ಶುಕ್ರವಾರ, ಆಗಸ್ಟ್ 6, 2010

ಹೇಡಿಗಳಿಗೊಂದು ಚಾಟಿ

ಹೇಡಿಗಳಿಗೊಂದು ಚಾಟಿ
ಕೆ. ಆರ್. ಎಸ್. ಮೂರ್ತಿ

ಕಣ್ಣು ಬಂದಾಯ್ತೋ ಕುರುಡರಿಗೆಲ್ಲ; ಕಿವುಡರು ಕಿಂಜರಿಯ ಕೇಳುವಂತಾಯ್ತು
ಮೂಕರೆಲ್ಲ ವಾಚಾಳಿಗಳಾದರೋ; ಕುಂಟರೆಲ್ಲಾ ವಾಯುವೇಗದಿ ಓಡಿಯಾಯ್ತು

ನಿಮ್ಮ ಮನಕ್ಕೆ ಮಡಿ ಪೇಟವು ಬಲು ಬಿಗಿಯಾಯ್ತು; ಕಿವಿಗೆ ಹತ್ತಿ ತುಂಬಾಯ್ತು
ಪಿಳಿಪಿಳಿ ಕಣ್ಣಿಗೆ ಕಪ್ಪು ಕನ್ನಡಕದ ಆಭರಣ ನಿಮ್ಮನು ಕುರುಡ ಮಾಡಿಸಿಯಾಯ್ತು

ಎರಡೂ ಕಾಲಿಗೆ ಕಟ್ಟಿದ ದೆಬ್ಬೆ, ಕೈಹಿಂದೆಯಾಗಿ ಕಬ್ಬಿಣದ ಬೇಡಿಯ ಬಳೆ ತೊಟ್ತಾಯ್ತು
ಬಾಯಿಗೆ ಬೀಗವನು ಚಿನ್ನದಲೇ ಮಾಡಿಸಿಕೊಂಡು, ಬೀಗದ ಕೈಯನು ಒಗೆದಾಯ್ತು

ಯಾವ ಜನ್ಮದ ಪಾಪ ಕರ್ಮವೋ! ಈ ಜನ್ಮದ ಸ್ವಕೃತ ಕರ್ಮದ ಫಲವೋ ಗೊತ್ತಿಲ್ಲ
ಅದು ಆಗದು, ಇದಂತೂ ಸಾಗದು, ಆಗದು, ಆಗದು ಎಂದು ಜಪವದೆಕೋ ದಿನವೆಲ್ಲ!

ಇದ್ದಲ್ಲೇ ನರಕವನ್ನು ಭವ್ಯವಾಗಿಯೇ ಕಟ್ಟಿ, ಹೊರಗೆ ಎತ್ತರದ ಕೊಟೆಯೊಂದನು ಕಟ್ಟಿ,
ಆಶೆ, ಆಕಾಂಕ್ಷೆಗಳಿಗೆ ತರ್ಪಣವ ಕೊಟ್ಟು, ಗುರಿ, ಧ್ಯೇಯಗಳನು ಬಲು ದೂರ ಹೊಡೆದಟ್ಟಿ

ನಿಮ್ಮ ಜೈಲಿನಲ್ಲಿ ನೀವೇ ಬಂಧಿಗಳಾಗಿ, ಕಣ್ಣೀರ ಕಾಲುವೆ ಹರಿಸಿ, ಅದರಲ್ಲೇ ಮುಳುಗಿ
ನಿಮ್ಮ ಹಣೆಯ ಬರಹದ ಶಾಸನವ ನೀವೇ ಕಲ್ಲಿನಲ್ಲಿ ಕೆತ್ತಿಸಿ, ದಿನ, ರಾತ್ರಿಎಲ್ಲ ಕೊರಗಿ

ಪರರ ನೋಡಿ, ಹೊಟ್ಟೆಯಲ್ಲಿ ಕಿಚ್ಚನು ಹತ್ತಿಸಿಕೊಂಡು ಸಜೀವ ಚಿತೆಯಲಿ ಬೇಯುವಿರೋ?
ನಿಮ್ಮನ್ನು ನೋಡಿ ಅಳುವವರಾರೂ ಇಲ್ಲವೆಂದು ಅರಿತು ಕೆಟ್ಟ ಕನಸಿನಿಂದ ಏಳುವಿರೋ?

ಅದು ಬೇಕೇ? ಇದು ಬೇಕೇ?

ಅದು ಬೇಕೇ? ಇದು ಬೇಕೇ?
ಕೆ. ಆರ್. ಎಸ್. ಮೂರ್ತಿ

ಮೇಲಿಲ್ಲ, ಕೆಳಗಿಲ್ಲ, ಇತ್ತಕಡೆ, ಅತ್ತಕಡೆಯೂ ಇಲ್ಲವಲ್ಲ
ಒಳಗಿಲ್ಲ , ಹೊರಗಿಲ್ಲ, ಎಲ್ಲೂ ಅಡಗಿ ಕೂಡಂತೂ ಇಲ್ಲ

ಎಲ್ಲಿಯೂ ಇಲ್ಲದನು ಅದು ಹೇಗೆ, ಓರ್ವ ಅದೇನು ಕಂಡೆ
ಬಾಲಕನೇ! ವ್ಯರ್ಥದಲಿ, ನಿನ್ನ ಅಪ್ಪನನು ಕೈಯಾರ ಕೊಂದೆ

ನಿನ್ನ ಹೆತ್ತವರೂ ರಕ್ಕಸರು ಎಂದೆಲ್ಲ ಕಿರಿಚಿ ಕೂಗಿ ನೀನಂದೆ
ನೀ ಹೆತ್ತವರೂ ರಕ್ಕಸರಾದರೇಕೆ? ಅದಕೆ ಕಾರಣ ಏನೆಂಬೆ?

ಅಸುರನ ಗರ್ಭದಲಿ ಸುರ, ಸುರನೊಳಗೆ ಅಸುರ ಅಡಗಿ
ಕಹಿಯೊಳಗೆ ಸಿಹಿ, ಸವಿಯೊಳಗೆ ಬೇವು ಅಡಗಿದಂತಾಗಿ

ಒಂದುಕಡೆ ನೋಡಿದರೆ ಆಹ್ಲಾದ, ಇನ್ನೊಂದು ಕಡೆಯಲ್ಲಿ ವಿಶ್ಲಾದ
ಗಮನವಿರಲಿ ಸಮ ಇದಕ್ಕೂ, ಅದಕ್ಕೂ; ಕ್ಲೇದ ಹಾಗೂ ಆನಂದ

ಕಂಡದ್ದು ಬೇಡವೇ? ಕಣ್ಣು ಮಿಟುಕಿಸಿ ಮತ್ತೆ ಕಾಣು ಬೇಕಾದ್ದು
ಎರಡೂ ಬೇಕೋ? ಒಂದೇ ಸಾಕೋ? ತೆಗೆದುಕೋ ಇಷ್ಟವಾದ್ದು

ಬರೀ ಒರಟು ಹರಟೆಯ ಗುಟ್ಟು

ಬರೀ ಒರಟು ಹರಟೆಯ ಗುಟ್ಟು
ಕೆ. ಆರ್. ಎಸ್. ಮೂರ್ತಿ

ತಲೆ ಹರಟೆ ಕವಿ, ತರಹ, ತರಹ ವಿಕಟ ಹರಟೆ, ಒಗಟು ನನ್ನ ಭಾಷೆ
ತರಾಟೆಯೇ ನನ್ನ ಹಠ; ಕೆಲವು ಮುಖಗಳು, ಹಲವು ಭಂಗಿಯ ಆಶೆ

ಕೇಳಿದರೆ ಅತೀ ಅಸಂಭದ್ದ, ಮತ್ತೆ ಮತ್ತೆ ಕೇಳಿದರೆ ಕುತೂಹಲದ ಬೀಜ
"ಏನೋ ಇರಬೇಕು ಇದರಲ್ಲಿ", ಎಂದವರಿಗೆ ಹೊಳೆದೀತು ಮಿಂಚು ನಿಜ

ಮೊಳಕೆ ಚಿಮ್ಮಿ, ಬೇರು ಬಿಟ್ಟೀತು ಕಲ್ಪನೆಯ ತುಂತುರು ಹನಿ ಅಲ್ಪವಾದರೂ
ಮಿದುಳಿನಾಳದಲಿ ಪಾತಾಳ ಗರಡಿಯಾಟ; ಸುಪ್ತ ಅನುಭಾವ ಎಂದಾದರೂ

ಹರಟೆ ಮಾತು ಒರಟಲ್ಲ ಮಾತ್ರ, ಗಟ್ಟಿಯಾಗಿ ನೆತ್ತಿಯಲಿ ನೆಟ್ಟು ಬಿಟ್ಟೀತು
ದಿಟದ ಪ್ರಕಟಣೆ ಆದಾಗ ಒಂದು ದಿನ ನೀವೂ ಅವಧೂತರೆಂದು ತಿಳಿದೀತು

ಗುರುವಾರ, ಆಗಸ್ಟ್ 5, 2010

ಯಾರು ಸರಿ?

ಯಾರು ಸರಿ?
ಕೆ. ಆರ್. ಎಸ್. ಮೂರ್ತಿ

ಅದು ಸರಿ, ಇದೂ ಸರಿ, ಸಾಗದ ಅಸಾಧ್ಯವನ್ನು ಕೇಳಿದರೂ ಉತ್ತರ ಸರಿಯೇ?
ಸರಿ ಸಾರ್, ಸರಿ ಸಾರ್; ಎಲ್ಲರನ್ನೂ ಸರಿಯೇ ಅಂದು ಬಿಡುವವರು ಸರಿಯೇ?

ಇವರೊಂದು ತರಹ "ವಿಶ್ವಾಮಿತ್ರರು" ಎನ್ನಿ; ಚಂಡಾಳನನ್ನೂ ಮೆಚ್ಚಿಸುವಂಥವರು
ಕೇಳಿದವರಿಗೆಲ್ಲ ಸ್ವರ್ಗದ ಕಡೆಗೆ ದಾರಿಯನ್ನು ತೋರಿಸುವವರು, ತಯಾರಿಸುವವರು

ಕಡ್ಡಿಯನ್ನು ತುಂಡು ಮಾಡಿದ ಹಾಗೆ ಮಾತಾಡಲು ತಾಕತ್ತೇ ಇಲ್ಲದಂತಹ ಶಂಡರು
ಹೆಂಡತಿಯು ರಂಗದ ಮೇಲೆ ಸೀರೆ ಬಿಚ್ಚಿ ಕುಣಿಯುತ್ತಿದ್ದರೂ ಸುಮ್ಮನಿರುವ ಪಾಂಡವರು

ಹೆಂಡತಿಯನ್ನೂ, ತಮ್ಮನನ್ನೂ ಕಾಡಿಗೆ ಕರೆದುಕೊಂಡು ಹೋಗಿ ಅಲೆಸಿದವರು
ಕೇಡಿ ಚಿಕ್ಕಮ್ಮನ ಮಾತು ಕೇಳಿ, ಹೇಡಿತನದಿಂದ ಓಡಿ, ಅಪ್ಪನನು ಕೊಂದವರು

ರಥವನ್ನು ನಡೆಸುವ ಆಳು ಹೇಳಿದ ಹಾಗೆ ಅಣ್ಣ ಕರ್ಣನ ಮೇಲೆ ಬಾಣ ಬಿಟ್ಟವರು
ನ್ಯಾಯವನ್ನೇ ಮರೆತು ವೀರನ ಸೊಂಟದ ಕೆಳಗೆ ಗಧೆಯನ್ನು ಹೊಡೆದು ಮೆರೆದವರು

ಯಾರನ್ನು ನಂಬುವುದೋ, ಮತ್ಯಾರನ್ನು ಮೆಚ್ಚುವುದೋ, ಯಾರು ಸರಿಯೋ ನೋಡಿ
ತೆಗೆದುಕೊಳ್ಳಿ ಈಗ ಈ ಕಡ್ಡಿಯನ್ನು; ಒಂದೇ ಮನಸ್ಸಿನಿಂದ ಎರಡು ತುಂಡು ಮಾಡಿ

ಮಂಗಳವಾರ, ಆಗಸ್ಟ್ 3, 2010

ಕರಿಯೋ, ಬಿಳಿಯೋ?

ಕರಿಯೋ, ಬಿಳಿಯೋ?
ಕೆ. ಆರ್. ಎಸ್. ಮೂರ್ತಿ

ನರೆತ ಕೂದಲು ಒಂದು ಕರಿಯ ಕೂದಲುಗಳ ನಡುವೆ ಎದ್ದು ಕಾಣುತ್ತಿತ್ತು
ಕೀಟಲೆಯ ಕೇಕೆ, ಅಣಗಿಸುವ ಕೊಂಕು ನುಡಿ, ಕೆಣಕಿಸುವ ಖಾರ ಏರುತ್ತಿತ್ತು

ಒಬ್ಬ ಕರಿಯ ಕೂಗಿದ: "ಯಾರೋ ಇದು ಹೊಸಬ; ಇಲ್ಲಿಗೆ ಬಂದನಿವ ಹೇಗೆ?"
"ಬುಡದಿಂದ ಅಗೆದು, ಕಿತ್ತು ಒಗೆಯಿರೋ ಇವನ ಮತ್ತೆ ಬಾರದಂತೆ ಹೊರಗೆ"

ವಾರಗಳೇ ಕಳೆದು, ಕರಿಯರೆಲ್ಲ ಮರೆತು ಬಿಟ್ಟರು, ಇದ್ದರು ತಮ್ಮ, ತಮ್ಮ ಪಾಡಿಗೆ
ಮತ್ತೆ ಕೂಗಿದ ಇನ್ನೊಬ್ಬ ಕರಿಯ: "ಇದೇನಿದು! ಮತ್ತೆ ಬಂದನಲ್ಲ ಬಿಳಿಯ ಹೇಗೆ?"

ಇನ್ನೊಬ್ಬ ಕರಿಯ ಮತ್ತೆತ್ತಲೋ ಎಂಬಂತೆ, "ಇನ್ನೊಬ್ಬ ಬಿಳಿಯ ಇಲ್ಲಿ ನೋಡಿರೋ!"
ಒಬ್ಬನನು ಹೊಡೆದೋಡಿಸಿಯಾಯ್ತು, ಮತ್ತೊಬ್ಬ ಕೂಡ ಬಂದು ಸೇರಿದ ನೋಡಿರೋ"

ತಿಂಗಳು ಉರುಳಿತು, ಒಬ್ಬನಲ್ಲ, ಇಬ್ಬರಲ್ಲ ಎಲ್ಲೆಲ್ಲಿ ನೋಡಿದರೂ ಕಾಣುವರು ಬಿಳಿಯರೇ
ಕರಿಯರನ್ನು ಒಂದೋ, ಎರಡೋ ಕೈ ಬೆರೆಳಲ್ಲಿ ಎಣಿಸಿಬಿಡಬಹುದು, ಗೆದ್ದವರು ಬಿಳಿಯರೇ!

ವರುಷಗಳು ಸವೆದವು, ಅಲ್ಲೊಬ್ಬ, ಇಲ್ಲೊಬ್ಬ ಕಂಡರೆ ಹೆಚ್ಚು, ಕರಿ ಬಿಳಿಯೆಲ್ಲ ಖಾಲಿ, ಖಾಲಿ
ತಲೆಯ ಮೇಲೆ ಎಂದೂ ಬಣ್ಣ ಬದಲಾಗದ ಕರೀ ಕಾರ್ಪೆಟ್ಟು, ಹಜಾಮನ ಜೇಬು ಮಾತ್ರ ಖಾಲಿ

ಸೋಮವಾರ, ಆಗಸ್ಟ್ 2, 2010

ಕಲ್ಲೊಂದು ಕಲ್ಲಿಗೆ ಕೇಳಿತು:

ಕಲ್ಲೊಂದು ಕಲ್ಲಿಗೆ ಕೇಳಿತು:
ಕೆ. ಆರ್. ಎಸ್. ಮೂರ್ತಿ

ಇದೇಕೆ ಮಾನವರು ನಮಗೆಲ್ಲ ಮುಗಿಯುವುದು ಕೈ ಜೋಡಿ?
ತಾಳವನು ತಟ್ಟುವುದು, ಎಲ್ಲರೂ ಜೊತೆಗೆ ಧ್ವನಿಗಳನು ಕೂಡಿ

ಹೋಗಲಿ ಎಂದರೆ, ದಿನವೂ ಹೊಗಳುವುದೇತಕೆ ಹಾಡಿ, ಹಾಡಿ?
ಬಾಗಿದ ತಲೆ, ದೈನ್ಯತೆಯಲಿ ಒಟ್ಟಿಗೆ ಕೈ ಚಾಚುವುದು ಬೇಡಿ

ನೆಲದ ಮೇಲೆ ಮಲಗಿ, ಎದ್ದು ಮತ್ತೆ ಮಲಗಿ ಏಳುವುದು ನೋಡಿ
ಧನ, ಕನಕ, ಬಣ್ಣ, ಬಣ್ಣದ ಹತ್ತಿಯ ವಸ್ತ್ರಗಳೆಲ್ಲವನು ನೀಡಿ, ಹರಡಿ

ಮೂಗಿಲ್ಲದ ನಮಗೆ ಗಂಧ, ಧೂಪ, ಘಮ, ಘಮ ಹೂ ಪೂಜೆ ಮಾಡಿ
ಹಣ್ಣು, ಹಂಪಲು, ಹಾಲು, ಆನ್ನ, ಮೆಲೋಗರಗಳ ಇಟ್ಟ ಹಾಗೆ ಮಾಡಿ

ತಾವೇ ಗಬ, ಗಬ ತಿಂದು ತೇಗಿ, ತೂಕಡಿಸಿ ಕಲ್ಲನೇ ಸುಪ್ಪತಿಗೆ ಮಾಡಿ
ನಗುವುದೋ, ಅಳುವುದೋ ಈ ಮೂಢತನಕೆ ನೀವೇ ಯೋಚನೆ ಮಾಡಿ

ವಿಚಿತ್ರಾಕರ್ಷಣೆ

ವಿಚಿತ್ರಾಕರ್ಷಣೆ
ಕೆ. ಆರ್. ಎಸ್. ಮೂರ್ತಿ

ಎಲೆ ಹೆಣ್ಣೇ! ಪೆದ್ದು ಕನ್ಯೆ! ಅದೆಷ್ಟೋ ಯುಗ ಕಳೆದರೂ ಮತ್ತೆ, ಮತ್ತೆ ನ್ಯೂಕ್ಲಿಯಸ್ಸಿನು ಸುತ್ತಿ, ಸುತ್ತಿ ಸುಸ್ತಾಗಲಿಲ್ಲವೇ?
ಪ್ರೋಟಾನೇನೋ ಪುರುಷ ದಿಟ, ನ್ಯೂಟ್ರಾನಿಗೆ ಅಷ್ಟು ಹತ್ತಿರವಿದ್ದು ನಪುಂಸಕನಾಟ ಆಡುತ್ತಿದ್ದಾನೆಯೇ ನಿನಗೆ ಗೊತ್ತೇ

ಎಲ್ಲಿಂದಲೋ ಬಂದು ಫೋಟಾನು ರಭಸದಿ ನಿನಗೆ ಢಿಕ್ಕಿ ಹೊಡೆದಾಗಲೆಲ್ಲಾ, ಪುಳಕಿತಳಾಗಿ ನೀ ನಿಗರಿ ಎಗರುವೆಯಲ್ಲೇ!
ಒಡನೆಯೇ ಎಗರಿ ಬಿದ್ದು ಮತ್ತೆ ಫೋಟಾನಿನ ಶಕ್ತಿಪಾತವು ಮಾತ್ರ ಖಂಡಿತ; ನನ್ನ ತುಂಟು ಕಲ್ಪನೆಯ ನೀನೇನು ಬಲ್ಲೆ?

ಕಾಲಾತೀತ ಪತಿವ್ರತೆಯೇ ನೀನು? ಮಧ್ಯೆ, ಮಧ್ಯೆ ಇದೇನು ಫೋಟಾನಿನ ಸಂಗ ಅನಂಗ ರತಿ ರಂಗ? ವ್ರತದ ಭಂಗ!
ಶಿಖಂಡಿ - ಗಂಡುಗಳ ಭಂಡ ಒಡನಾಟ ನ್ಯೂಕ್ಲಿಯಸ್ಸಿನ ಬೆಸುಗೆಯ ಅಪ್ಪುಗೆಯಲ್ಲಿ ನಡೆಯುವುದು ಬಲು ಗುಟ್ಟಿನ ಪ್ರಸಂಗ!