ಶನಿವಾರ, ಅಕ್ಟೋಬರ್ 30, 2010

ಕನ್ನಡ ಬರತ್ತಾ ನಿಂಗೆ?

ಕನ್ನಡ ಬರತ್ತಾ ನಿಂಗೆ?
ಕೆ. ಆರ್. ಎಸ್. ಮೂರ್ತಿ


ದ್ಯಾವ್ರಪ್ಪ! ನಾನ್ಯಾವತ್ತೂ ನಿಂಗೆ ಒಂದೂ ಕೂಡ ಪ್ರಸ್ನೇನೇ ಕೇಳಿಲ್ಲಾ
ಅದ್ಯಾಕೋ, ನನ್ ಪೆದ್ದು ತಲೆ ಒಳ್ಗೆ ಒಂದು ದೊಡ್ಡ ಅನುಮಾನ ಇದ್ಯಲ್ಲಾ

ನಿನಗೆ ಗೊತ್ತಲ್ವಾ, ನಾನ್ಯಾವತ್ತೂ ನಿನ್ನತ್ರ ಕನ್ನಡ್ ದಲ್ಲೇ ಮಾತಾಡ್ತೀನಲ್ವಾ?
ನನೀಗ್ ಬರೋದು ಒಂದೇ ಬಾಸೆ ಕಣಪ್ಪ, ಮುತ್ತಿನಂಥ ಭಾಸೆ ಅಲ್ವಾ?

ನಾನೊಬ್ನೇ ಅಲ್ಲ, ನಮ್ ಕನ್ನಡ್ ಜನಗೋಳ್ ಎಲ್ಲಾರೂ ನಿನ್ನ ಬೇಡಿ ಕೊಳ್ಳೋದು
ತಮಗೆ ಕೆಟ್ಟ ಸಮ್ಯ ಬನ್ದಾಗೆಲ್ಲಾ, ತಮ್ಮ ತಾಪತ್ರಯನೆಲ್ಲಾ ತೋಡಿಕೊಳ್ಳೋದು

ತಮ್ಗೆ ಸಾನೆ ಕುಸೀ ಅದಾಗೆಲ್ಲಾ ನಿನ್ಗೆ ಇಡೀ ತೆಂಗಿನ ಕಾಯಿ ಅಲ್ವಾ ಒಡೆಯೋದು
ತಮ್ಮ ಎಂಡಿರ್ಗೆ ಕೂಸು ಅದಾಗ ನಿನ್ನ ಎಸ್ರಲ್ಲೇ ಅಲ್ವಾ ಸಂತರ್ಪಣೆ ಮಾಡೊದು?

ನೋಡು ನಾನಾಗ್ಲೇ ವಟ ವಟಾಂತ ನಿನ್ನತ್ರ ಏನೇನೋ ಮಾತಾಡ್ತಾ ಇದ್ದೀನಿ ಆಗ್ಲೇ
ಆದ್ರೆ ನನ್ನ ಅನುಮಾನ ಮಾತ್ರ ಇನ್ನೂ ಐತೆ: ನಿನಗೆ ಕನ್ನಡ ಅರ್ತ ಆಗ್ತದಲ್ವೇ?

ಪುರಂದರ ದಾಸ್ರು, ಕನಕ ದಾಸ್ರೂ, ಆ ದಾಸ್ರೂ, ಈ ದಾಸ್ರೂ, ಆಡು ಬರದು ಆಡದ್ರಲ್ಲ
ನಮ್ಮ ಬಸವಣ್ಣ, ನಮ್ಮ ಅಕ್ಕ ಮಹಾದೇವಿ, ಸರಣರೂ, ಸಂತರೂ, ಸ್ವಾಮಿಗೋಳೆಲ್ಲ

ದಿನಾನೂ, ಮೂರೊತ್ತೂ, ನಿನ್ನ ಬಜನೆ ಮಾಡದ್ರಲ್ಲಾ! ನಿನಗೆ ಕನ್ನಡ ಬರತ್ತೋ?
ಕೋಟಿ, ಕೋಟಿ ಕನ್ನಡ್ ದೋರು ಬೆಳಿಗ್ಗೆ-ರಾತ್ರಿ ನಿನ್ನ ಕೂಗಿದ್ದು, ಕರೆದಿದ್ದೂ ಕೇಳಿಸ್ತೋ?

ಯಾವಗ್ಲೂ ನಾನೇ ಕಣಯ್ಯಾ ಮಾತಾಡೊದು, ನೀನು ಮಾತ್ರ ಮಾತೇ ಬರಲ್ವೋ ಅನ್ನೋ ಆಗೆ
ಸುಮ್ಕೇನೇ ಕೂತಿರ್ತಿಯಲ್ಲಾ, ನನ್ಗೆ ಅನುಮಾನಾ ಜಾಸ್ತಿ ಆಗೈತೇ, ನೀನು ಇಲ್ದೇನೇ ಇರೋ ಆಗೆ

ನಟಿಸ್ತಾ ಇದೆಯೋ? ನೀನಿರೋದೆಲ್ಲ ಸುಳ್ಳು ಆದ್ರೆ, ನಾನೊಬ್ನೆ ಅಲ್ಲಾ ಬೆಪ್ಪು ತಕ್ಕಡಿ ಕಣೊ
ಇದೆಲ್ಲಾ ನಮ್ಮ ಕಕಲಾತಿ, ಇಲ್ಲದೇ ಇರೋ ದ್ಯಾವ್ರನ್ನ ನಾವೇ ಉಟ್ಟಿಸಿ ಕೈತಟ್ಟಿತೀವಿ ಕಣೊ

ಶನಿವಾರ, ಅಕ್ಟೋಬರ್ 23, 2010

ನಿನ್ನದೇ ನೆನಪು

ನಿನ್ನದೇ ನೆನಪು
ಕೆ. ಆರ್. ಎಸ್. ಮೂರ್ತಿ

ತುಂಬು ಬೆಳದಿಂಗಳು ಅಂಗಳದ ಮೇಲೆಲ್ಲಾ ಹದನಾಗಿ ಹಾಸಿತ್ತು
ಹಿತ್ತಲ ತೋಟದಲ್ಲಿಯೇ ಚಿಗುರು ಬಳ್ಳಿಯಾಗಿ ಬೆಳೆದು ದೊಡ್ಡದಾಗಿತ್ತು

ಕಂಪು ಹರಡಿತ್ತು ಬೆಳೆದು ಅರಳಿ ನಿಂತಿದ್ದ ಗೊಂಚು ಕೆಂಪು ಗುಲಾಬಿ
ಎತ್ತಿಂದಲೋ ಬಂದು, ಅತ್ತಿತ್ತಲೂ ತಿರುಗದೆ ಮೇಲೆ ಕುಳಿತಾಗ ದುಂಬಿ

ನಿನ್ನ ಮೊಗದ ಬಣ್ಣದ ಬೊಂಬೆಯು ಮನದ ಪರದೆಯ ಮೇಲೆ ಕುಣಿದು
ಅರಳಿತು ಹೃದಯದ ಹೂವು; ಗುಲಾಬಿಗೆರಗಿದೆ ಆ ಬೆರಗಿಗೆ ಮಣಿದು

ಕಾಮಣ್ಣನ ಹೂರಣದ ಔತಣ

ಕಾಮಣ್ಣನ ಹೂರಣದ ಔತಣ
ಕೆ. ಆರ್. ಎಸ್. ಮೂರ್ತಿ

ಕಾಮನ ಪೂರ್ಣಿಮೆಯ ಬೆಳದಿಂಗಳಲ್ಲಿ ಹೂರಣದ ಔತಣವನಿಕ್ಕುವೆ
ಕಣ್ಣ ರೆಪ್ಪೆಯ ತುಸು ಮಿಟುಕಿಸುವುದರೊಳಗೆಯೇ ಬಾರೆ ಎನ್ನೋಲವೇ

ಜೇನಿನಂತಹ ಜೋನಿ ಬೆಲ್ಲ, ಬಂಗಾರದ ಬಣ್ಣದ ಹದನಾದ ಬೇಳೆ
ಘಮವ ಉಲ್ಬಣಿಸಿದೆ ಬೆರೆತ ಏಲಕ್ಕಿ, ಹೊಸೆದ ನುಣ್ಣ ಕಣಕದ ಮೇಲೆ

ಬಿಸಿಯಾದ ಕಾವಲಿ, ಚುಂಯ್ ಎನುತಿರುವ ನಯವಾದ ತುಪ್ಪವ ಸುರಿದು
ಹೋಳಿಗೆಯ ಲಟ್ಟಿಸಿ, ಒಂದಾದ ಮೇಲೊಂದು ಮೊಗಚಿಕಾಯಿ ಹಾಕಿ ಎರೆದು

ಬಿಸಿ, ಬಿಸಿ ನಿನ್ನ ನಾಲಗೆಯ ಮೇಲಿಡುವೆ, ಹಾಯಿ, ಹಾಯಿ ಎಂದೆನಿಸುವುದು
ಇಹದಿಂದ ಪಯಣ ನಿನಗೆ ಇಂದ್ರನರಮನೆಗೆ ಇರುಳೆಲ್ಲ ನಡೆಯುತಿರುವುದು

ಶುಕ್ರವಾರ, ಅಕ್ಟೋಬರ್ 22, 2010

ನಾನು ಸದಾ ಸಿಧ್ಧ

ನಾನು ಸದಾ ಸಿಧ್ಧ
ಕೆ. ಆರ್. ಎಸ್. ಮೂರ್ತಿ

ವೈಕುಂಠದಲ್ಲಿ ಸತಿ ಪತಿಯರ ಸದಾ ನಲಿವ ನವ ರಸ ಸರಸ
ಹಿಗ್ಗಿದ ಹೆಡೆ ತೆಗೆದ ನಾಲಿಗೆ ಹೆಬ್ಬಾವಿನ ಹಾಸಿಗೆಯಲ್ಲಿ ಶಯನ

ಸಮುದ್ರ ಮಥನದ ಸಡಗರ ಸಕಲ ದೇವ ಕುಲ ಸಹಿತ ಗೋಷ್ಟಿಗೆ
ರಕ್ಕಸ, ರಕ್ಕಸಿಯರಿಗೂ ಬಂತು ಕರೆಯೋಲೆ ಕೈಹಾಕಲು ಹಾವಿಗೆ

ಬಾಗಿಲ ಕಾಯುವರಾರು? ಅದಕ್ಕೆಂದೂ ಬೇಕೆ ಬೇಕಲ್ಲವೇ ನಾನು
ಗೊತ್ತವರಿಗೆ ಧೈರ್ಯ, ವೀರ್ಯದ ಹೊರೆ ಹೊತ್ತು ಸದಾ ಸಿಧ್ಧನು

ಗುರುವಾರ, ಅಕ್ಟೋಬರ್ 21, 2010

ಮಧುರ ಚಂದಿರಕೆ ಬಾರಾ

ಮಧುರ ಚಂದಿರಕೆ ಬಾರಾ
ಕೆ. ಆರ್. ಎಸ್. ಮೂರ್ತಿ

ಆಸೆ; ಇತಿ, ಮಿತಿ ಇಲ್ಲದ ಆಸೆ; ಎಂದೆಂದಿಗೂ ಮುಗಿಯದ ಆಸೆ.
ನಾಕವನು ಇಳೆಗಿಳಿಸಿ ಮಧುಚಂದ್ರದ ಪಾಕವನು ಕುಡಿಸುವ ಆಸೆ

ತುಟಿಗೆ ತುಟಿಯ ಹಚ್ಚಿಸಿ,
ಕೆನ್ನೆಗೆ ಕೆನ್ನೆಯ ಒತ್ತಿ,
ಒಬ್ಬರನೊಬ್ಬರು ಏರಿ,
ತೊಳಬಂಧನ ಬೆಸೆದು,
ಕಂಗಳಲಿ ಕಂಗಳನಿಕ್ಕಿ,
ಕೇಳಿಯಾಡುವ ಬಾರಾ, ಮಧುರಸ ಕೇಳಿಯಾಡುವ ಬಾರಾ

ನಡುವಿನಾ ಕಡೆಗೋಲ
ಶಿವಲಿಂಗ ಶಕ್ತಿಯಲಿ
ಇಡುವಾಗ ರಭಸದಲಿ
ಉಕ್ಕೀತು ಸುರಿದೀತು
ದರಭರಾ ದರಭರಾ
ಕುಣಿಯೋಣು ಬಾರಾ ಮಧುರ ರಸ ಕುಡಿಯೋಣು ಬಾರಾ

ನಿತಂಬವು ತುಂಬಿ ತುಳುಕುತ್ತ
ಕಂಬವು ಅಂಬರವ ಅರಸುತ್ತ
ಮಂದ್ರದ ದನಿಯು ಎದುಸರೆತ್ತಿ
ನಾನು ನಿನ್ನೊಳು ಬೆರೆಯುತ್ತಾ
ಇಬ್ಬರೂ ಒಂದಾಗಿ ಮೆರೆಯುತ್ತಾ
ತಣಿಯೋಣು ಬಾರಾ ಸವಿ ಚಂದಿರನ ತಣಿಯೋಣು ಬಾರಾ

ಬೇಡ ನಮಗೆ ಆಯುಧ ಪೂಜೆ

ಬೇಡ ನಮಗೆ ಆಯುಧ ಪೂಜೆ
ಕೆ. ಆರ್. ಎಸ್. ಮೂರ್ತಿ

ವರುಷಕ್ಕೊಂದು ಸರಿ ಮಾತ್ರ ಬರಲಿ ಸಾಕು ಆಯುಧ ಪೂಜೆ
ಕೈಮುಗಿದು ಬೇಡಿಕೋ, ಮತ್ತೆ ಬರದೇ ಇರಲಿ ನಮಗೀ ಪೂಜೆ

ಬನ್ನೀ ಮರದಲ್ಲೂ ಬೇಡ ಬಚ್ಚಿಡುವುದು, ನಮಗೆ ಪೂಜೆಯೂ ಬೇಡ
ಯುಧ್ಧವಂತೂ ಇನ್ನು ಸಾವಿರ ವರುಷಕೂ ಬರದಿರಲಿ ಎಂದು ಬೇಡು

ತುರುಕರಿಗೆ ಬರುತ್ತದಂತೆ ದಿನ್ನಕ್ಕೆ ಐದು ಸಲ ಅವರ ನಮಾಜಿನ ಕರೆ
ಜೋರಾಗಿ ಊರಿಗೆಲ್ಲ ಕಿರಿಚುವ ಮುಲ್ಲಾನಿಗೆ ಮೆಲ್ಲಗೆ ಹೇಳಿ ಬಿಡು ಖರೆ

ಚೆನ್ನಾಗಿ ಮುಳುಗಿಸಿ ಹೂತುಬಿಡಲಿ ಆಯುಧ ಎಲ್ಲವನೂ ಅವನ ಭಕ್ತರೆಲ್ಲ
ಅವರ ಮಕ್ಕಳ ಕೈಗೂ ಸಿಗದಿರಲಿ ಬತ್ತಳಿಕೆ ಬಂದೂಕು ಭಜಿಸಲಿ, ಅಲ್ಲ, ಅಲ್ಲ

ಸೋಮವಾರ, ಅಕ್ಟೋಬರ್ 18, 2010

ಮಂತ್ರಾಲಯ ಎಲ್ಲಿದೆಯೋ?

ಮಂತ್ರಾಲಯ ಎಲ್ಲಿದೆಯೋ?
ಕೆ. ಆರ್. ಎಸ್. ಮೂರ್ತಿ

ಇತ್ತ, ಅತ್ತ, ಎತ್ತೆತ್ತಲೋ ಕತ್ತಲೆಯಲಿ ತದಕುವುದೇಕೆ?
ಮನದ ಮೈಲಿಗೆ ಕಳೆಯಲು ನೂರಾರು ಮೈಲು ಬೇಕೇ?

ಗುರುವನರಸಿ ಹೊರೆ ಹೊತ್ತು, ಹರಿವ ನದಿಯಲಿ ಮುಳುಗಿದೆ
ಪರಿಪರಿ ಸೂರೆಯ ಆಸೆಯಲಿ ಬೇಡುವ ಭಿಕ್ಕುವು ನೀನಾಗಿದೆ

ಮಂತ್ರಾಲಯವನು ಅರಸುವ ತಂತ್ರವೇ ಬಲು ಬೇರೆ ಮರುಳೆ
ಅಂತರಂಗದಲಿ ನೆರೆ ಅರಸಿ ಸೂಕ್ಷ್ಮದಲಿ ಕಾಣುವುದನು ತಿಳಿ

ಒಳಗೇ ಧ್ವನಿಸುತಲೇ ಇರುವ ಮಂತ್ರದ ಲಯ ಆಲಿಸಿ ಹೇಳು
ಮಂತ್ರವ ಬೊಗಳುವ ಕುತಂತ್ರವ ಬಿಟ್ಟು ಅಂತರಂಗವನೆ ಕೇಳು

ವಾಚಾಳಿ ವಾಕ್ಪಟು ನಾನಲ್ಲ

ವಾಚಾಳಿ ವಾಕ್ಪಟು ನಾನಲ್ಲ
ಕೆ. ಆರ್.ಎಸ್. ಮೂರ್ತಿ

ವಾಕ್ಪಟುವು ನಾನಲ್ಲ
ಪಟ-ಪಟ, ಪಟಾಕಿ ಹಾರಿಸುವ,
ವಟ-ವಟ ವಟ ಗುಟ್ಟುವ ವಾಕ್ ಪಟು
ವಾಕಿಂಗ್, ರನ್ನಿಂಗ್, ವಾಕ್ ಪಟುವೂ ಅಲ್ಲ

ನಾನೊಬ್ಬ ವಾಕ್ ವಟು,
ಜುಟ್ಟು, ಜನಿವಾರವಿಲ್ಲದ ವಾಕ್ ವಟು
ಮಡಿಯಿಂದ ಮಂಡೆಗೆ, ಮಿದುಳಿಗೆ ಪೇಟ ಜಗಿದಿಲ್ಲ
ಕಾಲದ ಮಿತಿ, ತಂತ್ರದ ಮಿತಿ, ಖಾಯದೆಗಳಿಲ್ಲ
ರಂಗದ ಮೇಲೆ, ಮಂಗಗಳ ಮುಂದೆ ಒದರುವ ಹೆದರಿಕೆಯಿಲ್ಲ

ಕಾಲಡಿಯಿಂದ ಕಾಲುನಡಿಗೆಯಲೇ
ಇನ್ನೂ ಬಾಲಕ, ಎಂದೂ ಬಳಲದೆ
ತರ್ಕದ ಟಾಕ್ ಮಾಡಿಯೇ ಮಂಡನನ ಖಂಡಿಸಿ
ಅವನ ಹೆಂಡತಿಯ ಬಾಯನೂ ಮುಚ್ಚಿಸಿದ
ಮುಂಡು ಮಂಡೆಯ ಪುಟ್ಟ ವಟು
ಮೊಂಡು ಆಯಸ್ಸಿನ ದಿಟ್ಟ ವಟು ನೆನಪಿದೆಯೇ?

ಭಾವಿ ಕವಿ ಮಾತ್ರ ನಾನು

ಭಾವಿ ಕವಿ ಮಾತ್ರ ನಾನು
ಕೆ. ಆರ್. ಎಸ್. ಮೂರ್ತಿ

ಮಹಾನ್ ಕವಿಗಳೆಲ್ಲರು ನೀವು
ಬಿರುದು, ಬಾವುಲಿ,
ಹಾರ, ತುರಾಯಿ,
ಪದಕ, ಫಲಕ,
ಇತ್ಯಾದಿ, ಇತ್ಯಾದಿ.

ನಾನಂತಹ ಕವಿಯಲ್ಲ.
ನಾನೆಂತಹ ಕವಿ ನಿಮ್ಮ ಮುಂದೆ!

ನಾನೆಂತಹ ಕವಿ ಕೇಳಿ:
ಕೇಳಿಯಾಡುವ, ಗೇಲಿ ಮಾಡುವ,
ಖಾಲಿ ಮಾತಿನ, ಗಾಳಿ ಮಾತಿನ,
ಪೋರನಂತೂ ನಾನಲ್ಲವೇ ಅಲ್ಲ.

ಆನೆ ಕಿವಿ ಮಾಡೀಗ ಕೇಳಿರಿ:
ನಾನೊಬ್ಬ ಭಾವಿ ಕವಿ
ಸ್ವಾಭಾವಿ ಕವಿ, ಸಂಭಾವಿ
ಅನುಭಾವಿ ಕವಿ, ಸಹಾನುಭಾವಿ ಕವಿ

ಮನಸು ಕೆರಳಿಸುವ ಕವಿ
ಕಣ್ಣು ಅರಳಿಸುವ ಕವಿ
ತನುವ ಹೊರಳಿಸುವ ಕವಿ
ಕರುಳ ಕರೆಯುವ ಕವಿ
ದುರುಳರ ದೂರುವ ಕವಿ
ಮರುಳರ ಹೀಯಾಳಿಸುವ ಕವಿ

ಗುಂಡಿಗೆಯ ಕುಣಿಸುವ ಕವಿ
ಕುಣಿಯುವ ಕುಂಡಿಯ ವರ್ಣಿಸುವ ಕವಿ
ಗುಂಡಿಗೆಯ ಬಡಿತಕ್ಕೆ ಅಲ್ಲಾಡುವ
ಗುಂಡು ಚೆಂಡುಗಳ ಚೆಂದಾಗಿ ಚಿತ್ರಿಸುವ
ನಿಮ್ಮ ಧಮನಿಯಲಿ ಜೇನು ಹರಿಸುವ
ಸುಖಾನುಭಾವಿ ಕವಿ ಮಾತ್ರ ನಾನು.

ಸೋಮವಾರ, ಅಕ್ಟೋಬರ್ 4, 2010

ಸಾಸಿರ ಸಾಸಿರ ಸಂಸಾರಿ

ಸಾಸಿರ ಸಾಸಿರ ಸಂಸಾರಿ
ಕೆ. ಆರ್. ಎಸ್. ಮೂರ್ತಿ

ಉಸಿರು ನಿನ್ನದು ತಾಯೆ, ನೂರಾರು ಕೋಟಿಯ ಬಸಿರು ನಿನ್ನದೇ ಮಹಾ ಮಾಯಿ
ಹಸಿರು ಸೀರೆಯ ಮೈಗೆ ದಿನ, ವಾರ, ವರುಷ ಸೀಮಂತದ ಧಾರೆ ಸ್ನಾನವು ಸುರಿಯೆ

ಉಣಿಸುವಳೂ ನೀನೆ, ಸಾಸಿರ ಸಾಸಿರ ಮೊಲೆಯಿಂದ ಹಸಿದ ಸಂಸಾರವನು ಸರಿಯಾಗಿ
ತಣಿಸುವಳು ನೀನೆ, ದಣಿವಾದ ಪ್ರಾಣಿ, ಕೀಟ, ಹಕ್ಕಿ ಕುಲಕೆ ನೀನಾಗುವೆ ಹಾಸಿಗೆಯಾಗಿ

ಅಳಿದ ಜೀವವ ಉಂಡು, ಹೊಸದೊಂದು ಜೀವದ ಮೊಳಕೆಯನೇ ಚಿಗುರಿಸುವೆ ಮತ್ತೆ, ಮತ್ತೆ
ನಮಗೇಕೆ ಬೇಕು ನಾಳೆಗೇನು, ಬರುವ ತಿಂಗಳಿಗೆ ಮತ್ತೆ ಏನು, ಎಂತೆಂಬ ಪರಿಪರಿಯ ಚಿಂತೆ

ಮುಂದಾಳು ಕನ್ನಡಿಗ

ಮುಂದಾಳು ಕನ್ನಡಿಗ
ಕೆ. ಆರ್. ಎಸ್. ಮೂರ್ತಿ


ನಾಡು ನಮ್ಮದು ಹೆಮ್ಮೆಯದು, ಆಡುವೆವು ಅಮೃತವನೆ ಸುರಿಸಿ, ಹರಿಸಿ
ಹಾಡು ನಮ್ಮದು ಹೆಮ್ಮೆಯದು, ನುಡಿದಾಗಲೆಲ್ಲಾ ಹಾಡುವೆವು ಗುನುಗಿಸಿ (ಪಲ್ಲವಿ)

ನಮ್ಮ ಊರಿನಲೂ, ಪರರ ನಾಡಿನಲೂ, ವಿದೇಶ ಭಾಷಿಗಳ ಒಡನೆಯೂ
ಜೊತೆಯಾಗಿ, ಜೋರಾಗಿ, ಧ್ವನಿಸುವೆವು ಝೇಂಕರಿಸಿ ಕನ್ನಡದ ಡಿಂಡಿಮವನು

ಬೇರೆಯಾದರೇನಂತೆ ಬೇರೆ, ಬೇರೆ ಬೇರುಗಳೂ ನೆರೆ ಊರಿದ್ದರೇನಂತೆ
ಬೇರೆ, ಬೇರೆ ತರು, ಲತೆ, ಸಕಲ ಸುವಾಸನೆಯ ಹೂವುಗಳು ಮಿಳಿದಂತೆ

ಲತೆ ಹತ್ತಾರು ತಬ್ಬಲಿ ನಮ್ಮ ಎತ್ತರದ ವಿಶಾಲ ಮರದ ಕಾಂಡ ಕೊಂಬೆಗಳಲಿ
ಕನ್ನಡಿಗನು ನಡೆಯುವನು ಮುಂದಾಳು ಆಗಿ ಧೀಮಂತ ಶ್ರೀಮಂತ ತನದಲ್ಲಿ