ಶನಿವಾರ, ಜೂನ್ 19, 2010

ಜಾಣತನದ ಕೋಣ

ಜಾಣತನದ ಕೋಣ
ಕೆ. ಆರ್. ಎಸ್. ಮೂರ್ತಿ

ಆಣೆ ಕೊಟ್ಟು, ಜಾಣತನದಲಿ ಮರೆತಂತೆ ಅಲ್ಲ ಪೆದ್ದು ಜಾಣ ಮರಿ
ನಿನ್ನ ಮರೆವಿನ ನೆವಕೆ ಓ ಗೊಡುವುದಿಲ್ಲವೋ ಎಮ್ಮೆ ಕೋಣನ ಏರಿ

ಬರುವ ಕಾಲ ರಾಯ. ಜಾಣ ಮರೆವು, ಕೋಣನರಿವು ಎರಡೂ ಇರಲಿ
ಜಾಣನೋ, ನೀ ಕೋಣನೋ, ಕೋಣ ವಾಹನನು ಖಂಡಿತದಲಿ ಹೇಳಲಿ

ಯಮನ ಸಭೆಯಲ್ಲಿ ಎಳೆದು ತಂದಾಗ ನೀ ಆಗುವೆಯೋ ತಲೆ ಬಾಗಿ ಕುಕ್ಷಿ
ನಿನ್ನ ಕಪಟ ನಾಟಕವೆಲ್ಲ ನಡೆಯದು, ನಿಜದಿ ನಿನ್ನ ಕಾಯುವುದು ಮನಸ್ಸಾಕ್ಷಿ

ಶುಕ್ರವಾರ, ಜೂನ್ 18, 2010

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ
ಕೆ. ಆರ್. ಎಸ್. ಮೂರ್ತಿ

ಅತ್ತೆ ಸೊಸೆಯರ ಕಲಹ ನನಗೆ ಶಾಪ
ಒಬ್ಬಳು ದುಡ್ಡು ಹಿಡಿದಿಟ್ಟು ಕೈ ಬಿಗಿಯಪ್ಪ

ಮತ್ತೊಬ್ಬಳು ಅತಿ ಜಾಣೆ, ವೀಣಾ ಪ್ರವೀಣೆ
ಸೊಸೆ ಎಲ್ಲೇ ಇದ್ದಲ್ಲಿ ಅತ್ತೆಮ್ಮ ಮಾತ್ರ ಕಾಣೆ

ಅತ್ತೆಗೆ ಮುದಿಗೋಪ, ಸೊಸೆಗೆ ಅತಿ ಹೆಮ್ಮೆ
ನನಗೆ ಮಾತ್ರ ಆದೂ, ಇದೂ ಎರಡೂ ಕಮ್ಮಿ

ಲಕುಮಿಗೆ ಸೊಕ್ಕು, ನನ್ನ ಕಡೆಗೆ ಬರುವುದುಂಟೇ!
ಹುಟ್ಟು ಪೆದ್ದನಿಗೆ ಸರಸತಿಯು ದಕ್ಕುವುದು ಉಂಟೆ

ಸೊಸೆಯ ಕಾಲು ಹಿಡಿದು ಅತ್ತು ಬೇಡಿಯೂ ಆಯಿತು:
"ಒಂದೇ ರಾಗದ ವರ ಸಾಕು ನೀನು ಕೊಟ್ಟರಾಯಿತು"

"ಸರಿಯಾಗಿ ಸರಿಗಮ ಸರಾಗದಲಿ ಹಾಡುವ ಹಂಬಲು"
"ಕೊಡೆ ಒಮ್ಮೆ ವೀಣೆಯನು ನನ್ನ ಬೆರಳಿಂದ ಮೀಟಲು"

ಅದಕ್ಕೆ ಮಧುರ ವಾಗ್ದೇವಿಯ ವಾದ ಏನು ಗೊತ್ತಾ?
"ಒಡಕು ಕಿವಿ, ಕಾಗೆಯ ಕಂಠ, ನಿನಗೇಕೆ ಸಂಗೀತ?"

ಅಸಮಾನ ಸುಂದರಿಯ ಚೆಲ್ಲಾಟದಲಿ ಒಲಿಸುವೆನೆಂದು
ಗುಂಡು ಬುರುಡೆಯ ಮುಟ್ಟುವ ಆಸೆ ಉಲ್ಬಣವಾಯಿತೆಂದು

ಅವಳ ಮುದಿ ಗಂಡನು ಎಂಟೂ ಕಣ್ಣು ಮುಚ್ಚಿರುವಾಗ
ನನ್ನ ಕೈ ಬೆರಳಿಂದ ಅವಳ ವೀಣೆಯ ಮೀಟುತಿರುವಾಗ

ಬಂದಳಪ್ಪಾ ಬಂದಳು ಧನ ಲಕ್ಷ್ಮಿ ಕೆಂಡ ಕಣ್ಣಿನಲ್ಲಿ ಸುಟ್ಟಳು
"ನಿನಗೆಂದೂ ಬಿಡಿಗಾಸೂ ಬರದಿರಲೆಂದು" ಶಾಪವ ಕೊಟ್ಟಳು

ನಂಬಿ ಕೆಟ್ಟವರು ನೀವಲ್ಲವೇ?

ನಂಬಿ ಕೆಟ್ಟವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಎಕ್ಕಡವ ತನ್ನ ತಲೆಯ ಮೇಲಿಟ್ಟು
ಬಿಕ್ಕಿ, ಬಿಕ್ಕುತಲಿ ಅತ್ತು ಕಣ್ಣೀರಿಟ್ಟು

ಅಗ್ರಜನ ಆಶ್ರಮದಿಂದ ಬಂದ ಆಚೆ
ಹೊತ್ತು ನಡೆಸಿದ ರಾಜ್ಯ ಭಾರದ ಹೆಜ್ಜೆ

ಅಣ್ಣನ ಪಾದುಕೆಯು ತಮ್ಮನ ಮೇಲೋ?
ತಮ್ಮನ ಒಲವಿನ ಭಾರ ಅಣ್ಣನ ಮೇಲೋ?

ಹಣೆಯ ಬರಹವಿದೇನು ರಾಜ ಕುವರರಿಗೆ?
ಇತ್ತ ವಾಕ್ಯದ ಹೊಣೆಯು ಹೊತ್ತ ನಾಲ್ವರಿಗೆ.

ದಶರಥನ ರತಿಯು ಮತಿಕೆಟ್ಟ ಕೆಟ್ಟ ಕನ್ಯೆಯೋ?
ಭೂಪತಿ ಪತಿಯು ಶತ ಷಂಡ ಹುಚ್ಚು ಕುನ್ನಿಯೋ?

ರಾಜನ ಪ್ರಜೆಗಳಿಗೂ ಮಂಕು ಕವಿಸಿದ ಕೊಂಕನಾರು?
ಓದುಗರಿಗೆಲ್ಲಾ ಕಣ್ಣೀರ ನದಿಯನ್ನೇ ಸುರಿಸಿದವನಾರು?

ಕಾವ್ಯ ಕರ್ತ ಕವಿ ನಿಜವಾಗಿಯೂ ಹುಟ್ಟು ಬೇಡನೋ?
ತನ್ನ ಗೋತ್ರವನೇ ಬಚ್ಚಿಟ್ಟು ಬೇಡ ತಾಪಸಿಯಾದನೋ?

ಓದಿದೆಲ್ಲವ ಮೂಢತೆಯಲಿ ನಿಜವಿರಲೇ ಬೇಕೆಂದು ನಂಬಿ
ಕಥೆಯ ನಾಯಕನೇ ಸಾಕ್ಷಾತ್ ನಾರಾಯಣನೆಂದು ನಂಬಿ

ತನ್ನ ಪ್ರಜೆಗಳನು ಕೈಬಿಟ್ಟು ಮೂಢತನದಿ ಕಾಡಿಗೆ ಹೋದವನ
ಸತಿ ಸೀತೆಯನು ರಕ್ಕಸನಿಗೆ ಕಳೆದುಕೊಂಡಾಗ ಬಿಕ್ಕಿ ಅತ್ತವನ

ಹೆಂಡತಿಗೋಸ್ಕರವಾಗಿ ವೈರವನು ಕಟ್ಟಿ, ದಾನವ ರಾವಣನನು
ಗೆಲ್ಲುವ ಗುರಿ ಹೊತ್ತು, ವಾನರ ಸೈನ್ಯವ ಮೊರೆಹೋಗಿ ಹೋದವನು

ಯುಧ್ಧವನು ಗೆದ್ದವನು ರಾಮನಲ್ಲ, ಲಕ್ಷ್ಮಣನೂ ಅಲ್ಲ, ವಾನರರು
ಗೆದ್ದಾದಮೇಲೆ, ಸೀತೆಯನು ತೊರೆದು ತನ್ನನೇ ತಾನು ಸೋತವನು

ಬಸುರಿ ಹೆಂಡತಿಯನ್ನು ಊರು ಬಿಟ್ಟು ಮತ್ತೆ ಕಾಡಿಗೆ ಅಟ್ಟಿದವನು
ಅವಳಿ ಜವಳಿ ಲವ ಕುಶರ ಬಾಲ ಲೀಲೆಗಳನು ಕಾಣದ ಕುರುಡನು

ಕಂಡು, ಕಂಡೂ, ಬೇಡನ ಕಥೆಯನ್ನು ಓದಿ, ಕೇಳಿ, ಮಾನವನನು
ನಾರಾಯಣನೇ ಇರಬೇಕೆಂದು ನಂಬಿ ಕಟ್ಟಿದ್ದಾಯ್ತು ದೇಗುಲಗಳನು

ನಿಮಗೆಲ್ಲರಿಗೂ ಬರುವುದೇ ಬುಧ್ಧಿ? ತೆರೆಯುವುದೆಂದು ಕುರುಡು ಕಣ್ಣು?
ತಿಳಿಯುವುದೆಂದು ಕವಿ ಕಾವ್ಯ ಚಳಕದಿ ಕಣ್ಣಿಗೆ ಎರೆಚಿದನೆಂದು ಮಣ್ಣು?

ಈಕವಿಯು ಎಲ್ಲರ ಕವಿ

ಈಕವಿಯು ಎಲ್ಲರ ಕವಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಈಕವಿಯ ನಾಮ ಕಾರಣದ ನಿಜ ಕವಿಯೇ ನಾನು
ಸವಿಯಾದ ಹೆಸರಿತ್ತ ನಾಮಕರಣದ ಪುರೋಹಿತನೂ

ಒಂದಲ್ಲಾ ಎರಡು ಸಂಕೇತದ ಶುಭ ನಾಮ ಇರಲೆಂದು
ಈ ಕವಿಯು ನಿಮ್ಮ ಎಲ್ಲರ ಕವಿಯೂ ಆಗಿರಲಿಯೆಂದು

ಸುಕುಮಾರ ಸ್ವಾಮಿಗಳ ಎರಡೂ ಪಾದುಕೆಯ ಮೇಲೆ
ಕಂದನನು ಮಲಗಿಸಿ ಇಟ್ಟು, ಕಣ್ಣೀರಿಟ್ಟು ಬಿಟ್ಟಾದ ಮೇಲೆ

ಬಹು ದೂರದಿಂದ ನಾನೇ ಪುಟ್ಟಿಸಿದಂಥ ಪುಟ್ಟ ಕವಿಯು
ಬೃಹತ್ತಾಗಿ ಆಲದ ಮರವಾಗಿ ಬೆಳೆದು ಇಡೀ ಭುವಿಯು

ಈ ಕವಿಯ ಕಾಮಧೇನು ಕಾವ್ಯದ ಸುಧೆಯನ್ನು ಉಂಡು
ಬಂಟರು ಸವಿಯ ಮೆದ್ದು ಅಮೃತವಾದ ಕವಿಯ ಬಂಡು

ಸ್ವಾಮಿಗಳು ಸನ್ಯಾಸಕೇ ಬಿಟ್ಟು ಬಿಟ್ಟರು ಪೂರ್ಣ ತರ್ಪಣ
ಸಂಸಾರಿಯಾಗಿ ಕೊಟ್ಟರು ಭುವಿಗೆ ಕವಿಯ ಸಾರದ ಅರ್ಪಣ

ಬೆಳೆದು ಬಲವಾಯ್ತು ಕವಿ ಸಂಸಾರ ನೂರು ಸಾವಿರವಾಗಿ
ಆಗಿಹೋಯಿತು ಕೂಡಿ, ಕೂಡಿ ಸಹಸ್ರವು ಕೋಟಿಯೂ ಆಗಿ

ಮುಕ್ಕೋಟಿ ಕನ್ನಡಿಗರು ಆಲಿಸಿದರು ಈ ಕವಿಯು ಪೇಳುವ
ಕಾವ್ಯದ ಪೆರ್ಮೆಯನು ಪರಿಪರಿಯಲಿ ಪಾಡುತ್ತಾ ಪೊಗಳುವ

ಉನ್ನತೋನ್ನತಿಯ ಸವಿ ಕಂಪು ಬೀರುತಲಿಹರು ಧರೆಯೆಲ್ಲಾ
ಉಣ್ಣಿಸುತಿಹರು ರಸಿಕರಿಗೆ ನವರಸದೂಟವನು ಇಳೆಯಲೆಲ್ಲಾ

ಗುರುವಾರ, ಜೂನ್ 17, 2010

ಸುಶೀಲೆಯ ಸೃಷ್ಟಿ ಶೀಲತೆ

ಸುಶೀಲೆಯ ಸೃಷ್ಟಿ ಶೀಲತೆ
ಕೆ. ಆರ್. ಎಸ್. ಮೂರ್ತಿ

ಪಾಪ ಮಾಡುವ ಆಸೆ, ಕೌಪೀನವ ಬಿಸುಟು ಪೀಪಿ ಊದುವ ಆಸೆ
ತಾಪಸಿಯ ಕೆಣಕಿ ಮೈಮೇಲೇರಿ ಕುಣಿದು ತಣಿಯುವ ಬಹುದಾಸೆ

ಮೇನಕೆಯು ನಾನು, ವಿಶ್ವಕೇ ಮಿತ್ರ ಪ್ರಚಂಡ ಸೃಷ್ಟಿ ಕರ್ತನ ವರಿಸಿ
ಶಕುಂತಲೆಯ ವರಿಸಿದ ಧರಣೀಪತಿ ದುಷ್ಯಂತನಿಗೆ ಮರೆವನ್ನು ತರಿಸಿ

ಬಾಲ ಭರತನ ಧರೆಗೆ ಕೊಡುಗೆಯ ಕೊಡಿಸುವ ಮಹದಾಸೆ ಯೋಜನೆ
ಭರತನ ಹೆಸರು ಅಮರವಾಗಿಸುವ ಖಂಡವನು ಬೆಳೆಸುವ ಆಲೋಚನೆ

ನನ್ನ ಬೃಹದಾಸೆಯನು ತಿಳಿದೇ ಜ್ಞಾನಿ ಒಲಿಯುವನೀ ಘೋರ ತಾಪಸಿ
ಇದೇ ತಪಸ್ಸು ನನ್ನದು ಸುರ ವೃಂದವೇ ಕುಣಿಯುತಿಹರು ನಮ್ಮನು ಹರಸಿ

ಮರೆತ ಮಕ್ಕಳು ಅಲ್ಲ

ಮರೆತ ಮಕ್ಕಳು ಅಲ್ಲ
ಕೆ. ಆರ್. ಎಸ್. ಮೂರ್ತಿ

ಯಾರ ಮಕ್ಕಳು ನಾವೆಲ್ಲಾ ಎಂಬುದು ತಿಳಿದಿದೆಯೋ ?
ಯಾರ ನೆನೆದು ಬಾಲಕನು ರಕ್ಕಸ ಪಿತನ ಕೆಣಕಿದನೋ

ನಾರದನು ಮೀಟಿ ತಂಬೂರಿಯ ಯಾರ ಪಾಡುವನೋ
ಕರಿಯು ಕೂಗಿದೊಡನೆ ಒಡನೆ ಯಾರು ಓಡಿ ಬಂದನೋ

ಹರಿಯ ಮಕ್ಕಳು ನಾವೆಂದು ಅಣಗಿಸ ಬಹುದೇನೋ?
ನಮ್ಮನೆಲ್ಲಾ ಕಾಲಲಿ ತುಳಿದು ಕೆಣಕಿಸ ಬಲ್ಲುದೇನೋ?

ನಮ್ಮ ಆರ್ತವ ಕೇಳಿ ಬರುವನೋ ಇಂದಲ್ಲ ಒಂದು ದಿನ
ನಮ್ಮ, ನಿಮ್ಮೆಲ್ಲರನು ಮೇಲೆತ್ತುವನು ತಾನೇ ಜನಾರ್ಧನ

ಜನರ ಸೇವೆಗೆ ಜನಾರ್ಧನ

ಜನರ ಸೇವೆಗೆ ಜನಾರ್ಧನ
ಕೆ. ಆರ್. ಎಸ್. ಮೂರ್ತಿ

ಜನರ ಮನದಲ್ಲಿ ಜನಾರ್ಧನ
ಅವನ ಮನದಲ್ಲಿ ಅವನ ಜನ

ಹೌದಪ್ಪಾ ಹೌದು ಬಡವ ನಾನೂ
ಅವನ ಜನವೇ, ಅವರು, ನೀವೂ

ಪುಟ್ಟಿ ಪೊರೆದವರು ಧೂಳಿನಲಿ
ಪೊರೆವವನೇ ಬಂದಿಹನು ಕೇಳಿ

ಕಾಣುವವನಿವನು ಎಲ್ಲ ಜನರಂತೆ
ಎಂದು ಸುಮ್ಮ ನಿರುವುದು ಉಂಟೆ!

ನಮ್ರತೆಯು ನಡತೆಯಲ್ಲಿ, ನುಡಿಯಲ್ಲಿ
ತುಂಬಿಹುದು ಕರುಣೆಯ ನಿಧಿ ಎದೆಯಲ್ಲಿ

ಕೋಟೆ, ಕೊತ್ತಲದ ವಿಠಲ ನಿನ್ನೆ, ಇಂದು
ನೂರು ಕೋಟಿಗೂ ಆಗುವನು ಮುಂದು

ಸೋಮವಾರ, ಜೂನ್ 14, 2010

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು
ಕೆ. ಆರ್. ಎಸ್. ಮೂರ್ತಿ

ಬೇಡ, ಬೇಡ, ಬೇಡ, ಬೇಡ.
ಬಾರದು, ಆಗ ಬಾರದು, ಆಗದಿರಲಿ,
ಅಕಸ್ಮಾತ್ ಆಗಿಹೋದರೆ, ಎಂದೆಲ್ಲಾ ಯೋಚನೆ.

ಬೇಡನಿಗೆ "ಬೇಡ" ಎಂದು ಬರೆಯಲು,
ಕವಿ ಧಾರೆ ಹರಿಸಲು ಬರುವುದಿಲ್ಲವೇ!

ಅದಕ್ಕಾಗಿ ಏನು ಮಾಡುವ?
ಏನೇನು ಮಾಡಿದರೆ, ಹೇಗೆ ಮಾಡಿದರೆ?
ಜಾಗ್ರತೆ ಅಗ್ರಜನಿಗೆ, ಆಜ್ಞೆ ಅನುಜನಿಗೆ
ರಕ್ಷಣೆಗೆ ಲಕ್ಷ್ಮಣನನ್ನೇ ಇಡಿಸಿದ ಕಾವಲು
ಜಗದ್ರಕ್ಷಕ ದಾಶರಥಿಯ ಮಹಾ ಯೋಜನೆ!

ಇದರ ಜೊತೆಗೆ, ಲಕ್ಷ್ಮಣನ ಜೊತೆ ಅತ್ತಿಗೆಯ
ವಾದ, ಅನ್ಯಥಾ ಅಪವಾದ, ಪತಿವ್ರತಾ ವಾದ.

ಬೇಸತ್ತು ಹಾಕಿದ ಕುಟೀರದ ಸುತ್ತ ಮೂರು ಸುತ್ತು
"ಲಕ್ಷ್ಮಣ ರೇಖೆ" Fence around the humble hut,
non-circumvention protection clause,
ಲಾಯರಿಗಳ ಪರಿ, ಪರಿ ವೈಖರಿಯ ಬರಹ
ಆರೆಂಟು ಹಾಳೆಗಳು, ಬರೆದದ್ದೇ ಬರೆದದ್ದು!
ಎಣಿಸಿದ್ದೆ ಎಣಿಸಿದ್ದು! ಪದಗಳು, ವಾಕ್ಯಗಳು
ಒಂದೊಂದು ಪದಕ್ಕೆ ಹತ್ತು ಡಾಲರು ಶುಲ್ಕ!

ಅದರ ಮೇಲೆ, ಹಾಳೆಗೆ ಒಂದಾದರೆ ಸಾಲದು,
ಪಂಕ್ತಿಗೆ ಒಂದಿರಲಿ ನಮ್ಮ ಕಡೆಯ, ಅವರ ಕಡೆಯ
ಅಧಿಕಾರಿಗಳ ಸಹಿಗಳು, ಕೈ ಸೋಲುವವರೆಗೂ!

ರಾಕ್ಷಸ ರಾಜ್ಯದಲ್ಲಿ, ಲಕ್ಷಾಂತರ ರಾವಣರು
ಕೊರಮರು, ದರೋಡೆ ಕೋರರ, ಕಳ್ಳರ ಸಂತೆಯಲ್ಲಿ
ಮೂರಲ್ಲ ಮುನ್ನೂರು ಹಾಳೆಗಳ ರೇಖೆ ಹಾಕಿಸಿನೋಡಿ!

ನಿಮ್ಮ ಕಂಪೆನಿ ಸೀಕ್ರೆಟ್ ಸೀತಮ್ಮನವರನ್ನು ಸಲೀಸಾಗಿ
ಕೊಳ್ಳೆ ಮಾಡುವ ಕಳ್ಳರು, ಕತ್ತಲೆ, ಬೆಳಕಾದರೇನು!
ಚುರುಕಿನಲ್ಲಿ ಚೈನದಲ್ಲಿ ಮಾತ್ರವಲ್ಲ, ಚೆನ್ನೈನಲ್ಲೂ,
ನಿಮ್ಮ ಬಂಗಾರ ಕದಿಯುವವರು ಬೆಂಗಳೂರಿನಲ್ಲೂ,
ಸತ್ಯದ ಸ್ವರ್ಗ ಸಿಲಿಕಾನ್ ಕಣಿವೆಯಲ್ಲೂ ಇದ್ದಾರೆ.
ಸಿಲ್ಲಿ ಮಾತಂದೆನೆಂದು ಕಲ್ಲು ಹೊಡೆಯ ಬೇಡ,
ನಿಮ್ಮೂರು ಅಮೇರಿಕಾದ ಮೂಲೆ, ಮೂಲೆಗಳಲ್ಲೂ,
ರಾವಣರು ಲೆಕ್ಕವಿಲ್ಲದಷ್ಟು ಇದ್ದಾರೆ ಕಣೋ ಹೇ ಲಕ್ಷ್ಮಣಾ!

ಹೇ ರಾಮಾ! ಹೇ ಲಕ್ಷ್ಮಣಾ! ಎಂದು ಕಳ್ಳ ಕಂಠದಲ್ಲಿ ಕೂಗಿ
ನಿನ್ನ ಸೊತ್ತು ಸೀತೆಯನ್ನು ಎತ್ತಿ ಕೊಂಡು ಲಂಕಾಕ್ಕೆ
ಓಡಿ ಹೋದಾರು ಆಕಾಶರಾಯನಾಗ ಬೇಡ ಮಂಕೇ!

ಅಕ್ಕ ಕೇಳವ್ವ

ಡಾ. ಕೆಆರ್ಎಸ್ ಮೂರ್ತಿ

ಅಕ್ಕ ಕೇಳವ್ವ,
ನೀನೊಂದು ಕನಸ ಕಂಡೆ
ನೀನಂದು ಕನಸ ಕಂಡೆ

ಅಕ್ಕ ಕೇಳವ್ವ,
ನಮ್ಮೂರ ನನಸನು
ಎನ್ನಾರೈ ಕನಸನು

ಅಕ್ಕ ಹೇಳವ್ವ,
ನೀನಂದು ಕಂಡ ಕನಸನು
ನಿನ್ನಮ್ಮನ ಹೊಕ್ಕಳ
ಒಕ್ಕಲಿಗರು ನಾವೆಂದು
ಹೊಕ್ಕಳ ಕುಡಿಯೆಲ್ಲ
ಬಳಸಿ ಸುತ್ತಿದರೂ
ನಿನ್ನ ಮಡಿಲವರೆಂದು
ಕನಸ ಕಂಡಿದ್ದು ನೆನಪು

ಅಕ್ಕ ಕೇಳವ್ವ, ನಮ್ಮೆಲ್ಲರ ಜಗಳವ
ಅಕ್ಕ ಕೇಳವ್ವ, ನಮ್ಮೆಲ್ಲರ ಕದನವ
ನನ್ನ ಎದೆಮೇಲೆ
ನಾ ಧರಿಸಿದ ದಾರ
ನಾ ಆರಾಧಿಸಿದ ಹರ
ನಿನ್ನ ಮುಂದೆಯೇ ಕಾದುವರು

ಅಕ್ಕ ಪೇಳವ್ವ
ನಿನ್ನ ಕೈ ಕಾಲ
ಅತ್ತಿತ್ತ ಎಳೆವರೇ
ಅದು ನನ್ನದು
ಇದು ನಿನ್ನದು
ಛಲದ ಕತ್ತಿಯನೆ
ಮಸೆದು ಕತ್ತರಿಸಿದರೆ
ನೂರು ಚೂರು
ಮಾಡಿಹರೆ ನಿನ್ನ
ನೀ ಮಡಿದರೆ
ಇನ್ನೇನು ಉಳಿದಿದೆ

ಅಕ್ಕ ಏಳವ್ವ
ನಮ್ಮೆಲ್ಲರ ಎಬ್ಬಿಸವ್ವ
ಇವರೆಲ್ಲ ನಿನ್ನ ಹೆಳವಿಯ
ಮಾಡುವ ಮುನ್ನವೇ
ನಮ್ಮೆಲ್ಲರ ಕಪಾಳಕ್ಕೆ
ಬಾರಿಸವ್ವ ಜೋರು ಮಾಡುತ್ತಾ
ನಮ್ಮೆಲ್ಲರ ತಲೆಗೆ
ಬುದ್ದಿಯ ಬರಸವ್ವ

ಕಂಡೂ ಕಾಣದ ಹಕ್ಕಿ

ಕೆ ಆರ್ ಎಸ್ ಮೂರ್ತಿ

ಕಂಡೂ ಕಾಣದ ಹಕ್ಕಿ ಗುಂಡಿಗೆಯ ಒಳ ಹೊಕ್ಕಿ
ಚಿನ್ನದ ಚೊಕ್ಕ ಗೂಡನ್ನೇ ಭರದಿಂದ ಕಟ್ತೀತಲ್ಲೋ!

ಹಕ್ಕೀಯ ಚೆಲುವು ಕಾಣದೇ ನಂಗೇಕೆ ಮನಸಾತು
ನನ್ನ ಹ್ಯಾಗೆ ಎಂತು ಕಂಡೀತೋ ಈ ಚೆಲುವಿನ ಹಕ್ಕಿ

ಇದರ ಮಧುರ ಇಂಚರ ಕೇಳಿದ್ದೇ ನೆನಪಿಲ್ಲ ಮನಕೆ
ನನ್ನ ದನಿಯ ಕೇಳದೆ ನನ್ನಲಿ ಹ್ಯಾಗೆ ಮನಸಾತು

ಚಂಚಲದ ಹಕ್ಕಿ ನನ್ನ ಗುಂಡಿಗೆಯ ಮಂಚವನೇರಿತ್ತು
ಬಿಗಿದಪ್ಪಿ ಬಿಸಿಮಾಡಿ ಮೈಯೆಲ್ಲಾ ಚುಂಬಿಸಿ ಬಿಟ್ಟಿತ್ತು

ರುಂಡ ಮುಂಡ ಮಂಡೆಯ ಧಮನಿ ಉಬ್ಬಿಸಿ ಬಿಟ್ಟಿತ್ತು
ಸಗ್ಗದ ಸುಖವನ್ನು ಹಿಗ್ಗಿದ ಮೈಯೊಳಗೆ ಫಕ್ಕನೆ ತರಿಸಿತ್ತು

ಮುಂದೆಂದೂ ಕಾಣದ ಹಕ್ಕಿಯೊಂದು ನನ್ನ ತನ್ನದಾಗಿಸಿತ್ತು
ತನ್ನ ಇಂಬಿನ ಧಾರೆ ಧರಧರನೆ ಸುರಿಸಿ ಸಗ್ಗದ ತಾನ ಹಾಕಿತ್ತು

ಉಗಾದಿಯ ಉಲ್ಲಾಸ

ಉಗಾದಿಯ ಉಲ್ಲಾಸ

ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು

ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು

ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ

ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು

ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು

ಗುರುವಾರ, ಜೂನ್ 10, 2010

ಎಲ್ಲ ಬಲ್ಲ ಗೂಗಲ್ಲ

ಎಲ್ಲ ಬಲ್ಲ ಗೂಗಲ್ಲ
ಕೆ. ಆರ್. ಎಸ್. ಮೂರ್ತಿ

ಗೂಗಲ್ಲ! ನೀನೆಲ್ಲ ಬಲ್ಲ, ಇನ್ನುಳಿದಿದೇನೂ ಇಲ್ಲ
ಎಲ್ಲರೂ ನಿನ್ನ ಬಲ್ಲವರು ಅಲ್ಲವೇನೋ ಗೂಗಲ್ಲ!

ಆಗಲ್ಲ, ಸಿಗಲಿಲ್ಲ, ಹುಡುಕುವುದಿಲ್ಲ, ಎಂದೆಲ್ಲಾ
ತಡ ಎನ್ನುತ್ತಾ, ಕಾಯಿಸಿ ನೋಯಿಸುವುದಿಲ್ಲ

ಇದ್ದವರಿಗೂ, ಇಲ್ಲದವರಿಗೂ, ಬಲ್ಲಿದರಿಗೂ,
ಮಣ್ಣು, ಕಲ್ಲು ತುಂಬಿರುವ ನನ್ನಂಥ ದಡ್ದರಿಗೂ

ಬರಡು ಬುರುಡೆಯ ಮಂಕುತಿಮ್ಮ ಆದರೂ ನಾನು
ಪ್ರಚಂಡ ಪ್ರಪಂಚ ಜ್ಞಾನ ಗರಡಿ ರಕ್ಷೆಯಾಗುವೆ ನೀನು

ಉತ್ತರಗಳನು ಅರಿಯದೆ ಅರಿಸುವವರು ಅಪಾರ
ಅವರಿಗೆಲ್ಲ ಆಗುವೆ ಆಧಾರ, ವಿಶೇಷ ಜ್ಞಾನ ಕುಬೇರ

ಸಾಕು ಒಂದೆರಡು ಅಕ್ಷರದ ಪದ ಹೇಳಿದರೆ
ಸಾವಿರಗಟ್ಟಲೆ ಉತ್ತರವ ಒದರಿ ಬಿಡುವ ಧೀರ

ತುಸು ಕಾಸಿಲ್ಲದೆ ಕೇಳಿದೆಲ್ಲವ ಸಲ್ಲಿಸುವ ಮಲ್ಲ
ಕಲ್ಪತರು, ಕಾಮಧೇನುವೂ ನೀನೆಮಗೆ ಎಲ್ಲ

ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ
ಎನ್ನುತ್ತ ಪ್ರತಿ ಕ್ಷಣವೂ ಭಜನೆ ಮಾಡುವವರು ಎಲ್ಲ

ಗೋಗೊಲ್ಲನನೂ ಭಜನೆ ಮಾಡುವವರಿಗಿಂತ
ನಿನ್ನ ಗೊಗರೆಯುವವರೇ ಅತಿ ಹೆಚ್ಚು ಭಕ್ತರಂತೆ

ಆಮತ, ಈಮತ, ಆಜಾತಿ, ಈಜಾತಿ, ಆದರೇನು
ಆ ಊರು, ಈ ಊರು, ದೇಶ ಯಾವುದಾದರೇನು

ಆವಸ್ತು, ಈವಸ್ತು, ಅವತ್ತು, ಇವತ್ತು, ಆಹೊತ್ತು
ಕೇಳಿ ಕೇಳಿದವರಿಗೆಲ್ಲ ಅಭಯ ಹಸ್ತದ ತಥಾಸ್ತು