ಶನಿವಾರ, ಮೇ 8, 2010

ಹೊತ್ತಿಸು ವಿವೇಕದ ನಂದಾದೀಪ

ಹೊತ್ತಿಸು ವಿವೇಕದ ನಂದಾದೀಪ
ಕೆ. ಆರ್. ಎಸ್. ಮೂರ್ತಿ

ಬೆತ್ತಲೆ ಕುಣಿದರೇನು, ಕತ್ತಲೆಯಲಿ ನಿನ್ನ ನೋಡುವರಾರು!
ಕಗ್ಗತ್ತಲೆಯಲಿ ಎತ್ತೆತ್ತಲೂ ಯಾರು ಕಣ್ಣು ಹಾಯಿಸಿದರೇನು!

ಮನದೊಳಗೆ ಕತ್ತಲೆ ಕವಿದಿರಲು ಇಲ್ಲದ್ದು ಭ್ರಮಿಸಿದಂತೆ
ಸತ್ಯ ಅಸತ್ಯ ಕತ್ತಲೆಯ ಮತಿಯೊಳಗೆ ಅವಳಿ-ಜವಳಿಯಂತೆ

ಹೊಟ್ಟೆ ಕಿಚ್ಚು ಉರಿದು ಸುಡುತಿರಲು ಹತ್ತು ತಲೆಯೊಳಗೆ
ರಾಮಚಂದ್ರನ ಸತಿ ಸೀತೆಯೂ ಆದಳು ಕಿಚ್ಚು ರಾವಣನಿಗೆ

ಹೊತ್ತಿಸಿಕೋ ವಿವೇಕದ ಜ್ಯೋತಿಯನು ನಂದಾದೀಪದ ತೆರದಿ
ಸಾವಧಾನದ ಮಂದ ಮಾರುತನು ಮನದ ಬೇಗೆಯ ತಣಿಸಿ

ಮನವ ಹದಗೊಳಿಸುವನು, ಸಮ ತೂಕದ ತೋಲನ ನ್ಯಾಯವು,
ಧರ್ಮರಾಯನ ಮೀರಿಸುವ ಸಮ ಬುಧ್ಧಿಯೆಲ್ಲವೂ ನಿನ್ನದಾಗುವುದು

ಜೀವಕ್ಕೆ ಮುಖ ಎರಡು

ಜೀವಕ್ಕೆ ಮುಖ ಎರಡು
ಕೆ. ಆರ್. ಎಸ್. ಮೂರ್ತಿ

ನೋವು - ನಲಿವು,
ಕತ್ತಲೆ - ಬೆಳಕುಗಳಂತೆ
ಒಂದರ ಬಾಲ ಇನ್ನೊಂದು
ಜೀವದ ಹಣೆಬರಹದಲ್ಲಿ
ನೋವಿಲ್ಲದೆ ನಲಿವಿಲ್ಲವಲ್ಲ!
ನೋವಿಲ್ಲದಾಗ ನಲಿವೋ,
ಜೀತದ ಮುಖಗಳಿವೆರಡೋ,
ಸದಾ ನೋವುಂಡ ಬಡ ಜೀವಕ್ಕೆ
ಕ್ಷಣ ಮಾತ್ರ ನೋವು ಮರೆತರೆ
ನಲಿವಿನ ಮೊಳಕೆ ಒಡೆದೀತೇನೋ!

ನೀ ಕಟ್ಟಿದ ಕಂಕಣವು ಮಾಸಿಲ್ಲ

ನೀ ಕಟ್ಟಿದ ಕಂಕಣವು ಮಾಸಿಲ್ಲ
ಕೆ. ಆರ್. ಎಸ್. ಮೂರ್ತಿ

ಷಕಾರವನು ತೆಗೆದ ನನ್ನ ಜ್ಯೋತಿಷ್ಯ
ಅಂಟಿ ಹೋಗಿ ಕಂಪಿಸಿದೆ ಗುಂಡಿಗೆಯ

ಸಹಿಯೋ ಹಣೆಬರಹವ ಕೊಡಹುವುದು
ಅಹುದೋ ಹುಲು ಮಾನವಗೆ ಅಳಿಸುವುದು

ಹಿಂದೆ ಆಗಿ ನಡೆದದ್ದು ಹೋದದ್ದೇ ಖರೆ
ನಂಟು, ಗಂಟು, ಬಿಡಿಸಿ ಕೊಳ್ಳುವರೇ!

ಗಿಟ್ಟಿದ್ದನ್ನು ಗಿಟ್ಟಿಸಿಯಾಯ್ತು ನಾವು ಬಹಳಷ್ಟು
ಬಿಡಿಸಿಕೊಳ್ಳುವ ತಂಟೆಯೇಕೆ ಅಂಟಿದ್ದನ್ನು ಬಿಟ್ಟು

ದಿಟ್ಟನಾಗಿ ಮೆಟ್ಟುವೆನು ಅಟ್ಟಹಾಸದಲಿ ಮುಂದೆ
ಪ್ರಾಸದ ಪ್ರೀತಿ ತ್ರಾಸವಾದರೂ ಕಲಿತೆ ನಿನ್ನಿಂದೇ

ಮನದಿಂದ ಮನಕೆ, ಎದೆಯಿಂದ ಎದೆಗೆ ಕೊಡುಗೆ
ಒಲವಿಂದ ನೀನಿತ್ತ ಬಾಗಿನವ ಮುದದಿ ಸಲಹುವೆನೇ

ಕುಂಚವನು ಕಿಂಚಿತ್ತೂ ಸಿಂಚಿಸಿ ಹಚ್ಚಿ ತಾಳೆಯ ಗರಿಗೆ
ಕಾವ್ಯ ಸುಂದರಿಯು ಕುಣಿದು ಮನವ ತಣಿಸುವವರೆಗೆ

ಪ್ರಾಸದ ವ್ರತದಲಿ ಕಟ್ಟಿದೆ ಒಲವಿಂದ ಕಂಕಣವನೇ
ಅತಿ ನಿಷ್ಠೆಯಿಂದಲಿ ಕಟ್ಟು ನಿಟ್ಟಾಗಿ ಪಾಲಿಸುವೆನೇ

ಬಿಚ್ಚು, ಬಿಚ್ಚಿ ತೋರಿಸು ಎಲ್ಲಾ

ಬಿಚ್ಚು, ಬಿಚ್ಚಿ ತೋರಿಸು ಎಲ್ಲಾ
ಕೆ. ಆರ್. ಎಸ್. ಮೂರ್ತಿ

ಬಿಚ್ಚು, ಬಿಚ್ಚು, ಬೇಗ, ಬೇಗ ಬಿಚ್ಚು
ಬಿಚ್ಚೆಲೆ ಬಿಚ್ಚು, ಸಕಲವನೂ ಬಿಚ್ಚು

ಬಿಚ್ಚಿ ತೋರಿಸು ಇಡೀ ಲೋಕವೇ ನೋಡಲಿ
ಒಳಗಿರುವುದೆಲ್ಲಾ ಬಿಚ್ಚಿ, ಬಿಡಿಸಿ ಕಾಣಲಿ

ಬಿಚ್ಚಿ ಮೆಚ್ಚಿಸು ಜನರ, ನಿನ್ನ ಬಿಚ್ಚಿದ ಮನವ
ಮುಚ್ಚಿಕೊಳ್ಳುವುದೇಕೆ, ಕಿಂಚಿತ್ತೂ ವಂಚಿಸುವ

ಬಿಚ್ಚಿ ಹಂಚಿದಮೇಲೆ ಹೆಚ್ಚು ಆಗುವುದು ನಂಬಿಕೆ
ಅಚ್ಚು ಮೆಚ್ಚು ನೀನಾಗಿ ಬಿಡುವೆ ಭೂಲೋಕದ ಜನಕೆ

ಐದು ಬೆರಳೂ ಸಮವೇ ಅಲ್ಲವೇ!

ಐದು ಬೆರಳೂ ಸಮವೇ ಅಲ್ಲವೇ!
ಕೆ. ಆರ್. ಎಸ್. ಮೂರ್ತಿ

ಪಾಂಡುವಿನ ಐದು ಮಕ್ಕಳೂ ಪಾಂಡವರಾಗಿದ್ದ ಹಾಗೆ
ಕುರುವಂಶದ ನೂರು ಅಣ್ಣತಮ್ಮಂದಿರೂ ಕೌರವರಂತೆ

ರಾಮನಂತೆ ಲಕ್ಷ್ಮಣ, ಭರತ, ಶತೃಘ್ನರೂ ದಾಶರಥಿ ಅಲ್ಲವೆ!
ಕೌಸಲ್ಯನ ಅಕ್ಕ ತಂಗಿಯರೂ ಕೋಸಲ ರಾಜನ ಮಕ್ಕಳೇ ಅಲ್ಲವೆ
ಬಲರಾಮನೂ ತಮ್ಮ ಕೃಷ್ಣನಂತೆ ಒಬ್ಬ ವಾಸುದೇವನಲ್ಲವೇ
ಸಕಲರನ್ನೂ ರಮಿಸುವ ಕೌಸಲ್ಯನ ಮಗ ರಾಮಚಂದ್ರನ ಹಾಗೆ
ಬಲರಾಮನೂ, ಪರಶುರಾಮನೂ ರಮಿಸುವರಾಗಿದ್ದರೆ?

ಕೈ ಬಿಚ್ಚಿ ನೋಡಿ, ಈಗಲೇ ನೊಡಿಕೊಳ್ಳಿ, ಐದು ಬೆರಳೂ ಸಮವೇ?

ಬುಧವಾರ, ಮೇ 5, 2010

ಅಮೃತ ಪೂರ್ಣೆ

ಅಮೃತ ಪೂರ್ಣೆ
ಕೆ. ಆರ್. ಎಸ್. ಮೂರ್ತಿ

ಕಣ್ಮುಚ್ಚಿ, ಮೈಮರೆದು, ಪರಿಸರದ ಪರಿವೆ ಬಲು ದೂರ ಹಾರಿ,
ನಿನ್ನ ಒಲವಿನಾಲಿಂಗನದ ಸಗ್ಗದ ಸವಿಮೇಲೋಗರವನು ಹೀರಿ,

ವೈಭವದ ಹಬ್ಬದರಮನೆಯಲಿ ಉಬ್ಬಿ, ಕೊಬ್ಬಿ ಬಲು ಓಲಾಡುತಿರೆ,
ನಿನ್ನ ಮುತ್ತಿನ ಮುದ್ರೆ ಎನ್ನ ಮೈಮೇಲೆಲ್ಲಾ ನಿದ್ರಾದೇವಿ ನೀ ಒತ್ತುತಿರೆ,

ಕಡುಬಡತನ, ಭಾರಿ ಸಿರಿತನ, ಪುಟ್ಟ ಗುಡಿಸಲು, ಗಟ್ಟಿ ಚಿನ್ನದರಮನೆ,
ಊರಾಚೆಯ ಚಪ್ಪಡಿ ಜಗಲಿಕಲ್ಲು, ಮಲಗಿದ ಮೇಲೆ ಎಲ್ಲ ಒಂದೇ ತಾನೆ!

ಇದೇ ಗಳಿಗೆ ಧರೆಗಿಳಿದ ಹಸುಗೂಸಾದರೇನು, ನೂರೆಂಟರ ಮುದಿಯಾದರೇನು
ನಿನಗಿಲ್ಲ ಎಳ್ಳಷ್ಟೂ ತಾರತಮ್ಯ, ಅಮೃತಪೂರ್ಣೆ ಸರಿ, ನೀನು ನಿಜ ಕಾಮಧೇನು

ಮಂಗಳವಾರ, ಮೇ 4, 2010

ಪ್ರೆಟ್ಟಿ ಕಿಟ್ಟ

ಪ್ರೆಟ್ಟಿ ಕಿಟ್ಟ
ಕೆ. ಆರ್. ಎಸ್. ಮೂರ್ತಿ

ಸೂಚನೆ:

ಇದು ಮಕ್ಕಳಿಗೆ ಹೇಳಿ ಕೊಡ ಬಹುದಾದ ಹಾಡು.
ಈ ಹಾಡನ್ನು ಸುಲಭವಾದ ರಾಗದಲ್ಲಿ ಹೇಳಿಕೊಟ್ಟು,
ಒಂದು ಸಣ್ಣ ನೃತ್ಯ-ನಾಟಕ ರೂಪವನ್ನಾಗಿ
ರಂಗದ ಮೇಲೆ ಮಾಡಿಸ ಬಹುದು


ಪ್ರೇ, ಪ್ರೇ, ಪ್ರೇ ಪ್ರೇ ಪ್ರೇಮಾಡಿ ಪ್ರೇಮಿ
ಪ್ರೇ, ಪ್ರೇ, ಪ್ರೇ ಪ್ರೆಟ್ಟಿ ಕೃಷ್ಣ ಸ್ವಾಮಿ

ಪ್ರೆಟ್ಟಿ, ಪ್ರೆಟ್ಟಿ, ಚಿಂಟೂ ಪುಟ್ಟಾಣಿ ಕಿಟ್ಟ
ಪಾಟ್ ಬಟ್ಟರೆಲ್ಲ ಈ ಪಾಟಿ ತಿಂದು ಬಿಟ್ಟ

ತುತ್ತೂರಿ ರಾಗ ಕೇಳಿ ನಮ್ಮ ಅಟ್ಟೀಲೆಲ್ಲಾ
ಕೇಳಿಸ್ತಾನೇ ಬೇಗ ಪ್ರೆಟ್ಟಿ ಹುಡ್ಗೀರ್ಗೆಲ್ಲಾ

ಬಂದು ಬಿಟ್ರಪ್ಪಾ ದೊಡ್ಡ ಹುಡ್ಗೀರ ಹಿಂಡು
ಕುಣೀತ ನಲಿದ್ರು ಕಿಟ್ಟನ ಸುತ್ತ ಮುತ್ಕೊಂಡು

ಕೊಡ್ತ ಮುತ್ತಿನ ಮೇಲೆ ಮುತ್ತು ಮುದ್ದು ಕಿಟ್ಟನ್ಗೆ
ಒತ್ತೊತ್ತಿ ಬಿತ್ತು ನೂರೆಂಟು ಮುತ್ತು ಅವನ ಕೆನ್ನೇಗೆ

ದನ ಕಾಯೋ ಚೆಲುವ ಕಿಟ್ಟಣ್ಣ ಇನ್ಯಾರೂ ಅಲ್ಲ
ದೇವರ ಅವತಾರ ಇವನೇ ಅಪ್ಪ ಅಂತ ಊರಲ್ಲೆಲ್ಲಾ

ತಟ್ಟಿರೋ ಜೋರಾಗಿ ನಿಮ್ಮ ಕೈ ಜೈ ಜೈ ಜೈ ಜೈ
ಜೈ ಕೃಷ್ಣನಿಗೆ, ಜೈ, ಜೈ, ಶ್ರೀ ಕೃಷ್ಣನಿಗೆ ಜೈ ಜೈ