ಬುಧವಾರ, ಮೇ 12, 2010

ವಿಧಿರಾಯ ನಿನ್ನ ಅಡಿಯಾಳು

ವಿಧಿರಾಯ ನಿನ್ನ ಅಡಿಯಾಳು
ಕೆ. ಆರ್. ಎಸ್. ಮೂರ್ತಿ

ನಿನ್ನ ಸುಡುಗಾಡು ಹಣೆಯ ಬರಹವು
ಕಾಡಿ ಸುಟ್ಟಿತೆಂದು ಕೊರಗಿ
ಬಾಡಬೇಡಲೋ ಮರುಳೆ

ತನ್ನ ವಿಧಿಬರಹವನು
ಅಳಿಸಿ, ತಿದ್ದಿ ಬರೆಯುವ ಕವಿಯ
ಕುಶಲತೆ ಸುಲಭ ಸರಳ

ಹಣೆಯ ಫಲಕವು
ಮಸ್ತಕದೊಳು ಅಡಗಿರುವ
ಮೆತ್ತನೆಯ ಮಿದುಳು
ನಿನ್ನ ಅಮ್ಮನ
ಗರ್ಭವಾಸದ ಕಾಲದಿಂದಲೇ
ಪ್ರತಿ ನಿಮಿಷವೂ ಬರೆದು, ಅಳಿಸಿ,
ಮತ್ತೆ ಮತ್ತೆ ಬರೆದಾಗಿದೆಯಲ್ಲವೇ?

ಮಿದುಳಿನ ಹೊರಗಿನ ಫಲಕದ ಬರಹವನು
ನೀ ನಿನ್ನಾಸೆ,
ಅದರ ಜೊತೆ ನಿನ್ನ ಕಪಾಳದಿಂದ
ಸುರಿಸುವ ಬೆವರಿಂದ
ಫಲಕದ ಬರಹವನ್ನು ಒರೆಸಿಕೋ,
ನಿನ್ನ ಬಲಯುತ ಮಾಂಸದ ತೋಳು,
ಮುಂಗೈ, ಹಸ್ತದ ಕೊನೆಯಲ್ಲಿರುವ
ಹತ್ತು ಬೆರಳ ಕುಶಲತೆಯಿಂದ
ಮನಸ್ಪೂರ್ತಿ ಹೊಸ ವಿಧಿಯನೇ
ಮಾಡಿಕೊಳೋ ಚತುರ.

ನಿನ್ನ ಉಬ್ಬಿದ ಮಾಂಸ ಖಂಡಕೆ
ಹೆದರುವನೋ ನಿನ್ನ ಅಡಿಯಾಳು ವಿಧಿರಾಯ;
ನೀ ಸುರಿಸುವ ಬೆವರೇ ಅವನ ಕಣ್ಣೀರು;
ನೀ ಕಾಣುವ ಸುಖದ ಕನಸೇ
ಅವನಿಗೆ ಹೆದರಿಸಿ
ನಡಗಿಸುವ ಭಯಂಕರ ದುಃಸ್ವಪ್ನ.

"ನಾ ಹುಟ್ಟಿಬಂದಾಗ ಕೇಳಿಕೊಂಡು ಬಂದ
ನನ್ನ ಪ್ರಾರಭ್ದ ಕರ್ಮವನು
ನಾನು ಅನುಭವಿಸಿಯೇ ತೀರಬೇಕು"
ಎನ್ನುವ ಹೇಡಿ, ಸೋಮಾರಿಯ
ಮರುಕ ಮುಖವನು ನೋಡಿದರೇ
ಅಪಶಕುನ, ಅಪರ ಕಾಲ,
ಸೋಮಾರಿ ಕಾಲ ಬಂದೀತು,
ಅವರಿಂದ ಕಾಲುಕಿತ್ತಿ
ಪರಾರಿಯಾಗು, ಹುಶಾರಿಯಿಂದ
ಹಿಂತಿರುಗಿ, ಬೆನ್ನ ಹಿಂದೆಯೂ ನೋಡದ
ರಾಜಾ ತ್ರಿವಿಕ್ರಮನಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ