಿಸುವೆನು

ಆಡುವ ಮಾತಿಗೆ ಅತಿಖಾರದ ಮಸಾಲೆ ಒಡಗೂಡಿಸಿದರೆ ಒಮ್ಮೊಮ್ಮೆ,
ಬಂಡನ್ನು ತುಂಬಿಸುವ ಭಂಡತನದ ಓತಿಕ್ಯಾತನೂ ನಾನೇ ಮತ್ತೊಮ್ಮೆ

ಮೆಣಸಿನ ಖಾರವೂ ಬಲು ರುಚಿ; ಹುಳಿಯೂ, ಕಹಿಯೂ ಇರಬೇಕಲ್ಲವೇ!
ನಾಲಗೆಗೆ ನಾಕದ ಕುಣಿತಕ್ಕೆ ಸಕಲ ಸಾಂಬಾರಗಳು ಇರಲೇ ಬೇಕಲ್ಲವೇ!

ಕಾಳಿದಾಸನೂ, ಪೋಲಿ ವಾತ್ಸಾಯನನೂ, ಜಯದೇವನೂ ಬರುವರಯ್ಯ
ವೇದ ವ್ಯಾಸನೂ, ಪೋಲಿ ಕಿಟ್ಟಿಯೂ, ಶೇಕ್ಸಪಿಯರನೂ ಕುಣಿಯುವರಯ್ಯ

ನನ್ನ ತಲೆಯಲಿ ಮನೆ ಮಾಡಿ, ಭಾವ ಭಜನೆಯ ಹಾಡಿಯೆಲ್ಲಾ ಕುಪ್ಪಳಿಸುವರು
ಜೊತೆಗೆ ಮೇನಕೆಯ ಬೆತ್ತಲೆ ಆಟ, ವಿಶ್ವಾಮಿತ್ರರು ಹಿಂದೆಯೇ ಓಡಿ ಬರುವರು

ರಂಗು ರಂಗಿನಾ ಪ್ರಸಂಗ ಬೆಳಗೂ, ರಾತ್ರಿಯೂ, ಎಡೆಬಿಡದೆ ಮನದ ರಂಗದಲಿ
ಮೊದ್ದು ನಿಶ್ಶಬ್ಧದ ಬಿಕೋ ಖಾಲಿಯ ತಲೆಯವರು ನೀವೆಲ್ಲ ಇರಬೇಕು ಪೆಚ್ಚಿನಲಿ!

ಪೆಚ್ಚು ತಲೆಗಿಂತ, ಹುಚ್ಚು ತಲೆಯೇ ಮೇಲು, ಹೆಚ್ಚು ಪುಣ್ಯದ ಗಂಟು ನನದುಂಟು
ಕಿಚ್ಚು ಹಚ್ಚಿ ಜ್ವಾಲೆಯು ಬೆಳಗುತಿರೆ ಬಿಸಿಮನದ ಘಾಸಿಯ ಮನವು ಬಲು ತುಂಟು

ಗುರುವಾರ, ಜುಲೈ 8, 2010

ನಾವಿಕರ ವ್ಯರ್ಥ ಯಾತ್ರೆ

ನಾವಿಕರ ವ್ಯರ್ಥ ಯಾತ್ರೆ
ಕೆ. ಆರ್. ಎಸ್. ಮೂರ್ತಿ

ಬಾಗಿಲೊಳು ಬಾಯ್ಮುಚ್ಚಿ ಒಳಗೆ ಬಾ ಯಾತ್ರಿಕನೆ
ನಿನದಲ್ಲವೀ ಮನೆಯು ಇದಕೆ ಅತೀ ಬೆಲೆಯೂ

ಬಾಯ್ ಬಿಟ್ಟರೆ ಚಾಟಿ ಏಟು, ಮನವ ಹೊರಗಿಟ್ಟರೆ ಹಾಕುವೆವು ಬಾಯಿಗೆ ಬೀಗ
ಗೇಣು ಮಣ್ಣೂ ನಿನ್ನದಿಲ್ಲ, ಹಣವ ತರದೇ ಸಿಗುವುದಿಲ್ಲ, ಮಂಡಿಯೂರಿ ನಡೆ ಬೇಗ

ತಂಗಳು ಸಂತರ್ಪಣೆ ಸಾಲದೇನೋ, ಹೆಚ್ಚು ಕೂಗಿದರೆ ಹಾಕುವೆವು ಕರ್ಟನ್ ಗಿಲೊಟಿನ್
ಮಂಜು ಶೀತಲ ಹೋಳಿಗೆ, ಕನ್ನಡೇತರ ಕವಳ, ಅದೆಂಥದೋ, ರೊಟ್ಟಿ, ಸಾರು, ಹುಳಿಯನ್ನು

ನಾನೇ ರಾಜ, ರಾಜಾಧಿರಾಜ, ನಾ ಕೊಟ್ಟ ಅಪ್ಪಣೆ ಅವಧಿ ಗಡಿಯ ದಾಟುವುದು ಉಂಟೆ
ಚಂದ್ರವಂಶದ ಮುಖ್ಯ ಮಂತ್ರಿ ನೀನಾದರೆನೋ, ಎದುರು ಮಾತನಾಡುವುದು ಉಂಟೆ?

ನಾ ಹುಟ್ಟಿದುದು ಇಂದು, ನನಗೆ ಮಾತ್ರ ಸ್ವಾತಂತ್ರದ ದಿನ, ಮುಚ್ಚು ಬಾಯಿ ಪುರಂದರ
ನನ್ನ ರಂಗವಿದು, ಓಡಿರೋ ಹಿಂದಿರುಗಿ ಬೇಗ ಹಿಂಡು ಮಕ್ಕಳು, ನಿನ್ನ ದಾಸರ ಸಂಸಾರ

ರಂಗ ವಿಠಲನ ದಾಸ ಪುರಂದರನಿಗೇಕೋ, ನನಗೆ, ನನ್ನವರಿಗೆ ಮಾಡಿಸಿದೆ ನಾನೀರಂಗ
ನನಗೆ ತಲೆ ಬಾಗಿ, ಕೈಮುಗಿದು, ಕುಣಿಯುವ ಮಂಗಗಳಿಗೆ ಕೈ ಬೀಸಿ ಕರೆಯುವುದೀ ರಂಗ

ನೀವೆಲ್ಲ ಯಾವಾಗಲೂ ಕನ್ನಡವ ಆಡುವುದೇಕೆ?
ಹಾಕಬೇಡಿರೋ ಚೇಡಿಯ ಛೀಮಾರಿ ಶೀಟಿ ಕೇಕೆ
ಪಾಮರರ ಭಾಷೆ ಲಂಡನ್ನಿನ ತುಂಡು ನನಗೇಕೆ
ನನಗೆ, ನನ್ನ ಮಡದಿ ಮಕ್ಕಳಿಗೆ ತನ್ನಿ ದೊಡ್ಡ ಕೇಕ್

ನಾವೆಲ್ಲಾ ಒಂದೇ ನಾವೆಯ ನಾವಿಕರೆ?

ನಾವೆಲ್ಲಾ ಒಂದೇ ನಾವೆಯ ನಾವಿಕರೆ?
ಕೆ. ಆರ್. ಎಸ್. ಮೂರ್ತಿ

ನಾನೂ ಹೌದು, ನೀವೂ ಹೌದು, ನಮ್ನಿಮ್ಮ ನಾವೆ ಬೇರೆ
ನಾವೆಲ್ಲಾ ಹುಟ್ಟು ಹಾಕುವ ಹರಿಗೋಲುಗಳು ಬೇರೆ ಬೇರೆ

ಅತಿ ಚಿಕ್ಕ ನನ್ನ ದೋಣಿಯಲಿ ಈಗಾಗಲೇ ನೂರಾರು ತೂತು
ಅವರದು, ನಿಮ್ಮದು ಹೆಮ್ಮೆಯ ಹಡಗು ಬಲು ದೊಡ್ಡದಾದೀತು

ಉಪ್ಪು ನೀರು ಕುಡಿದೊಳಗೆ ಈಜುತಿಹೆ, ತೂತು ಅಗಲವಾಗುತಿದೆ
ಮೈ ಒದ್ದೆ, ಮಡಿ ಒದ್ದೆ, ಮತ್ತೆ, ಮತ್ತೆ ಒದ್ದೆ, ಎರಡೂ ಕಾಲು ಒದ್ದೆ

ಅತ್ತ, ಇತ್ತ, ಎತ್ತೆತ್ತಲೂ ನೀರೇನೋ ಎತ್ತರಕೆ ಅಲೆಯಾಡುತಿದೆ
ಎಚ್ಚರವಿರಲಿ, ಕುಡಿಯಬಾರದದನು ಮರುಳೇ ವಿಷದ ಉಪ್ಪಿದೆ

ಗಂಟಿನಲ್ಲಿ ಮಣಗಟ್ಟಲೆ ಹಣ್ಣು, ತರಕಾರಿ ಕಟ್ಟು ತಂದಿಹೆ ತಾನೇ?
ಮುಗಿದರೆ, ಹಸಿವಿಗೆ ಸಾಗರದ ತರಕಾರಿಯಾದರೂ ಸರಿ ತಾನೇ!

ಅಕ್ಕನದು ಬಲು ದೊಡ್ಡ ಹಡಗು, ರನ್ನದ ಕೋಣೆಗಳು ಅವರಿಗೆಲ್ಲ
ಸುವರ್ಣ ಸಿಂಹಾಸನದ ಪೀಠಗಳು ಹಲವು; ನನಗೆ, ನಿನಗೆ ಅಲ್ಲ

ಅವರಿಗೆ, ಮತ್ತವರವರಿಗೆ ಮಾತ್ರ ಆ ಆಸನ ಮೀಸಲು ಮರುಳೆ
ಪರಾಕಿನ ಮೇಲೆ, ಪರಾಕು ಪೇರಿಸಿ ಒದರುತಿರು ಹಗಲು ಇರುಳು

ನನಗೆ, ನಿನಗೆ, ಹೊರಗಿನವರಿಗೆ ಸಿಗುವುದು ಅತ್ಯಲ್ಪ, ಸ್ವಲ್ಪವಷ್ಟೇ
ಚಪ್ಪಾಳೆ ತಟ್ಟಿ, ತಟ್ಟಿ ನಿನ್ನ ಕೈ, ತೋಳುಗಳು ಆದೀತು ಬಲು ಗಟ್ಟಿ

ಪಂಕ್ತಿ ಭೇದ ತಂಗಿಗೂ ಬಂದ ಚಾಳಿ, ಅಕ್ಕನ ಚಾಳಿ ಮನೆ ಮಂದಿಗೆಲ್ಲ
ಅಕ್ಕನೂ ಬೇಡ, ತಂಗಿ, ಇನ್ನು ಮುಂದೆ ತಮ್ಮಂದಿರೂ ಹುಟ್ಟಿದಾಗೆಲ್ಲ

ಜಗಳವನು ಕಾಯುವುದು ನಮ್ಮ ಕುಲವನೇ ಕಾಡಿಸಿದೆ ಬಲು ಹಿಂದೂ
ಆಸನದ ಆಸೆಯ ಕುಲದ ದುರ್ವಾಸನೆ ನಾರುವುದು ಇಂದೂ ಎಂದೆಂದೂ

ಅವಿಭಕ್ತ ಕುಟುಂಬವು ನಿನ್ನ ತಾತನ ಕಾಲದ ಗೊಡ್ಡು ಸಂಪ್ರದಾಯವೋ!
ಒಂದೇ ಕರುಳು ನೂರಾರು ಚಿಂದಿಯಾಗುವುದು ನಮ್ಮ ಹಣೆ ಬರಹವೋ!

ಬುಧವಾರ, ಜುಲೈ 7, 2010

ಕವಿಗಳ ಹತ್ತಾರು ಅವತಾರಗಳು

ಕವಿಗಳ ಹತ್ತಾರು ಅವತಾರಗಳು
ಕೆ. ಆರ್. ಎಸ್. ಮೂರ್ತಿ

ಆ ಕವಿ ಬೇರೆ, ಈ ಕವಿಯೇ ಬೇರೆ;
ಕವಿ ಮನ, ಕುಂಚ, ಅದ್ದಿದ ಬಣ್ಣ ಬೇರೆ.

ಕವಿ ಗಂಡಾದರೆ ಭಾವದ, ಡವ ಡವ
ಕವಿಯತ್ರಿಯಾದರೆ ಮಿಡಿತದ ಭಾವ

ಹದಿಹರೆಯದ ತವಕ, ಇಪ್ಪತ್ತರಾತಂಕ
ಮೂರು, ನಾಲ್ಕು ದಶಕಗಳ ಬೀಗುವಿಕೆ

ದಶಕ ಐದಾದರೆ ಕಾಯಿ ಆದೀತು ಹಣ್ಣು
ಆರು, ಏಳರಲಿ ನೆನಕೆ ಜೀವನದ ಹುಣ್ಣು

ಉಳಿದಿರುವ ದಿನಗಳಲಿ ಭ್ರಮೆಯೇ ಹೆಚ್ಚು
ಅರಳು ಮರುಳು ಉಲಿಸಿದ ಮಾತೆಲ್ಲ ಪೆಚ್ಚು

ಕರುಳಿನ ಕವಿಗಳು ತಂತಿ ಮೀಟುವರು
ನವರಸದ ಪಾಯಸವನೇ ಬಡಿಸುವರು

ಹರಳೆಣ್ಣೆ ಕವಿಯತ್ರಿ ಬಲದಿ ಕುಡಿಸುತ್ತ
ನಿಮ್ಮೆದೆಗೆ ದೊಡ್ಡ ಕತ್ರಿಯನು ಹಾಕುತ್ತ

ಸಂಡಾಸು ಯಾತ್ರೆಗೆ ಆತುರದಿ ಅಟ್ಟುವರು
ಎಲ್ಲ ಮುಗಿದ ಮೇಲೆ ಹಾಯಿ ಅನ್ನುವರು

ಶನಿವಾರ, ಜೂನ್ 19, 2010

ಜಾಣತನದ ಕೋಣ

ಜಾಣತನದ ಕೋಣ
ಕೆ. ಆರ್. ಎಸ್. ಮೂರ್ತಿ

ಆಣೆ ಕೊಟ್ಟು, ಜಾಣತನದಲಿ ಮರೆತಂತೆ ಅಲ್ಲ ಪೆದ್ದು ಜಾಣ ಮರಿ
ನಿನ್ನ ಮರೆವಿನ ನೆವಕೆ ಓ ಗೊಡುವುದಿಲ್ಲವೋ ಎಮ್ಮೆ ಕೋಣನ ಏರಿ

ಬರುವ ಕಾಲ ರಾಯ. ಜಾಣ ಮರೆವು, ಕೋಣನರಿವು ಎರಡೂ ಇರಲಿ
ಜಾಣನೋ, ನೀ ಕೋಣನೋ, ಕೋಣ ವಾಹನನು ಖಂಡಿತದಲಿ ಹೇಳಲಿ

ಯಮನ ಸಭೆಯಲ್ಲಿ ಎಳೆದು ತಂದಾಗ ನೀ ಆಗುವೆಯೋ ತಲೆ ಬಾಗಿ ಕುಕ್ಷಿ
ನಿನ್ನ ಕಪಟ ನಾಟಕವೆಲ್ಲ ನಡೆಯದು, ನಿಜದಿ ನಿನ್ನ ಕಾಯುವುದು ಮನಸ್ಸಾಕ್ಷಿ

ಶುಕ್ರವಾರ, ಜೂನ್ 18, 2010

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ
ಕೆ. ಆರ್. ಎಸ್. ಮೂರ್ತಿ

ಅತ್ತೆ ಸೊಸೆಯರ ಕಲಹ ನನಗೆ ಶಾಪ
ಒಬ್ಬಳು ದುಡ್ಡು ಹಿಡಿದಿಟ್ಟು ಕೈ ಬಿಗಿಯಪ್ಪ

ಮತ್ತೊಬ್ಬಳು ಅತಿ ಜಾಣೆ, ವೀಣಾ ಪ್ರವೀಣೆ
ಸೊಸೆ ಎಲ್ಲೇ ಇದ್ದಲ್ಲಿ ಅತ್ತೆಮ್ಮ ಮಾತ್ರ ಕಾಣೆ

ಅತ್ತೆಗೆ ಮುದಿಗೋಪ, ಸೊಸೆಗೆ ಅತಿ ಹೆಮ್ಮೆ
ನನಗೆ ಮಾತ್ರ ಆದೂ, ಇದೂ ಎರಡೂ ಕಮ್ಮಿ

ಲಕುಮಿಗೆ ಸೊಕ್ಕು, ನನ್ನ ಕಡೆಗೆ ಬರುವುದುಂಟೇ!
ಹುಟ್ಟು ಪೆದ್ದನಿಗೆ ಸರಸತಿಯು ದಕ್ಕುವುದು ಉಂಟೆ

ಸೊಸೆಯ ಕಾಲು ಹಿಡಿದು ಅತ್ತು ಬೇಡಿಯೂ ಆಯಿತು:
"ಒಂದೇ ರಾಗದ ವರ ಸಾಕು ನೀನು ಕೊಟ್ಟರಾಯಿತು"

"ಸರಿಯಾಗಿ ಸರಿಗಮ ಸರಾಗದಲಿ ಹಾಡುವ ಹಂಬಲು"
"ಕೊಡೆ ಒಮ್ಮೆ ವೀಣೆಯನು ನನ್ನ ಬೆರಳಿಂದ ಮೀಟಲು"

ಅದಕ್ಕೆ ಮಧುರ ವಾಗ್ದೇವಿಯ ವಾದ ಏನು ಗೊತ್ತಾ?
"ಒಡಕು ಕಿವಿ, ಕಾಗೆಯ ಕಂಠ, ನಿನಗೇಕೆ ಸಂಗೀತ?"

ಅಸಮಾನ ಸುಂದರಿಯ ಚೆಲ್ಲಾಟದಲಿ ಒಲಿಸುವೆನೆಂದು
ಗುಂಡು ಬುರುಡೆಯ ಮುಟ್ಟುವ ಆಸೆ ಉಲ್ಬಣವಾಯಿತೆಂದು

ಅವಳ ಮುದಿ ಗಂಡನು ಎಂಟೂ ಕಣ್ಣು ಮುಚ್ಚಿರುವಾಗ
ನನ್ನ ಕೈ ಬೆರಳಿಂದ ಅವಳ ವೀಣೆಯ ಮೀಟುತಿರುವಾಗ

ಬಂದಳಪ್ಪಾ ಬಂದಳು ಧನ ಲಕ್ಷ್ಮಿ ಕೆಂಡ ಕಣ್ಣಿನಲ್ಲಿ ಸುಟ್ಟಳು
"ನಿನಗೆಂದೂ ಬಿಡಿಗಾಸೂ ಬರದಿರಲೆಂದು" ಶಾಪವ ಕೊಟ್ಟಳು

ನಂಬಿ ಕೆಟ್ಟವರು ನೀವಲ್ಲವೇ?

ನಂಬಿ ಕೆಟ್ಟವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಎಕ್ಕಡವ ತನ್ನ ತಲೆಯ ಮೇಲಿಟ್ಟು
ಬಿಕ್ಕಿ, ಬಿಕ್ಕುತಲಿ ಅತ್ತು ಕಣ್ಣೀರಿಟ್ಟು

ಅಗ್ರಜನ ಆಶ್ರಮದಿಂದ ಬಂದ ಆಚೆ
ಹೊತ್ತು ನಡೆಸಿದ ರಾಜ್ಯ ಭಾರದ ಹೆಜ್ಜೆ

ಅಣ್ಣನ ಪಾದುಕೆಯು ತಮ್ಮನ ಮೇಲೋ?
ತಮ್ಮನ ಒಲವಿನ ಭಾರ ಅಣ್ಣನ ಮೇಲೋ?

ಹಣೆಯ ಬರಹವಿದೇನು ರಾಜ ಕುವರರಿಗೆ?
ಇತ್ತ ವಾಕ್ಯದ ಹೊಣೆಯು ಹೊತ್ತ ನಾಲ್ವರಿಗೆ.

ದಶರಥನ ರತಿಯು ಮತಿಕೆಟ್ಟ ಕೆಟ್ಟ ಕನ್ಯೆಯೋ?
ಭೂಪತಿ ಪತಿಯು ಶತ ಷಂಡ ಹುಚ್ಚು ಕುನ್ನಿಯೋ?

ರಾಜನ ಪ್ರಜೆಗಳಿಗೂ ಮಂಕು ಕವಿಸಿದ ಕೊಂಕನಾರು?
ಓದುಗರಿಗೆಲ್ಲಾ ಕಣ್ಣೀರ ನದಿಯನ್ನೇ ಸುರಿಸಿದವನಾರು?

ಕಾವ್ಯ ಕರ್ತ ಕವಿ ನಿಜವಾಗಿಯೂ ಹುಟ್ಟು ಬೇಡನೋ?
ತನ್ನ ಗೋತ್ರವನೇ ಬಚ್ಚಿಟ್ಟು ಬೇಡ ತಾಪಸಿಯಾದನೋ?

ಓದಿದೆಲ್ಲವ ಮೂಢತೆಯಲಿ ನಿಜವಿರಲೇ ಬೇಕೆಂದು ನಂಬಿ
ಕಥೆಯ ನಾಯಕನೇ ಸಾಕ್ಷಾತ್ ನಾರಾಯಣನೆಂದು ನಂಬಿ

ತನ್ನ ಪ್ರಜೆಗಳನು ಕೈಬಿಟ್ಟು ಮೂಢತನದಿ ಕಾಡಿಗೆ ಹೋದವನ
ಸತಿ ಸೀತೆಯನು ರಕ್ಕಸನಿಗೆ ಕಳೆದುಕೊಂಡಾಗ ಬಿಕ್ಕಿ ಅತ್ತವನ

ಹೆಂಡತಿಗೋಸ್ಕರವಾಗಿ ವೈರವನು ಕಟ್ಟಿ, ದಾನವ ರಾವಣನನು
ಗೆಲ್ಲುವ ಗುರಿ ಹೊತ್ತು, ವಾನರ ಸೈನ್ಯವ ಮೊರೆಹೋಗಿ ಹೋದವನು

ಯುಧ್ಧವನು ಗೆದ್ದವನು ರಾಮನಲ್ಲ, ಲಕ್ಷ್ಮಣನೂ ಅಲ್ಲ, ವಾನರರು
ಗೆದ್ದಾದಮೇಲೆ, ಸೀತೆಯನು ತೊರೆದು ತನ್ನನೇ ತಾನು ಸೋತವನು

ಬಸುರಿ ಹೆಂಡತಿಯನ್ನು ಊರು ಬಿಟ್ಟು ಮತ್ತೆ ಕಾಡಿಗೆ ಅಟ್ಟಿದವನು
ಅವಳಿ ಜವಳಿ ಲವ ಕುಶರ ಬಾಲ ಲೀಲೆಗಳನು ಕಾಣದ ಕುರುಡನು

ಕಂಡು, ಕಂಡೂ, ಬೇಡನ ಕಥೆಯನ್ನು ಓದಿ, ಕೇಳಿ, ಮಾನವನನು
ನಾರಾಯಣನೇ ಇರಬೇಕೆಂದು ನಂಬಿ ಕಟ್ಟಿದ್ದಾಯ್ತು ದೇಗುಲಗಳನು

ನಿಮಗೆಲ್ಲರಿಗೂ ಬರುವುದೇ ಬುಧ್ಧಿ? ತೆರೆಯುವುದೆಂದು ಕುರುಡು ಕಣ್ಣು?
ತಿಳಿಯುವುದೆಂದು ಕವಿ ಕಾವ್ಯ ಚಳಕದಿ ಕಣ್ಣಿಗೆ ಎರೆಚಿದನೆಂದು ಮಣ್ಣು?

ಈಕವಿಯು ಎಲ್ಲರ ಕವಿ

ಈಕವಿಯು ಎಲ್ಲರ ಕವಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಈಕವಿಯ ನಾಮ ಕಾರಣದ ನಿಜ ಕವಿಯೇ ನಾನು
ಸವಿಯಾದ ಹೆಸರಿತ್ತ ನಾಮಕರಣದ ಪುರೋಹಿತನೂ

ಒಂದಲ್ಲಾ ಎರಡು ಸಂಕೇತದ ಶುಭ ನಾಮ ಇರಲೆಂದು
ಈ ಕವಿಯು ನಿಮ್ಮ ಎಲ್ಲರ ಕವಿಯೂ ಆಗಿರಲಿಯೆಂದು

ಸುಕುಮಾರ ಸ್ವಾಮಿಗಳ ಎರಡೂ ಪಾದುಕೆಯ ಮೇಲೆ
ಕಂದನನು ಮಲಗಿಸಿ ಇಟ್ಟು, ಕಣ್ಣೀರಿಟ್ಟು ಬಿಟ್ಟಾದ ಮೇಲೆ

ಬಹು ದೂರದಿಂದ ನಾನೇ ಪುಟ್ಟಿಸಿದಂಥ ಪುಟ್ಟ ಕವಿಯು
ಬೃಹತ್ತಾಗಿ ಆಲದ ಮರವಾಗಿ ಬೆಳೆದು ಇಡೀ ಭುವಿಯು

ಈ ಕವಿಯ ಕಾಮಧೇನು ಕಾವ್ಯದ ಸುಧೆಯನ್ನು ಉಂಡು
ಬಂಟರು ಸವಿಯ ಮೆದ್ದು ಅಮೃತವಾದ ಕವಿಯ ಬಂಡು

ಸ್ವಾಮಿಗಳು ಸನ್ಯಾಸಕೇ ಬಿಟ್ಟು ಬಿಟ್ಟರು ಪೂರ್ಣ ತರ್ಪಣ
ಸಂಸಾರಿಯಾಗಿ ಕೊಟ್ಟರು ಭುವಿಗೆ ಕವಿಯ ಸಾರದ ಅರ್ಪಣ

ಬೆಳೆದು ಬಲವಾಯ್ತು ಕವಿ ಸಂಸಾರ ನೂರು ಸಾವಿರವಾಗಿ
ಆಗಿಹೋಯಿತು ಕೂಡಿ, ಕೂಡಿ ಸಹಸ್ರವು ಕೋಟಿಯೂ ಆಗಿ

ಮುಕ್ಕೋಟಿ ಕನ್ನಡಿಗರು ಆಲಿಸಿದರು ಈ ಕವಿಯು ಪೇಳುವ
ಕಾವ್ಯದ ಪೆರ್ಮೆಯನು ಪರಿಪರಿಯಲಿ ಪಾಡುತ್ತಾ ಪೊಗಳುವ

ಉನ್ನತೋನ್ನತಿಯ ಸವಿ ಕಂಪು ಬೀರುತಲಿಹರು ಧರೆಯೆಲ್ಲಾ
ಉಣ್ಣಿಸುತಿಹರು ರಸಿಕರಿಗೆ ನವರಸದೂಟವನು ಇಳೆಯಲೆಲ್ಲಾ

ಗುರುವಾರ, ಜೂನ್ 17, 2010

ಸುಶೀಲೆಯ ಸೃಷ್ಟಿ ಶೀಲತೆ

ಸುಶೀಲೆಯ ಸೃಷ್ಟಿ ಶೀಲತೆ
ಕೆ. ಆರ್. ಎಸ್. ಮೂರ್ತಿ

ಪಾಪ ಮಾಡುವ ಆಸೆ, ಕೌಪೀನವ ಬಿಸುಟು ಪೀಪಿ ಊದುವ ಆಸೆ
ತಾಪಸಿಯ ಕೆಣಕಿ ಮೈಮೇಲೇರಿ ಕುಣಿದು ತಣಿಯುವ ಬಹುದಾಸೆ

ಮೇನಕೆಯು ನಾನು, ವಿಶ್ವಕೇ ಮಿತ್ರ ಪ್ರಚಂಡ ಸೃಷ್ಟಿ ಕರ್ತನ ವರಿಸಿ
ಶಕುಂತಲೆಯ ವರಿಸಿದ ಧರಣೀಪತಿ ದುಷ್ಯಂತನಿಗೆ ಮರೆವನ್ನು ತರಿಸಿ

ಬಾಲ ಭರತನ ಧರೆಗೆ ಕೊಡುಗೆಯ ಕೊಡಿಸುವ ಮಹದಾಸೆ ಯೋಜನೆ
ಭರತನ ಹೆಸರು ಅಮರವಾಗಿಸುವ ಖಂಡವನು ಬೆಳೆಸುವ ಆಲೋಚನೆ

ನನ್ನ ಬೃಹದಾಸೆಯನು ತಿಳಿದೇ ಜ್ಞಾನಿ ಒಲಿಯುವನೀ ಘೋರ ತಾಪಸಿ
ಇದೇ ತಪಸ್ಸು ನನ್ನದು ಸುರ ವೃಂದವೇ ಕುಣಿಯುತಿಹರು ನಮ್ಮನು ಹರಸಿ

ಮರೆತ ಮಕ್ಕಳು ಅಲ್ಲ

ಮರೆತ ಮಕ್ಕಳು ಅಲ್ಲ
ಕೆ. ಆರ್. ಎಸ್. ಮೂರ್ತಿ

ಯಾರ ಮಕ್ಕಳು ನಾವೆಲ್ಲಾ ಎಂಬುದು ತಿಳಿದಿದೆಯೋ ?
ಯಾರ ನೆನೆದು ಬಾಲಕನು ರಕ್ಕಸ ಪಿತನ ಕೆಣಕಿದನೋ

ನಾರದನು ಮೀಟಿ ತಂಬೂರಿಯ ಯಾರ ಪಾಡುವನೋ
ಕರಿಯು ಕೂಗಿದೊಡನೆ ಒಡನೆ ಯಾರು ಓಡಿ ಬಂದನೋ

ಹರಿಯ ಮಕ್ಕಳು ನಾವೆಂದು ಅಣಗಿಸ ಬಹುದೇನೋ?
ನಮ್ಮನೆಲ್ಲಾ ಕಾಲಲಿ ತುಳಿದು ಕೆಣಕಿಸ ಬಲ್ಲುದೇನೋ?

ನಮ್ಮ ಆರ್ತವ ಕೇಳಿ ಬರುವನೋ ಇಂದಲ್ಲ ಒಂದು ದಿನ
ನಮ್ಮ, ನಿಮ್ಮೆಲ್ಲರನು ಮೇಲೆತ್ತುವನು ತಾನೇ ಜನಾರ್ಧನ

ಜನರ ಸೇವೆಗೆ ಜನಾರ್ಧನ

ಜನರ ಸೇವೆಗೆ ಜನಾರ್ಧನ
ಕೆ. ಆರ್. ಎಸ್. ಮೂರ್ತಿ

ಜನರ ಮನದಲ್ಲಿ ಜನಾರ್ಧನ
ಅವನ ಮನದಲ್ಲಿ ಅವನ ಜನ

ಹೌದಪ್ಪಾ ಹೌದು ಬಡವ ನಾನೂ
ಅವನ ಜನವೇ, ಅವರು, ನೀವೂ

ಪುಟ್ಟಿ ಪೊರೆದವರು ಧೂಳಿನಲಿ
ಪೊರೆವವನೇ ಬಂದಿಹನು ಕೇಳಿ

ಕಾಣುವವನಿವನು ಎಲ್ಲ ಜನರಂತೆ
ಎಂದು ಸುಮ್ಮ ನಿರುವುದು ಉಂಟೆ!

ನಮ್ರತೆಯು ನಡತೆಯಲ್ಲಿ, ನುಡಿಯಲ್ಲಿ
ತುಂಬಿಹುದು ಕರುಣೆಯ ನಿಧಿ ಎದೆಯಲ್ಲಿ

ಕೋಟೆ, ಕೊತ್ತಲದ ವಿಠಲ ನಿನ್ನೆ, ಇಂದು
ನೂರು ಕೋಟಿಗೂ ಆಗುವನು ಮುಂದು

ಸೋಮವಾರ, ಜೂನ್ 14, 2010

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು
ಕೆ. ಆರ್. ಎಸ್. ಮೂರ್ತಿ

ಬೇಡ, ಬೇಡ, ಬೇಡ, ಬೇಡ.
ಬಾರದು, ಆಗ ಬಾರದು, ಆಗದಿರಲಿ,
ಅಕಸ್ಮಾತ್ ಆಗಿಹೋದರೆ, ಎಂದೆಲ್ಲಾ ಯೋಚನೆ.

ಬೇಡನಿಗೆ "ಬೇಡ" ಎಂದು ಬರೆಯಲು,
ಕವಿ ಧಾರೆ ಹರಿಸಲು ಬರುವುದಿಲ್ಲವೇ!

ಅದಕ್ಕಾಗಿ ಏನು ಮಾಡುವ?
ಏನೇನು ಮಾಡಿದರೆ, ಹೇಗೆ ಮಾಡಿದರೆ?
ಜಾಗ್ರತೆ ಅಗ್ರಜನಿಗೆ, ಆಜ್ಞೆ ಅನುಜನಿಗೆ
ರಕ್ಷಣೆಗೆ ಲಕ್ಷ್ಮಣನನ್ನೇ ಇಡಿಸಿದ ಕಾವಲು
ಜಗದ್ರಕ್ಷಕ ದಾಶರಥಿಯ ಮಹಾ ಯೋಜನೆ!

ಇದರ ಜೊತೆಗೆ, ಲಕ್ಷ್ಮಣನ ಜೊತೆ ಅತ್ತಿಗೆಯ
ವಾದ, ಅನ್ಯಥಾ ಅಪವಾದ, ಪತಿವ್ರತಾ ವಾದ.

ಬೇಸತ್ತು ಹಾಕಿದ ಕುಟೀರದ ಸುತ್ತ ಮೂರು ಸುತ್ತು
"ಲಕ್ಷ್ಮಣ ರೇಖೆ" Fence around the humble hut,
non-circumvention protection clause,
ಲಾಯರಿಗಳ ಪರಿ, ಪರಿ ವೈಖರಿಯ ಬರಹ
ಆರೆಂಟು ಹಾಳೆಗಳು, ಬರೆದದ್ದೇ ಬರೆದದ್ದು!
ಎಣಿಸಿದ್ದೆ ಎಣಿಸಿದ್ದು! ಪದಗಳು, ವಾಕ್ಯಗಳು
ಒಂದೊಂದು ಪದಕ್ಕೆ ಹತ್ತು ಡಾಲರು ಶುಲ್ಕ!

ಅದರ ಮೇಲೆ, ಹಾಳೆಗೆ ಒಂದಾದರೆ ಸಾಲದು,
ಪಂಕ್ತಿಗೆ ಒಂದಿರಲಿ ನಮ್ಮ ಕಡೆಯ, ಅವರ ಕಡೆಯ
ಅಧಿಕಾರಿಗಳ ಸಹಿಗಳು, ಕೈ ಸೋಲುವವರೆಗೂ!

ರಾಕ್ಷಸ ರಾಜ್ಯದಲ್ಲಿ, ಲಕ್ಷಾಂತರ ರಾವಣರು
ಕೊರಮರು, ದರೋಡೆ ಕೋರರ, ಕಳ್ಳರ ಸಂತೆಯಲ್ಲಿ
ಮೂರಲ್ಲ ಮುನ್ನೂರು ಹಾಳೆಗಳ ರೇಖೆ ಹಾಕಿಸಿನೋಡಿ!

ನಿಮ್ಮ ಕಂಪೆನಿ ಸೀಕ್ರೆಟ್ ಸೀತಮ್ಮನವರನ್ನು ಸಲೀಸಾಗಿ
ಕೊಳ್ಳೆ ಮಾಡುವ ಕಳ್ಳರು, ಕತ್ತಲೆ, ಬೆಳಕಾದರೇನು!
ಚುರುಕಿನಲ್ಲಿ ಚೈನದಲ್ಲಿ ಮಾತ್ರವಲ್ಲ, ಚೆನ್ನೈನಲ್ಲೂ,
ನಿಮ್ಮ ಬಂಗಾರ ಕದಿಯುವವರು ಬೆಂಗಳೂರಿನಲ್ಲೂ,
ಸತ್ಯದ ಸ್ವರ್ಗ ಸಿಲಿಕಾನ್ ಕಣಿವೆಯಲ್ಲೂ ಇದ್ದಾರೆ.
ಸಿಲ್ಲಿ ಮಾತಂದೆನೆಂದು ಕಲ್ಲು ಹೊಡೆಯ ಬೇಡ,
ನಿಮ್ಮೂರು ಅಮೇರಿಕಾದ ಮೂಲೆ, ಮೂಲೆಗಳಲ್ಲೂ,
ರಾವಣರು ಲೆಕ್ಕವಿಲ್ಲದಷ್ಟು ಇದ್ದಾರೆ ಕಣೋ ಹೇ ಲಕ್ಷ್ಮಣಾ!

ಹೇ ರಾಮಾ! ಹೇ ಲಕ್ಷ್ಮಣಾ! ಎಂದು ಕಳ್ಳ ಕಂಠದಲ್ಲಿ ಕೂಗಿ
ನಿನ್ನ ಸೊತ್ತು ಸೀತೆಯನ್ನು ಎತ್ತಿ ಕೊಂಡು ಲಂಕಾಕ್ಕೆ
ಓಡಿ ಹೋದಾರು ಆಕಾಶರಾಯನಾಗ ಬೇಡ ಮಂಕೇ!

ಅಕ್ಕ ಕೇಳವ್ವ

ಡಾ. ಕೆಆರ್ಎಸ್ ಮೂರ್ತಿ

ಅಕ್ಕ ಕೇಳವ್ವ,
ನೀನೊಂದು ಕನಸ ಕಂಡೆ
ನೀನಂದು ಕನಸ ಕಂಡೆ

ಅಕ್ಕ ಕೇಳವ್ವ,
ನಮ್ಮೂರ ನನಸನು
ಎನ್ನಾರೈ ಕನಸನು

ಅಕ್ಕ ಹೇಳವ್ವ,
ನೀನಂದು ಕಂಡ ಕನಸನು
ನಿನ್ನಮ್ಮನ ಹೊಕ್ಕಳ
ಒಕ್ಕಲಿಗರು ನಾವೆಂದು
ಹೊಕ್ಕಳ ಕುಡಿಯೆಲ್ಲ
ಬಳಸಿ ಸುತ್ತಿದರೂ
ನಿನ್ನ ಮಡಿಲವರೆಂದು
ಕನಸ ಕಂಡಿದ್ದು ನೆನಪು

ಅಕ್ಕ ಕೇಳವ್ವ, ನಮ್ಮೆಲ್ಲರ ಜಗಳವ
ಅಕ್ಕ ಕೇಳವ್ವ, ನಮ್ಮೆಲ್ಲರ ಕದನವ
ನನ್ನ ಎದೆಮೇಲೆ
ನಾ ಧರಿಸಿದ ದಾರ
ನಾ ಆರಾಧಿಸಿದ ಹರ
ನಿನ್ನ ಮುಂದೆಯೇ ಕಾದುವರು

ಅಕ್ಕ ಪೇಳವ್ವ
ನಿನ್ನ ಕೈ ಕಾಲ
ಅತ್ತಿತ್ತ ಎಳೆವರೇ
ಅದು ನನ್ನದು
ಇದು ನಿನ್ನದು
ಛಲದ ಕತ್ತಿಯನೆ
ಮಸೆದು ಕತ್ತರಿಸಿದರೆ
ನೂರು ಚೂರು
ಮಾಡಿಹರೆ ನಿನ್ನ
ನೀ ಮಡಿದರೆ
ಇನ್ನೇನು ಉಳಿದಿದೆ

ಅಕ್ಕ ಏಳವ್ವ
ನಮ್ಮೆಲ್ಲರ ಎಬ್ಬಿಸವ್ವ
ಇವರೆಲ್ಲ ನಿನ್ನ ಹೆಳವಿಯ
ಮಾಡುವ ಮುನ್ನವೇ
ನಮ್ಮೆಲ್ಲರ ಕಪಾಳಕ್ಕೆ
ಬಾರಿಸವ್ವ ಜೋರು ಮಾಡುತ್ತಾ
ನಮ್ಮೆಲ್ಲರ ತಲೆಗೆ
ಬುದ್ದಿಯ ಬರಸವ್ವ

ಕಂಡೂ ಕಾಣದ ಹಕ್ಕಿ

ಕೆ ಆರ್ ಎಸ್ ಮೂರ್ತಿ

ಕಂಡೂ ಕಾಣದ ಹಕ್ಕಿ ಗುಂಡಿಗೆಯ ಒಳ ಹೊಕ್ಕಿ
ಚಿನ್ನದ ಚೊಕ್ಕ ಗೂಡನ್ನೇ ಭರದಿಂದ ಕಟ್ತೀತಲ್ಲೋ!

ಹಕ್ಕೀಯ ಚೆಲುವು ಕಾಣದೇ ನಂಗೇಕೆ ಮನಸಾತು
ನನ್ನ ಹ್ಯಾಗೆ ಎಂತು ಕಂಡೀತೋ ಈ ಚೆಲುವಿನ ಹಕ್ಕಿ

ಇದರ ಮಧುರ ಇಂಚರ ಕೇಳಿದ್ದೇ ನೆನಪಿಲ್ಲ ಮನಕೆ
ನನ್ನ ದನಿಯ ಕೇಳದೆ ನನ್ನಲಿ ಹ್ಯಾಗೆ ಮನಸಾತು

ಚಂಚಲದ ಹಕ್ಕಿ ನನ್ನ ಗುಂಡಿಗೆಯ ಮಂಚವನೇರಿತ್ತು
ಬಿಗಿದಪ್ಪಿ ಬಿಸಿಮಾಡಿ ಮೈಯೆಲ್ಲಾ ಚುಂಬಿಸಿ ಬಿಟ್ಟಿತ್ತು

ರುಂಡ ಮುಂಡ ಮಂಡೆಯ ಧಮನಿ ಉಬ್ಬಿಸಿ ಬಿಟ್ಟಿತ್ತು
ಸಗ್ಗದ ಸುಖವನ್ನು ಹಿಗ್ಗಿದ ಮೈಯೊಳಗೆ ಫಕ್ಕನೆ ತರಿಸಿತ್ತು

ಮುಂದೆಂದೂ ಕಾಣದ ಹಕ್ಕಿಯೊಂದು ನನ್ನ ತನ್ನದಾಗಿಸಿತ್ತು
ತನ್ನ ಇಂಬಿನ ಧಾರೆ ಧರಧರನೆ ಸುರಿಸಿ ಸಗ್ಗದ ತಾನ ಹಾಕಿತ್ತು

ಉಗಾದಿಯ ಉಲ್ಲಾಸ

ಉಗಾದಿಯ ಉಲ್ಲಾಸ

ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು

ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು

ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ

ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು

ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು

ಗುರುವಾರ, ಜೂನ್ 10, 2010

ಎಲ್ಲ ಬಲ್ಲ ಗೂಗಲ್ಲ

ಎಲ್ಲ ಬಲ್ಲ ಗೂಗಲ್ಲ
ಕೆ. ಆರ್. ಎಸ್. ಮೂರ್ತಿ

ಗೂಗಲ್ಲ! ನೀನೆಲ್ಲ ಬಲ್ಲ, ಇನ್ನುಳಿದಿದೇನೂ ಇಲ್ಲ
ಎಲ್ಲರೂ ನಿನ್ನ ಬಲ್ಲವರು ಅಲ್ಲವೇನೋ ಗೂಗಲ್ಲ!

ಆಗಲ್ಲ, ಸಿಗಲಿಲ್ಲ, ಹುಡುಕುವುದಿಲ್ಲ, ಎಂದೆಲ್ಲಾ
ತಡ ಎನ್ನುತ್ತಾ, ಕಾಯಿಸಿ ನೋಯಿಸುವುದಿಲ್ಲ

ಇದ್ದವರಿಗೂ, ಇಲ್ಲದವರಿಗೂ, ಬಲ್ಲಿದರಿಗೂ,
ಮಣ್ಣು, ಕಲ್ಲು ತುಂಬಿರುವ ನನ್ನಂಥ ದಡ್ದರಿಗೂ

ಬರಡು ಬುರುಡೆಯ ಮಂಕುತಿಮ್ಮ ಆದರೂ ನಾನು
ಪ್ರಚಂಡ ಪ್ರಪಂಚ ಜ್ಞಾನ ಗರಡಿ ರಕ್ಷೆಯಾಗುವೆ ನೀನು

ಉತ್ತರಗಳನು ಅರಿಯದೆ ಅರಿಸುವವರು ಅಪಾರ
ಅವರಿಗೆಲ್ಲ ಆಗುವೆ ಆಧಾರ, ವಿಶೇಷ ಜ್ಞಾನ ಕುಬೇರ

ಸಾಕು ಒಂದೆರಡು ಅಕ್ಷರದ ಪದ ಹೇಳಿದರೆ
ಸಾವಿರಗಟ್ಟಲೆ ಉತ್ತರವ ಒದರಿ ಬಿಡುವ ಧೀರ

ತುಸು ಕಾಸಿಲ್ಲದೆ ಕೇಳಿದೆಲ್ಲವ ಸಲ್ಲಿಸುವ ಮಲ್ಲ
ಕಲ್ಪತರು, ಕಾಮಧೇನುವೂ ನೀನೆಮಗೆ ಎಲ್ಲ

ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ
ಎನ್ನುತ್ತ ಪ್ರತಿ ಕ್ಷಣವೂ ಭಜನೆ ಮಾಡುವವರು ಎಲ್ಲ

ಗೋಗೊಲ್ಲನನೂ ಭಜನೆ ಮಾಡುವವರಿಗಿಂತ
ನಿನ್ನ ಗೊಗರೆಯುವವರೇ ಅತಿ ಹೆಚ್ಚು ಭಕ್ತರಂತೆ

ಆಮತ, ಈಮತ, ಆಜಾತಿ, ಈಜಾತಿ, ಆದರೇನು
ಆ ಊರು, ಈ ಊರು, ದೇಶ ಯಾವುದಾದರೇನು

ಆವಸ್ತು, ಈವಸ್ತು, ಅವತ್ತು, ಇವತ್ತು, ಆಹೊತ್ತು
ಕೇಳಿ ಕೇಳಿದವರಿಗೆಲ್ಲ ಅಭಯ ಹಸ್ತದ ತಥಾಸ್ತು

ಸೋಮವಾರ, ಮೇ 31, 2010

Illusions of Reality

Illusions of Reality

KRS Murthy

Reflections of the darkness
Soothing melodies in deaf ears
Anticipation of yesterday
Memories of to-morrow
Hard to forget realities of dreams
Mourning of my own death
Gravitational pull of the sky
Hunger in a full stomach
Warmth of my own hug
Rain fall from the oceans to the sky
Fear of my own birth
Celebrations of the pleasures of death
Hatred of falling in love
Eagerness of the lovers' separation
Contentment in emptiness
The bliss of being alone
Being alone in the whole universe
The one I conceived from my own non-existence
Believable illusions of reality!

ರತಿ ರಾಸ ರಾಗ

ರತಿ ರಾಸ ರಾಗ
ಕೆ. ಆರ್. ಎಸ್. ಮೂರ್ತಿ
http://drkrsmurthy.blogspot.com/2010/05/blog-post_31.html
ಕಾಮನ ಬಿಲ್ಲಿನ ಕಮಾನಿನ ವಿನ್ಯಾಸದ ಕಪ್ಪು ಕಣ್ಣಿನ ಬಿಂಕದ ವೈಯಾರಿ ರೂಪಸಿ
ತೆಳು ತನುವಿನ, ಬಿಳಿ ಬಣ್ಣದ, ನಯ ನಡುವಿನ, ತುಂಟ ತುಟಿಯವಳೇ ಊರ್ವಶಿ

ಇತ್ತ ಬಾ, ಹತ್ತು ಬಾ, ಕೆರಳಿದ ಕುದುರೆ ಚಿಮ್ಮುತಿದೆ, ನರಳುತಿದೆ, ಅರಳಿದ ಬಾಳೆ
ಸಾವಿರಾರು ಯೋಜನದ ಸವಾರಿಗೆ ನೆಗೆದು ಮಂಡಿಸು, ಕುಣಿದು ಕುಪ್ಪಳಿಸು ಬಾಲೆ

ಯುವಕರು ನಾವು, ತವಕವೇಕೆ ವರುಷಗಳು ಅರವತ್ತು, ಮತ್ತು ನಲವತ್ತೇ ಸಾಗಲಿ
ರಸಿಕರು ನಾವು, ರಾಸ ರಾಗ ಆಲಾಪದ ಕಾಮಾರ್ಚನೆಯು ಜಾವ, ಜಾವಕೆ ಆಗಲಿ

ಅರ್ಚನೆ, ಭಜನೆ, ಧೂಪಾರತಿ, ಮಂಗಳಾರತಿ, ಮಹಾಮಂಗಳಾರತಿ, ತೀರ್ಥ, ಪ್ರಸಾದ
ಜಾವಕ್ಕೆ ಒಂದೋ, ಎರಡೋ, ಮತ್ತೊಂದೋ ಸಾವಧಾನದ ನಗ್ನ ಸುಲಗ್ನ ಪೂರ್ಣ ಹಸಾದ

ಸರ್ಪಭೂಷಣ ನಾನು, ಕಲ್ಯಾಣಿ ನೀನು; ನೀನೇ ಸರಸತಿ, ನಾನೇ ಅಮರ ಜನಕ ಅಜನು;
ಸರ್ಪ, ಶೇಷಾದ್ರಿ ಶಯನ ಲೋಲ, ಸಕಲ ಸುಂದರ ಕಮಲಾಕ್ಷಿ ಲಕ್ಷ್ಮಿ ನಾನು ನೀನಲ್ಲವೇನು?

ಮನಸಿಜ ಮದನ, ಮೋಹನ ಮಹಾ ನರನ ಸುತ, ಕುಸುಮ ಶರ, ಸಕಲ ವರ್ಣ ಬಿಲ್ಲು ಗಾರ
ತ್ರಿಲೋಕ ಸುಂದರಿ, ರತಿ ರಾಗ ಚತುರೆ, ಕಾಮ ರುಚಿ ಪೂರ್ಣೆ, ಆಗಸ ರಾಜ ವದನೆ ಬಾರಾ

ನನ್ನಲ್ಲಿ ನೀನು, ನಿನ್ನೊಳಗೆ ನಾನು ಸೇರಿಹೊದರೆ ತಾನೇ ಇಹವು ಮೋಹದ ಜಾಲದಲ್ಲಿ ತಲ್ಲೀನ
ತಡವೇಕೆ, ಹಿಂಜರಿಯುವುದೇಕೆ, ನಸು ಕೂಡ ನಾಚಿಕೆಯೇಕೆ? ರಮಿಸು ಬಾ, ತಣಿಸು ಬಾ ನನ್ನ

ಭಾನುವಾರ, ಮೇ 30, 2010

ನಾನೆಲ್ಲರಿಗೂ ಬೇರೆ

ನಾನೆಲ್ಲರಿಗೂ ಬೇರೆ
ಕೆ. ಆರ್. ಎಸ್. ಮೂರ್ತಿ

ಬರೀ ಬರಡು ಬರೆಯುವವನು ನಾನಲ್ಲ
ಬರೀ ಬೋರ್ ಕೊರೆಯುವವನೂ ಅಲ್ಲ

ಸರ,ಸರ ಸರಾಗದಲಿ ಸುರಿಮಳೆಯು
ಸುರಿದು, ಹಿಂದಿನವರೆಲ್ಲರ ಕೊಚ್ಚೆಯು

ಹರಿದು ಚರಂಡಿಗೆ ಅಟ್ಟಿ, ಕೊಚ್ಚಿ ಹೋಗಿ
ಹೊಸ ನೀರು ಬಯಲಲೆಲ್ಲ ಹರಡಿ ಹೋಗಿ

ಹೊಸ ಹುರುಪಿನ ತಂಗಾಳಿಯು ಬೀಸುತಿರೆ
ಮಣ್ಣಿನ ಕಂಪು ಮನಸಿಗೆ ತಂಪು ಸೂಸುತಿರೆ

ಸರಿ ರಾಗ ಗಾಳಿಯಲಿ, ಅನುರಾಗ ಮನದಲ್ಲಿ
ಹಸೆಯುವೆನು ಹೊಸ ದಿಕ್ಕಿನ ಲೇಖನಿಯಲಿ

ಶುಕ್ರವಾರ, ಮೇ 28, 2010

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ
ಕೆ. ಆರ್. ಎಸ್. ಮೂರ್ತಿ

ಬಿಟ್ಟು ಬಿಡು ಕಿಟ್ಟಪ್ಪ ನಿನ್ನ ಕೆಟ್ಟ ಬುಧ್ಧಿ
ಕೆಟ್ಟ ಹುಡುಗೀರ ಸಹವಾಸ ಕಡಿಮೆ ಮಾಡು

ನಿನ್ನ ಕೊಳಲು ಊದಿ ಕೊಂಡು ಮರದ ಕೆಳಗೆ
ಸುಮ್ಕೆ ಕೂತ್ಕೋ ನೆರಳಿನಲ್ಲಿ ಕಾಲು ಚಾಚಿ

ದಿನಯೆಲ್ಲಾ ದನ ಕಾಯ್ಕೊಂಡು ಗೋಪಾಲ
ಬಾಯಲ್ಲಿ ಬೆಣ್ಣೆ ತುಂಬಿ ಕೊಂಡು ನೀ ಕಳ್ಳ

ನಿನ್ನ ಹುಡುಗೀರನ್ನೆಲ್ಲಾ ನಾನು ನೋಡ್ಕಂಡು
ದಿನ, ರಾತ್ರಿ ಸ್ವರ್ಗದ ಸುಖ ತೋರಿಸ್ತೀನಿ

ಅಷ್ಟೊಂದು ಹುಡುಗೀರ ಸಹವಾಸದಿಂದ
ನಿನಗೆ ಯಾವಾಗಲೂ ಸುಸ್ತು, ಏದುಸಿರು

ನಿನ್ನ ಬಾಯಲ್ಲಿ ತುತ್ತೂರಿ ಓದಕ್ಕೆ ಸಾಗದು
ಹುಡುಗೀರಿಗೆ ನಿನ್ನಿಂದ ಸುಖ ಆಗಲಾರದು

ಬಂದ ಸುಂದರಿಯರನ್ನೆಲ್ಲಾ ನನಗೆ ಕೊಟ್ಟರೆ
ಕೇಳಪ್ಪ ಎಷ್ಟು ಬೇಕಾದರೂ ಬೆಣ್ಣೆ, ಸಕ್ಕರೆ!

ಕಾಲ ರಾಯ ಕುಂಟುತ್ತಾ ಅವ್ನೆ

ಕಾಲ ರಾಯ ಕುಂಟುತ್ತಾ ಅವ್ನೆ
ಕೆ. ಆರ್. ಎಸ್. ಮೂರ್ತಿ

ನೋಡ್ರಪ್ಪಾ ನೋಡ್ರೀ! ಕುಂಟ್ಟುತ್ತ ಬರ್ತವ್ನೆ! ಕಾಲ ರಾಯಾನೋ
ಏನಾಯ್ತಪ್ಪೋ! ಅವನ್ಗೆ? ಯಾವಾಗ್ಲೂ ಓಡ್ತಾ ಇದ್ದೊನೂ!

ನನ್ಯಾಕ್ಲ ಕುಂಟ ಅಂತೀ, ದರಿದ್ರವನು ನೀನು ಕಣ್ಲಾ?
ನಿಮ್ಗೆಲ್ಲಾರ್ಗೆ ಕಣೋ ಬಡಿದಿರೋದು ದರಿದ್ರದ ಶಕುನ!

ದ್ಯಾವಲೋಕದಲ್ಲಿ ಏಲಾರ್ಗೂ ಬಂದ್ಬುಟ್ಟೈಯ್ತೋ,
ಏಳುರಾಟದ ಶನಿ ಕಾಟ, ಪಟ್ಟಾಗಿ ಬಡಿದು ಬಿಟ್ಟೈಯ್ತೋ

ರಾಹು, ಕೇತು ಇಬ್ರೂ ಒಂದೇ ಮನೇಲಿ ಸೇರಿ ಬಿಟ್ಟವ್ರೋ!
ನಮ್ ಸ್ವರ್ಗದ ದ್ಯಾವ್ರಿಗೆಲ್ಲಾ ಡಬ್ಬಲ್ ತಾಪತ್ರಯಾನೋ

ನಾರಣಪ್ಪನ ಹೆಂಡ್ರು ಲಚ್ಮಿ ಕೈಲಿ ಬಿಡಿಗಾಸೂ ಇಲ್ಲದೆ ಆಗಿಹೋಗಿ
ವೈಕುಂಠ ಬಿಟ್ಟು, ಎಲ್ಲಾರ್ನೂ ಕೈ ನೀಡಿ ಬಿಕ್ಷೆ ಬೇಡ್ತಾ ಅವ್ಳೋ

ಬ್ರಮ್ಮನ ಹೆಂಡ್ರು, ವಾಣಿಯಮ್ಮ ಮಾತಿಲ್ಲದೆ ಮೂಕಿ ಆಗಿ ಬಿಟ್ಟವ್ಳೋ
ಅವ್ಳ ವೀಣೆಯ ಬುರುಡೆ ಒಡಕಾಗಿ, ತಂತಿಯೆಲ್ಲಾ ಕಿತ್ತೋಗೈತೋ

ಬ್ರಮ್ಮ ಲೋಕದಲ್ಲಿ ಸಂತಾನವೇ ಇಲ್ಲದೆ ಮಕ್ಕಳೇ ಇಲ್ಲ ಕಣೋ
ಹುಟ್ಟಿಸೋ ಗಂಡಸು, ಬೊಮ್ಮಣ್ಣ ಷಂಡ ಆಗಿ ಹೋಗಿ ಮುದುರಿ ಕೊಂಡವ್ನೋ

ಅನ್ನಪೂರ್ಣಮ್ಮನ ಅಡಿಗೆಯೆಲ್ಲಾ ಹಳಸು ಕೊಂಡು ಹೋಗಿ ಬಿಟ್ಟೈಯ್ತೋ
ಅವ್ಳ ಅಡಿಗೆ ಮನೆಯ ಪಾತ್ರೆಗಳೆಲ್ಲಾ ಖಾಲಿ ಆಗಿ ಒಲೆಯೆಲ್ಲಾ ಒಣಗೈತೋ

ಅವಳ್ಗೆನೇ ಹಸಿವು ಹೆಚ್ಚಾಗಿ, "ಭವತಿ ಭಿಕ್ಷಾಂದೇಹಿ" ಬೇಡ್ತಾಳಂತೆ
ಹೊತ್ತಾರೆಯಿಂದ ರಾತ್ರಿ ವರೆಗೂ ಮನೆ, ಮನೆ ಮುಂದೆ ಬೇಡ್ಕಂಡು ಓಗ್ತಾಳಂತೆ

ನಮೂರ ಸಾಹುಕಾರ ಕುಬೇರನ ಪರಿಸ್ತಿಥಿ ಕೇಳಿದ್ರೇನೆ ಕಣ್ಣೀರಿ ಬರ್ತದೆ ಕಣೋ
ಭಂಡಾರ ಖಾಲಿ ಆಗಿ, ನರಕದಿಂದ ಸಾವಿರಾರು ಕೋಟಿ ಸಾಲ ಮಾಡ್ಕಂಡು ಬಿಟ್ಟವ್ನೋ

ಪಾರ್ವತಮ್ಮ, ನಮ್ಮಪ್ಪ ಶಿವನ ಮನೆ ಬಗ್ಗೆ ಏನು ಆಗೈತೆ ಗೊತ್ತೇನ್ರೋ?
ಇಬ್ರೂ ಹಿಮಾಲಯದಲ್ಲಿದ್ದ ಕೈಲಾಸವನ್ನು ಪರ್ವತವನ್ನು ಭೋಗ್ಯಕ್ಕೆ ಹಾಕವ್ರೋ

ಕೈಲಾಸದ ಹಿಮ ಎಲ್ಲ ಬತ್ತಿಹೋಗಿ, ಮರಳು ಗಾಡು, ಒಣ ಪ್ರದೇಶ ಆಗೈಯ್ತೋ
ಗಂಗಮ್ಮನಿಗೆ ಬಾಯಾರಿ, ಒಂದು ಹನಿ ಕೂಡ ಕುಡಿಯಕ್ಕೆ ನೀರಿಲ್ದೆ, ಬಡವಾಗವ್ಳೊ

ಗುಂಡಪ್ಪ, ಡೊಳ್ಳು ಹೊಟ್ಟೆ ಗಣೇಶನಿಗೆ ಒಂದು ತುತ್ತು ಊಟ ಕೂಡಾನೂ ಇಲ್ದೇ ಉಪಾಸಾನ್ರೋ
ಹೊಟ್ಟೆ ಎಲ್ಲಾ ಕರಗಿ, ಸಣಕಲು ಕಡ್ಡಿ ಆಗಿ, ಅವನ ಹೊಟ್ಟೆ ಸುತ್ತುಕೊಂಡಿದ್ದ ಹಾವು ಓಡೋಯ್ತಂತೋ

ನಮ್ಮ ಕಿಟ್ಟಪ್ಪನ ಕೊಳಲು ಚುಲ್ಟಾ ಆಗಿ ಹೋಗಿ, ಅದಕ್ಕೆ ಸ್ವಲ್ಪಾನೂ ಉಸಿರೇ ಇಲ್ಲಾಂತ
ಸ್ವರ್ಗದ ಹುಡ್ಗೀರ್ಗೆಲ್ಲಾ ಬೇಸರ ಆಗಿ, ಅವನನ್ನು ಬಿಟ್ಟು, ಕಾಡಿನಲ್ಲಿ ಸನ್ಯಾಸಿನಿ ಆಗಿಬಿಟ್ಟವ್ರೆ

ನರಕದೋರು ದೊಡ್ಡ ರಾಕ್ಷಸ ಸೈನ್ಯ ನನ್ನನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಬಂದು ಬಿಟ್ಟ್ರು
ನನ್ನ ಎರಡೂ ಕಾಲಿಗೆ ಪಟಪಟಾಂತ ಚೆನ್ನಾಗಿ ಹೊಡೆದು ಚೆಚ್ಚಿ ಕುಂಟನ್ನ ಮಾಡ್ಬಿಟ್ರು

ನಿಮ್ಗೆಲ್ಲಾ ಗೊತ್ತಿರೋ ಹಾಗೆ ಯಾವಾಗಲೂ ಜೋರಾಗಿ ಓಡುತಿದ್ದವ್ನು ಪ್ರಮಾಣ, ನನ್ನ ಆಣೆ
ಕಲಿಗಾಲಾನೇ ಕೆಟ್ಟದ್ದು ಅಂದುಕೊಂಡಿದ್ದೆ ಕಣ್ರೋ, ಈಗ ಇದ್ಯಾವ ಕಾಲ ಬಂದಿದ್ಯೋ ನಾ ಕಾಣೆ!

ಬುಧವಾರ, ಮೇ 26, 2010

ಸುಳ್ಳೇ ಸತ್ಯ

ಸುಳ್ಳೇ ಸತ್ಯ
ಕೆ. ಆರ್. ಎಸ್. ಮೂರ್ತಿ

ಅದು ಸುಳ್ಳು, ಇದು ಸುಳ್ಳು
ನಾ ಸುಳ್ಳು, ನೀ ಸುಳ್ಳು
ನಿನ್ನೆ, ಮೊನ್ನೆ, ನಾಳೆಯೆಲ್ಲ ಸುಳ್ಳು
ಕಂಡದ್ದು ಸುಳ್ಳು, ಅಂದುಕೊಂಡದ್ದು ಸುಳ್ಳು
ಮುಟ್ಟಿದ್ದು ಸುಳ್ಳು, ಮೆಟ್ಟಿದ್ದು ಸುಳ್ಳು
ಅನಿಸಿದ್ದು ಸುಳ್ಳು, ಅನುಭವಿಸಿದ್ದೇ ಸುಳ್ಳು
ಕಲಿತದ್ದು ಸುಳ್ಳು, ಅರಿತಿದ್ದು ಸುಳ್ಳು
ಒಲವೆಲ್ಲ ಸುಳ್ಳು, ನಲಿವೆಲ್ಲ ಸುಳ್ಳು
ಬಾಳೆಲ್ಲ ಸುಳ್ಳು, ಬಳಗವೆಲ್ಲ ಸುಳ್ಳು
ಹುಟ್ಟಿದ್ದು, ಇರುವುದು, ಸಾಯುವುದು ಸುಳ್ಳು

ಇದೆ ಸತ್ಯ, ಇದೊಂದೆ ಸತ್ಯ

ತಿರುಗು ಬಾಣ

ಸಾಹಿತ್ಯ ಪ್ರಕಾರದ ಹೊಸ ಪ್ರಯೋಗ:

ಕನ್ನಡ ಸಾಹಿತ್ಯದಲ್ಲಿ, ಭಾರತದ ಸೋದರ ಭಾಷೆಗಳಲ್ಲಿ, ಪ್ರಪಂಚದ ಮಿಕ್ಕೆಲ್ಲ ಬಾಷೆಗಳಲ್ಲಿಕೂಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಂದು ದಿಕ್ಕಿನಲ್ಲಿ ಮಾತ್ರ ಸಾಹಿತ್ಯ ನದಿಯು ಹರಿಯುತ್ತಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ, ಲೇಖಕನು ಓದುಗರೊಂದಿಗೆ ತನ್ನ ಸೃಷ್ಠಿಯ ಪಾತ್ರಗಳ ಮೂಲಕವೂ, ಸನ್ನಿವೇಶಗಳ ಮೂಲಕವೂ, ಕೆಲವು ಸಾರಿ ನೇರವಾಗಿಯೂ ಮಾತನಾಡುತ್ತಾನೆ. ಕವನ, ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ ಮೊದಲಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಸಾಹಿತ್ಯನದಿಯ ದಿಕ್ಕನ್ನು ಓದುಗರ ಕಡೆಯಿಂದ ಲೇಖಕನ ದಿಕ್ಕಿಗೆ ಹರಿಸುವ ಪ್ರಯೋಗವಿದು:

‘ಲೇಖಕನಿಗೇ ತಿರುವಾದ ಸಾಹಿತ್ಯ ಪ್ರಕಾರವು ಪ್ರಪಂಚದಲ್ಲೇ ‘ದಿಕ್‌ ಪರಿವರ್ತಕ’ (Paradigm Shift); ಧೀಮಂತ ವಿಶ್ವಾಮಿತ್ರ ಸೃಷ್ಟಿ.

ಇದನ್ನು ಈಗಿರುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಉಪಯೋಗಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದು.

ಈ ಕಾರ್ಯಕ್ರಮದ ಕೇಂದ್ರ ಪಾತ್ರ: ಕರ್ಣ

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಮುನ್ನುಡಿ - ಕಾರ್ಯಕ್ರಮ ಪರಿಚಯ

೧. "ತಿರುಗು ಬಾಣ" ಸಾಹಿತ್ಯ ಪ್ರಕಾರದ ಕಿರುಪರಿಚಯ

೨ ಕರ್ಣ - ವ್ಯಾಸ ಕಾರ್ಯಕ್ರಮದ ಕೇಂದ್ರ ವಸ್ತುವಿನ ಪರಿಚಯ

೩ ಆದಿನದ ಕಾರ್ಯಕ್ರಮದ ಪರಿಮಿತಿಯ ಮಂಡನೆ

೪ ಪಾತ್ರಗಳ, ಪಾತ್ರಧಾರಿಗಳ ಹೆಸರುಗಳು

೫ ಪಾತ್ರಗಳ, ರಂಗವಿನ್ಯಾಸದ ಸೂಚನೆ

೬ ಧಿಡೀರ್ ಪಾತ್ರಧಾರಣೆಯ ಅಪೇಕ್ಷೆ ಇರುವ ಪ್ರೇಕ್ಷಕರಿಗೆ ಸೂಚನೆಗಳು

೭. ಪರದೆ ಕಳಚಿದಂತೆ ರಂಗದ ಮೇಲಿನ ಸನ್ನಿವೇಷದ ಕಿರುಪರಿಚಯ

ಮೊದಲ ಹಂತ:

ರಂಗದ ಮೇಲೆ: ಅರ್ಜುನ, ಕೃಷ್ಣ, ಕರ್ಣ

(ಕರ್ಣನು ರಣರಂಗದಲ್ಲಿ ರಕ್ತದ ಹೊಳೆಯ ಕೆಸರಿನಲ್ಲಿ ಹೂತು ಹೋಗಿರುವ ತನ್ನ ರಥವನ್ನು ಮೇಲೆತ್ತಲು, ತನ್ನ ಬಿಲ್ಲು, ಬತ್ತಳಿಕೆಗಳನ್ನು ಕೆಳಗಿಟ್ಟು, ರಥದ ಚಕ್ರಕ್ಕೆ ಕೈಯಿಟ್ಟು, ಭುಜವಿಕ್ಕಿ ಸೆಣೆದಾಡುತ್ತಿದ್ದಾನೆ.)



Krishna tells Arjuna to shoot the arrow and kill Karna, even though Karna is repairing the wheels of the chariot.



ಕೃಷ್ಣ: ಅರ್ಜುನ! ಇದೇ ಸದವಕಾಶ, ಹೂಡು ನಿನ್ನ ಬಾಣವನ್ನು. ಕರ್ಣನಿಗೆ ಗುರಿಯಿಟ್ಟು ನೇರವಾಗಿ ಹೊಡೆ ಬೇಗ.



Arjuna hesitates to follow Krishna's instructions.



ಅರ್ಜುನ: ಕೃಷ್ಣಾ! ಹೇ ಭಗವನ್! ನ್ಯಾಯವನ್ನು ನಮ್ಮಂಥ ಹುಲುಮಾನವರಿಗೆ ತಿಳಿಯ ಹೇಳಬೇಕಾದವನು ನೀನು. ಅದುಹೇಗೆ ನಾನು ರಥವನ್ನು ಬಿಟ್ಟು, ಸಾರಥಿಯ ಸಹಾಯವೂ ಇಲ್ಲದೆ, ತಾನೊಬ್ಬನೇ ಕೆಸರಿನಲ್ಲಿ ತೋಳು-ಭುಜಗಳನ್ನು ಕೊಟ್ಟು ಮಂಡಿಯೂರಿರುವ ಕರ್ಣನ ಕಡೆಗೆ, ಸೂತ ಪುತ್ರನಾದವನ ಕಡೆಗೆ, ಮಹಾಕ್ಷತ್ರಿಯನಾದ, ಅಸಮಾನ ಬಿಲ್ಲುಗಾರನಾದ ನಾನು ಬಾಣವನ್ನು ಬೀರುವುದು ಅದು ಹೇಗೆ ಸಾಧ್ಯ, ಅದಾವ ನ್ಯಾಯ, ಅದಾವ ಶೌರ್ಯ?



Krishna persuades Arjuna to shoot saying that it is an opportune time and to exploit it.



ಕೃಷ್ಣ: ಹೇ ನರೋತ್ತಮ! ಕರ್ಣನು ಜಗತ್ತಿನಲ್ಲೇ ಮಹಾಶೂರ, ಮಹಾಬಿಲ್ಲುಗಾರ. ಆದರೆ, ಅವನು ನಿನಗೂ, ದ್ರೌಪದಿಗೂ, ಪಾಂಡವರೆಲ್ಲರಿಗೂ ಮಾಡಿರುವ ಅನ್ಯಾಯಗಳನ್ನು ನೀನೇ ಯೋಚಿಸಿನೋಡು. ಇವನನ್ನು ಕೊಲ್ಲಲು ಈ ಕ್ಷಣಕ್ಕಿಂತ ಮುಂದೆ ಇನ್ನಾವ ಸಮಯವೂ ಸರಿಯಲ್ಲ. ಇದೇ ಮಹೂರ್ತ. ಬಿಡು ಬಾಣವನ್ನು. ತಡಮಾಡಬೇಡ!



Arjuna shoots the arrow to Karna.



ಅರ್ಜುನ: ನಿನ್ನ ಮಾತನ್ನು ಕೇಳಿ ನಾನು ಈ ಬಾಣವನ್ನು ಬಿಡುತ್ತಿದ್ದೇನೆ.



Karna collapses and starts his dialogue complaining and blaming Krishna and Arjuna for their illegal tactics.



ಕರ್ಣ: ಹಾ! ಇದೇನು ಆರ್ಜುನ, ಬಿಲ್ಲುಬಾಣವನ್ನು ಕೆಳಗಿಟ್ಟು, ಕೈಗಳನ್ನು ರಣರಂಗದಲ್ಲಿ ಸುರಿಯುತ್ತಿರುವ ರಕ್ತದ ಕೆಸರಿನಿಂದ ನನ್ನ ರಥವನ್ನು ಮೇಲೆತ್ತುವ ಸಮಯದಲ್ಲಿ ಹೇಡಿಯಂತೆ, ಕ್ಷತ್ರಿಯ ಧರ್ಮವನ್ನು ಮರೆತು, ಬಾಣಹೂಡಿ ಕೊಂದೆಯಲ್ಲೋ ನರಾಧಮ!

ಹೇ ಕೃಷ್ಣ! ಜೀವನ ಪೂರ್ತಿ ದುರಾದೃಷ್ಟ ಕಾಡಿದ ನನಗೆ ಮರಣ ಸಮಯದಲ್ಲೂ ಬಹಳ ಮೋಸವಾಗಿಹೊಯಿತಲ್ಲಾ. ಏಲ್ಲವನ್ನೂ ತಿಳಿದವನಂತೆ ನಾಟಕವಾಡುವ ನೀನು ಅರ್ಜುನನಿಗೆ ಅನ್ಯಾಯದ ಪಾಠಹೇಳಿ ನನ್ನನ್ನು ಕೊಲ್ಲಿಸಿದೆಯಲ್ಲಾ.



Arjuna responds by mentioning Karna's numerous mistakes through out Mahabharatha.



ಅರ್ಜುನ: ಕರ್ಣ! ನ್ಯಾಯದ ಭಾಷಣ ಕೊಡುವುದನ್ನು ಯಾವಾಗ ಕಲಿತೆ? ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ನೀನೂ, ದುರ್ಯೋಧನನೂ, ದುಶ್ಯಾಸನನೂ, ಸಜ್ಜನತೆ, ಪರಸ್ತ್ರೀ ಗೌರವಗಳನ್ನು ಕಸದಬುಟ್ಟಿಗೆ ಎಸೆದು, ದ್ರೌಪದಿಯನ್ನು ನಿನ್ನ ತೊಡೆಯಮೇಲೆ ಕೂರಿಸಿಕೊಳ್ಳಲು ನೀಚ ಮನೋಭಾವದಿಂದ ಮೆರೆದ ನಿನಗೆ ಇದೇನು ಸಾಯುವಕಾಲದಲ್ಲಿ ನ್ಯಾಯ ನೀತಿಗಳ ಅರಿವು ಆಗುತ್ತಿದೆಯೇನು ?



Krishna responds with similar statements and blames his 'blind' support to Duryodhana.



ಕೃಷ್ಣ: ಹುಟ್ಟಿನಿಂದ ಸೂತಪುತ್ರನೆಂದು ಕೊರಗುತ್ತಿದ್ದವನು, ಒಂದು ಸಣ್ಣ ರಾಜ್ಯದ ಲಂಚ ಕೊಟ್ಟ ಮಾತ್ರಕ್ಕೆ, ದುರ್ಯೋಧನನನ್ನು ಪ್ರಶಂಸೆ ಮಾಡುತ್ತಾ, ವಿವೇಚನೆಯನ್ನು ಕೂಡ ಮಾಡದೆ, ಅವನಿಗೆ ಸಾಸಿವೆ ಕಾಳಿನಷ್ಟೂ ಬುಧ್ಧಿ ಮಾತು ಹೇಳದೆ, ಕುರುಡನಂತೆ ಜೀವನವನ್ನೆಲ್ಲಾ ಕಳೆದ ನೀನು ನ್ಯಾಯ ವಾದಿಯಂತೆ ನಾಟಕ ಮಾಡುತ್ತಿರುವುದು ನೋಡಿದರೆ ನನಗೆ ನಗೆಯು ಬರುತ್ತಿದೆ.



Karna defends his master Duryodhana and defends his actions.



ಕರ್ಣ: ನನ್ನ ಆತ್ಮಗೌರವಕ್ಕೇ ಕುಂದು ಬಂದಹಾಗೆ ಮಾಡಿಬಿಟ್ಟ ನೀನೂ, ದ್ರೋಣರೂ, ಆ ಮುದುಕ ಭೀಷ್ಮರೂ ನನ್ನ ಶಕ್ತಿ ಸಾಮರ್ಥ್ಯಗಳಿಗೆ ಬೆಲೆಕೊಡದೆ, ಸೂತ ಪುತ್ರನೆಂದು ಹೀಯಾಳಿಸಿಕೊಳ್ಳುತ್ತಿರುವಾಗ, ವಿಶಾಲ ಮನೋಭಾವದ ನಿಜವಾದ ಗುಣವನ್ನು ಕಂಡ, ನನ್ನ ಆಪ್ತ ಸ್ನೇಹಿತ ದುರ್ಯೋಧನನ ಬಗ್ಗೆ ನಿನಗೇನು ಗೊತ್ತು? ಕಷ್ಟದಲ್ಲಿ ಒದಗುವನೇ ನಿಜವಾದ ಸ್ನೇಹಿತ. ನನ್ನ ಆಪ್ತಮಿತ್ರನ ಬಗ್ಗೆ ಇಂಥಾ ಮಾತುಗಳನ್ನಾಡಿದ್ದಕ್ಕೆ, ಇದೀಗಲೆ ಎದ್ದು ಬಂದು ನಿನ್ನ ಕತ್ತು ಹಿಚುಕಿಬಿಟ್ಟೇನು, ಎಚ್ಚರಿಕೆ!

ಪ್ರವೇಶ: ದುರ್ಯೋಧನ



Duryodhana blames Krishna and cries for Karna's collapse.



ದುರ್ಯೋಧನ: ಕರ್ಣಾ! ಜಗತ್ತಿನಲ್ಲೇ ಅದ್ವಿತೀಯ ಬಿಲ್ಲುಗಾರನಾದ ನಿನ್ನಂತಹಾ ಮಹಾವೀರನಿಗೆ ಇದೆಂಥಾ ಅನ್ಯಾಯವಾಯಿತು! ಯುಧ್ಧದಲ್ಲಿ ನಿನ್ನನ್ನು ಅಸ್ತ್ರವಿದ್ಯೆಯಲ್ಲಿ, ಧರ್ಮ ಯುಧ್ಧದಲ್ಲಿ ಕೊಲ್ಲಲು ಅಸಾಧ್ಯವೆಂದು, ಈ ಕುತಂತ್ರಿ ಕೃಷ್ಣನೂ, ಹೆಂಗೆಳೆಯರೊಡನೆ ಸೀರೆ ಒಡವೆಗಳನ್ನು ತೊಟ್ಟು ಭರತನಾಟ್ಯವನ್ನು ಮಾಡುವುದನ್ನು ಬಿಟ್ಟು, ರಣರಂಗದ ನಿಯಮಗಳನ್ನು ಅರಿಯದೆ ಅರ್ಜುನನು ಕಳ್ಳ ಕೃಷ್ಣನ ಹಿಂದೆ ಅಡಗಿಕೊಂಡು ಬಾಣವನ್ನು ನಿಸ್ಸಹಾಯಕನಾದ ನಿನ್ನೆಡೆಗೆ ಬಿಟ್ಟು ಕೊಂದಿರುವುದು ಪಾಂಡವ ವಂಶಕ್ಕೇ ಅವಮಾನದ ಸಂಗತಿ.



Krishna trickily mentions Vyaasa as the real architect of the roles in Mahabharatha.



ಕೃಷ್ಣ: ದುರ್ಯೋಧನ! ಸಿಕ್ಕಸಿಕ್ಕವರನ್ನೆಲ್ಲಾ ಸುಮ್ಮಸುಮ್ಮನೆ ಬೈಯುವುದು ತರವಲ್ಲ. ಈ ಮಹಾಭಾರತದ ಕವಿಯ ಸೃಷ್ಟಿಯಲ್ಲವೇ ನಾವೆಲ್ಲರೂ? ನೀನೂ, ಕರ್ಣನೂ ಪ್ರಲಾಪಿಸುತ್ತಿರುವ ವಿಷಯಗಳನ್ನು ನೇರವಾಗಿ ವೇದವ್ಯಾಸರಿಗೇ ನೀನು ಏಕೆ ಕೇಳಬಾರದು?



Duryodhana summons Vyaasa with uncontrollable anger.



ದುರ್ಯೋಧನ: ಕೃಷ್ಣ! ನಿನ್ನನ್ನು ನಾನು ಯಾವಾಗಲೂ ಗೌರವಿಸಿದ್ದೇ ಇಲ್ಲ! ಈ ನಿನ್ನ ಮಾತಿಗೊಂದು ಸಲ ಬೆಲೆ ಕೊಟ್ಟು ನೋಡುವೆ. ಯಾರಲ್ಲಿ! ಈದೀಗಲೇ ಕಾಡಿನಲ್ಲಿ ಕಣ್ಮುಚ್ಚಿ ಯಾವಾಗಲೂ ತಪಸ್ಸುಮಾಡುವ ಅ ವ್ಯಾಸರನ್ನೇ ಹಿಡಿದು ಎಳೆದು ತನ್ನಿ. ತಡಮಾಡಬೇಡಿ. ನನ್ನ ಜೀವವೇ ಎನ್ನುವಹಾಗಿದ್ದ ಮಹಾವೀರ ಕರ್ಣನಿಗೆ ಆದ ಅನ್ಯಾಯಗಳೆಲ್ಲವನ್ನೂ ಆ ವ್ಯಾಸರಿಗೇ ಹೇಳೊಣವಂತೆ. ಹೊರಡಿ ವಾಯುವೇಗದಲ್ಲಿ!

ಎರಡನೆಯ ಹಂತ

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಂಡು ಬರುತ್ತಾರೆ



Vyaasa realizes what is happening: He is being questioned, interrogated and challenged by the characters he created.



ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಂತದಿಂದ ಎಳೆದು ಇಲ್ಲಿಗೇಕೆ ಕರೆದುಕೊಂಡುಬಂದಿರಿ? ಇದು ರಣರಂಗದಂತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಂತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸೃಷ್ಟಿಸಿದ ಪಾತ್ರಗಳೇ ನನ್ನ ಮುಂದೆ ನಿಂತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ!

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಮ್ತ್ರಿ, ಆ ಅತಿ ಉಧ್ಧಟದ ಅಹಂಕಾರಿ ಯಾರು ಇರಬಹುದು ? ! :-)



Duryodhana sums up the complaints and blames Vyaasa.



ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಂದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕೃಷ್ಣ.

ರಣರಂಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಂತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಂದ ಏಕೆ, ಯಾವ ಮನಸ್ಸಿನಿಂದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ?

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.

(He starts responding to one question at a time.

Vyaasa responds…)

ವ್ಯಾಸ: ದುರ್ಯೋಧನ! ನಿನ್ನ ಪ್ರಶ್ನೆಗೆ ಒಂದೆರಡು ಮಾತುಗಳಲ್ಲಿ ಉತ್ತರ ಹೇಳುವುದು ಸುಲಭವಲ್ಲ. ಯಾವುದೇ ಪ್ರಶ್ನೆಗೂ ಒಂದೇ ಒಂದು ಉತ್ತರವಿರುವುದಿಲ್ಲ; ಯಾವುದೇ ಪ್ರಶ್ನೆಗಾಗಲಿ ನೋಡುವ ದೃಷ್ಟಿಗೆ ತಕ್ಕ ಉತ್ತರ ಸಿಕ್ಕುತ್ತದೆ. ನಾನು ಕರ್ಣನಿಗೆ ಈ ರೀತಿಯ ಸಾವು ಬರುವ ಹಾಗೆ ಬರೆದಿರುವುದಕ್ಕೆ ಕೆಲವು ಕಾರಣಗಳಿವೆ. ಎಲ್ಲ ದೃಷ್ಟಿಗಳಿಂದಲೂ ನೋಡಿ, ಸಮಗ್ರ ರೀತಿಯಲ್ಲಿ ತಿಳಿದುಕೊಂಡರೆ ಮಾತ್ರ ಸತ್ಯವು ಸ್ವಲ್ಪ, ಸ್ವಲ್ಪವಾಗಿ ಕಂಡುಬರುತ್ತಾ ಹೋಗುತ್ತದೆ. ಕರ್ಣನ ಜೀವನವನ್ನು ಮೊದಲಿನಿಂದ ಕೊನೆಯವರೆಗೂ ಅರ್ಥ ಮಾಡಿಕೊಳ್ಳಬೇಕು. ಯಾವ ಯಾವ ಸಂದರ್ಭದಲ್ಲಿ ನಾನು ಯಾವ ಕಾರಣಕ್ಕಾಗಿ ಏನೇನು ಬರೆದೆ ಎನ್ನುವುದನ್ನು ಒಂದೊಂದಾಗಿ ಹೇಳುತ್ತೇನೆ. ಎಲ್ಲವನ್ನೂ ಸಾವಧಾನವಾಗಿ ಕೇಳಿ, ಮಧ್ಯದಲ್ಲೇ ಯಾವ ನಿರ್ಧಾರಕ್ಕೂ ಬರಲು ಆತುರ ಪಡದೆ ಕೇಳುತ್ತಾ ಹೋದರೆ ನನ್ನ ಕವಿಮನವನ್ನು ನಿನಗೆ ತಿಳಿಸಬಲ್ಲೆ; ಆಗ ಮಾತ್ರ, ಕವಿಯಾಗಿ ನಾನು ಯಾವ ಕಾರಣದಿಂದಾಗಿ ಮಹಾಭಾರತದ ಕಥೆಯನ್ನು ಹೇಗೆ ಬೆಳೆಸಿಕೊಂಡು ಹೋದೆ ಎನ್ನುವುದು ನಿನಗೆ ತಿಳಿಯುತ್ತದೆ.
ಕರ್ಣನು ಮಹಾಶೂರ ಮತ್ತು ಅಜೇಯ. ಅವನನ್ನು ಅರ್ಜುನನು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಒಬ್ಬ ಮಹಾ ಪರಾಕ್ರಮಿಯು ಯುಧ್ಧದಲ್ಲಿ ಸತ್ತರೂ ಅದಕ್ಕೆ ಮುಂಚೆ ಅವನು ಸೋಲಬೇಕಾಗಿಲ್ಲ; ಸತ್ತವನು ಸೋಲದಿರಬಹುದು; ಕೊಂದವನು ಗೆಲ್ಲದೇ ಇರಬಹುದು. ಧರ್ಮಯುದ್ಧದ ಕಹಳೆ ಊದುವವರೂ ಕೆಲವು ಸಮಯಗಳಲ್ಲಿ ಧರ್ಮದ ದಾರಿಯಿಂದ ಕವಲು ದಾರಿ ಹಿಡಿಯಬಹುದು. ಅಂತೆಯೇ, ಎಲ್ಲರ ಕಣ್ಣಿಗೆ ದುಷ್ಟ, ದುರಾತ್ಮನಾಗಿ ಕಂಡುಬರುವ ಕೆಟ್ಟ ಸ್ವಭಾವದವನೂ ಕೆಲವು ಸಾರಿ ಜನೋಪಕಾರಿಯಾಗಬಹುದು. ಈ ದ್ವಂದ್ವವು ಉಪ್ಪುಖಾರಗಳನ್ನು ತಿಂದ, ರಕ್ತ ಮಾಂಸದ ಎಲ್ಲ ಮಾನವನಿಗೂ ನೆರಳಂತೆ ಹಿಂಬಾಲಿಸಿಕೊಂಡು ಬರುತ್ತದೆ. ಮನುಷ್ಯ ದೇಹವನ್ನು ತೆಗೆದುಕೊಂಡ ಶ್ರೀ ಕೃಷ್ಣನನ್ನೂ ಕಾಡದೇ ಬಿಡುವುದಿಲ್ಲ ಎಂದು ತೋರಿಸುವುದಕ್ಕೆ ಶ್ರೀ ಕೃಷ್ಣನೇ ದುರ್ಬುದ್ಧಿಯನ್ನೂ, ದುರ್ಮಾರ್ಗವನ್ನೂ ಅರ್ಜುನನಿಗೆ ಹೇಳಿಕೊಡುವ ಸಂದರ್ಭವನ್ನು ಕರ್ಣನ ಸಾವಿನ ಘಟನೆಯಲ್ಲಿ ಅಳವಡಿಸಿಕೊಂಡೆ.
ಕರ್ಣನ ಸಾವಿಗೆ ಒಂದೊಂದೇ ಹಂತದಲ್ಲಿ ಸಿದ್ಧತೆಗಳಾಗುತ್ತಿದ್ದವು; ಒಂದು ದೃಷ್ಟಿಯಲ್ಲಿ ನೋಡಿದರೆ ಈ ಸಿದ್ಧತೆಗಳಲ್ಲೆಲ್ಲಾ ಕರ್ಣನೂ ದಾನಶೂರನಾಗಿಯಾದರೂ ಪಾತ್ರ ವಹಿಸಿದ.

(Karna cries and complains about his birth with Kunti as the mother, and that she and Krishna hid the facts throughout his life.)

ಕರ್ಣ: ಹುಟ್ಟಿನ ಸಮಯದಿಂದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಂದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ :-(

ಪ್ರವೇಶ: ಕುಂತಿ



(Kunti responds to Karna about the birth out of wedlock, as a simple curiosity of a young teenager, yet defends herself as a good mother with examples of Pandavas.)


ಕುಮ್ತಿ: "ಅಮ್ಮಾ" ಎಂದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಂದೆ ನನ್ನ ಕಂದ. ನಾನು ಹರೆಯಕ್ಕೆ ಬಂದಾಗ ಋಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಂಬಲಾಗದೆ, ಹೇರಳ ಕಾಂತಿಯಿಂದ ಪ್ರಜ್ವಲಿಸುವ ಸೂರ್ಯನನ್ನು ಒಂದು ದಿನ ಪ್ರಾತಃ ಕಾಲ ನೋಡಿ ನನಗೆ ವರವಾಗಿ ಕೊಟ್ಟಿದ್ದ ಮಂತ್ರವನ್ನು ಉಛ್ಛರಿಸಿಕೊಂಡು ಅವನನ್ನು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಂದಾದರೂ ತಿಳಿದುಕೊ; ಮುಂದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಂಗಸಿನ ಚೆಲ್ಲಾಟವೆಂದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಂಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೆ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಂದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಂದು ನನಗಾದ ದುಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಂದಾ! :-( :-(

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರ‍ೋಗಿಷ್ಟನಾದ ಗಂಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಂದರೆ ಪಾಂಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಂದಿರನ್ನು ಎದುರುಹಾಕಿಕೊಂಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಂಡು ನನಗಾದ ಶೋಕ ಮತ್ಯಾರಿಗೂ ಬೇಡ :-( :-(



Karna blames Kunti again for the special boon she begged from Karna of 'Not using the same arrow twice'.

Karna blames Kunti again of it as an excuse to save Arjuna's life.



ಕರ್ಣ: ನಿನ್ನ ದುಹ್ಖದ ಜೀವನವನ್ನು ಕೇಳಲಾರೆನಮ್ಮಾ :-( ಆದರೆ, ನೀನು ನನ್ನಿಂದ "ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಂದ" ಎಂದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ! :-( :-(



Kunti repeats the fact of her request for Karna to join the Pandavas in the war. She says that would have saved Karna's collapse.



ಕುಂತಿ: ಕರ್ಣ! ನಾನು ನಿನ್ನಿಂದ ವರವನ್ನು ಕೇಳುವ ಮೊದಲೇ, ನಿನ್ನನ್ನು ಪಾಂಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಂದಿರ ಮೋಹಕ್ಕಿಂತ, ತಾಯಿಯ ಬುಧ್ಧಿಮಾತಿಗಿಂತ, ದುರ್ಜನರ ಸಂಗವೇ ಇಂಪಾದ ಸಂಗೀತ ವಾಯಿತು ನಿನ್ನ ಕುರುಡು ಅಹಂಕಾರದ, ಅಪ್ರಯೋಜಕ ಸ್ವಾಮಿ ನಿಷ್ಟೆಯ ಧರ್ಮಕ್ಕೆ!



Krishna reminds the characters that it was all a plot scripted by Vyaasa.



ಕೃಷ್ಣ: ಕರ್ಣ! ಕುಂತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! :-) ವ್ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಂದ ಅವರನ್ನೇ ಕೇಳಿನೋಡೋಣ :-) :-)


(Vyaasa responds …

ವ್ಯಾಸ: ಮಗು ಕುಂತಿ ! ಚಿನ್ನವು ಪುಟಕ್ಕೆ ಹಾಕಿದಮೇಲೆ ತಾನೆ ತನ್ನ ಹೊಳಪನ್ನು ತೋರಿಸುತ್ತದೆ. ವಜ್ರವು ಅಪಾರ ಒತ್ತಡದಿಂದಾಗಿಯಲ್ಲವೆ ಅಬೇಧ್ಯವಾಗುವುದು. ಅದಕ್ಕೆ ಬಹಳ ಶ್ರಮವನ್ನು ಹಾಕಿ, ಕುಶಲತೆಯಿಂದ ಅದರ ಬಹುರ್ಮುಖಗಳನ್ನು ಮೂಡಿಸಿದಾಗ ಮಾತ್ರವಲ್ಲವೆ ಆ ವಜ್ರವು ಹೊಳೆಯುವುದು ! ಹಾಗೆಯೇ, ನೀನೂ, ನಿನ್ನ ಮಕ್ಕಳೆಲ್ಲರೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದು ವಿಜಯಿಗಳಾಗಿದ್ದು?
ವ್ಯಾಸ: ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತು ವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವಾಗ ಲೇಖಕನಿಗೂ, ಓದುವಾಗ ಓದುಗರಿಗೂ ಮನರಂಜನೆ ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಕರ್ಣ: ಹಾಗಾದರೆ, ನನ್ನ ಕಥೆ, ನಮ್ಮೆಲ್ಲರ ಕಥೆ ನಿಜವಾಗಿಯೂ ನಡೆದದ್ದಲ್ಲವೇ?
ವ್ಯಾಸ: ನಾನು ಮಹಾಭಾರತವನ್ನು ರಚಿಸಿದಾಗ, ನನ್ನ ಮುಂದೆ ಕಂಡ, ನನ್ನ ಗಮನಕ್ಕೆ ಬಂದ ಪಾತ್ರಗಳನ್ನೂ, ಸನ್ನಿವೇಶಗಳನ್ನೂ, ನಡೆದದನ್ನು ನಡೆದ ಹಾಗೆಯೇ ದಾಖಲೆ ಮಾಡಲಿಲ್ಲ ; ಕಾರಣ, ಚಾರಿತ್ರಿಕ ದಾಖಲೆಯು ಸೃಷ್ಟಿ ಶೀಲ ಸಾಹಿತ್ಯವಾಗಲಾರದು. ಆದರೆ, ಕೆಲವು ಸಾರಿ ನಡೆದ, ಗಮನಕ್ಕೆ ಬಂದ ಘಟನೆಗಳನ್ನೂ, ನಿಜ ಜೀವನದ ಪಾತ್ರಗಳನ್ನೂ ಕಥೆಯಲ್ಲಿ ಸ್ವಾರಸ್ಯಕರವಾಗಿ ಹೆಣೆದಿದ್ದೇನೆ. ಇದರ ಜೊತೆಗೆ, ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿಬಂದ ಕಥೆಗಳನ್ನು ಸೂಕ್ತವಾಗಿ ಬೆರೆಸಿದ್ದೇನೆ. ಸಮಾಜದ ಸಂಪ್ರದಾಯಗಳನ್ನು ವಿಮರ್ಶಿಸಬೇಕೆನಿಸಿದಾಗ, ಅವಕ್ಕೆ ಪಾತ್ರಗಳ ರೂಪ ಕೊಟ್ಟು, ಸನ್ನಿವೇಶಕ್ಕೆ ಹೊಂದುವಂತೆ ಕಥೆಯನ್ನು ಹೇಳಿದ್ದೇನೆ. ಉದಾಹರಣೆಗೆ, ನಮ್ಮ ಕಾಲದಲ್ಲಿ ಇದ್ದ ವೀರ್ಯದಾನದ ನಿಯೋಗ ಪದ್ಧತಿಯನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ನನ್ನ ಕಲ್ಪನೆಯ ಕಣ್ಣು ಕಂಡಹಾಗೆ ಅಳವಡಿಸಿಕೊಂಡಿದ್ದೇನೆ. ಚಿತ್ರ ವೀರ್ಯ, ವಿಚಿತ್ರವೀರ್ಯರಿಗೆ ಮಕ್ಕಳಾಗದ ಸಮಯದಲ್ಲಿ ಋಷಿಗಳನ್ನು ಉಪಯೋಗಿಸಿಕೊಂಡಿದ್ದೇನೆ. ನನ್ನ ಕಥೆಯು ಮುಂದುವರಿದ ಹಾಗೆ ಕುಂತಿಯ ಪಾತ್ರಕ್ಕೆ ಋಷಿಗಳಿಂದ ನೇರವಾಗಿ ನಿಯೋಗ ತೋರಿಸಿದರೆ ಕಥೆಯು ರಸವತ್ತಾಗುವುದಿಲ್ಲವೆಂದು ಅನೇಕ ರೂಪಗಳನ್ನು ಕೊಟ್ಟಿದ್ದೇನೆ. ಸೂರ್ಯ, ಯಮ ಧರ್ಮರಾಯ, ವಾಯು, ಇಂದ್ರ ಮತ್ತು ಅಶ್ವಿನಿ ದೇವತೆಗಳನ್ನು ಉಪಯೋಗಿಸಿಕೊಂಡಿದ್ದೇನೆ. ದೇವತೆಗಳ ವರಪ್ರಸಾದದಿಂದ ಹುಟ್ಟಿದವರೆಂದರೆ ಹುಟ್ಟಿದ ಕುಂತಿಯ ಮಕ್ಕಳಿಗೆ ಮಹಾ ಶಕ್ತಿಗಳನ್ನು ತೋರ್ಪಡಿಸಬಹುದೆನ್ನುವ ಉದ್ದೇಶದಿಂದ ಕುಂತಿಯ ಪಾತ್ರದಲ್ಲಿ ಮಹಾ ಋಷಿಗಳ ಸೇವೆಯನ್ನು ಮಾಡಿ ವರಗಳನ್ನು ಪಡೆಯುವ ಕಥೆ ಕಟ್ಟಿದೆ. ಐದು ವರಗಳನ್ನು, ಪಂಚಪಾಂಡವರಿಗೆಂದು ಲೆಕ್ಕಹಾಕಿ ಕಥೆ ಬರೆದೆ. ಇನ್ನೂ ಕನ್ಯೆಯಾದ ಸುಂದರ ಕುಂತಿಗೆ ಮದುವೆಗೆ ಮುಂಚೆಯೇ ಈ ವರದಾನದಿಂದ ಮಗುವಾದರೆ ಹೇಗಿರುತ್ತದೆಂದು ನನ್ನ ಕುತೂಹಲ ಕಾಡಿಬಿಟ್ಟಿತು. ನನ್ನ ಕುತೂಹಲವನ್ನು ಕುಂತಿಯ ಪಾತ್ರಕ್ಕೆ ಧಾರೆಯೆರೆದೆ. ಅಂತೆಯೇ, ಕುಂತಿಯು ಇನ್ನೂ ಕನ್ಯೆಯಾಗಿರುವಾಗಲೇ ತಾಯಿಯಾಗಿಬಿಟ್ಟಳು. ಸೂರ್ಯನ ವರದಿಂದ ಹುಟ್ಟಿ ಪ್ರಜ್ವಲಮಯಿಯಾದ ಮಗುವಿಗೆ ಏಕಾಂಗಿಯಾಗಿ, ತಾಯಿಯಿಂದ ಅಗಲುವುದು ಒಂದೇ ದಾರಿಯಾಗಿ ಉಳಿಯಿತು. ಬರೆದ ಕಥೆಯನ್ನು ಅಳಿಸಿ ಕಥೆ ಬದಲಿಸುವ ಅಭ್ಯಾಸ ನನಗಿರಲಿಲ್ಲ. ಇದಕ್ಕೆ ಮುಂಚೆಯೇ ಕಥೆಯಲ್ಲಿ ನಿಪುಣತನದಿಂದ ವ್ಯಾಸನಾದ ನಾನು ಹೇಳಿದ ಕಥೆಯನ್ನು ಸಾಕ್ಷಾತ್‌ ಗಣೇಶನೇ ಲೇಖನಿಯನ್ನು ಹಿಡಿದು ಬರದಂತೆ ಬರೆದರೆ ಓದುಗರೆಲ್ಲರೂ ನಿಷ್ಠೆಯಿಂದ ಓದುತ್ತಾರೆ, ನನ್ನ ಕಥೆಯು ಜನಪ್ರಿಯವಾಗುತ್ತದೆ ಎಂಬ ಕಾರಣದಿಂದ ಆ ರೀತಿಯಲ್ಲಿ ಕಥೆಯನ್ನು ಬರೆದಾಗಿತ್ತು. ಅಲ್ಲದೆ, ನಾನು ಪ್ರತಿದಿನ ಬ್ರಾಹ್ಮೀ ಮಹೂರ್ತದಲ್ಲಿ ಪ್ರಾರಂಭಿಸುವಾಗ ವಿಘ್ನೕಶ್ವರನು ನನ್ನ ಮುಂದೆಯೇ ಕುಳಿತು ನನ್ನ ಕೈಯಲ್ಲಿ ಬರೆಸುತ್ತಿದ್ದಾನೆ ಎಂಬ ದೈವಿಕ ಕಲ್ಪನೆ ನಡೆದಿತ್ತು. ಹಾಗಾಗಿ ನನ್ನ ಕಲ್ಪನೆಯ ಗಣೇಶನು ಬರೆದದ್ದನ್ನು ಅಳಿಸಿಬರೆಯುವ ಮೊಂಡನಾಗಬಾರದು ಎನ್ನುವ ಮನೋಭಂಗಿಯಲ್ಲಿ ಕಥೆಯನ್ನು ಮುಂದುವರಿಸಿಬಿಟ್ಟೆ.

ದುರ್ಯೋಧನ: ಹಾಗಾದರೆ, ಭೀಷ್ಮರೇಕೆ ಪಾಂಡವರ ಕಡೆಗೇ ಯಾವಾಗಲೂ ಮಾತನಾಡುತ್ತಿದ್ದರು. ಮೊದಲಿನಿಂದಲೂ ಅವರ ಒಲವು ಕುಂತಿಯ ಮಕ್ಕಳ ಮೇಲೆಯೇ ಬೀರಿತ್ತು.
ಭೀಷ್ಮ : ದುರ್ಯೋಧನ! ‘ಪಾಂಡವರಿಗೆ ಸಲ್ಲ ಬೇಕಾಗಿದ್ದ ರಾಜ್ಯವನ್ನು ಕೊಟ್ಟುಬಿಡು; ಪಾಂಡವರು ನಿನಗೆ ಏನೂ ದ್ರೋಹ ಮಾಡಿಲ್ಲ’ ಎಂದು ಕೊನೆಯವರೆಗೂ ನಿನಗೆ ಬುಧ್ಧಿವಾದವನ್ನು ಹೇಳಿದೆ. ನಿನ್ನ ಕುತ್ಸಿತ ಬುಧ್ಧಿಗೆ ನನ್ನ ಬುಧ್ಧಿವಾದವೂ, ಮಿಕ್ಕೆಲ್ಲ ಹಿರಿಯವರ ಮಾತುಗಳೂ ತಟ್ಟಲಿಲ್ಲ. ಹಿರಿಯವನಾದ ಯುಧಿಷ್ಠಿರನು ವಯಸ್ಸಿನಲ್ಲಿ ಚಿಕ್ಕವಯಸ್ಸಿನಿಂದಲೇ ಧರ್ಮಯುಕ್ತವಾದ ಅಲೋಚನೆ, ನಡತೆ, ಸಂಯಮಗಳನ್ನು ಪ್ರದರ್ಶಿಸಿದ್ದರಿಂದ ನಮಗೆಲ್ಲರಿಗೂ ಅವನ ಮೇಲೆ ವಾತ್ಸಲ್ಯ, ಅಭಿಮಾನ, ಪ್ರೀತಿಗಳಿದ್ದಿದ್ದು ಸಹಜವಲ್ಲವೇ?
ಧೃತರಾಷ್ಟ್ರನು ಕುರುಡನಾಗಿದ್ದು, ಪಾಂಡುವು ರೋಗಿಷ್ಟನಾಗಿದ್ದುದಲ್ಲದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ. ನನ್ನ ಬಲತಮ್ಮಂದಿರಾದ ಚಿತ್ರವೀರ್ಯ, ವಿಚಿತ್ರವೀರ್ಯರುಗಳಿಗೆ ಬಲಗೈಯಾಗಿ ರಾಜ್ಯಭಾರ ಮಾಡಲು ಸಹಾಯಕನಾದ ನನಗೆ, ಅವರ ಮಕ್ಕಳ ಮತ್ತು ಮೊಮ್ಮಕ್ಕಳ ರಾಜ್ಯಗಳನ್ನೂ ನಿಭಾಯಿಸಬೇಕಾದ ವಿಧಿ ನನ್ನದಾಯಿತು. ಆಜನ್ಮ ಬ್ರಹ್ಮಚಾರಿಯಾದ ನನಗೆ ನಮ್ಮ ವಂಶದ ರಾಜ್ಯಭಾರದ ಹೊಣೆಯನ್ನು ವಿಧಿ ಹೇರಿಸಿಬಿಟ್ಟಿತು. ಆದ್ದರಿಂದಲೇ, ನಾನು ಪಾಂಡವರು ಮತ್ತು ಕೌರವರ ಮಧ್ಯೆ ಸಹಕಾರದ ವಾತಾವರಣವನ್ನು ಬೆಳೆಸಿ ರಾಜ್ಯಭಾರದ ಹೊಣೆಯನ್ನು ಕಳೆದುಕೊಳ್ಳುವ ಶತಪ್ರಯತ್ನಗಳನ್ನು ಮಾಡಿದೆ. ದುರ್ಯೋಧನ! ಆದರೆ ನೋಡು: ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧದ ಕೊನೆಯವರೆಗೂ ನನ್ನ ಮುದಿವಯಸ್ಸಿನಲ್ಲೂ ಬಿಲ್ಲು ಬಾಣಹಿಡಿದು ನನ್ನ ಪ್ರೀತಿಯ ಬಂಧುಗಳ ಮಧ್ಯೆ ಯುದ್ಧವನ್ನು ಮಾಡುತ್ತಾ ಶರಮಂಚದ ಮೇಲೆ ಸಾಯಲು ಕಾಯುವ ಗತಿ ನನಗೆ ಬಂತು.
ವ್ಯಾಸ: ಭೀಷ್ಮ ! ಜೀವನದಲ್ಲಿ ವಿಧಿಯು ನಾವು ಕನಸು ಕಾಣದ, ಆಸೆ ಆಸ್ಥೆಗಳಿಂದ ಬಯಸದ ಪಥಕ್ಕೆ ಎಲ್ಲರನ್ನೂ ತೆಗೆದುಕೊಂಡು ಹೋಗುತ್ತದೆ. ನೀವು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದು ಸತ್ಯವತಿಗೆ ಮಾತುಕೊಟ್ಟಾಗ ನಿಮಗೂ ಮತ್ತು ಸತ್ಯವತಿಗೂ ಭವಿಷ್ಯದ ಅರಿವಿರುವುದಕ್ಕೆ ಸಾಧ್ಯತೆಯಿರಲಿಲ್ಲ. ವಿಧಿಯನ್ನು ಯಾರುತಾನೆ ಬಲ್ಲರು! ಸತ್ಯವತಿಯ ಮತ್ತು ಅವಳ ತಂದೆಯ ಸ್ವಾರ್ಥಕ್ಕೆ ಮಾರುಗೊಟ್ಟು ನೀವು ಅಸಮಾನ್ಯ ಶಪಥವನ್ನು ತೆಗೆದುಕೊಂಡು ಬಿಟ್ಟಿರಿ.
ಭೀಷ್ಮ: ಪೂಜ್ಯ ವೇದವ್ಯಾಸರೆ! ನೀವು ನಿಮ್ಮ ಮಾತೆಯಾದ ಸತ್ಯವತಿಯ ಬಗ್ಗೆ ಹೀಗೆ ಹೇಳುತ್ತಿರುವುದನ್ನು ಕೇಳಿಯೂ ನನ್ನ ಕಿವಿಯು ನಂಬಲಾಗುತ್ತಿಲ್ಲ.
ವ್ಯಾಸ: ಭೀಷ್ಮರೇ! ಕವಿಯ ದೃಷ್ಟಿಯಲ್ಲಿ ಅವನು ರಚಿಸಿದ ಪಾತ್ರಗಳೆಲ್ಲ ಅವನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ಮಕ್ಕಳಲ್ಲವೇ! ಪಾತ್ರಗಳನ್ನು ರೂಪಿಸಿ, ಅವುಗಳಿಗೆ ಜೀವವನ್ನು ತುಂಬಿ ಓದುಗರಿಗೆ ನಂಬುವ ಹಾಗೆ ಮಾಡುವ ನಿಜವಾದ ಸೂತ್ರಧಾರಿ ಕವಿಯಲ್ಲವೇ! (ಕೃಷ್ಣನ ಶೈಲಿಯಲ್ಲೇ, ಭಾವ ಭಂಗಿಗಳಲ್ಲೇ ನಗುನಗುತ್ತಾ) ಕೃಷ್ಣ! ನೀನು ನಾಟಕದ ಪಾತ್ರದಲ್ಲಿ ಕೃಷ್ಣನಾಗಿ ಸೂತ್ರಧಾರನೆನಿಸಿಕೊಂಡೆಯಲ್ಲವೇ?
ಕೃಷ್ಣ: (ಇವನು ವ್ಯಾಸರ ಭಂಗಿ ಭಾವಗಳಲ್ಲಿ) ಸಕಲವನ್ನೂ ತಿಳಿದ ದಿವ್ಯ ಜ್ಞಾನಿಗಳಾದ ನಿಮ್ಮ ಸತ್ಯದ ಮಾತುಗಳಿಗೆ ಉತ್ತರ ಹೇಳಲು ನನಗೆ ಸಾಧ್ಯವೇ! ನಿಮ್ಮ ಕಥೆಯಲ್ಲಿಯೇ ನಿಮ್ಮ ಪಾತ್ರವನ್ನೂ ಸೇರಿಸಿ, ನಿಮ್ಮ ಕಾವ್ಯವನ್ನು ನಿಮ್ಮ ಮುಂದೆಯೇ ಪ್ರತಿದಿನವೂ ಕುಳಿತು ಬರೆದ ಹಾಗೆ ಗಣೇಶನನ್ನೂ ನಿಮ್ಮ ಕಥೆಯಲ್ಲಿ ಸೇರಿಸಿಕೊಂಡಿರಿ. ನಿಮ್ಮ ಮತ್ತು ಗಣೇಶನ ಒಪ್ಪಿಗೆಯ ಪ್ರಕಾರ, ಮೊದಲಿನಿಂದ ಕೊನೆಯವರೆಗೂ ವಿರಾಮವಿಲ್ಲದೆ ಮಹಾಭಾರತದ ಸಂಪೂರ್ಣ ಕಾವ್ಯವನ್ನು ರಚಿಸಿದಂತೆ ಮಾಡಿ, ಓದುಗರ ಮನಸ್ಸಿಗೆ ಮಾಯಾಜಾಲವನ್ನು ಹಾಕಿಬಿಟ್ಟಿರಿ. ನನ್ನನ್ನು ಮಾಯಾವಿ, ಕಪಟಿ, ಪಾಂಡವರ ಪಕ್ಷಪಾತಿ ಎಂದೆಲ್ಲಾ ಬಣ್ಣಿಸಿದಿರಿ. ನಿಮ್ಮ ಮಾಯಾಜಾಲದ ವಿಚಿತ್ರಕ್ಕೆ ದೇವರೆನಿಸಿಕೊಂಡ ನಾನೇ ತಲೆ ಬಾಗುತ್ತೇನೆ. (ಕೃಷ್ಣನು ವ್ಯಾಸರಿಗೆ ಕೈಮುಗಿಯುತ್ತಾನೆ)

Krishna mentions the name of Draupadi who was ill-treated by Karna and Duryodhana during the 'vastraapaharaNa'.)



ಕೃಷ್ಣ: ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಂದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಂದರಿಯಾದರೂ ಸಾವಧಾನದಿಂದ ನಿಮ್ಮೆಲ್ಲರಿಗಿಂತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಂದರೆ ನನ್ನ ತಂಗಿ ಕೃಷ್ಣೆಯಾದ ದ್ರೌಪದಿ.

ಪ್ರವೇಶ: ದ್ರೌಪದಿ



Draupadi cries out and vents her anger towards Karna and Duryodhana.



ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುಧ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ’ಸ್ವಾಮಿ’ ಆ ಖಳನಿಗೂ ಸಧ್ಯದಲ್ಲಿಯೇ ಸಾವು ಬರಲಿದೆ.


( Kunti blames Vyaasa for scripting the 'VastraapaharaNa event, as a cheap 'masaala' in his literary masterpiece.)


ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೇ ಕಾರಣರಲ್ಲವೆ?

(Vyaasa responds)
ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.
ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

(Duryodhana ridicules the gutless attitude of Bheema during the 'vastraapaharaNa')


ದುರ್ಯೋಧನ: ದ್ರೌಪದಿ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲಗಳನ್ನು ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ :-))

ಪ್ರವೇಶ: ಭೀಮ



Bheema rages and vows to kill Duryodhana, and moves to attack him. Krishna trickily restrains both Bheema and Duryodhana.



ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ! ನೀನು ಧೈರ್ಯವಂತನಾದರೆ ಇದೀಗಲೇ ಬಾ! ನಿನ್ನನ್ನು ಜೆಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿಧ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.



Krishna mentions Vyaasa as the writer to decide what may really happen.


ಕೃಷ್ಣ: ಜಗತ್ ಜೆಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)


Vyaasa responds …

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

Karna complains to Vyaasa that he was unjustly made to believe that he was born to a servant's ancestry - Sootha Putra. He claims to have deserved a royal treatment by everyone. Karna complains about Drona and Bheeshma as begets, who refused an opportunity to be trained along with Kauravas and Pandavas.


ಕರ್ಣ: ಮಹಾವೀರನಾದ ನನ್ನ ಹಣೆಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ :-) ನನ್ನ ದುಃಖ ಯಾರಿಗೂ ಅರ್ಥವಾಗಲಾರದು. :-(

ಪ್ರವೇಶ: ಏಕಲವ್ಯ



Ekalavya confers with a similar complaint to Drona, Bheeshma, Krishna and also Arjuna.



ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಮ್ತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ತಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.


(Vyaasa responds.)

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!
ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.
ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.
ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

karNa complains of the tricks played by Krishna, Kunti, Indra and also Soorya.


ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!



Karna cries as an unfortunate child with Soorya not taking any practical steps to stop him from his 'noble 'giveaway' acts before the war.



ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ಸಾಯುವ ಮುಂಚೆಯೇ ನನ್ನ ಜೀವವನ್ನೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ? ನೀನು ಏಕೆ ಇಂದ್ರನನ್ನು ತಡೆಯಲಿಲ್ಲ? ನಿನಗೆ ನಿಜವಾದ ಪುತ್ರವಾತ್ಸಲ್ಯವಿದ್ದಿದ್ದರೆ, ಆ ಇಂದ್ರನನ್ನು ಕ್ಷಣಮಾತ್ರದಲ್ಲಿ ಸುಡಬಹುದಾಗಿತ್ತಲ್ಲವೇ?



Soorya responds reminding Karna about his attempts to warn his son Karna, where as Karna ignored him.



ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣವನ್ನು ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ’ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ? ಅದು ನೆನೆಪಿದೆ ತಾನೆ?

(Vyaasa responds…)

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.
ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.
‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)
(Last opportunity for spectator participation)


(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)
ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.
ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.
ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.


(ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ.)