ಶುಕ್ರವಾರ, ಮಾರ್ಚ್ 26, 2010

ಮಂಜಿಗೂ ತಣ್ಣದೇ ಎನ್ನ ಎದೆ?

ಮಂಜಿಗೂ ತಣ್ಣದೇ ಎನ್ನ ಎದೆ?
ಕೆ. ಆರ್. ಎಸ್. ಮೂರ್ತಿ

"ಮಂಜಿಗೂ ತಣ್ಣನೆಯ ಕೈ ನಿನ್ನದು" ಎಂದು ನೀನಂದಾಗ
ನಿನ್ನ ಬಲಗೈಗೆ ಹಸ್ತಲಾಘವ ನಾನಂದು ಕೊಡುವಾಗ

ಛಳಿಯು ಕೊರೆಯುತಿತ್ತು, ದಿನವೆಲ್ಲ ಮಂಜು ಸುರಿಯುತಿತ್ತು
ಹೊರಗಿನಿಂದ ಬಂದೆ, ಇರಬಹುದೇನೋ ಕೈ ಕೊರೆಯುತಿತ್ತು

ಮೈನೀಡಿದಾಗ, ನಾನು ನಿನ್ನ ಅತಿ ಬಿಗಿಯಾಗಿ ತಬ್ಬಿಕೊಂಡೆ
ತಟ್ಟನೆ ಸರಿಯೆ ದೂರ, ಮೈ ಕೂಡ ತಣ್ಣದೆಂದು ಕೊಂಡೆ

ಮನಸನು ಬಿಚ್ಚಿ ಉಲಿದೆ, "ಪ್ರಿಯೆ ನಾ ನಿನ್ನ ಪ್ರೇಮಿಸುವೆ"
ತುಟಿಗೆ ತುಟಿಯನ್ನು ಸವರಲು ಮುಂದುವರಿದೆ ಎಂದಿನಂತೆ

ರಪ್ಪನೆ ಬಿತ್ತು ನನ್ನ ಆಶೆಗೆ ದೊಡ್ಡ ಕೊಡ ಪೂರ್ತಿ ತಣ್ಣೀರು
ಮುಖವನ್ನು ಬೇರೆಡೆಗೆ ತಿರುವಿದ ಕಣ್ಣಲ್ಲಿ ಕಂಡೆ ಕಣ್ಣೀರು

"ಚೆಲುವೆ ಏಕೀ ಕಣ್ಣೀರು ತುಂಬಿದೆ ಎಂದೂ ಮಿಂಚುವ ಕಣ್ಣಲ್ಲಿ?"
ಮುದದಿ ಮುಟ್ಟಿದೆ ನಿನ್ನ ಕೆನ್ನೆಯ ಹನಿಯ ಒರೆಸಲು ಬೆರಳಲ್ಲಿ

"ಕೈ ಕೊರೆಯುತಿದೆ", ಫಟ್ಟನೆ ಮಾತಿನೇಟಿಗೆ ಬಲಿ ನನ್ನ ಕಪಾಳ,
"ತನು ತಣ್ಣಗಿದೆ, ನಿನ್ನ ಹೃದಯವಂತೂ ಹಿಮಾಲಯಕೂ ಶೀತಲ"

ಎದೆ ತುಂಬಿ ಬಂತು, ಗಂಟಲೆಲ್ಲ ಗದ್ಗದ, ಛಾಟಿ ಏಟಿನ ಬರೆ ಒರೆಸಿ
ಅಂದೆ, ಜೇಬಿಗೆ ಕೈಹಾಕಿ ತೆಗೆದು, "ನಿನಗೆಂದೇ ತಂದೆ ಉಂಗುರ, ಪ್ರೇಯಸಿ!"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ